ಬಿಗ್ ಬಾಸ್ ಬುಡಕ್ಕೆ ಕೈ ಹಾಕಿದ ತ್ರಿವಿಕ್ರಮ್ಗೆ ಚಾಟಿ ಬೀಸಿದ ಸುದೀಪ್; ಬಲಭೀಮನಂತಿದ್ದವ ಕಿಚ್ಚನ ಮುಂದೆ ಠುಸ್ ಪಟಾಕಿ
ಶೋಭಾ ಶೆಟ್ಟಿ ಮನೆಯಿಂದ ಕ್ವಿಟ್ ಆಗಿದ್ದೇ ತಡ, ಅಕ್ಕಿ ಕಾಳು ಹಿಡಿದುಕೊಂಡು ಕೋಡ್ವರ್ಡ್ ಮೂಲಕವೇ ಗೌತಮಿ ಜತೆ ಚರ್ಚೆ ನಡೆಸಿ, ಬಿಗ್ ಬಾಸ್ ನಿರ್ಧಾರವನ್ನು ಪ್ರಶ್ನೆ ಮಾಡಿದ್ದರು ತ್ರಿವಿಕ್ರಮ್. ಈ ವಿಚಾರವೇ ಶನಿವಾರ ಕಿಚ್ಚನ ಕೆಣ್ಣು ಕೆಂಪಗಾಗಿಸಿತ್ತು.
Bigg Boss Kannada 11: ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಮತ್ತೆ ಗುಡುಗಿದ್ದಾರೆ. ಏನೋ ಮಾಡಲು ಹೋಗಿ, ತಮ್ಮ ಬುಡಕ್ಕೆ ತಂದಿಟ್ಟುಕೊಂಡ ತ್ರಿವಿಕ್ರಮ್ ಅವರ ಮದ ಇಳಿಸಿದ್ದಾರೆ ಸುದೀಪ್. ಅಷ್ಟಕ್ಕೂ ಏನಾಯ್ತು? ಮನೆಯ ಸ್ಟ್ರಾಂಗ್ ಸ್ಪರ್ಧಿಯೆಂದೇ ಬಿಂಬಿಸಿಕೊಂಡಿರುವ ತ್ರಿವಿಕ್ರಮ್ ಸುದೀಪ್ ಅವರಿಂದ ತರಾಟೆಗೆ ಒಳಗಾಗಿದ್ದು ಏಕೆ? ತ್ರಿವಿಕ್ರಮ್ ಮಾಡಿದ ತಪ್ಪಿಗೆ ಇಡೀ ಮನೆ ಮಂದಿಯೂ ಕಿಚ್ಚನಿಂದ ಶಿಕ್ಷೆ ಅನುಭವಿಸಿದೆ. ಈ ನಡುವೆ ನಾಮಿನೇಟ್ ಆದವರ ಪೈಕಿ ಮನೆ ಕ್ಯಾಪ್ಟನ್ ಗೌತಮಿ ಶನಿವಾರವೇ ಎಲಿಮಿನೇಷನ್ ಕಂಟಕದಿಂದ ಪಾರಾಗಿದ್ದಾರೆ.
ವಾರಾಂತ್ಯದ ಏಪಿಸೋಡ್ ಆರಂಭವಾಗುತ್ತಿದ್ದಂತೆ, ಆರಂಭದ ಕೆಲ ನಿಮಿಷ ಎಲ್ಲರ ಜತೆಗೆ ಲವಲವಿಕೆಯಿಂದ ಮಾತನಾಡುವ ಸುದೀಪ್, ಈ ಶನಿವಾರ ಮಾತ್ರ ಕೊಂಚ ಗರಂ ಆಗಿಯೇ ವೇದಿಕೆಗೆ ಬಂದಿದ್ದರು. ನೇರವಾಗಿ ವಿಡಿಯೋ ಪ್ಲೇ ಮಾಡಬೇಕಿದೆ ಎನ್ನುತ್ತಲೇ, ಮನೆ ಮಂದಿಗೆ ತ್ರಿವಿಕ್ರಮ್ ಮತ್ತು ಗೌತಮಿ ನಡುವಿನ ಸಂಭಾಷಣೆಯನ್ನು ಎಲ್ಲರಿಗೂ ತೋರಿಸಿದ್ದಾರೆ. ಅಸಲಿಗೆ ಆರಂಭದಲ್ಲಿ ಮನೆಯ ಉಳಿದ ಸ್ಪರ್ಧಿಗಳಿಗೆ ಏನಾಗ್ತಿದೆ ಎಂದು ಮನವರಿಕೆ ಆಗಿಲ್ಲ. ಬಳಿಕ ಶೋಭಾ ಶೆಟ್ಟಿ ಎಲಿಮಿನೇಟ್ ವಿಚಾರದ ಚರ್ಚೆ ಎಂದು ತಿಳಿದಿದೆ.
ಅಷ್ಟಕ್ಕೂ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಶಿಂಧೋಗಿ ಕೊನೇಯ ಹಂತಕ್ಕೆ ಬಂದು ನಿಂತಿದ್ದರು. ಆದರೆ, ಶೋಭಾ ಶೆಟ್ಟಿ ಅದಾಗಲೇ ಸೇವ್ ಆಗಿದ್ದರು. ಇನ್ನೇನು ಇವರಿಬ್ಬರಲ್ಲಿ ಒಬ್ಬರು ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಶೋಭಾ ನನಗೆ ಇಲ್ಲಿ ಇರಲು ಆಗ್ತಿಲ್ಲ ಎಂದು ಹೇಳಿ, ಕಿಚ್ಚನ ಮಾತನ್ನೂ ಲೆಕ್ಕಿಸದೇ ಬಿಗ್ ಬಾಸ್ ಮನೆ ತೊರೆದಿದ್ದರು. ಶೋಭಾ ಹೊರನಡೆಯುತ್ತಿದ್ದಂತೆ, ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಸೇವ್ ಆಗಿದ್ದರು. ಶೋಭಾ ಎಲಿಮಿನೇಟ್ ಆದ ವಿಚಾರವನ್ನೇ ತ್ರಿವಿಕ್ರಮ್, ಗೌತಮಿ ಮುಂದೆ ಚರ್ಚೆ ಮಾಡಿದ್ದರು.
