Dhanush and Aishwarya: ಡೈವೋರ್ಸ್ ರದ್ದು ಮಾಡಿ ಮತ್ತೆ ಒಂದಾಗ್ತಿದ್ದಾರಾ ಐಶ್ವರ್ಯ-ಧನುಷ್..ಸಕ್ಸಸ್ ಆಯ್ತಾ ಹಿರಿಯರ ಸಂಧಾನ..?
ಧನುಷ್ ಮತ್ತು ಐಶ್ವರ್ಯಾ ತಮ್ಮ ವಿಚ್ಛೇದನವನ್ನು ಬದಿಗಿಟ್ಟು ಮತ್ತೆ ಒಂದಾಗಲು ನಿರ್ಧರಿಸಿದ್ದಾರಂತೆ. ಈಗಾಗಲೇ ರಜನಿಕಾಂತ್ ಮನೆಯಲ್ಲಿ ಎರಡೂ ಕುಟುಂಬಗಳು ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಐಶ್ವರ್ಯ ಹಾಗೂ ಧನುಷ್ ಇಬ್ಬರೂ ರಾಜಿ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಕಾಲಿವುಡ್ ಸ್ಟಾರ್ ನಟ ರಜನಿಕಾಂತ್ ಪುತ್ರಿ ಐಶ್ವರ್ಯ ಹಾಗೂ ನಟ ಧನುಷ್, ಈ ವರ್ಷದ ಆರಂಭದಲ್ಲಿ ತಾವು ಬೇರೆಯಾಗುತ್ತಿದ್ದೇವೆ ಎಂದು ಪ್ರತ್ಯೇಕ ಹೇಳಿಕೆ ನೀಡಿದ್ದರು. 18 ವರ್ಷಗಳ ಕಾಲ ಜೊತೆಯಾಗಿದ್ದ ಈ ಜೋಡಿ ಡೈವೋರ್ಸ್ ಘೋಷಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ತಮ್ಮ ನಡುವಿನ ಮನಸ್ತಾಪವನ್ನು ಬದಿಗಿರಿಸಿ ಮತ್ತೆ ಒಂದಾಗಬಾರದಾ ಎಂದು ಅಭಿಮಾನಿಗಳು ಆಸೆ ವ್ಯಕ್ತಪಡಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ತಾವು ಬೇರೆಯಾಗುತ್ತಿರುವುದಾಗಿ ಅನೌನ್ಸ್ ಮಾಡಿದಾಗಿನಿಂದ ಧನುಷ್ ಹಾಗ್ ಐಶ್ವರ್ಯ ಇಬ್ಬರೂ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಬಹಳ ದಿನಗಳ ನಂತರ ಅವರು ತಮ್ಮ ಮಗ ಯಾತ್ರಾ ರಾಜು ಅವರ ಶಾಲೆಯ ಸಮಾರಂಭದಲ್ಲಿ ಭೇಟಿಯಾಗಿದ್ದರು. ಈ ಫೋಟೋವನ್ನು ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅವರ ಕಿರಿಯ ಮಗ ಲಿಂಗ ಕೂಡಾ ಇದ್ದಾರೆ. ಆದರೆ ಇತ್ತೀಚಿನ ಸುದ್ದಿಯ ಪ್ರಕಾರ, ಧನುಷ್ ಮತ್ತು ಐಶ್ವರ್ಯಾ ತಮ್ಮ ವಿಚ್ಛೇದನವನ್ನು ಬದಿಗಿಟ್ಟು ಮತ್ತೆ ಒಂದಾಗಲು ನಿರ್ಧರಿಸಿದ್ದಾರಂತೆ. ಈಗಾಗಲೇ ರಜನಿಕಾಂತ್ ಮನೆಯಲ್ಲಿ ಎರಡೂ ಕುಟುಂಬಗಳು ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಐಶ್ವರ್ಯ ಹಾಗೂ ಧನುಷ್ ಇಬ್ಬರೂ ರಾಜಿ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಇದು ನಿಜವಾದರೆ ಖಂಡಿತ ಅಭಿಮಾನಿಗಳಿಗೆ ಇದಕ್ಕಿಂದ ದೊಡ್ಡ ಸಂತೋಷದ ಸುದ್ದಿ ಮತ್ತೊಂದಿಲ್ಲ ಎನ್ನಬಹುದು.
