ಹಿಟ್ ಆಗದ ʻವಧುʼ ಧಾರಾವಾಹಿ, ಪರಭಾಷೆಯ ಹೊಸ ಸೀರಿಯಲ್ನತ್ತ ಮುಖಮಾಡಿದ ಕನ್ನಡದ ನಟಿ ದುರ್ಗಾಶ್ರೀ
ಕಲರ್ಸ್ ಕನ್ನಡದ ವಧು ಸೀರಿಯಲ್ ಇನ್ನೇನು ಶೀಘ್ರದಲ್ಲಿ ಅಂತ್ಯವಾಗಲಿದೆ ಎಂಬ ಟಾಕ್ ಶುರುವಾಗಿದೆ. ಈ ಬೆನ್ನಲ್ಲೇ ಈ ಸುದ್ದಿಗೆ ಪುಷ್ಠಿ ನೀಡುವಂತೆ, ಇದೇ ವಧು ಸೀರಿಯಲ್ ನಾಯಕಿ ದುರ್ಗಾಶ್ರೀ ಹೊಸ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಧಾರಾವಾಹಿಯ ಮುಹೂರ್ತವೂ ನೆರವೇರಿದೆ.

ಬಿಗ್ ಬಾಸ್ ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ಶುರುವಾದ ಸೀರಿಯಲ್ ವಧು. ಇದೀಗ ಇದೇ ಧಾರಾವಾಹಿ ಮುಗಿಯುವ ಹಂತದಲ್ಲಿದೆ ಎಂಬ ಚರ್ಚೆ ಕಿರುತೆರೆ ವಲಯದಲ್ಲಿ ಶುರುವಾಗಿದೆ. ಇನ್ನೇನು ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಲರ್ಸ್ ಕನ್ನಡವಾಗಲಿ, ಆ ಧಾರಾವಾಹಿಯ ನಾಯಕಿ, ಕಲಾವಿದರು ಯಾರೂ ಹೇಳಿಕೊಂಡಿಲ್ಲ. ಟಿಆರ್ಪಿಯಲ್ಲಿ ಮೋಡಿ ಮಾಡದ ಕಾರಣಕ್ಕೆ ಈ ಧಾರಾವಾಹಿ ಶೀಘ್ರದಲ್ಲಿ ಅಂತ್ಯವಾಗಲಿದೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ. ಈ ನಡುವೆ ಇದೇ ಸೀರಿಯಲ್ನ ನಾಯಕಿ ದುರ್ಗಾಶ್ರೀ ಇದೀಗ ಹೊಸ ಸೀರಿಯಲ್ನಲ್ಲಿ ನಾಯಕಿಯಾಗುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಯುತ್ತಿದ್ದಂತೆ, ಯಜಮಾನ ಮತ್ತು ವಧು ಹೆಸರಿನ ಎರಡು ಸೀರಿಯಲ್ಗಳ ಪ್ರಸಾರ ಆರಂಭಿಸಿತ್ತು ಕಲರ್ಸ್ ಕನ್ನಡ. ಇದೀಗ ಈ ಎರಡು ಧಾರಾವಾಹಿಗಳ ಪೈಕಿ ವಧು ಸೀರಿಯಲ್ ಶೀಘ್ರದಲ್ಲಿ ಅಂತ್ಯವಾಗಲಿದೆ ಎಂಬ ಚರ್ಚೆ ಶುರುವಾಗಿದೆ. ನಿರೀಕ್ಷಿತ ಟಿಆರ್ಪಿ ಪಡೆಯದ ಈ ಸೀರಿಯಲ್ ಅನ್ನು ಮುಗಿಸುವ ಲೆಕ್ಕಾಚಾರದಲ್ಲಿಯಂತೆ ಕಲರ್ಸ್ ವಾಹಿನಿ. ಇತ್ತ ಇದೇ ಸೀರಿಯಲ್ನ ನಾಯಕಿ ದುರ್ಗಾಶ್ರೀ ಇದೀಗ ಹೊಸ ಸೀರಿಯಲ್ನ ನಾಯಕಿಯಾಗಿ ಆಯ್ಕೆಯಾಗಿದ್ದಷ್ಟೇ ಅಲ್ಲದೆ, ಅದರ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುವ ನಟಿ ದುರ್ಗಾಶ್ರೀ, ಕನ್ನಡಕ್ಕಿಂತ ತೆಲುಗು ಕಿರುತೆರೆಯಲ್ಲಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗಾಗಲೇ ಬೇರೆ ಬೇರೆ ಭಾಷೆಯ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಮತ್ತೆ ತೆಲುಗಿನ ಹೊಸ ಸೀರಿಯಲ್ಗೆ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆವಂತಿಕಾ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಸೀರಿಯಲ್ನ ಮುಹೂರ್ತದ ವಿಡಿಯೋ ಶೇರ್ ಮಾಡಿದ್ದು, ದುರ್ಗಾಶ್ರೀ ಅವರಿಗೂ ಟ್ಯಾಗ್ ಮಾಡಿದ್ದಾರೆ. ತೆಲುಗಿನ ʻಮಲ್ಲೆಮಾಲʼ ಎಂಟರ್ಟೈನರ್ಸ್ ಬ್ಯಾನರ್ ಅಡಿಯಲ್ಲಿ ಈ ಸೀರಿಯಲ್ ನಿರ್ಮಾಣವಾಗುತ್ತಿದೆ.
