Tipu movie: 40 ಲಕ್ಷ ಹಿಂದೂಗಳ ಮತಾಂತರ, 8 ಸಾವಿರ ದೇಗುಲ ಧ್ವಂಸ, ಗೋಮಾಂಸ ಸೇವನೆಗೆ ಒತ್ತಾಯ; ಟಿಪ್ಪು ಟೀಸರ್ನಲ್ಲಿ ಕಾಣಿಸಿದ್ದಿಷ್ಟು
ಕರ್ನಾಟಕದಲ್ಲಿ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೇ ಎನ್ನುವಷ್ಟರಲ್ಲಿ, ಬಾಲಿವುಡ್ ಅಂಗಳದಿಂದ ಮೈಸೂರು ಹುಲಿ ಎಂದೇ ಕರೆಸಿಕೊಳ್ಳುವ ಟಿಪ್ಪು ಸುಲ್ತಾನನ ಅಸಲಿ ಮುಖ ಅನಾವರಣ ಮಾಡಲು ಮುಂದಾಗಿದೆ ಬಾಲಿವುಡ್.
Tipu Sultan movie: ಕಳೆದ ವರ್ಷ ತೆರೆಗೆ ಬಂದಿದ್ದ ದಿ ಕಾಶ್ಮೀರಿ ಫೈಲ್ಸ್ (The Kashmir Files) ಸಿನಿಮಾ ಸೃಷ್ಟಿಸಿದ ವಿವಾದ ಸಣ್ಣದೇನಲ್ಲ. ಇಡೀ ದೇಶವೇ ಆ ಚಿತ್ರದ ಬಗ್ಗೆ ಮಾತನಾಡಿತ್ತು. ಪರ ವಿರೋಧ ಚರ್ಚೆಗೆ ಆ ಸಿನಿಮಾ ಒಗ್ಗರಣೆ ಹಾಕಿತ್ತು. ಇತ್ತೀಚೆಗೆ ಬಂದಿದ್ದ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಸಹ ಟ್ರೇಲರ್ ಮೂಲಕವೇ ವಿವಾದ ಸೃಷ್ಟಿಸಿತ್ತು. ಇದೀಗ ಅಂಥದ್ದೇ ಮತ್ತೊಂದು ವಿವಾದಕ್ಕೆ ಕಾರಣವಾಗಬಲ್ಲ ಸಿನಿಮಾವೊಂದು ಬಾಲಿವುಡ್ನಲ್ಲಿ ಘೋಷಣೆ ಆಗಿದೆ. ಆ ಚಿತ್ರವೇ 'ಟಿಪ್ಪು' (Tipu). ಮೈಸೂರಿನ ಹುಲಿ ಎಂದೇ ಕರೆಸಿಕೊಳ್ಳುವ ಟಿಪ್ಪು ಸುಲ್ತಾನ್ (tipu sultan) ಅವರ ಇನ್ನೊಂದು ಮುಖದ ಅನಾವರಣ ಈ ಸಿನಿಮಾದಲ್ಲಾಗುತ್ತಿದೆ.
'ಟಿಪ್ಪು' ಹೆಸರಿನ ಈ ಸಿನಿಮಾದ ಫಸ್ಟ್ ಲುಕ್ ಜತೆಗೆ ಕಿರು ಟೀಸರ್ ಬಿಡುಗಡೆ ಆಗಿದ್ದು, ನೆಟ್ಟಿಗರು ಈಗಾಗಲೇ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ. ಪರ ವಿರೋಧ ಚರ್ಚೆಗಳು ಶುರುವಾಗಿದ್ದು, ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಹಾಗಾದರೆ ಈ ಸಿನಿಮಾದಲ್ಲಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ? ಕಿರು ಟೀಸರ್ನಲ್ಲೇನಿದೆ? ಇಲ್ಲಿದೆ ನೋಡಿ.
ಟೀಸರ್ನಲ್ಲೇನಿದೆ?
ಬಿಡುಗಡೆಯಾಗಿರುವ ಚಿತ್ರದ ಮೊದಲ ಟೀಸರ್ನಲ್ಲಿ ಟಿಪ್ಪು ಸುಲ್ತಾನನ ಆಡಳಿತದ ಅವಧಿಯಲ್ಲಿ 8 ಸಾವಿರ ದೇವಾಲಯಗಳು ಮತ್ತು 27 ಚರ್ಚ್ಗಳನ್ನು ಕೆಡವಲಾಗಿದೆ ಎಂದು ಉಲ್ಲೇಖಿಸಿದೆ. 40 ಲಕ್ಷ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿ ಗೋಮಾಂಸ ತಿನ್ನುವಂತೆ ಒತ್ತಾಯಿಸಲಾಯಿತು ಎಂಬ ಸಾಲೂ ಕಾಣಿಸುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಹಿಂದೂಗಳನ್ನು ಬಂಧಿಸುವುದರ ಜತೆಗೆ ಕ್ಯಾಲಿಕಟ್ನ 2 ಸಾವಿರಕ್ಕೂ ಹೆಚ್ಚು ಬ್ರಾಹ್ಮಣರು ಟಿಪ್ಪುವಿನಿಂದ ನಾಶವಾದರು ಎಂದೂ ಅಂಕಿ ಅಂಶದ ಮೂಲಕ ತೋರಿಸಿದ್ದಾರೆ ನಿರ್ದೇಶಕರು.