ಬಿಗ್ಬಾಸ್ ನಿರ್ಧಾರಕ್ಕೆ ಸಿಗದ ಮರ್ಯಾದೆ...
ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಬಾಟಮ್ 2 ಇದ್ದಿದ್ದಕ್ಕೆ ಶೋಭಾ ಅವರನ್ನೇ ಹೊರಕಳಿಸಲಾಗಿದೆ ಎಂಬರ್ಥದಲ್ಲಿ ಗೌತಮಿ ಜತೆಗೆ ಕೋಡ್ವರ್ಡ್ನಲ್ಲಿ ಮಾತನಾಡಿದ್ದರು ತ್ರಿವಿಕ್ರಮ್. ಇದಷ್ಟೇ ಅಲ್ಲ ಬಿಗ್ ಬಾಸ್ ನಿರ್ಧಾರವನ್ನೇ ಪ್ರಶ್ನೆ ಮಾಡಿ ಅನುಮಾನ ವ್ಯಕ್ತಪಡಿಸಿದ್ದರು. ತ್ರಿವಿಕ್ರಮ್ ಅವರ ಈ ನಡೆ ಖಂಡಿಸಿದ ಕಿಚ್ಚ ಮುಕ್ಕಾಲು ಗಂಟೆ ಇದೇ ವಿಚಾರವಾಗಿಯೇ ವಿಕ್ಕಿಗೆ ಕ್ಲಾಸ್ ತೆಗೆದುಕೊಂಡರು. ಶಿಶಿರ್ ಮತ್ತು ಐಶ್ವರ್ಯಾ ಅವರನ್ನು ಉಳಿಸುವ ಸಲುವಾಗಿ ಬಿಗ್ ಬಾಸ್ ಶೋಭಾ ಅವರನ್ನು ಹೊರಕಳಿಸಿದೆ ಎಂದು ಅಕ್ಕಿ ಕಾಳುಗಳನ್ನು ಹಿಡಿದುಕೊಂಡು, ಗೌತಮಿ ಜತೆಗೆ ತ್ರಿವಿಕ್ರಮ್ ಚರ್ಚೆ ಮಾಡಿದ್ದಾರೆ. ಬಳಿಕ ಇದು ಬಿಗ್ ಬಾಸ್ ನಿರ್ಧಾರವಲ್ಲ, ನನ್ನ ನಿರ್ಧಾರ ಎಂದು ಸುದೀಪ್ ತಿರುಗೇಟು ಕೊಟ್ಟಿದ್ದಾರೆ.
ಸ್ಪರ್ಧಿಗಳಿಗೆ ಶಿಕ್ಷೆ ಕೊಟ್ಟ ಕಿಚ್ಚ
ತ್ರಿವಿಕ್ರಮ್ ವಿರುದ್ಧ ಗುಡುಗಿದ ಕಿಚ್ಚ, "ನಿಮ್ಮ ಬುಡ ನೀವು ಕಾಪಾಡಿಕೊಳ್ಳಿ. ಕಾಪಾಡಿಕೊಳ್ಳುವ ಭರದಲ್ಲಿ ನಮ್ಮ ಬುಡಕ್ಕೆ ಕೈ ಹಾಕಿದ್ದೀರಿ. ಸುಮ್ನೆ ಬಿಡ್ತೀವಾ" ಎಂದಿದ್ದಾರೆ. ಬಳಿಕ ಮನೆಯ ಎಲ್ಲರಿಗೂ ತಾವು ಅನುಭವಿಸುತ್ತಿರುವುದನ್ನೇ ಸ್ಪರ್ಧಿಗಳಿಗೂ ಶಿಕ್ಷೆ ರೂಪದಲ್ಲಿ ನೀಡಿದ್ದಾರೆ. "ನಿಮ್ಮನ್ನೆಲ್ಲಾ ಅಹಂನಲ್ಲಿ ಕೂರೋಕೆ ಬಿಟ್ಟು, ನಾನಿಲ್ಲಿ ನಾಯಿ ತರಹ ನಿಂತಿರ್ತೀನಲ್ಲಾ.. ನಾಯಿ ತರಹ ನಿಂತುಕೊಂಡು ಮಾತಾಡುತ್ತಿರ್ತೀನಲ್ಲಾ.." ಎನ್ನುತ್ತಲೇ ಸುದೀರ್ಘ ಗಂಟೆಗಳ ಕಾಲ ನಿಂತುಕೊಂಡು ಮಾತನಾಡುವಾಗ, ನಿಮ್ಮ ಬಗ್ಗೆ ನನಗೆಷ್ಟು ಫಸ್ಟ್ರೇಷನ್ ಆಗಿರುತ್ತೆ. ಕಾಲುಗಳು ನೋಯುತ್ತೆ ಎಂದು ಯಾರಿಗಾದರೂ ಗೊತ್ತಿದೆಯೇ? ಹಾಗಾಗಿ ನನ್ನ ನೋವು ನಿಮಗೂ ಅರ್ಥವಾಗಲಿ ಎಂದು ಎಲ್ಲರಿಗೂ ಎದ್ದುನಿಂತುಕೊಂಡೇ ಮಾತನಾಡಿ ಎಂದಿದ್ದಾರೆ.