ಶ್ರೇಷ್ಠಾ ಬ್ಲಾಕ್‌ಮೇಲ್‌ಗೆ ಹೆದರಿ ಮತ್ತೆ ಮನೆಗೆ ಕರೆತಂದ ತಾಂಡವ್‌̧, ವಿಚಾರ ತಿಳಿದು ಬೇಸರಗೊಂಡ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೇಷ್ಠಾ ಬ್ಲಾಕ್‌ಮೇಲ್‌ಗೆ ಹೆದರಿ ಮತ್ತೆ ಮನೆಗೆ ಕರೆತಂದ ತಾಂಡವ್‌̧, ವಿಚಾರ ತಿಳಿದು ಬೇಸರಗೊಂಡ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾ ಬ್ಲಾಕ್‌ಮೇಲ್‌ಗೆ ಹೆದರಿ ಮತ್ತೆ ಮನೆಗೆ ಕರೆತಂದ ತಾಂಡವ್‌̧, ವಿಚಾರ ತಿಳಿದು ಬೇಸರಗೊಂಡ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 28ರ ಎಪಿಸೋಡ್‌ನಲ್ಲಿ ಶ್ರೇಷ್ಠಾ, ಆತ್ಮಹತ್ಯೆ ನಾಟಕವಾಡಿ ತಾಂಡವ್‌ನನ್ನು ಬ್ಲಾಕ್‌ಮೇಲ್‌ ಮಾಡುತ್ತಾಳೆ. ಅವಳಿಗೆ ಹೆದರಿ ತಾಂಡವ್‌ ಮನೆಗೆ ಕರೆದುಕೊಂಡು ಹೋಗಲು ಒಪ್ಪುತ್ತಾನೆ. ಫೇಸ್‌ಬುಕ್‌ ಲೈವ್‌ ನೋಡಿದ ಕುಸುಮಾ ನೆರೆಮನೆಯ ಸರೋಜಮ್ಮ ಈ ವಿಚಾರವನ್ನು ಅವರಿಗೆ ತಿಳಿಸುತ್ತಾರೆ. ವಿಚಾರ ತಿಳಿದು ಭಾಗ್ಯಾ ಬೇಸರಗೊಳ್ಳುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 28ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 28ರ ಎಪಿಸೋಡ್‌ (PC: Jio Cinema)

Bhagyalakshmi Serial: ಭಾಗ್ಯಾ ಜೊತೆ ತನ್ವಿ ಕಾಲೇಜಿಗೆ ಹೋಗುವ ತಾಂಡವ್‌ ಪ್ರಿನ್ಸಿಪಾಲ್‌ಗೆ ಬೈದು ಅಲ್ಲಿಂದ ಎದ್ದು ಶ್ರೇಷ್ಠಾಳನ್ನು ನೋಡಲು ಹೋಗುತ್ತಾನೆ. ಭಾಗ್ಯಾ ಮನವಿ ಮೇರೆಗೆ, ಆಕೆಗೆ ವಿದ್ಯಾಭ್ಯಾಸದ ಮೇಲಿರುವ ಗೌರವ ಕಂಡು ಪ್ರಿನ್ಸಿಪಾಲ್‌ ಮತ್ತೆ ತನ್ವಿಯನ್ನು ಕಾಲೇಜಿಗೆ ಅಡ್ಮಿಷನ್‌ ಮಾಡಿಕೊಳ್ಳುತ್ತಾರೆ. ತನ್ವಿ ಅಮ್ಮನಿಗೆ ಥ್ಯಾಂಕ್ಸ್‌ ಹೇಳುತ್ತಾಳೆ. ವಿಚಾರ ತಿಳಿದು ಕುಸುಮಾ, ಧರ್ಮರಾಜ್‌ ಹಾಗೂ ಮನೆಯವರು ಕೂಡಾ ಖುಷಿಯಾಗುತ್ತಾರೆ.

