ಲಾಯರ್ ಜಗದೀಶ್ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ; ಮೂಗಲ್ಲಿ ರಕ್ತ ಒಸರುತ್ತಿದ್ದರೂ ಲೈವ್ಗೆ ಬಂದ ಬಿಗ್ ಬಾಸ್ ಮಾಜಿ ಸ್ಪರ್ಧಿ
Lawyer Jagadish: ಬಿಗ್ ಬಾಸ್ ಕನ್ನಡ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಸಂಬಂಧ ಫೇಸ್ಬುಕ್ ಲೈವ್ಗೆ ಬಂದ ಅವರು, ಘಟನೆ ಬಗ್ಗೆ ವಿವರಿಸಿದ್ದಾರೆ. ಜತೆಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಮತ್ತೆ ಮತ್ತೆ ಸುದ್ದಿಯಲ್ಲಿದ್ದಾರೆ. ಗುರುವಾರವಷ್ಟೇ ಬೆಂಗಳೂರಿನ ಕೊಡಿಗೇಹಳ್ಳಿ ಬಳಿ ಕೆಲವರಿಂದ ಜಗದೀಶ್ ಅವರ ಮೇಲೆ ಹಲ್ಲೆಯಾಗಿತ್ತು. ಇದೀಗ ಮತ್ತೆ ಅದೇ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಜಗದೀಶ್ ಅವರ ಮೂಗಿನಿಂದ ರಕ್ತ ಬರುವಂತೆ ಪುಂಡರು ದಾಳಿ ಮಾಡಿದ್ದಾರೆ. ರಕ್ತ ತೊಟ್ಟಿಕ್ಕುತ್ತಿದ್ದರೂ, ಆ ನೋವಿನಲ್ಲಿಯೇ ನೇರವಾಗಿ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಪೊಲೀಸರ ಜೀಪ್ನಲ್ಲಿಯೇ ಫೇಸ್ಬುಕ್ ಲೈವ್ ಮೂಲಕವೇ ಆಗಮಿಸಿದ್ದಾರೆ. ಬಳಿಕ ದಾಳಿ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ.
ಲೈವ್ನಲ್ಲಿ ಹೇಳಿದ್ದೇನು?
ಪೊಲೀಸ್ ಜೀಪ್ನಲ್ಲಿಯೇ ಕೂತು ಲೈವ್ ಬಂದ ಲಾಯರ್ ಜಗದೀಶ್, ತಮ್ಮ ಮೇಲಾದ ಹಲ್ಲೆಯನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. "ಇವತ್ತು ಅದೇ ಜಾಗದಲ್ಲಿ (ಕೊಡಿಗೇಹಳ್ಳಿ), ಅದೇ ಡ್ರಗ್ ಅಡಿಕ್ಟ್ಗಳಿಂದ ಮಾರಣಾಂತಿಕ ಹಲ್ಲೆ ಆಗಿದೆ. ಸುಮಾರು 200ಕ್ಕೂ ಅಧಿಕ ಪುಂಡರು ಬಂದು ಹಲ್ಲೆ ಮಾಡಿದ್ದಾರೆ. 500ಕ್ಕೂ ಅಧಿಕ ಮಂದಿ ಆರ್ಮ್ಸ್ಗಳನ್ನು ತಂದಿದ್ದರು. ಎಲ್ಲಿದೆ ಲಾ ಅಂಡ್ ಆರ್ಡರ್? ಇದೊಂದು ವ್ಯವಸ್ಥಿತಿ ದಾಳಿ. ಇದು ಟೆರರಿಸ್ಟ್ ರಾಜ್ಯವಾಗಿದೆ. ಗನ್ ಮ್ಯಾನ್ಗೆ ದೊಣ್ಣೆ, ಮಚ್ಚಿನಿಂದ ಹೊಡೆದರು. ನಾವು ಸತ್ತರೂ ಪರವಾಗಿಲ್ಲ. ಇದನ್ನು ವಿರೋಧಿಸುತ್ತೇವೆ" ಎಂದಿದ್ದಾರೆ.
"ಇಡೀ ಕರ್ನಾಟಕ ಇದನ್ನು ನೋಡಲಿ. ನಾವು ಪ್ರಾಣ ಭಿಕ್ಷೆ ಬೇಡುವವರಲ್ಲ. ಇಂಥ ನಾಚಿಕೆಗೇಡಿನ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ನಮ್ಮ ಮಕ್ಕಳು ಬದುಕಬೇಕಲ್ಲವಾ ಅನ್ನೋದೆ ಅಪಹಾಸ್ಯ. ದರಿದ್ರ ವ್ಯವಸ್ಥೆ. ಸಮಾಜದಲ್ಲಿ ಧ್ವನಿ ಮಾಡುವ ವ್ಯಕ್ತಿಯ ಹತ್ಯೆಗೆ ಪ್ಲಾನ್ ಮಾಡಿದ್ದಾರೆ. ಪುಡಿ ರೌಡಿಗಳು ಅಟ್ಯಾಕ್ ಮಾಡಿದ್ದಾರೆ. ನನ್ನ ಮಗನ ಮೇಲೂ ಹಲ್ಲೆ ಮಾಡಿದ್ದಾರೆ. ನ್ಯಾಯವೇ ಅನ್ಯಾಯವಾಗಿದೆ" ಎಂದಿದ್ದಾರೆ.
"ಕರ್ನಾಟಕದ ಪೊಲೀಸರು ನೋಡಲೇಬೇಕಾದ ವಿಚಾರ. ಎಲ್ಲಿ ಹೋದರೂ ನಮಗೆ ಸಮಸ್ಯೆ ಇಲ್ಲ. ಇಂಥವರಿಗೆ ನಾವು ಪ್ರಾಣ ಕೊಡಬೇಕಾ? ಕಾನೂನು ವ್ಯವಸ್ಥೆ ಎಲ್ಲಿದೆ. ನನ್ನ ಮಗನ ಮೇಲೂ ಅಟ್ಯಾಕ್ ಆಗಿದೆ. ಇಂಥ ವ್ಯವಸ್ಥೆಯನ್ನು ಮಟ್ಟ ಹಾಕಬೇಕಿದೆ. ಪ್ರಾಣ ಹೋದರೂ ನನ್ನ ಸ್ಟ್ಯಾಂಡ್ ಬದಲಾಗಲ್ಲ. ನಾನೊಬ್ಬ ನಾಗರಿಕನಾಗಿ ನಾನು ನನ್ನ ಸ್ಟ್ಯಾಂಡ್ಗೆ ಬದ್ಧನಾಗಿರುವೆ" ಎಂದು ವಿಡಿಯೋ ಮುಗಿಸಿದ್ದಾರೆ. ಗುರುವಾರವಷ್ಟೇ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದ ಕೆಲ ಪುಂಡರಿಂದ ಲಾಯರ್ ಜಗದೀಶ್ ಮೇಲೆ ಹಲ್ಲೆ ನಡೆದಿತ್ತು. ಈಗ ಮತ್ತೊಂದು ಹಲ್ಲೆ ನಡೆದಿದ್ದು, ದೂರು ನೀಡಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ಜಗದೀಶ್
