Kaushik LM: ರಿಷಬ್ ಶೆಟ್ಟಿ, ಧನ್ವಿರ್ಗೆ ಶುಭ ಕೋರಿದ್ದ ಸಿನಿಮಾ ವಿಮರ್ಶಕ ಸಾವು; ಕಂಬನಿ ಮಿಡಿದ ರಶ್ಮಿಕಾ ಮಂದಣ್ಣ
ಕಾಲಿವುಡ್ ಸಿನಿಮಾ ಸೇರಿ ಸೌತ್ ಸಿನಿಮಾಗಳ ವಿಮರ್ಶಕ ಮತ್ತು ಎಂಟರ್ಟೈನ್ಮೆಂಟ್ ಟ್ರ್ಯಾಕರ್ ಕೌಶಿಕ್ ಎಲ್ಎಮ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಚೆನ್ನೈ: ಕಾಲಿವುಡ್ ಸಿನಿಮಾ ಸೇರಿ ಸೌತ್ ಸಿನಿಮಾಗಳ ವಿಮರ್ಶಕ ಮತ್ತು ಎಂಟರ್ಟೈನ್ಮೆಂಟ್ ಟ್ರ್ಯಾಕರ್ ಕೌಶಿಕ್ ಎಲ್ಎಮ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಗಸ್ಟ್ 15ರ ಸಂಜೆ ವೇಳೆಗೆ ಹೃದಯ ಸ್ತಂಭನದಿಂದ ಅಸುನೀಗಿದ್ದಾರೆ. ಸೆಲೆಬ್ರಿಟಿಗಳ ಸಂದರ್ಶನ, ಸಿನಿಮಾ ವಿಮರ್ಶೆ, ಬಾಕ್ಸ್ ಆಫೀಸ್ ರಿಪೋರ್ಟ್ ಸೇರಿ ಚಿತ್ರೋದ್ಯಮದ ಟ್ರೆಂಡಿಂಗ್ ವಿಚಾರಗಳನ್ನು ಕೌಶಿಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.
ಕೇವಲ 36 ವರ್ಷದ ಕೌಶಿಕ್ಗೆ ಈ ರೀತಿ ಹೃದಯ ಸ್ತಂಭನವಾಗಿರುವುದು ಇಡೀ ತಮಿಳು ಚಿತ್ರರಂಗಕ್ಕೆ ಆಘಾತವನ್ನುಟ್ಟು ಮಾಡಿದೆ. ಕೌಶಿಕ್ ನಿಧನ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರಾದ ದುಲ್ಕರ್ ಸಲ್ಮಾನ್, ಧನುಷ್, ಕೀರ್ತಿ ಸುರೇಶ್, ವೆಂಕಟ್ ಪ್ರಭು, ಹರೀಶ್ ಕಲ್ಯಾಣ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸಂತಾಪ
ಕೌಶಿಕ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸಹ ಕಂಬನಿ ಮಿಡಿದಿದ್ದಾರೆ. ಇದನ್ನು ಕೇಳಲು ನನಗೆ ತುಂಬಾ ಬೇಸರ ಎನಿಸುತ್ತಿದೆ... ನಿಜಕ್ಕೂ ಹೃದಯ ವಿದ್ರಾವಕವಾಗಿದೆ.. ಅವರು ಎಲ್ಲರಿಗೂ ಅಷ್ಟು ಇಷ್ಟದ ವ್ಯಕ್ತಿಯಾಗಿದ್ದರು" ಎಂದು ಟ್ವಿಟ್ ಮಾಡಿದ್ದಾರೆ.
ಕಾಂತಾರ, ವಾಮನ ಬಗ್ಗೆಯೂ ಮಾಹಿತಿ ಶೇರ್
ಸಿನಿಮಾಕ್ಕೆ ಸಂಬಂಧಿಸಿದ ಎಲ್ಲ ಅಪ್ಡೇಟ್ಗಳನ್ನು ಕೌಶಿಕ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ತಲುಪಿಸುತ್ತಿದ್ದರು. ಸೋಮವಾರವೂ ಸಿನಿಮಾಕ್ಕೆ ಸಂಬಂಧಿಸಿದ ಸಾಕಷ್ಟು ಅಪ್ಡೇಟ್ಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದ ಅವರು, ಕನ್ನಡದ ಸಿನಿಮಾಗಳನ್ನೂ ತಲುಪಿಸುವ ಕೆಲಸ ಮಾಡುತ್ತಿದ್ದರು. ಹೊಂಬಾಳೆ ಫಿಲಂಸ್ ನಿರ್ಮಾಣದ "ಕಾಂತಾರ" ಸಿನಿಮಾದ ಹಾಡೊಂದು ಸ್ವಾತಂತ್ರ್ಯ ದಿನದ ಪ್ರಯುಕ್ತ ಬಿಡುಗಡೆ ಆಗಿತ್ತು. ಆ ಹಾಡಿನ ಬಿಡುಗಡೆ ವಿಚಾರವನ್ನು ಮತ್ತು ಹಾಡು ಮೂಡಿಬಂದ ರೀತಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಟ್ವಿಟರ್ನಲ್ಲಿಯೂ ಪೋಸ್ಟ್ ಹಾಕಿದ್ದರು. ಅದೇ ರೀತಿ ಧನ್ವಿರ್ ನಾಯಕನಾಗಿ ನಟಿಸಿರುವ "ವಾಮನ" ಸಿನಿಮಾದ ಟೀಸರ್ ಸಹ ಸೋಮವಾರ ಬಿಡುಗಡೆ ಆಗಿದೆ. ಈ ಟೀಸರ್ ಲಿಂಕ್ ಶೇರ್ ಮಾಡಿಕೊಂಡ ಕೌಶಿಕ್, ತಂಡಕ್ಕೆ ಶುಭಾಶಯ ಕೋರಿದ್ದರು.