ಮತ್ತೆ ತೆಲುಗು ಸೀರಿಯಲ್ನತ್ತ ದುರ್ಗಾಶ್ರೀ
ಈ ಹೊಸ ಸೀರಿಯಲ್ನ ಮುಹೂರ್ತ ಹೈದರಾಬಾದ್ನಲ್ಲಿ ನೆರವೇರಿದೆ. ಸದ್ಯಕ್ಕೆ ತೆಲುಗಿನಲ್ಲಿ ಈ ಸೀರಿಯಲ್ ನಿರ್ಮಾಣವಾಗುತ್ತಿದೆ ಮತ್ತು ಈ ಧಾರಾವಾಹಿಯಲ್ಲಿ ದುರ್ಗಾಶ್ರೀ ನಾಯಕಿಯಾಗಿ ನಟಿಸಲಿದ್ದಾರೆ. ಈ ಎರಡು ವಿಷಯಗಳನ್ನು ಹೊರತುಪಡಿಸಿ, ಏನಿದು ಕಥೆ, ಪಾತ್ರವರ್ಗದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ? ಎಂಬಿತ್ಯಾದಿ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಇನ್ನೇನು ಶೀಘ್ರದಲ್ಲಿ ಈ ಸೀರಿಯಲ್ನ ಮೊದಲ ಪ್ರೋಮೋ ಬಿಡುಗಡೆಯಾಗುವ ಸಾಧ್ಯತೆ ಇದೆ.
ನಟಿ ದುರ್ಗಾಶ್ರೀ ಬಗ್ಗೆ..
ವಧು ಸೀರಿಯಲ್ ಮೂಲಕ ನಟಿ ದುರ್ಗಾಶ್ರೀ ಎಸ್ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಈ ಹಿಂದೆ ಕನ್ನಡದ ನೇತ್ರಾವತಿ ಧಾರಾವಾಹಿಯಲ್ಲಿ ದುರ್ಗಾಶ್ರೀ ನಟಿಸಿದ್ದರು. ಆ ಸೀರಿಯಲ್ ಬಳಿಕ ಜೀ ತೆಲುಗಿನಲ್ಲಿ ಪ್ರಸಾರವಾದ ವೈಷ್ಣವಿ ಧಾರಾವಾಹಿಯಲ್ಲಿಯೂ ನಟಿಸಿದರು. ತೆಲುಗಿನ ಸ್ಟಾರ್ ಮಾ ಚಾನೆಲ್ನಲ್ಲಿನ ʻಮಧುರಣಗರಿಲೋʼ ಸೀರಿಯಲ್ನಲ್ಲಿಯೂ ಬಣ್ಣ ಹಚ್ಚಿದ್ದಾರೆ. ಜೆಮಿನಿ ಟಿವಿಯಲ್ಲಿ ಪ್ರಸಾರವಾದ ʻಅರ್ಧಾಂಗಿʼ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡರು ದುರ್ಗಾಶ್ರೀ. ಮೂಲತಃ ಬೆಂಗಳೂರಿನ ಜಕ್ಕೂರಿನವರಾದ ದುರ್ಗಾಶ್ರೀ, ಹುಟ್ಟಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಸಹಕಾರ ನಗರದ ಕಾವೇರಿ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಮುಗಿಸಿದ್ದಾರೆ. ಯಲಹಂಕದ ನಾಗಾರ್ಜುನ ಪಿಯು ಕಾಲೇಜಿನಲ್ಲಿ ಪಿಯು ಮುಗಿಸಿ, ಹೆಸರಘಟ್ಟದ ಆಚಾರ್ಯ ಇನ್ಸ್ಟಿಟ್ಯೂಟ್ನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ.