ಡಾ ರಾಜ್‌ಕುಮಾರ್ ಈ ಪಾತ್ರಗಳನ್ನು ಮಾಡಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು; ಇಷ್ಟಪಟ್ಟು ಒಪ್ಪಿದ ಈ ಚಿತ್ರಗಳನ್ನು ಮಾಡಲೇ ಇಲ್ಲ ಅಣ್ಣಾವ್ರು
ಕನ್ನಡ ಸುದ್ದಿ  /  ಮನರಂಜನೆ  /  ಡಾ ರಾಜ್‌ಕುಮಾರ್ ಈ ಪಾತ್ರಗಳನ್ನು ಮಾಡಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು; ಇಷ್ಟಪಟ್ಟು ಒಪ್ಪಿದ ಈ ಚಿತ್ರಗಳನ್ನು ಮಾಡಲೇ ಇಲ್ಲ ಅಣ್ಣಾವ್ರು

ಡಾ ರಾಜ್‌ಕುಮಾರ್ ಈ ಪಾತ್ರಗಳನ್ನು ಮಾಡಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು; ಇಷ್ಟಪಟ್ಟು ಒಪ್ಪಿದ ಈ ಚಿತ್ರಗಳನ್ನು ಮಾಡಲೇ ಇಲ್ಲ ಅಣ್ಣಾವ್ರು

ಡಾ ರಾಜ್‌ಕುಮಾರ್ ಬಹಳ ಆಸೆಪಟ್ಟು ಮಾಡಬೇಕೆಂದಿದ್ದ ಮೂರು ಚಿತ್ರಗಳಿವೆ. ಆದರೆ, ಕಾರಣಾಂತರಗಳಿಂದ ಆ ಚಿತ್ರಗಳು ತಯಾರಾಗಲೇ ಇಲ್ಲ. ಈ ಪೈಕಿ ಒಂದು ಚಿತ್ರದ ಮುಹೂರ್ತವಾದರೆ, ಇನ್ನೊಂದರ ಹಾಡುಗಳ ಧ್ವನಿಮುದ್ರಣವಾಗಿತ್ತು ಮತ್ತು ಮತ್ತೊಂದು ಚಿತ್ರದ ಘೋಷಣೆಯಾಗಿತ್ತು. ಆದರೆ, ಈ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲಿಲ್ಲ.

ಡಾ ರಾಜಕುಮಾರ್ ಈ ಪಾತ್ರಗಳನ್ನು ಮಾಡಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು
ಡಾ ರಾಜಕುಮಾರ್ ಈ ಪಾತ್ರಗಳನ್ನು ಮಾಡಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು

ಕನ್ನಡ ಚಿತ್ರರಂಗದಲ್ಲಿ ಡಾ ರಾಜ್‌ಕುಮಾರ್ ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ಮಾಡಿದವರು ಸಿಗುವುದಿಲ್ಲ. ಸಾಮಾಜಿಕ ಪಾತ್ರಗಳಲ್ಲದೆ, ಹಲವು ಪೌರಾಣಿಕ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಬರೀ ರಾಮ, ಕೃಷ್ಣ, ಈಶ್ವರ ಮುಂತಾದ ದೇವರ ಪಾತ್ರಗಳಷ್ಟೇ ಅಲ್ಲ, ಹಿರಣ್ಯಕಶಿಪು, ಮಹಿಷಾಸುರ ಮುಂತಾದ ರಾಕ್ಷಸರ ಪಾತ್ರಗಳಲ್ಲೂ ನಟಿಸಿದ್ದಾರೆ. ಈ ಚಿತ್ರಗಳು ಮತ್ತು ಪಾತ್ರಗಳ ಜೊತೆಗೆ ಆ ಮೂರು ಪಾತ್ರಗಳನ್ನು ಸಹ ಮಾಡಿಬಿಟ್ಟಿದ್ದರೆ?

ಯಾವ ಪಾತ್ರಗಳು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಡಾ ರಾಜ್‌ಕುಮಾರ್ ಬಹಳ ಆಸೆಪಟ್ಟು ಮಾಡಬೇಕೆಂದಿದ್ದ ಮೂರು ಚಿತ್ರಗಳಿವೆ. ಆದರೆ, ಕಾರಣಾಂತರಗಳಿಂದ ಆ ಚಿತ್ರಗಳು ತಯಾರಾಗಲೇ ಇಲ್ಲ. ಈ ಪೈಕಿ ಒಂದು ಚಿತ್ರದ ಮುಹೂರ್ತವಾದರೆ, ಇನ್ನೊಂದರ ಹಾಡುಗಳ ಧ್ವನಿಮುದ್ರಣವಾಗಿತ್ತು ಮತ್ತು ಮತ್ತೊಂದು ಚಿತ್ರದ ಘೋಷಣೆಯಾಗಿತ್ತು. ಆದರೆ, ಈ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲಿಲ್ಲ.

‘ಗಂಡುಗಲಿ ಕುಮಾರರಾಮ’ ಶುರುವಾಗಲಿಲ್ಲ

ಡಾ ರಾಜ್‌ಕುಮಾರ್ ಅಭಿನಯಿಸಬೇಕಿದ್ದ ಮತ್ತು ಮುಹೂರ್ತವೂ ಆಗಿದ್ದ ಚಿತ್ರ ‘ಗಂಡುಗಲಿ ಕುಮಾರರಾಮ’. ವಿಜಯನಗರ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕುಮಾರರಾಮನ ಕುರಿತು 1970ರ ದಶಕದಲ್ಲೇ ಚಿತ್ರ ನಿರ್ಮಾಣ ಮಾಡಬೇಕೆಂದು ತಯಾರಿ ನಡೆದಿತ್ತು. ಚಿತ್ರದ ಮುಹೂರ್ತ ಸಹ ಆಗಿತ್ತು. ಕೆ.ಸಿ.ಎನ್‍. ಗೌಡ ನಿರ್ಮಾಣದ ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿಗಳು ನಿರ್ದೇಶಿಸಬೇಕಿತ್ತಂತೆ. ಡಾ. ರಾಜಕುಮಾರ್, ಭಾರತಿ ಮುಂತಾದವರು ಚಿತ್ರದಲ್ಲಿ ನಟಿಸಬೇಕಿತ್ತಂತೆ. ಚಿತ್ರದ ಮುಹೂರ್ತ ಆದರೂ, ಕಾರಣಾಂತರಗಳಿಂದ ಚಿತ್ರ ಮುಂದುವರೆಯಲಿಲ್ಲ.

‘ಗಂಡುಗಲಿ ಕುಮಾರರಾಮ’ನಾಗಿ ಡಾ. ಡಾ ರಾಜ್‌ಕುಮಾರ್ ನಟಿಸದಿದ್ದಿರೂ, ಅವರ ಆಸೆಯನ್ನು ಅವರ ಮಗ ಶಿವರಾಜಕುಮಾರ್ ಈಡೇರಿಸಿದರು. ಈ ಚಿತ್ರದ ಮುಹೂರ್ತಕ್ಕೆ ಖುದ್ದು ರಾಜಕುಮಾರ್ ಮತ್ತು ಪಾರ್ವತಮ್ಮ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು. ಆದರೆ, ಚಿತ್ರವನ್ನು ರಾಜಕುಮಾರ್ ಅವರು ನೋಡುವುದಕ್ಕೆ ಸಾಧ್ಯವಾಗಲಿಲ್ಲ. ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಅವರು ನಿಧನರಾದರು. ಅತ್ತ ಹಂಪಿಯಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದರೆ, ಇತ್ತ ರಾಜಕುಮಾರ್ ಇನ್ನಿಲ್ಲವಾದರು. ಎಂ.ಎಸ್.ಆರ್ ಚಿತ್ರಾಲಯದಡಿ ಪಟ್ಟಾಭಿರಾಮ್‍ ನಿರ್ಮಿಸಿದ ಈ ಚಿತ್ರವನ್ನು ಭಾರ್ಗವ ನಿರ್ದೇಶಿಸಿದ್ದರು. ಇದು ಅವರ ನಿರ್ದೇಶನದ 50ನೇ ಚಿತ್ರವಾಗಿತ್ತು.

