Bigg Boss 9: ಎಗ್ ಇಲ್ಲದೆ ಎಗ್ ರೈಸ್ ಮಾಡಿದ ಆರ್ಯವರ್ಧನ್...ಹೊಸ ರೆಸಿಪಿ ಸಖತ್ತಾಗಿದೆ ಎಂದ ಮನೆಯ ಸದಸ್ಯರು
ಆರ್ಯವರ್ಧನ್ ಗುರೂಜಿ, ಎಗ್ ಇಲ್ಲದೆ ಎಗ್ ರೈಸ್ ಮಾಡಿಕೊಡುವ ಮೂಲಕ ಸಾನ್ಯ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರಿಗಾಗಿ ಅವರು ಎಗ್ ಇಲ್ಲದ ಎಗ್ ರೈಸ್ ರೆಸಿಪಿಯನ್ನು ಕೂಡಾ ಹೇಳಿಕೊಟ್ಟಿದ್ದಾರೆ.
ಬಿಗ್ ಬಾಸ್ ಸೀಸನ್ 9 ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಕೆಲವು ಸ್ಪರ್ಧಿಗಳ ನಡುವೆ ಸ್ನೇಹ ಹೆಚ್ಚಾದರೆ ಕೆಲವರ ನಡುವೆ ಮುನಿಸು ಹೆಚ್ಚಾಗುತ್ತಿದೆ. ಈ ನಡುವೆ ಒಟಿಟಿಯಿಂದ ಟಿವಿ ಸೀಸನ್ಗೆ ಬಂದ ಆರ್ಯವರ್ಧನ್ ಗುರೂಜಿ ಮನೆಯ ಬಹುತೇಕ ಎಲ್ಲಾ ಸದಸ್ಯರ ಇಷ್ಟದ ಸ್ಪರ್ಧಿ ಆಗಿದ್ದಾರೆ.
ಆರ್ಯವರ್ಧನ್ ಗುರೂಜಿ ಟಾಸ್ಕ್, ತಮ್ಮ ಮಾತುಗಳಿಂದ ಮಾತ್ರವಲ್ಲ ಮನೆಯ ಸದಸ್ಯರಿಗೆ ರುಚಿಯಾದ ಅಡುಗೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚಿನ ಎಪಿಸೋಡ್ವೊಂದರಲ್ಲಿ ಆರ್ಯವರ್ಧನ್ ಗುರೂಜಿ, ಎಗ್ ಇಲ್ಲದೆ ಎಗ್ ರೈಸ್ ಮಾಡಿಕೊಡುವ ಮೂಲಕ ಸಾನ್ಯ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರಿಗಾಗಿ ಅವರು ಎಗ್ ಇಲ್ಲದ ಎಗ್ ರೈಸ್ ರೆಸಿಪಿಯನ್ನು ಕೂಡಾ ಹೇಳಿಕೊಟ್ಟಿದ್ದಾರೆ.
ಗುರೂಜಿ ಮಾಡಿಕೊಟ್ಟಿರುವ ಎಗ್ ಇಲ್ಲದ ಎಗ್ ರೈಸ್ ರುಚಿ ಮಾಡಿದ ಸಾನ್ಯ ಹಾಗೂ ರೂಪೇಶ್ ಶೆಟ್ಟಿ ಅದರ ರುಚಿಯನ್ನು ಹೊಗಳುತ್ತಾರೆ. ನಿಜಕ್ಕೂ ಈ ರೈಸ್ ಸಖತ್ತಾಗಿದೆ. ಗುರೂಜಿಯರು ನಂಬರ್ನಲ್ಲಿ ಮಾತ್ರ ಕಿಂಗ್ ಅಲ್ಲ, ಅವರು ಏನು ಅಡುಗೆ ಮಾಡಿದರೂ ಅದು ರುಚಿಯಾಗಿರುತ್ತೆ. ಸಾನ್ಯ ಮೇಲೆ ಆಣೆ ಮಾಡಿ ಹೇಳ್ತಿದ್ದೇನೆ. ಇಡೀ ಪ್ರಪಂಚದಲ್ಲೇ ಎಗ್ ಹಾಕದೆ ಎಗ್ ರೈಸ್ ಟೇಸ್ಟ್ ಸಿಗುವ ಎಗ್ ರೈಸ್ ಯಾರಿಂದಲೂ ಮಾಡೋಕೆ ಆಗೊಲ್ಲ, ಮಾಡುವವರು ಯಾರಾದರೂ ಬದುಕಿದ್ದರೆ ಅದು ಒನ್ ಅಂಡ್ ಓನ್ಲಿ ಎಂದು ರೂಪೇಶ್ ಹೇಳಿದರೆ, ಆತನ ಮಾತನ್ನು ಮುಂದುವರೆಸಿದ ಸಾನ್ಯ, ಮೊಟ್ಟೆವರ್ಧನ್ ಎಂದು ಗುರೂಜಿ ತಲೆ ಮೇಲೆ ಕೈಆಡಿಸುತ್ತಾರೆ.