ತಮಿಳಿನ ಖ್ಯಾತ ನಿರ್ದೇಶಕ-ನಿರ್ಮಾಪಕ ಕಸ್ತೂರಿ ರಾಜಾ ಪುತ್ರ ಧನುಷ್ 2004 ರಲ್ಲಿ ರಜನಿಕಾಂತ್ ಪುತ್ರ ಐಶ್ವರ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಇವರು ಮದುವೆಯಾದಾಗ ಧನುಷ್ಗೆ 21 ಹಾಗೂ ಐಶ್ವರ್ಯಾಗೆ 23 ವರ್ಷ ವಯಸ್ಸು. ಈ ದಂಪತಿಗೆ ಯಾತ್ರಾ ಹಾಗೂ ಲಿಂಗ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಇದೇ ವರ್ಷ ಜನವರಿ 17 ರಂದು ಇಬ್ಬರೂ ಡೈವೋರ್ಸ್ ಘೋಷಿಸಿದ್ದರು.
''ಹಿತೈಷಿಗಳಾಗಿ, ಪೋಷಕರಾಗಿ, ಸ್ನೇಹಿತರಾಗಿ, ದಂಪತಿಗಳಾಗಿ 18 ವರ್ಷಗಳ ನಮ್ಮ ಜೀವನ ಪರಸ್ಪರ ಹೊಂದಾಣಿಕೆ, ಬೆಳವಣಿಗೆಯಿಂದ ಕೂಡಿತ್ತು. ಆದರೆ ಈಗ ನಾವು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಗಂಡ-ಹೆಂಡತಿ ಸಂಬಂಧದಿಂದ ಹೊರಬರುವ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ನಿರ್ಧಾರವನ್ನು ದಯವಿಟ್ಟು ಗೌರವಿಸಿ ಹಾಗೂ ಅದನ್ನು ನಿಭಾಯಿಸುವಂತ ಪ್ರೈವೆಸಿಯನ್ನು ನಮಗೆ ನೀಡಿ ಪ್ರೀತಿಯನ್ನು ಹರಡಿ'' ಎಂದು ಧನುಷ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಐಶ್ವರ್ಯ ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದೇ ಪೋಸ್ಟ್ ಹಂಚಿಕೊಂಡಿದ್ದು 'ಇದಕ್ಕೆ ಕ್ಯಾಪ್ಷನ್ ಅಗತ್ಯವಿಲ್ಲ. ನಿಮ್ಮ ಪ್ರೀತಿ ಹಾಗೂ ವಿವೇಚನೆಯಷ್ಟೇ ಅಗತ್ಯ' ಎಂದು ಹೇಳಿದ್ದರು.
ವಿಚ್ಛೇದನ ಘೋಷಿಸಿದ ಕೆಲವು ದಿನಗಳ ನಂತರ ಐಶ್ವರ್ಯ ರಜನಿಕಾಂತ್, ತಾವು ನಿರ್ಮಿಸಿದ್ದ 'ಪಯಣಿ' ಎಂಬ ಆಲ್ಬಂ ವಿಡಿಯೋ ಲಿಂಕನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಧನುಷ್, 'ಅಭಿನಂದನೆಗಳು ಡಿಯರ್ ಫ್ರೆಂಡ್', ನಿಮ್ಮ ಮ್ಯೂಸಿಕ್ ವಿಡಿಯೋಗೆ ಶುಭವಾಗಲಿ ಎಂದು ಹಾರೈಸಿದ್ದರು. ಧನುಷ್, ಐಶ್ವರ್ಯಗೆ ಸ್ನೇಹಿತೆ ಎಂದು ಸಂಬೋಧಿಸಿರುವುದನ್ನು ನೋಡಿ ನೆಟಿಜನ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದರು. ಡೈವೋರ್ಸ್ ಘೋಷಿಸಿದ ನಂತರ ಪತ್ನಿ ಎಷ್ಟು ಬೇಗ ಫ್ರೆಂಡ್ ಆಗಿ ಬದಲಾಗಿದ್ದಾರೆ ನೋಡಿ ಎಂದು ಟೀಕಿಸಿದ್ದರು. ಆದರೆ ಇದೀಗ ಇವರು ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಎಲ್ಲರೂ ಖುಷಿಯಾಗಿದ್ದಾರೆ. ಇದು ನಿಜವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.