ಶ್ರೇಷ್ಠಾ ಬ್ಲಾಕ್‌ಮೇಲ್‌ಗೆ ಹೆದರಿದ ತಾಂಡವ್‌

ಇತ್ತ ಶ್ರೇಷ್ಠಾಳನ್ನು ಹುಡುಕಿಕೊಂಡು ಹೋಗುವ ತಾಂಡವ್‌ ಅವಳ ಹುಚ್ಚಾಟ ಕಂಡು ಗಾಬರಿ ಆಗುತ್ತಾನೆ. ಇಂದು ನನಗೆ ನ್ಯಾಯ ದೊರೆಯುವವರೆಗೂ ನಾನು ಇಲ್ಲಿಂದ ಬರುವುದಿಲ್ಲ, ಇಲ್ಲವೆಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಾಳೆ. ಎಲ್ಲರೂ ನೋಡುತ್ತಿದ್ದಾರೆ, ದಯವಿಟ್ಟು ಕೆಳಗೆ ಬಾ ಎಂದು ತಾಂಡವ್‌ ಮನವಿ ಮಾಡಿದರೂ ಅವಳು ಒಪ್ಪುವುದಿಲ್ಲ. ಅವಳಿಗೆ ಮೋಸ ಮಾಡುತ್ತಿದ್ದೀಯ ಎಂದು ಜನರು ತಾಂಡವ್‌ಗೆ ಪ್ರಶ್ನಿಸುತ್ತಾರೆ. ಈ ಡ್ರಾಮಾ ಮುಗಿದರೆ ಸಾಕು ಎಂದುಕೊಂಡ ತಾಂಡವ್‌, ಸರಿ ನಿನ್ನನ್ನು ಮನೆಗೆ ಕರೆದುಕೊಂಡು ಹೋಗುವೆ ಎನ್ನುತ್ತಾನೆ. ಶ್ರೇಷ್ಠಾಗೆ ಖುಷಿಯಾಗಿ ಬಿಲ್ಡಿಂಗ್‌ ಮೇಲಿಂದ ವಾಪಸ್‌ ತಾಂಡವ್‌ ಬಳಿ ಬರುತ್ತಾಳೆ.

ನೀನು ಈ ರೀತಿ ಮಾಡುತ್ತೀಯ ಎಂದು ನಾನು ಎಕ್ಸ್‌ಪೆಕ್ಟ್‌ ಮಾಡಿರಲಿಲ್ಲ, ನನಗೆ ಬಹಳ ಬೇಜಾರಾಯ್ತು ಎಂದು ತಾಂಡವ್‌ ಹೇಳುತ್ತಾನೆ. ನಾನು ನಿನಗಾಗಿ ಎಷ್ಟು ತ್ಯಾಗ ಮಾಡಿದ್ದೇನೆ, ಆಗಿನಿಂದ ನಿನ್ನ ಜೊತೆ ಇರುವುದು ನಾನು, ನಿನ್ನ ಅಪ್ಪ ಅಮ್ಮ ನಿನ್ನನ್ನು ಬಿಟ್ಟು ಹೋದಾಗಲೂ ನಿನ್ನ ಜೊತೆಗೆ ಇದ್ದಿದ್ದು ನಾನೇ, ಆದರೆ ನೀನು ನನ್ನನ್ನೇ ಅವಾಯ್ಡ್‌ ಮಾಡುತ್ತಿದ್ದೀಯ, ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೀವಿ ಎಂದಾದರೆ ಒಬ್ಬರ ಕಷ್ಟದಲ್ಲಿ ಮತ್ತೊಬ್ಬರು ಜೊತೆಯಾಗಿರಬೇಕು, ಆದರೆ ನೀನು ನಿನ್ನ ಹೆಂಡತಿಗೆ ಹೆದರಿ ನನ್ನನ್ನು ದೂರ ಮಾಡುತ್ತಿದ್ದೀಯ ಎಂದು ಶ್ರೇಷ್ಠಾ ಕೇಳುತ್ತಾಳೆ. ಅದು ನನ್ನ ಮನೆ, ನಾನು ಯಾರಿಗೂ ಹೆದರುವುದಿಲ್ಲ , ನಿನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ತಾಂಡವ್‌ ಶ್ರೇಷ್ಠಾಳನ್ನು ಮನೆಗೆ ಕರೆತರುತ್ತಾನೆ.