ನಂತರ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಕುರಿತು ಅಪ್ಪಾಜಿ ರೆಸಿಪಿ ಹೇಳಿಕೊಡಿ ಎಂದಾಗ, ಅನ್ನವನ್ನು ಹದವಾಗಿ ಬೇಯಿಸಬೇಕು. ಅದನ್ನು ಎಣ್ಣೆಯನ್ನು ಫ್ರೈ ಮಾಡುವಾಗ ಸ್ವಲ್ಪ ಪೆಪ್ಪರ್, ಖಾರದ ಪುಡಿ, ಉಪ್ಪು ಸೇರಿಸಿ ತಯಾರಿಸಬೇಕು. ಜೊತೆಗೆ ಮಗನ ಪ್ರೀತಿಯೂ ಸೇರಿದರೆ ಅದು ಇನ್ನಷ್ಟು ರುಚಿಯಾಗಿರುತ್ತದೆ ಎಂದು ಗುರೂಜಿ ಹೇಳುತ್ತಾರೆ. ಗುರೂಜಿ ಮಾತಿಗೆ ರೂಪೇಶ್ ಶೆಟ್ಟಿ ತಮ್ಮ ಎದೆ ಮೇಲೆ ಕೈಯಿಟ್ಟು ವಾವ್ ಎನ್ನುತ್ತಾರೆ. ಕಲರ್ಸ್ ಕನ್ನಡ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಆರ್ಯವರ್ಧನ್ ಅವರ ಎಗ್ ಇಲ್ಲದ ಎಗ್ ರೈಸ್ ರೆಸಿಪಿ, ಹಾಗೂ ರೂಪೇಶ್ ಶೆಟ್ಟಿ ಮಾತುಗಳಿಗೆ ನೆಟಿಜನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಒಟಿಟಿ ಶೋನಿಂದಲೂ ಬಹಳ ಆತ್ಮೀಯರಾಗಿರುವ ಆರ್ಯವರ್ಧನ್-ರೂಪೇಶ್ ಶೆಟ್ಟಿ
ಒಟಿಟಿ ಬಿಗ್ಬಾಸ್ನಿಂದಲೂ ಆರ್ಯವರ್ಧನ್-ರೂಪೇಶ್ ಶೆಟ್ಟಿ ಬಹಳ ಆತ್ಮೀಯರಾಗಿದ್ದಾರೆ. ಒಮ್ಮೆ ಮನೆಯ ಸದಸ್ಯರಿಗೆ ಇಷ್ಟ-ಕಷ್ಟ ಎಂಬ ಒಂದು ಟಾಸ್ಕ್ ನೀಡಲಾಗಿತ್ತು. ಮನೆ ಅಂಗಳದಲ್ಲಿ ಇಡಲಾದ ಕೆಲವೊಂದು ಸಾಮಗ್ರಿಗಳನ್ನು ಕೈಗೆತ್ತಿಕೊಂಡು ತಮಗೆ ಇಷ್ಟವಾದ ಹಾಗೂ ಕಷ್ಟವಾದ ಸಹ ಸ್ಪರ್ಧಿಗಳಿಗೆ ನೀಡಿ ವಿವರಣೆ ನೀಡಬೇಕಿತ್ತು. ಆರ್ಯವರ್ಧನ್ ಗುರೂಜಿ ಒಂದು ಟೆಡ್ಡಿಬೇರ್ ಕೈಯ್ಯಲ್ಲಿ ಹಿಡಿದು, ಇದು ನನ್ನ ಮಗಳು ಎಂದು ಪ್ರೀತಿಯಿಂದ ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಾ ಅದನ್ನು ನಟ ರೂಪೇಶ್ ಶೆಟ್ಟಿಗೆ ನೀಡಿದರು. ಗೊಂಬೆ ಪಡೆದು ಮಾತನಾಡಿದ ರೂಪೇಶ್, ''13ನೇ ವಯಸ್ಸಿನಲ್ಲಿ ನನ್ನ ತಾಯಿ ನಿಧನರಾದರು, ನಂತರ ತಂದೆ ಪ್ರೀತಿ ಕೂಡಾ ಸಿಗಲಿಲ್ಲ. ಆದರೆ ಆ ಸ್ಥಾನವನ್ನು ಗುರೂಜಿ ತುಂಬಿದ್ದಾರೆ, ಅವರು ಕಂದ, ಮಗ ಅಂತ ಕರೆಯುವಾಗ ಅಪ್ಪನ ನೆನಪಾಗುತ್ತದೆ'' ಎಂದಾಗ ಆರ್ಯವರ್ಧನ್ ರೂಪೇಶ್ ಅವರನ್ನು ತಬ್ಬಿಕೊಂಡರು. ಈ ಸಮಯದಲ್ಲಿ ಇಬ್ಬರೂ ಭಾವುಕರಾಗಿದ್ದರು.