Bindiya: ಚಿತ್ರರಂಗದಿಂದ ದೂರವಿದ್ರೂ ಕನ್ನಡ ಸಿನಿಮಾ ಮರೆತಿಲ್ಲ; ವಿಷ್ಣುವರ್ಧನ್ ಜೊತೆಗಿನ ಸಿನಿಮಾ ನೆನೆದ ಹಳ್ಳಿಮೇಷ್ಟ್ರು ಖ್ಯಾತಿಯ ಬಿಂದಿಯಾ
ಬಿಂದಿಯಾ ನಿಜ ಹೆಸರು ಫರ್ಹೀನ್ ಖಾನ್. ತಮಿಳು ಮುಸ್ಲಿಂ ಸಮುದಾಯದಲ್ಲಿ ಜನಿಸಿದ ಈ ಚೆಲುವೆ, ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಬಿಂದಿಯಾ ಎಂದೇ ಚಿರಪರಿಚಿತ. ಹಿಂದಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಬಿಂದಿಯಾ ನಂತರ 'ಹಳ್ಳಿಮೇಷ್ಟ್ರು' ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ನಂತರ ಡಾ. ವಿಷ್ಣುವರ್ಧನ್ ಜೊತೆ 'ರಾಯರು ಬಂದರು ಮಾವನ ಮನೆಗೆ' ಸಿನಿಮಾದಲ್ಲಿ ನಟಿಸಿದರು.
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೇ ಅಂದ... 'ರಾಯರು ಬಂದರು ಮಾವನ ಮನೆಗೆ' ಸಿನಿಮಾದ ಈ ಸುಂದರ ಹಾಡು ಈಗಲೂ ಅನೇಕ ಜನರಿಗೆ ಬಹಳ ಇಷ್ಟ. ದ್ವಾರಕೀಶ್ ನಿರ್ದೇಶನದ ಈ ಚಿತ್ರದಲ್ಲಿ ಡಾ. ವಿಷ್ಣುವರ್ಧನ್, ಬಿಂದಿಯಾ, ಡಾಲಿ ಹಾಗೂ ಇನ್ನಿತರರು ನಟಿಸಿದ್ದರು. ಸದ್ಯಕ್ಕೆ ನಟನೆಯಿಂದ ದೂರ ಇರುವ ಬಿಂದಿಯಾ ಈ ಸಿನಿಮಾ ಹಾಗೂ ಡಾ. ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡಿದ್ದಾರೆ.
ರಾಯರು ಬಂದರು ಮಾವನ ಮನೆಗೆ ಸಿನಿಮಾ 1993ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾವನ್ನು ಶ್ರೀ ಅನುಪಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪಿ ಬಲರಾಮ್ ನಿರ್ಮಿಸಿದ್ದರು. ಪ್ರಿಯದರ್ಶನ್ ಬರೆದಿರುವ ಕಥೆಗೆ ದ್ವಾರಕೀಶ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ಹಾಡುಗಳಿಗೆ ರಾಜ್ ಕೋಟಿ ಸಂಗೀತ ನೀಡಿದ್ದರು. ನಾಯಕಿ ಸುಮಾ (ಡಾಲಿ) ಪ್ರೀತಿಯನ್ನು ತಂದೆ ಒಪ್ಪುವುದಿಲ್ಲ. ಆದರೆ ಸುಮಾ, ತಾನು ಪ್ರೀತಿಸಿದ ಹುಡುಗನನ್ನೇ ಮದುವೆ ಆಗುವ ತನ್ನ ನಿರ್ಧಾರವನ್ನು ತಂದೆಗೆ ಹೇಳುತ್ತಾಳೆ. ಆದರೆ ತಾನು ಪ್ರೀತಿಸುತ್ತಿದ್ದ ಹುಡುಗ ತನ್ನ ಆಸ್ತಿಯನ್ನು ಪ್ರೀತಿಸುತ್ತಾನೆ ಹೊರತು ನನ್ನನ್ನಲ್ಲ ಎಂದು ತಿಳಿದ ನಾಯಕಿ ಸುಮಾ, ಆತನೊಂದಿಗೆ ಮದುವೆ ಕ್ಯಾನ್ಸಲ್ ಮಾಡುತ್ತಾಳೆ. ಮತ್ತೊಂದೆಡೆ ನಾಯಕಿಯ ತಂದೆ ಮಗಳ ಪ್ರೀತಿಯನ್ನು ಒಪ್ಪಿ ಪತಿಯೊಂದಿಗೆ ಮನೆಗೆ ಬರುವಂತೆ ಹೇಳುತ್ತಾರೆ. ಆದರೆ ತಾನು ಮೋಸ ಹೋಗಿದ್ದನ್ನು ತಂದೆಗೆ ತಿಳಿಯದಂತೆ ಮುಚ್ಚಿಡಲು ನಾಯಕಿ, ವಿಷ್ಣು( ವಿಷ್ಣುವರ್ಧನ್) ಎಂಬ ವ್ಯಕ್ತಿಯನ್ನು ತನ್ನ ಗಂಡನಂತೆ ನಾಟಕ ಆಡಲು ಮನವಿ ಮಾಡುತ್ತಾಳೆ, ಹಣಕ್ಕಾಗಿ ಆತ ಕೂಡಾ ಒಪ್ಪುತ್ತಾನೆ.
ಅದರೆ ವಿಷ್ಣುಗೆ ಒಂದು ಹಿನ್ನೆಲೆ ಇರುತ್ತದೆ. ಆತ ಮಾತು ಬಾರದ ಯುವತಿ ಶಿವರಂಜನಿ (ಬಿಂದಿಯಾ) ಯನ್ನು ಪ್ರೀತಿಸಿ ಮದುವೆ ಆಗುತ್ತಾನೆ. ತಾನು ಮನೆಯಲ್ಲಿ ಇಲ್ಲದಾಗ ವ್ಯಕ್ತಿಯೊಬ್ಬ ತನ್ನ ಮನೆಗೆ ಬಂದು ಹೋಗುತ್ತಾನೆ ಎಂದು ತಿಳಿದ ವಿಷ್ಣು ಕೋಪಗೊಂಡು ಆತನೊಂದಿಗೆ ಫೈಟ್ ಮಾಡುವಾಗ ಆಕಸ್ಮಿಕವಾಗಿ ಶಿವರಂಜನಿ ಸಾಯುತ್ತಾಳೆ. ಅಸಲಿಗೆ ಆ ವ್ಯಕ್ತಿ ಬಿಂದಿಯಾ ಸಹೋದರನಾಗಿರುತ್ತಾನೆ. ಪತ್ನಿಯನ್ನು ಸಾಯಿಸಿದ ಆರೋಪ ಎದುರಿಸುವ ವಿಷ್ಣು ಪೊಲೀಸರಿಂದ ಏಕೆ ತಪ್ಪಿಸಿಕೊಳ್ಳುತ್ತಾನೆ. ಆತನಿಗೆ ಶಿಕ್ಷೆ ಆಗಲಿದೆಯಾ? ಮಗಳು ಸುಮಾ ವಿಚಾರ ತಂದೆಗೆ ತಿಳಿಯಲಿದೆಯಾ ಎನ್ನುವುದು ಈ ಸಿನಿಮಾ ಕಥೆ.
