Rajinikanth: ಪಕ್ಷ ಕಟ್ಟುವ ನಿರ್ಧಾರದಿಂದ ಹಿಂದೆ ಸರಿದಿದ್ದ ರಜನಿಕಾಂತ್ ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ?
ರಜನಿಕಾಂತ್ ನೇರವಾಗಿ ರಾಜಕೀಯಕ್ಕೆ ಬರಲು ಒಪ್ಪದ ಕಾರಣ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಮೂಲಕ ಬಿಜೆಪಿ ತನ್ನತ್ತ ಸೆಳೆಯುವ ತಂತ್ರ ಹೂಡಿದ್ದು, ರಜನಿಕಾಂತ್ ಕೂಡಾ ಒಪ್ಪಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹಿರಿಯ ನಟ ರಜನಿಕಾಂತ್ ಆಗಸ್ಟ್ 15ರಂದು ಕೆಂಪುಕೋಟೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಚಿತ್ರರಂಗದಲ್ಲಿ ಯಶಸ್ಸು ಕಂಡವರು, ಕಾಣದಿದ್ದ ಅನೇಕ ಕಲಾವಿದರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಮುಖ್ಯಮಂತ್ರಿಗಳಾಗಿದ್ದಾರೆ, ಸಚಿವ, ಶಾಸಕ, ಸಂಸದರಾಗಿದ್ದಾರೆ. ಇನ್ನೂ ಕೆಲವು ನಟರನ್ನು ರಾಜಕೀಯಕ್ಕೆ ಕರೆ ತರುವ ಪ್ರಯತ್ನ ಕೂಡಾ ಮಾಡಲಾಗುತ್ತಿದೆ. ಕೆಲವರು ತಮ್ಮದೇ ಪಕ್ಷ ಕಟ್ಟುವ ಯೋಜನೆಯಲ್ಲಿದ್ದಾರೆ.
ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ರಾಜಕೀಯಕ್ಕೆ ಬಂದು ತಮ್ಮದೇ ಒಂದು ಪಕ್ಷ ಕಟ್ಟುವ ನಿರ್ಧಾರ ಮಾಡಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಅವರು ಹಿಂದೆ ಸರಿದಿದ್ದರು. ಇದೀಗ ರಜನಿಕಾಂತ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲು ಬಿಜೆಪಿ ಪ್ಲಾನ್ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಭಾರತೀಯ ಜನತಾ ಪಕ್ಷ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಇದೀಗ ರಜನಿಕಾಂತ್ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲು ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಎಲ್ಲವೂ ಸರಿ ಇದ್ದಿದ್ದರೆ 2020 ರಲ್ಲಿ ರಜನಿಕಾಂತ್ ತಮ್ಮದೇ ಹೊಸ ಪಕ್ಷವನ್ನು ಕಟ್ಟಬೇಕಿತ್ತು. ಇದಕ್ಕಾಗಿ ಅವರು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಅಭಿಮಾನಿಗಳು ಕೂಡಾ ಕಾತರರಾಗಿದ್ದರು. ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಕೂಡಾ ರಜನಿಕಾಂತ್ ಹೊಸ ಪಕ್ಷ ಕಟ್ಟಿದರೆ ನಾವು ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವೆಂದು ಹೇಳಿದ್ದರು. ಆದರೆ ಅಷ್ಟರಲ್ಲಿ ಅನಾರೋಗ್ಯಕ್ಕೆ ಒಳಗಾದ ರಜನಿ, ರಾಜಕೀಯ ಪಕ್ಷ ಕಟ್ಟುವ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿದ್ದರು. ಇದರಿಂದ ಅಭಿಮಾನಿಗಳಿಗೆ ನಿರಾಶೆಯಾದರೂ ಮೆಚ್ಚಿನ ನಟನ ಆರೋಗ್ಯದ ದೃಷ್ಟಿಯಿಂದ ಯೋಚಿಸಿ ರಜನಿ ನಿರ್ಧಾರವನ್ನು ಗೌರವಿಸಿದ್ದರು.
ರಜನಿಕಾಂತ್ ನೇರವಾಗಿ ರಾಜಕೀಯಕ್ಕೆ ಬರಲು ಒಪ್ಪದ ಕಾರಣ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಮೂಲಕ ಬಿಜೆಪಿ ತನ್ನತ್ತ ಸೆಳೆಯುವ ತಂತ್ರ ಹೂಡಿದ್ದು, ರಜನಿಕಾಂತ್ ಕೂಡಾ ಒಪ್ಪಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹಿರಿಯ ನಟ ರಜನಿಕಾಂತ್ ಆಗಸ್ಟ್ 15ರಂದು ಕೆಂಪುಕೋಟೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ ಸೇರಿದಂತೆ ಅನೇಕರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದೆ.
ತಮಿಳುನಾಡಿನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದ ನಟ ರಜನಿಕಾಂತ್
ತಮಿಳುನಾಡಿನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಕ್ಕಾಗಿ ಅಲ್ಲಿನ ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ರಜನಿಕಾಂತ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಚೆನ್ನೈನಲ್ಲಿ ಆದಾಯ ತೆರಿಗೆ ದಿನವನ್ನು ಆಚರಿಸಲು ಆಯೋಜಿಸಲಾದ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗಿತ್ತು. ತಂದೆ ರಜನಿಕಾಂತ್ ಪರವಾಗಿ ಪುತ್ರಿ ಸೌಂದರ್ಯ ಈ ಪ್ರಶಸ್ತಿ ಸ್ವೀಕರಿಸಿದ್ದರು.
ಜೀವನದಲ್ಲಿ ನೆಮ್ಮದಿ ಇಲ್ಲ ಎಂದಿದ್ದ ತಲೈವರ್
ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'Successful Life Through Kriya Yoga' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿಕಾಂತ್ ''ಮನುಷ್ಯನಿಗೆ ಆಸ್ತಿಇಲ್ಲದಿದ್ದರೂ ಆರೋಗ್ಯ ಬಹಳ ಮುಖ್ಯವಾಗಿ ಇರಬೇಕು. ಅನಾರೋಗ್ಯ ಕಾಡಿದರೆ ಯಾರಿಗೂ ನೆಮ್ಮದಿ ಇರುವುದಿಲ್ಲ. ದೈಹಿಕ ಆರೋಗ್ಯ ಎಲ್ಲರಿಗೂ ಬಹಳ ಮುಖ್ಯ. ನನ್ನ ಜೀವನದಲ್ಲಿ ನಾನು ಹಣ, ಆಸ್ತಿ, ಹೆಸರು, ಗಣ್ಯ ವ್ಯಕ್ತಿಗಳ ಸ್ನೇಹ ಎಲ್ಲವನ್ನೂ ನೋಡಿದ್ದೇನೆ. ಆದರೆ ಸಂತೋಷ ಹಾಗೂ ಶಾಂತಿ ಎನ್ನುವುದು ಶೇಕಡಾ 10 ರಷ್ಟು ನನಗೆ ಸಿಗಲಿಲ್ಲ. ಏಕೆಂದರೆ ಅವು ಶಾಶ್ವತವಲ್ಲ ಎಂದು ನನಗೆ ಅರಿವಾಗಿದೆ'' ಎಂದು ಹೇಳಿಕೊಂಡಿದ್ದರು.