ಏನಾಗ್ತಿದೆ ಕಲರ್ಸ್ ಕನ್ನಡದ ಧಾರಾವಾಹಿಗಳಿಗೆ? ʻನೂರು ಜನ್ಮಕೂʼ ಸೀರಿಯಲ್ನಿಂದ ಹೊರ ಬಂದ ಧನುಷ್ ಗೌಡ, ಹೊಸ ಹೀರೋ ಆಗಮನ
ಬಹುನಿರೀಕ್ಷೆ ಮೂಲಕ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆರಂಭಿಸಿದ್ದ ʻನೂರು ಜನ್ಮಕೂʼ ಧಾರಾವಾಹಿಗೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಿದೆ. ಸಮಯ ಬದಲಾವಣೆಯ ಜತೆಗೆ, ಟಿಆರ್ಪಿಯಲ್ಲಿಯೂ ಈ ಸೀರಿಯಲ್ ಮೋಡಿ ಮಾಡಲಿಲ್ಲ. ಇದೀಗ ಇದೇ ಧಾರಾವಾಹಿಯಿಂದ ನಾಯಕ ಧನುಷ್ ಗೌಡ ಆಚೆ ಬಂದಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಬಹುನಿರೀಕ್ಷೆಯ ಮೂಲಕ ಆರಂಭವಾದ ಸೀರಿಯಲ್ಗಳಲ್ಲಿ ʻನೂರು ಜನ್ಮಕೂʼ ಸಹ ಒಂದು. ಹಾರರ್ ಫ್ಯಾಂಟಸಿ ಸೀರಿಯಲ್ನಲ್ಲಿ ಆತ್ಮದ ಕಾಟದ ಜತೆಗೆ ದೈವದ ಲೀಲೆಯೂ ಈ ಸೀರಿಯಲ್ನ ಹೈಲೈಟ್. ಆದರೆ, ಆರಂಭದಲ್ಲಿನ ಆ ಕೌತುಕ ದಿನಗಳೆಂದಂತೆ ಮುಂದುವರಿಯಲಿಲ್ಲ. ಟಿಆರ್ಪಿಯಲ್ಲಿಯೂ ಮೋಡಿ ಮಾಡಲಿಲ್ಲ. ಆ ಕಾರಣಕ್ಕೆ ಇನ್ನೇನು ಈ ಸೀರಿಯಲ್ಲೇ ಕೊನೆಯಾಯ್ತು ಎನ್ನುವಷ್ಟರಲ್ಲಿ, ವಾರಾಂತ್ಯಕ್ಕೆ ಶಿಫ್ಟ್ ಆಯ್ತು. ಇದೀಗ ಇದೇ ಸೀರಿಯಲ್ನಿಂದ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ.
ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ನೂರು ಜನ್ಮಕೂ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ನ ನಾಯಕನಾಗಿ ಚಿರಂಜೀವಿ ಪಾತ್ರದಲ್ಲಿ ಧನುಷ್ ಗೌಡ ನಟಿಸುತ್ತಿದ್ದರು. ಈ ಮೊದಲು ಗೀತಾ ಸೀರಿಯಲ್ ಮೂಲಕ ಜನಮನಗೆದ್ದ ಧನುಷ್, ಹಾರರ್ ಫ್ಯಾಂಟಸಿ ಕಥೆಯ ಮೂಲಕ ಮತ್ತೆ ಆಗಮಿಸಿದ್ದರು. ಆದರೆ, ಆ ಸೀರಿಯಲ್ ನಿರೀಕ್ಷಿತ ಗುರಿ ತಲುಪಲಿಲ್ಲ. ಹೀಗಿರುವಾಗಲೇ ಇದೇ ʻನೂರು ಜನ್ಮಕೂʼ ಸೀರಿಯಲ್ನಿಂದ ಧನುಷ್ ಗೌಡ ಆಚೆ ಬಂದಿದ್ದಾರೆ. ಇನ್ನೇನು ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಘೋಷಣೆ ಮಾಡಲಿದೆ.
ಕಡಿಮೆ ಟಿಆರ್ಪಿ, ವಾರದ ಎರಡೇ ದಿನಗಳಲ್ಲಿ ಪ್ರಸಾರ ಈ ಕಾರಣಕ್ಕೆ ಧನುಷ್ ಗೌಡ ಈ ಧಾರಾವಾಹಿಯಿಂದ ಹೊರಬಂದರೇ? ಮೇಲ್ನೋಟಕ್ಕೆ ಹೀಗೆ ಕಾಣಿಸಿದರೂ, ಅಸಲಿ ವಿಚಾರವನ್ನು ಧನುಷ್ ಆಗಲಿ, ವಾಹಿನಿಯಾಗಲಿ ಅಧಿಕೃತಪಡಿಸಿಲ್ಲ. ಇನ್ನು ಹೊರನಡೆದ ಧನುಷ್ ಪಾತ್ರಕ್ಕೆ ಯಾವ ನಟನ ಆಗಮನವಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿದ್ದ ಸ್ನೇಹಿತ್ ಗೌಡ, ನೂರು ಜನ್ಮಕೂ ಸೀರಿಯಲ್ನಲ್ಲಿ ಚಿರು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಚಿತ್ರಾ ಶೆಣೈ ನಿರ್ಮಾಣ
ನೂರು ಜನ್ಮಕೂ ಧಾರಾವಾಹಿಯನ್ನು ಶ್ರವಂತ್ ರಾಧಿಕಾ ನಿರ್ದೇಶನ ಮಾಡುತ್ತಿದ್ದಾರೆ. ಈ ಧಾಶರಾವಾಹಿಯಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಪಾತ್ರವರ್ಗದಲ್ಲಿದ್ದಾರೆ. ಜೊತೆಗೆ ಮಜಾ ಟಾಕೀಸ್ ಖ್ಯಾತಿಯ ರೆಮೋ ಕೂಡ ಇದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ‘ನೂರು ಜನ್ಮಕೂ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಏನಿದು ನೂರು ಜನ್ಮಕೂ ಸೀರಿಯಲ್ ಕಥೆ
‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆಯೇ ನೂರು ಜನ್ಮಕೂ ಧಾರಾವಾಹಿಯ ಮೂಲ. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಇತ್ತ ಇದೇ ಚಿರುವನ್ನು ತನ್ನ ತೆಕ್ಕೆಗೆ ಪಡೆಯಬೇಕೆಂಬ ಹಟ ಅತಿಮಾನುಷ ಶಕ್ತಿಯಿರುವ ಕಾಮಿನಿಯದ್ದು.