ಫೇಸ್‌ಬುಕ್‌ ಲೈವ್‌ ವಿಚಾರ ತಿಳಿದು ಕಣ್ಣೀರಿಟ್ಟ ಕುಸುಮಾ

ಫೇಸ್‌ಬುಕ್‌ ಲೈವ್‌ ಗಮನಿಸುವ ಭಾಗ್ಯಾ ನೆರೆಯವರು ಈ ವಿಚಾರವನ್ನು ಅವಳಿಗೆ ತಿಳಿಸುತ್ತಾರೆ. ನಿಮ್ಮ ಮಗ ಮಾಡುತ್ತಿರುವ ಕೆಲಸ ನೋಡಿ ನಮಗೆ ಬೇಸರವಾಗುತ್ತಿದೆ. ನಾವೂ ಈ ಸಮಯದಲ್ಲಿ ಏನೂ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ. ಏನು ಮಾಡಿದರೂ ತಾಂಡವ್‌ ಬುದ್ದಿ ಕಲಿಯುತ್ತಿಲ್ಲ ಎಂದು ಕುಸುಮಾ ಕಣ್ಣೀರಿಡುತ್ತಾಳೆ. ಭಾಗ್ಯಾಗೆ ಕೂಡಾ ಗಂಡನ ವರ್ತನೆ ಬೇಸರ ಎನಿಸುತ್ತದೆ. ಸುನಂದಾ ಕೂಡಾ ಅಳಿಯನ ಬುದ್ಧಿ ಕಂಡು ಕೋಪಗೊಳ್ಳುತ್ತಾಳೆ. ಅವತ್ತು ನಾನು ಅವಳನ್ನು ಕೊಲೆ ಮಾಡಿದಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ. ಅವಳನ್ನು ಸುಮ್ಮನೆ ಬಿಟ್ಟಿದ್ದೇ ತಪ್ಪು ಎನ್ನುತ್ತಾಳೆ. ದಯವಿಟ್ಟು ಸುಮ್ಮನಿರಿ, ನೀವು ಅವತ್ತು ಮಾಡಿದ್ದೇ ಸಾಕು ಇನ್ನು ಕೊಲೆ ಎಂದೆಲ್ಲಾ ಮಾತನಾಡಬೇಡಿ ಎಂದು ಕುಸುಮಾ ಹೇಳುತ್ತಾಳೆ.

ಶ್ರೇಷ್ಠಾ ಕೈ ಹಿಡಿದು ತಾಂಡವ್‌ ಮನೆಗೆ ಕರೆತರುತ್ತಾನೆ. ಅವರಿಬ್ಬರನ್ನು ನೋಡಿ ಸುನಂದಾ ಕೋಪಗೊಳ್ಳುತ್ತಾಳೆ. ಇಬ್ಬರೂ ಕೈ ಹಿಡಿದುಕೊಂಡಿರುವುದನ್ನು ನೋಡಿ ಪೂಜಾ ಕೈ ಬಿಡಿಸಲು ಪ್ರಯತ್ನಿಸುತ್ತಾಳೆ. ಆದರೆ ತಾಂಡವ್‌ ಅವಳನ್ನು ತಳ್ಳುತ್ತಾನೆ.

ಶ್ರೇಷ್ಠಾಳನ್ನು ನೋಡಿ ಭಾಗ್ಯಾ ಹೇಗೆ ಪ್ರತಿಕ್ರಿಯಿಸುತ್ತಾಳೆ? ಕುಸುಮಾ ಏನು ಮಾಡುತ್ತಾಳೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner