ಸತ್ಯನಾರಾಯಣಸ್ವಾಮಿ ನೈವೇದ್ಯಕ್ಕೆ ಉಪ್ಪಿಟ್ಟು ತಯಾರಿಸಿದ ಶ್ರೇಷ್ಠಾ,ಇದು ಪ್ರಮಾದ ಎಂದ ಅರ್ಚಕರು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 9ರ ಎಪಿಸೋಡ್ನಲ್ಲಿ ಸತ್ಯನಾರಾಯಣಸ್ವಾಮಿ ಪೂಜೆಗೆ ಎಲ್ಲಾ ತಯಾರಿಯನ್ನು ಶ್ರೇಷ್ಠಾ ಮಾಡಬೇಕು ಎಂದು ತಾಂಡವ್ ಕಂಡಿಷನ್ ಮಾಡುತ್ತಾನೆ. ಭಾಗ್ಯಾಳನ್ನು ಅಡುಗೆಮನೆಯಿಂದ ಹೊರ ಹಾಕುವ ಶ್ರೇಷ್ಠಾ, ನೈವೇದ್ಯಕ್ಕೆ ಉಪ್ಪಿಟ್ಟು ತಯಾರಿಸುತ್ತಾಳೆ.
Bhagyalakshmi Serial: ಸೂರ್ಯವಂಶಿ ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆಗೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಬೆಳಗ್ಗೆ ಬೇಗ ಎದ್ದು ಭಾಗ್ಯಾ ದೇವರಮನೆ ಶುಚಿ ಮಾಡಲು ಹೋಗುತ್ತಾಳೆ. ಆದರೆ ಕುಸುಮಾ, ಸೊಸೆಯನ್ನು ತಡೆಯುತ್ತಾಳೆ. ನೀನು ಸ್ವಲ್ಪ ದಿನ ಯಾವ ಕೆಲಸವನ್ನೂ ಮಾಡಬೇಡ. ಆ ಶ್ರೇಷ್ಠಾ ಎಲ್ಲವನ್ನೂ ಮಾಡಲಿ, ಆದರೆ ಅವಳನ್ನು ಮನೆಯಿಂದ ಹೊರ ಹಾಕುವುದು ಹೇಗೆ ಅನ್ನೋದನ್ನು ನೀನು ಯೋಚನೆ ಮಾಡಬೇಕು ಎನ್ನುತ್ತಾಳೆ.
ಕೋಪಗೊಂಡ ಶ್ರೇಷ್ಠಾಳನ್ನು ಸಮಾಧಾನ ಮಾಡುವ ತಾಂಡವ್
ಇಂದಿನ ಸತ್ಯನಾರಾಯಣಸ್ವಾಮಿ ಪೂಜೆಗೆ ಎಲ್ಲವನ್ನೂ ಶ್ರೇಷ್ಠಾ ತಯಾರಿ ಮಾಡಬೇಕು, ಭಾಗ್ಯಾ ಏನನ್ನೂ ಮಾಡಬಾರದು ಎಂದು ತಾಂಡವ್ ಹೇಳುತ್ತಾನೆ. ಅದನ್ನು ಕೇಳಿ ಶ್ರೇಷ್ಠಾ ಸಿಟ್ಟಾಗುತ್ತಾಳೆ. ಅವಳಿಗೆ ಏನೂ ಕೆಲಸ ಬರುವುದಿಲ್ಲ, ಅವಳು ಮಾಡಿದರೆ ಸಮಸ್ಯೆ ಆಗುತ್ತದೆ ಅಂತ ಭಾಗ್ಯಾ ಹಾಗೂ ಕುಸುಮಾ ಹೇಳುತ್ತಾರೆ. ಆದರೆ ಅದಕ್ಕೆ ತಾಂಡವ್ ಒಪ್ಪುವುದಿಲ್ಲ. ಶ್ರೇಷ್ಠಾ ಈ ಮನೆ ಸೊಸೆ ಆಗುವವಳು ಅವಳೇ ಎಲ್ಲಾ ಮಾಡಬೇಕು ಎನ್ನುತ್ತಾನೆ. ಶ್ರೇಷ್ಠಾ ಕೋಪಗೊಂಡು ರೂಮ್ಗೆ ಹೋಗುತ್ತಾಳೆ. ಅವಳನ್ನು ಸಮಧಾನ ಮಾಡುವ ತಾಂಡವ್, ನೀನು ಯಾರಿಗೂ ಏನೂ ಕಡಿಮೆ ಇಲ್ಲ ಎಂದು ಸಾಬೀತು ಮಾಡಬೇಕು. ಆ ಭಾಗ್ಯಾ ನನಗೆ ಎಲ್ಲಾ ಗೊತ್ತಿರೋದು ಎಂದು ಮೆರೆಯುತ್ತಿದ್ದಾಳೆ, ನೀನು ಅವಳನ್ನು ಮೀರಿಸಬೇಕು ಎನ್ನುತ್ತಾನೆ.
