ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿ ಬಾಂಗ್ಲಾದೇಶಿ ಪ್ರಜೆ; ನಟನ ಮನೆಗೆ ಕಳ್ಳತನಕ್ಕೆ ಬಂದಿದ್ದ ಎಂದ ಪೊಲೀಸರು
ಕನ್ನಡ ಸುದ್ದಿ  /  ಮನರಂಜನೆ  /  ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿ ಬಾಂಗ್ಲಾದೇಶಿ ಪ್ರಜೆ; ನಟನ ಮನೆಗೆ ಕಳ್ಳತನಕ್ಕೆ ಬಂದಿದ್ದ ಎಂದ ಪೊಲೀಸರು

ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿ ಬಾಂಗ್ಲಾದೇಶಿ ಪ್ರಜೆ; ನಟನ ಮನೆಗೆ ಕಳ್ಳತನಕ್ಕೆ ಬಂದಿದ್ದ ಎಂದ ಪೊಲೀಸರು

ಸೈಫ್ ಅಲಿ ಖಾನ್‌ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬಂಧಿತ ಆರೋಪಿಯನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಆರೋಪಿ ಬಾಂಗ್ಲಾದೇಶದ ಪ್ರಜೆ. ಭಾರತಕ್ಕೆ ಬಂದು ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಿಸಿಕೊಂಡಿದ್ದ. ನಟನ ಮನೆಗೆ ಕಳ್ಳತನದ ಉದ್ದೇಶದಿಂದ ಪ್ರವೇಶಿಸಿದ್ದ ಎಂದು ಪ್ರಾಥಮಿಕ ತನಿಖೆ ಬಳಿಕ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣ; ಆರೋಪಿ ಬಾಂಗ್ಲಾದೇಶಿ ಪ್ರಜೆ ಎಂದ ಪೊಲೀಸರು
ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣ; ಆರೋಪಿ ಬಾಂಗ್ಲಾದೇಶಿ ಪ್ರಜೆ ಎಂದ ಪೊಲೀಸರು (Agencies)

ನಟ ಸೈಫ್‌ ಅಲಿ ಖಾನ್‌ಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇಂದು ಮುಂಜಾನೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಭಾನುವಾರ (ಜ.19) ಪತ್ರಿಕಾಗೋಷ್ಠಿಯಲ್ಲಿ ಮುಂಬೈ ಪೊಲೀಸರು ಹೆಚ್ಚಿನ ಮಾಹಿತಿ ನೀಡಿದ್ದಾರೆ. ನಟನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿತ ಆರೋಪಿ ಬಾಂಗ್ಲಾದೇಶದ ಪ್ರಜೆಯಾಗಿರಬಹುದು ಎಂದು ಹೇಳಿದ್ದಾರೆ. ಭಾರತಕ್ಕೆ ಬಂದ ನಂತರ ಆತ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಈತನಿಗೆ 30 ವರ್ಷ ವಯಸ್ಸಾಗಿದ್ದು, ದರೋಡೆ ಮಾಡುವ ಉದ್ದೇಶದಿಂದ ನಟ ಸೈಫ್ ಅಲಿ ಖಾನ್ ಮನೆಗೆ ಪ್ರವೇಶಿಸಿದ್ದಾನೆ ಎಂದು ಡಿಸಿಪಿ ದೀಕ್ಷಿತ್ ಗೆದಮ್ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಆರೋಪಿ ಬಾಂಗ್ಲಾದೇಶಿಯಾಗಿದ್ದು, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ನಂತರ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾನೆ ಎಂದು ಗೆದಮ್ ಹೇಳಿದ್ದಾರೆ. “ಆರೋಪಿ ವಿಜಯ್ ದಾಸ್‌ ಎಂಬುದಾಗಿ ಹೆಸರನ್ನು ಬಳಸುತ್ತಿದ್ದ. 5ರಿಂದ 6 ತಿಂಗಳ ಹಿಂದೆ ಮುಂಬೈಗೆ ಬಂದಿದ್ದ ಆರೋಪಿ ಕೆಲವು ದಿನಗಳ ಕಾಲ ಮುಂಬೈನಲ್ಲಿದ್ದ. ನಂತರ ಮುಂಬೈ ಸುತ್ತಮುತ್ತ ನೆಲೆಸಿದ್ದ. ಹೌಸ್ ಕೀಪಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ” ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಹೇಳಿದ್ದು ಹೀಗೆ

“ಜನವರಿ 16ರಂದು ಮುಂಜಾನೆ 2 ಗಂಟೆ ಸುಮಾರಿಗೆ ನಟ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ಅವರ ಮೇಲೆ ಹಲ್ಲೆ ನಡೆದಿತ್ತು. ಎಫ್ಐಆರ್ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆತನ ಹೆಸರು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್. ಆತನಿಗೆ 30 ವರ್ಷ ವಯಸ್ಸು. ದರೋಡೆ ಮಾಡುವ ಉದ್ದೇಶದಿಂದ ಸೈಫ್‌ ಮನೆಗೆ ಪ್ರವೇಶಿಸಿದ್ದ. ಸದ್ಯ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹೆಚ್ಚಿನ ತನಿಖೆ ನಂತರ ನಡೆಯಲಿದೆ. ಆತ ಬಾಂಗ್ಲಾದೇಶ ಮೂಲದವನು ಎಂದು ನಮಗೆ ಅನುಮಾನವಿದೆ,” ಎಂದು ದೀಕ್ಷಿತ್ ಗೆದಮ್ ಹೇಳಿದರು.

“ಆರೋಪಿ ಬಾಂಗ್ಲಾದೇಶ ಪ್ರಜೆ ಎಂದು ಹೇಳಲು ಪ್ರಾಥಮಿಕ ಪುರಾವೆಗಳಿವೆ. ಆತನ ಬಳಿ ಮಾನ್ಯವಾದ ಯಾವುದೇ ಭಾರತೀಯ ದಾಖಲೆಗಳಿಲ್ಲ. ಆತ ಬಾಂಗ್ಲಾದೇಶದ ಪ್ರಜೆ ಎಂದು ಸೂಚಿಸುವ ಕೆಲವು ಸುಳಿವುಗಳನ್ನು ವಶಪಡಿಸಿಕೊಳ್ಳಲಾಗಿದೆ,” ಎಂದು ಹೇಳಿದ್ದಾರೆ.

ಆರೋಪಿಯು ವಿಜಯ್ ದಾಸ್ ಮಾತ್ರವಲ್ಲದೆ ಬಿಜೋಯ್ ದಾಸ್ ಮುಂತಾದ ಅನೇಕ ನಕಲಿ ಹೆಸರುಗಳನ್ನು ಬಳಸಿದ್ದಾರೆ ಎಂದು ಪೊಲೀಸರು ಈ ಹಿಂದೆ ಮಾಹಿತಿ ನೀಡಿದ್ದಾರೆ.

Whats_app_banner