ಪ್ರೇರಣಾ ಪತಿಯಿಂದ ಬಿಡುಗಡೆ ಆಯ್ತು ʻವಿದ್ಯಾಪತಿʼ ಚಿತ್ರದ ಟ್ರೇಲರ್; ಡಾಲಿ ಧನಂಜಯ್ ನಿರ್ಮಾಣದ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್
ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ವಿದ್ಯಾಪತಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ನಟ ಧ್ರುವ ಸರ್ಜಾ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ.

Vidyapati Movie Trailer: ಡಾಲಿ ಧನಂಜಯ್ ನಿರ್ಮಾಣದ ವಿದ್ಯಾಪತಿ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಈಗ ಇದೇ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. ಸಿನಿಮಾ ಶೀರ್ಷಿಕೆ ವಿದ್ಯಾಪತಿ ಆಗಿರುವುದರಿಂದ, ಈ ಚಿತ್ರದ ಟ್ರೇಲರ್ ಾನ್ನು ಪ್ರೇರಣಾ ಪತಿ ಅವರಿಂದ ಬಿಡುಗಡೆ ಮಾಡಿಸಿದೆ ಚಿತ್ರತಂಡ. ಅಂದರೆ, ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಟ್ರೇಲರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಕೋರಿದ ಧ್ರುವ ಸರ್ಜಾ, ಈ ಚಿತ್ರ ಸುರಕ್ಷಿತ ಕೈಗಳಲ್ಲಿದೆ. ಯಾಕಂದರೆ ಯೋಗಿ ಸರ್, ಕಾರ್ತಿಕ್ ಸರ್. ಕೆಆರ್ ಜಿ ಸ್ಟುಡಿಯೋ ರಿಲೀಸ್ ಮಾಡುತ್ತಿದೆ. ಥಿಯೇಟರ್ ಸೆಟ್ ಅಪ್ ಪ್ರಾಮಿಸಿಂಗ್ ಆಗಿ ಇರುತ್ತದೆ. ಈ ಚಿತ್ರ ಏಪ್ರಿಲ್ 10ರಂದು ರಿಲೀಸ್ ಆಗುತ್ತಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ತುಂಬಾ ಚೆನ್ನಾಗಿ ಇರುತ್ತದೆ. ಏಕೆಂದರೆ ಮನರಂಜನೆ ಖಂಡಿತ ಇದ್ದೇ ಇರುತ್ತದೆ. ನಾಯಕ ನಟರಾಗಿ ನಾಗಭೂಷಣ್ ನಟಿಸಿದ್ದಾರೆ. ಇವರ ಎಲ್ಲಾ ಸಿನಿಮಾ ನೋಡಿದ್ದೇನೆ. ಅದರಲ್ಲಿಯೂ ಹನಿಮೂನ್ ಸಿಕ್ಕಾಪಟ್ಟೆ ಚೆನ್ನಾಗಿದೆ. ಯಾವಾಗ ಹನಿಮೂನ್ 2 ಎಂದು ಕೇಳುತ್ತಲೇ ಇರುತ್ತೇನೆ. ಆದರೆ ಏನೂ ಹೇಳಿಲ್ಲ. ಇಕ್ಕಟ್ಟು, ಟಗರು ಪಲ್ಯ ನೋಡಿದ್ದೇನೆ. ಈ ಚಿತ್ರದ ಟ್ರೇಲರ್ ಕೂಡ ಹಾಸ್ಯದಿಂದ ಕೂಡಿದೆ" ಎಂದರು.
ನಿರ್ಮಾಪಕ ಡಾಲಿ ಧನಂಜಯ್ ಮಾತನಾಡಿ, ವಿದ್ಯಾಪತಿ ಫ್ಯಾಮಿಲಿ ನೋಡುವ ಸಿನಿಮಾ. ಕುಟುಂಬ ಸಮೇತರಾಗಿ ಮಕ್ಕಳ ಜೊತೆ ಬಂದು ಎಲ್ಲರೂ ಚಿತ್ರ ನೋಡಿ. ಇನ್ನೊಂದಿಷ್ಟು ಕನಸು, ಸಿನಿಮಾಗೆ ಅದು ಸ್ಫೂರ್ತಿಯಾಗುತ್ತದೆ. ಪ್ರತಿ ಸರಿ ನೀವು ಕೈ ಹಿಡಿಯುವುದು ಮುಖ್ಯ. ನಿಮ್ಮ ಪ್ರೀತಿ ಯಾವಾಗಲೂ ಇರಲಿ. ಧ್ರುವ ಸರ್ಜಾ ಅವರಿಗೆ ಸ್ಪೆಷಲ್ ಥ್ಯಾಂಕ್ಯೂ. ನಾನು ಚಿರು ಅವರೆಲ್ಲಾ ಗುಡ್ ಫ್ರೆಂಡ್ಸ್. ಮೊದಲ ಸಿನಿಮಾದಿಂದಲೇ ಧ್ರುವ ಸೂಪರ್ ಸ್ಟಾರ್. ಪೊಗರು ಚಿತ್ರದಲ್ಲಿ ಜೊತೆಯಲ್ಲಿ ಕೆಲಸ ಮಾಡಿದೆ. ಕೆಆರ್ಜಿ ಸ್ನೇಹಿತರಾಗಿ ಸದಾ ನನ್ನ ಜೊತೆ ನಿಂತಿದ್ದಾರೆ ಎಂದು ತಿಳಿಸಿದರು.
ನಟ ನಾಗಭೂಷಣ್ ಮಾತನಾಡಿ, ನಾನು ಇಂಡಸ್ಟ್ರೀಗೆ ಹೀರೋ ಆಗಬೇಕು ಎಂದು ಬಂದವನು ಅಲ್ಲ. ಒಳ್ಳೊಳ್ಳೆ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿಕೊಂಡು ಹೋಗಬೇಕು ಎಂದುಕೊಂಡಿದ್ದೆ. ಇದು ನನಗೆ ಜೀವನದಲ್ಲಿ ಸಿಕ್ಕ ಬೋನಸ್. ನನ್ನ ನಂಬಿ ನಿರ್ದೇಶಕರು ವಿದ್ಯಾಪತಿ ಚಿತ್ರ ಕೊಟ್ಟರು. ನಿನ್ನ ಮೇಲೆ ಐದಾರು ಕೋಟಿ ಇನ್ವೆಸ್ಟ್ ಮಾಡುತ್ತೇನೆ ಎಂದು ಯಾರು ಹೇಳಿಲ್ಲ. ಅದನ್ನು ನನ್ನ ಗೆಳೆಯ ಧನಂಜಯ್ ಮಾಡಿದ್ದಾನೆ. ಏಪ್ರಿಲ್ 10ಕ್ಕೆ ನಮ್ ಸಿನಿಮಾ ವಿದ್ಯಾಪತಿ ರಿಲೀಸ್ ಆಗುತ್ತಿದೆ ಎಂದರು.
ವಿದ್ಯಾಪತಿ’ ಚಿತ್ರಕ್ಕೆ ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನವನ್ನೂ ಅವರೇ ಮಾಡುತ್ತಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಧನಂಜಯ ನಿರ್ಮಾಣ ಮಾಡಿರುವ ವಿದ್ಯಾಪತಿ ಏಪ್ರಿಲ್ 10ರಂದು ತೆರೆ ಕಾಣಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಮಲೈಕ ವಸುಪಾಲ್ ನಟಿಸಿದ್ದಾರೆ.