1783ನೇ ಇಸವಿಯಿಂದಲೇ ಟಿಪ್ಪು ಸುಲ್ತಾನ್ ಜಿಹಾದ್ನ ಬಗ್ಗೆಯೂ ಮಾತನಾಡಿದ್ದನ್ನು ಟೀಸರ್ ಹೇಳುತ್ತದೆ. ಟೀಸರ್ ಮುಗಿಯುತ್ತಿದ್ದಂತೆ, ಟಿಪ್ಪುವಿನ ಮುಖಕ್ಕೆ ಕಪ್ಪು ಮಸಿ ಬಳಿಯಲಾಗಿದೆ. ಇದು ಮತಾಂಧ ಸುಲ್ತಾನನ ಕಥೆ ಎಂದು ಟೀಸರ್ನಲ್ಲಿ ಹೇಳಲಾಗಿದೆ. ಸಿನಿಮಾದ ಈ ಫಸ್ಟ್ ಲುಕ್ ಮತ್ತು ಕಿರು ಟೀಸರ್ ಬಿಡುಗಡೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಪಿಎಂ ಮೋದಿ ನಿರ್ಮಾಪಕರ ಟಿಪ್ಪು ಸಿನಿಮಾ
ಎರೋಸ್ ಎಂಟರ್ಟೈನ್ಮೆಂಟ್ ಜತೆಗೆ ಸಂದೀಪ್ ಸಿಂಗ್ ಮತ್ತು ರಶ್ಮಿ ಶರ್ಮಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ತೆರೆಗೆ ಬಂದಿದ್ದ ವಿವೇಕ್ ಒಬೆರಾಯ್ ನಟನೆಯ ಪಿಎಂ ಮೋದಿ ಸಿನಿಮಾ ನಿರ್ಮಾಣ ಮಾಡಿದ್ದ ಸಂದೀಪ್ ಸಿಂಗ್, ಇದೀಗ ಟಿಪ್ಪು ಹೆಸರಿನ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸ್ವಾತಂತ್ರ್ಯವೀರ್ ಸಾವರ್ಕರ್, ಅಟಲ್ ಮತ್ತು ಬಾಲ ಶಿವಾಜಿಯಂತಹ ಸಿನಿಮಾಗಳನ್ನು ಸಂದೀಪ್ ಸಿಂಗ್ ನಿರ್ಮಿಸುತ್ತಿದ್ದಾರೆ.
ಐದು ಭಾಷೆಗಳಲ್ಲಿ ಚಿತ್ರ ಬರಲಿದೆ
ಪವನ್ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಒಂದಲ್ಲ ಎರಡಲ್ಲ, ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ. ಶಾಲಾ ದಿನಗಳಲ್ಲಿ ಟಿಪ್ಪು ಬಗ್ಗೆ ಓದಿದ್ದೆ. ಆದರೆ, ಅದು ನಿಜವಲ್ಲ ಎಂಬುದು ನನಗೆ ಆಮೇಲೆ ತಿಳಿಯಿತು. ಒಬ್ಬ ಹಿಂದೂವಾಗಿ ಮತಾಂಧ ಮುಸ್ಲಿಂ ರಾಜನ ನೈಜತೆಯನ್ನು ತಿಳಿದ ಮೇಲೆ ಬೆಚ್ಚಿ ಬಿದ್ದಿದ್ದೇನೆ. ಈ ಸಿನಿಮಾ ಮೂಲಕ ಆತನ ಕ್ರೂರತೆಯನ್ನು ತೋರಿಸಲು ನಾನು ಧೈರ್ಯ ಮಾಡಿದ್ದೇನೆ. ಟಿಪ್ಪು ಸುಲ್ತಾನನ ಇಸ್ಲಾಮಿಕ್ ಮತಾಂಧತೆಯು ಅವನ ತಂದೆ ಹೈದರ್ ಅಲಿಗಿಂತ ಕೆಟ್ಟದಾಗಿತ್ತು" ಎಂದಿದ್ದಾರೆ ನಿರ್ದೇಶಕ ಪವನ್ ಶರ್ಮಾ.