ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ನಟ ರೋಹಿತ್ ಬಾಸ್ಪೋರ್‌ ಜಲಪಾತದ ಬಳಿ ಶವವಾಗಿ ಪತ್ತೆ
ಕನ್ನಡ ಸುದ್ದಿ  /  ಮನರಂಜನೆ  /  ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ನಟ ರೋಹಿತ್ ಬಾಸ್ಪೋರ್‌ ಜಲಪಾತದ ಬಳಿ ಶವವಾಗಿ ಪತ್ತೆ

ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ನಟ ರೋಹಿತ್ ಬಾಸ್ಪೋರ್‌ ಜಲಪಾತದ ಬಳಿ ಶವವಾಗಿ ಪತ್ತೆ

‘ಫ್ಯಾಮಿಲಿ ಮ್ಯಾನ್ 3‘ ವೆಬ್‌ ಸರಣಿಯಲ್ಲಿ ನಟಿಸಿದ್ದ ನಟ ರೋಹಿತ್ ಬಾಸ್ಫೋರ್‌ ಅಸ್ಸಾಂನ ಗುವಾಹಟಿಯ ಜಲಪಾತದ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಇವರ ಸಾವು ನಿಗೂಢವಾಗಿದ್ದು, ಮನೆಯವರು ಕೊಲೆ ಆರೋಪ ಮಾಡುತ್ತಿದ್ದಾರೆ.

ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ನಟ ರೋಹಿತ್ ಜಲಪಾತದ ಬಳಿ ಶವವಾಗಿ ಪತ್ತೆ
ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ನಟ ರೋಹಿತ್ ಜಲಪಾತದ ಬಳಿ ಶವವಾಗಿ ಪತ್ತೆ

ಫ್ಯಾಮಿಲಿ ಮ್ಯಾನ್ 3 ವೆಬ್ ಸರಣಿಯ ಮೂಲಕ ಹೆಸರು ಗಳಿಸಿದ್ದ ನಟ ರೋಹಿತ್ ಬಾಸ್ಫೋರ್‌ ಅಸ್ಸಾಂನ ಗುವಾಹಟಿಯ ಗರ್ಭಂಗ ಜಲಪಾತದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಭಾನುವಾರ (ಏಪ್ರಿಲ್ 27) ಸಂಜೆ ಈ ಘಟನೆ ನಡೆದಿದೆ. ಅಂದು ಮಧ್ಯಾಹ್ನ 12.30ರ ಸುಮಾರಿಗೆ ರೋಹಿತ್ ಮನೆಯಿಂದ ಹೊರಟು ಸ್ನೇಹಿತರ ಜೊತೆ ಪಿಕ್ನಿಕ್‌ಗೆ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರೋಹಿತ್ 9 ಮಂದಿ ಸ್ನೇಹಿತರ ಜೊತೆ ಪಿಕ್ನಿಕ್‌ಗೆ ಹೋಗಿದ್ದರು. ಮಧ್ಯಾಹ್ನ ಸುಮಾರು 2 ಗಂಟೆ ಹೊತ್ತಿಗೆ ಈ ಘಟನೆ ನಡೆದಿರಬಹುದು ಎಂದು ರಾಣಿ ಪೊಲೀಸ್ ಔಟ್‌ಪೋಸ್ಟ್ ಅಧಿಕಾರಿಗಳು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

'ಸಂಜೆ 4 ಗಂಟೆ ಸುಮಾರಿಗೆ ನಮಗೆ ಘಟನೆ ಬಗ್ಗೆ ಮಾಹಿತಿ ಸಿಕ್ಕಿತ್ತು ಮತ್ತು 4.30ರ ಹೊತ್ತಿಗೆ ನಾವು ಸ್ಥಳಕ್ಕೆ ತಲುಪಿದ್ದೆವು. ನಂತರ ಎಸ್‌ಡಿಆರ್‌ಎಫ್ ತಂಡ ಸಂಜೆ 6.30 ರ ಸುಮಾರಿಗೆ ಶವವನ್ನು ಹೊರತೆಗೆದಿದೆ‘ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿದೆ.

ಮೂಲಗಳ ಪ್ರಕಾರ ಕೆಲವು ತಿಂಗಳ ಹಿಂದಷ್ಟೇ ರೋಹಿತ್ ಮುಂಬೈನಿಂದ ಗುವಾಹಟಿಗೆ ಮರಳಿದ್ದರು. ಭಾನುವಾರ ಸ್ನೇಹಿತರ ಜೊತೆ ಕಾಲ ಕಳೆಯುವ ಸಲುವಾಗಿ ಮನೆಯಿಂದ ಹೊರಟಿದ್ದರು ರೋಹಿತ್‌. ಆದರೆ ಸಂಜೆಯ ನಂತರ ಅವರು ಕುಟುಂಬದವರ ಸಂಪರ್ಕಕ್ಕೆ ಸಿಗುವುದಿಲ್ಲ. ಆಗ ಕುಟುಂಬದವರಿಗೆ ಆತಂಕ ಹೆಚ್ಚಾಗುತ್ತದೆ. ಆದರೆ ಸಂಜೆ ಹೊತ್ತಿಗೆ ಸ್ನೇಹಿತನೊಬ್ಬ ಈ ಘಟನೆಯ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡುತ್ತಾನೆ.

ಕೊಲೆ ಆರೋಪ ಮಾಡುತ್ತಿರುವ ಕುಟುಂಬಸ್ಥರು

ಈ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ರೋಹಿತ್‌ನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದಿದ್ದು, ರಂಜಿತ್ ಬಸ್ಫೋರ್, ಅಶೋಕ್ ಬಸ್ಫೋರ್ ಮತ್ತು ಧರಂ ಬಸ್ಫೋರ್ ಎನ್ನುವ ಮೂವರು ರೋಹಿತ್‌ಗೆ ಜೀವ ಬೆದರಿಕೆ ಹಾಕಿದ್ದರು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ಇದರೊಂದಿಗೆ ಆ ದಿನ ಔಟಿಂಗ್ ಕರೆದುಕೊಂಡು ಹೋಗಿದ್ದ ಜಿಮ್ ಮಾಲಿಕ ಅಮರ್‌ದೀಪ್ ಬಗ್ಗೆ ಮೇಲೂ ರೋಹಿತ್ ಕುಟುಂಬ ಅನುಮಾನ ವ್ಯಕ್ತಪಡಿಸಿದೆ.

ರೋಹಿತ್ ದೇಹದ ಮೇಲೆ ಹಲವು ಗಾಯಗಳಿದ್ದವು ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಶವಪರೀಕ್ಷೆಯಲ್ಲಿ ಅವರ ತಲೆ, ಮುಖ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳು ಕಂಡುಬಂದಿವೆ.

ನಾಲ್ವರು ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ ಮತ್ತು ರೋಹಿತ್ ಬಾಸ್ಫೋರ್ ಸಾವಿನ ಕುರಿತು ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.