ಡಾ. ವಿಷ್ಣುವರ್ಧನ್ ಅವರ ಹಿಟ್ ಸಿನಿಮಾಗಳ ಲಿಸ್ಟ್ನಲ್ಲಿ 'ರಾಯರು ಬಂದರು ಮಾವನ ಮನೆಗೆ' ಚಿತ್ರ ಕೂಡಾ ಒಂದು. ವಿಷ್ಣು ಜೊತೆ ನಟಿಸಿದ್ದ ಬಿಂದಿಯಾ ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ನಟಿಸಿದ್ದು ಎರಡೇ ಕನ್ನಡ ಸಿನಿಮಾಗಳಾದರೂ ಆಕೆ ಕನ್ನಡ ಸಿನಿಮಾಗಳನ್ನು ಮರೆತಿಲ್ಲ. ಮುದ್ದಿನ ಹುಡುಗಿ ಚೆಂದ ಹಾಡಿನ ತುಣುಕನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಬಿಂದಿಯಾ, ''ಇದು ನನ್ನ ಸಿನಿಮಾ, ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ಲೆಜೆಂಡ್ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದೆ'' ಎಂದು ಬರೆದುಕೊಂಡಿದ್ದಾರೆ.
ಬಿಂದಿಯಾ ಪೋಸ್ಟ್ಗೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಹಾಡಿಗೆ ತಕ್ಕಂತೆ ನಿಜವಾಗಲೂ ಮುದ್ದಾಗಿದ್ದೀರ ಎಂದು ಕೆಲವರು ಕಾಮೆಂಟ್ ಮಾಡಿದರೆ, ನೀವು ಚಿತ್ರರಂಗದಿಂದ ದೂರ ಉಳಿದಿದ್ದರೂ ಕನ್ನಡ ಸಿನಿಮಾಗಳನ್ನು ಇಂದಿಗೂ ಮರೆತಿಲ್ಲ, ನೀವು ಗ್ರೇಟ್ ಎಂದು ಹೊಗಳುತ್ತಿದ್ದಾರೆ. ನೀವು ಫರ್ಹೀನ್ ಖಾನ್ ಆದರೂ ಎಂದೆಂದಿಗೂ ಕನ್ನಡಿಗರಿಗೆ ನೀವು ಬಿಂದಿಯಾನೇ ಎಂದು ಇನ್ನೂ ಕೆಲವರು ಹೇಳುವ ಮೂಲಕ ಬಿಂದಿಯಾ ಹಾಗೂ ಅವರ ಪೋಸ್ಟ್ಗೆ ಲೈಕ್ ಮಾಡಿದ್ದಾರೆ.
ಬಿಂದಿಯಾ ನಿಜ ಹೆಸರು ಫರ್ಹೀನ್ ಖಾನ್. ತಮಿಳು ಮುಸ್ಲಿಂ ಸಮುದಾಯದಲ್ಲಿ ಜನಿಸಿದ ಈ ಚೆಲುವೆ, ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಬಿಂದಿಯಾ ಎಂದೇ ಚಿರಪರಿಚಿತ. ಹಿಂದಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಬಿಂದಿಯಾ ನಂತರ 'ಹಳ್ಳಿಮೇಷ್ಟ್ರು' ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ನಂತರ ಡಾ. ವಿಷ್ಣುವರ್ಧನ್ ಜೊತೆ 'ರಾಯರು ಬಂದರು ಮಾವನ ಮನೆಗೆ' ಸಿನಿಮಾದಲ್ಲಿ ನಟಿಸಿದರು. ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿರುವಾಗಲೇ ಫರ್ಹೀನ್ ಖಾನ್, ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ಪ್ರೀತಿಸಿ ಮದುವೆ ಆದರು. ಈ ಬ್ಯೂಟಿ ಈಗ ಫರ್ಹೀನ್ ಪ್ರಭಾಕರ್ ಎಂದೇ ಫೇಮಸ್. ನಟಿಸಿದ್ದು ಎರಡು ಕನ್ನಡ ಸಿನಿಮಾಗಳಾದರೂ ಬಿಂದಿಯಾ ಇನ್ನೂ ಕನ್ನಡ ಚಿತ್ರರಂಗನ್ನು ಮರೆಯದೆ ಇರುವುದು ನಿಜಕ್ಕೂ ಸಂತೋಷದ ವಿಚಾರ.