ಸತ್ಯನಾರಾಯಣಸ್ವಾಮಿ ಪೂಜೆಗೆ ನೀನೇ ನೈವೇದ್ಯ ಕೂಡಾ ತಯಾರಿಸಬೇಕು ಎನ್ನುತ್ತಾನೆ. ಹೌದು,ನಾನು ಭಾಗ್ಯಾಗಿಂತ ಕಡಿಮೆ ಎನಿಸಿಕೊಳ್ಳಬಾರದು, ಏನೂ ಓದಿರದ ದಡ್ಡಿ ಭಾಗ್ಯಾಳೇ ಎಲ್ಲವನ್ನೂ ಮಾಡುವಾಗ ನಾನು ಏಕೆ ಮಾಡಬಾರದು ಎಂದು ಶ್ರೇಷ್ಠಾ ಅಡುಗೆ ಮನೆಗೆ ಹೋಗುತ್ತಾಳೆ. ನಾನು ಈ ಮನೆ ಸೊಸೆ, ಅಡುಗೆ ಮನೆ ಕೂಡಾ ನನ್ನದು, ನೀನು ಇಲ್ಲಿಂದ ಹೋಗು ಎಂದು ಭಾಗ್ಯಾಳನ್ನು ಹೊರ ಹಾಕುತ್ತಾಳೆ. ದೇವರ ನೈವೇದ್ಯ ಎಂದರೆ ಆಟ ಆಡಿದಂತೆ ಅಲ್ಲ, ನಾನು ಅದನ್ನು ಮಾಡುತ್ತೇನೆ ನೀನು ಬೇರೆ ಕೆಲಸ ನೋಡು ಎಂದು ಭಾಗ್ಯಾ ಎಷ್ಟು ಹೇಳಿದರೂ ಶ್ರೇಷ್ಠಾ, ದುರಹಂಕಾರದಿಂದ ವರ್ತಿಸುತ್ತಾಳೆ. ಪೂಜೆಗೆ ಏನಾದರೂ ಸಮಸ್ಯೆ ಆದರೆ ನಿನ್ನನ್ನು ಬಿಡುವುದಿಲ್ಲ ಎಂದು ಭಾಗ್ಯಾ ಎಚ್ಚರಿಸುತ್ತಾಳೆ.