ಈಡೇರದ ಅಮೋಘವರ್ಷ ನೃಪತುಂಗ

ಡಾ. ಡಾ ರಾಜ್‌ಕುಮಾರ್ ಅವರ 200ನೇ ಚಿತ್ರ ‘ದೇವತಾ ಮನುಷ್ಯ’ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಮೊದಲು ಅವರ 200ನೇ ಚಿತ್ರವಾಗಿ ‘ಅಮೋಘವರ್ಷ ನೃಪತುಂಗ’ ಬಿಡುಗಡೆ ಆಗಬೇಕಿತ್ತು. ಸಿಂಗೀತಂ ಶ್ರೀನಿವಾಸ ರಾವ್‍ ಅವರು ಈ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಎಂ. ರಂಗರಾವ್‍ ಸಂಗೀತ ನಿರ್ದೇಶನದಲ್ಲಿ ಹಾಡುಗಳ ಧ್ವನಿಮುದ್ರಣ ಕೆಲಸಗಳು ಸಹ ಆಗಿತ್ತು ಎಂದು ಹೇಳಲಾಗುತ್ತದೆ. ಆದರೆ, ಇದರ ಬದಲಾಗಿ ‘ದೇವತಾ ಮನುಷ್ಯ’, ಡಾ. ಡಾ ರಾಜ್‌ಕುಮಾರ್ ಅವರ 200ನೇ ಚಿತ್ರವಾಯಿತು.

ಭಕ್ತ ಅಂಬರೀಶ ಸೆಟ್ಟೇರಲಿಲ್ಲ..

ಡಾ ರಾಜ್‌ಕುಮಾರ್ ಅವರಿಗೆ ರಂಗಭೂಮಿಯಲ್ಲಿ ದೊಡ್ಡ ಹೆಸರು ತಂದುಕೊಟ್ಟ ಪಾತ್ರವೆಂದರೆ ಅದು ಅಂಬರೀಶನ ಪಾತ್ರ. ಚಿತ್ರರಂಗಕ್ಕೆ ಬರುವ ಮೊದಲು ಅವರು ‘ಭಕ್ತ ಅಂಬರೀಶ’ ನಾಟಕದಲ್ಲಿ ಅಭಿನಯಿಸುತ್ತಿದ್ದರಂತೆ. ಸಿನಿಮಾಗೆ ಬಂದ ಮೇಲೆ ‘ಭಕ್ತ ಅಂಬರೀಶ’ ಚಿತ್ರ ಮಾಡಬೇಕು ಎಂದು ಅವರ ಆಸೆಯಾಗಿತ್ತು. ಡಾ. ರಾಜಕುಮಾರ್ ಅವರನ್ನು ‘ಭಕ್ತ ಪ್ರಹ್ಲಾದ’, ‘ಮಯೂರ’ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ಮಾಡಿದ್ದ ವಿಜಯ್‍, ಈ ಚಿತ್ರಕ್ಕೆ ನಿರ್ದೇಶಕರಾಗಿ ಗೊತ್ತಾಗಿದ್ದರು. ಚಿತ್ರದ ಹಾಡುಗಳ ಧ್ವನಿಮುದ್ರಣ ಸಹ ನಡೆದಿತ್ತು. ಆದರೆ, ಮಂಡಿನೋವು ಹೆಚ್ಚಾದ ಕಾರಣ ‘ಭಕ್ತ ಅಂಬರೀಶ’ ಚಿತ್ರ ಮುಂದುವರೆಯಲೇ ಇಲ್ಲ. ಚಿತ್ರದಲ್ಲಿ ನಟಿಸದಿದ್ದರೂ, ‘ಭಕ್ತ ಅಂಬರೀಶ’ ನಾಟಕದಲ್ಲಿ ರಾಜ್‌ಕುಮಾರ್‌ ಅವರು ಲೋಕೇಶ್‍ ಜೊತೆಗೆ ನಟಿಸಿದ್ದರು.

ಹೀಗೆ ರಾಜ್‌ಕುಮಾರ್‌ ಅವರು ಇಷ್ಟಪಟ್ಟು ಒಪ್ಪಿಕೊಂಡಿದ್ದ ಚಿತ್ರಗಳು ಕಾರಣಾಂತರಗಳಿಂದ ಶುರುವಾಗಲೇ ಇಲ್ಲ. ಈ ಬಗ್ಗೆ ಅವರ ಅಭಿಮಾನಿಗಳಿಗೆ ಈಗಲೂ ಬೇಸರವಿದ್ದೇ ಇದೆ.

ಲೇಖನ: ಚೇತನ್‌ ನಾಡಿಗೇರ್

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.