ನೈವೇದ್ಯಕ್ಕೆ ಉಪ್ಪಿಟ್ಟು ತಯಾರಿಸುವ ಶ್ರೇಷ್ಠಾ
ನನಗೆ ನೈವೇದ್ಯ ಮಾಡಲು ಬರದಿದ್ದರೆ ಏನಂತೆ ನನ್ನ ಫ್ರೆಂಡ್ಸ್ ಬಳಿ ವಿಚಾರಿಸುತ್ತೇನೆ ಎಂದು ಶ್ರೇಷ್ಠಾ, ಸ್ನೇಹಿತೆಯೊಬ್ಬಳಿಗೆ ಕಾಲ್ ಮಾಡುತ್ತಾಳೆ. ಸತ್ಯನಾರಾಯಣ ಪೂಜೆಗೆ ರವೆಯಿಂದ ಪ್ರಸಾದ ಮಾಡಬೇಕು ಎಂದು ಸ್ನೇಹಿತೆ ಹೇಳುತ್ತಾಳೆ. ಅಷ್ಟೇ ತಾನೇ ಉಳಿದದ್ದು ನಾನು ಮಾಡುವೆ ಬಿಡು ಎಂದು ಆಕೆಯ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳದ ಶ್ರೇಷ್ಠಾ, ಉಪ್ಪಿಟ್ಟು ಮಾಡುತ್ತಾಳೆ. ಪೂಜೆ ಆರಂಭವಾಗುತ್ತದೆ. ಶ್ರೇಷ್ಠಾ, ನೈವೇದ್ಯ ತಂದಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ, ತಾಂಡವ್ ಅಂತೂ ಬಹಳ ಖುಷಿಯಾಗುತ್ತಾನೆ. ಶ್ರೇಷ್ಠಾಳನ್ನು ನೋಡಿದ ನೆರೆಹೊರೆಯವರು ಇವಳು ಇಲ್ಲಿಗೆ ಏಕೆ ಬಂದಳು ಎಂದು ಕುಸುಮಾಳನ್ನು ಪ್ರಶ್ನಿಸುತ್ತಾರೆ.
ದೇವರ ನೈವೇದ್ಯ ಇಡಲು ಮುಂದಾದ ಅರ್ಚಕರಿಗೆ ಉಪ್ಪಿಟ್ಟನ್ನು ನೋಡಿ ಶಾಕ್ ಆಗುತ್ತದೆ, ಇದೇನು ಕುಸುಮಾ ಅವರೇ ಪ್ರಮಾದ, ಸತ್ಯನಾರಾಯಣಸ್ವಾಮಿಗೆ ಸಜ್ಜಿಗೆ ಬದಲಿಗೆ ಉಪ್ಪಿಟ್ಟು ಮಾಡಿಸಿದ್ದೀರಿ, ನಾನು ನಿಮ್ಮ ಮನೆಯಲ್ಲಿ ಪೂಜೆ ಮಾಡುವುದಿಲ್ಲ ಎನ್ನುತ್ತಾರೆ, ಪಾತ್ರೆಯಲ್ಲಿದ್ದನ್ನು ತಿಂದು ರುಚಿ ನೋಡುವ ಶ್ರೇಷ್ಠಾ, ಏನಾಗಿದೆ? ರುಚಿಯಾಗಿದೆಯಲ್ಲ ಎನ್ನುತ್ತಾಳೆ. ಪೂಜೆಗೆ ಯಾರಾದರೂ ಉಪ್ಪಿಟ್ಟು ಮಾಡುತ್ತಾರಾ? ಶುಭ ಮುಹೂರ್ತಕ್ಕೆ ಇನ್ನು 5 ನಿಮಿಷ ಬಾಕಿ ಇದೆ, ನಾನು ಪೂಜೆ ಮಾಡುವುದಿಲ್ಲ ಎನ್ನುತ್ತಾರೆ, ಆದರೆ ಅರ್ಚಕರ ಬಳಿ ಮನವಿ ಮಾಡುವ ಭಾಗ್ಯಾ, ದಯವಿಟ್ಟು ಹಾಗೇ ಹೇಳಬೇಡಿ, 5 ನಿಮಿಷದಲ್ಲಿ ನಾನು ಪ್ರಸಾದ ಮಾಡಿ ತರುತ್ತೇನೆ ಎಂದು ಮನವಿ ಮಾಡಿಕೊಳ್ಳುತ್ತಾಳೆ.
ಆ ದೇವರೇ ಭಾಗ್ಯಾ ಬಳಿ ನೈವೇದ್ಯ ತಯಾರಿ ಮಾಡಿಸಿಕೊಳ್ಳುತ್ತಾನೆ ಎಂದು ಸುನಂದಾ ಬಳಿ ಕುಸುಮಾ ಹೇಳಿದ ಮಾತು ನಿಜವಾಗುತ್ತಾ? ತಾಂಡವ್ ಹೇಗೆ ಪ್ರತಿಕ್ರಿಯಿಸುತ್ತಾನೆ? ಕಾದು ನೋಡಬೇಕು.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್