Chetan Ahimsa: ‘ಮೊದಲು ನೀವಿಬ್ಬರೂ ಜೂಜಿನ ಜಾಹೀರಾತಿಂದ ಪಡೆದ ಸಂಭಾವನೆ ಹಿಂದಿರುಗಿಸಿ!’; ಪ್ರಕಾಶ್ ರಾಜ್- ಕಿಚ್ಚನಿಗೆ ಚೇತನ್ ಪ್ರಶ್ನೆ
ಕಳೆದ ಎರಡು ದಿನಗಳಿಂದ ರಾಜಕೀಯಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಒಂದೆಡೆ ಸುದ್ದಿಯಾಗುತ್ತಿದ್ದರೆ, ಅದೇ ವಿಚಾರವನ್ನು ನಟ ಪ್ರಕಾಶ್ ರೈ ಟೀಕಿಸಿದ್ದಾರೆ. ಈಗ ಇವರಿಬ್ಬರ ಬಗ್ಗೆ ಚೇತನ್ ಮಾತನಾಡಿದ್ದಾರೆ.
Chetan Ahimsa: ಸಿನಿಮಾ ಸೇರಿ ಸಾಮಾಜಿಕ ಸೇವೆಯಲ್ಲಿಯೂ ಗುರುತಿಸಿಕೊಂಡಿರುವ ನಟ ಚೇತನ್ ಅಹಿಂಸಾ, ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಟಿಪ್ಪಣಿ ಮಾಡುತ್ತ ಅವರಿವರ ಕಾಲೆಳೆಯುತ್ತ ಟಾಂಗ್ ಕೊಡುತ್ತಿರುತ್ತಾರೆ. ಸರಿ ತಪ್ಪುಗಳ ಪರಾಮರ್ಶೆಯನ್ನೂ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅಂಬಿ ಸ್ಮಾರಕ ವಿಚಾರವಾಗಿ ಸಂಸದೆ ಸುಮಲತಾ ಅವರಿಗೂ ಪ್ರಶ್ನೆ ಮಾಡಿದ್ದ ಚೇತನ್, ಇದೀಗ ರಾಜಕೀಯದ ಬಗ್ಗೆಯೂ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ರಾಜಕೀಯಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಒಂದೆಡೆ ಸುದ್ದಿಯಾಗುತ್ತಿದ್ದರೆ, ಅದೇ ವಿಚಾರವನ್ನು ನಟ ಪ್ರಕಾಶ್ ರೈ ಟೀಕಿಸುತ್ತಲೇ ಬಂದಿದ್ದಾರೆ. ನಿಜಕ್ಕೂ ಇದು ಆಘಾತಕಾರಿ ಎಂದಿದ್ದರು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಚೇತನ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಬ್ಬರ ನಿಲುವುಗಳು/ಸಿದ್ಧಾಂತಗಳನ್ನು ಒಪ್ಪುವುದಿಲ್ಲ ಎಂದೂ ಚೇತನ್ ತಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿದ್ದಾರೆ.
ಕಿಚ್ಚ, ಪ್ರಕಾಶ್ ರೈ ಬಗ್ಗೆ ಚೇತನ್ ಹೇಳಿದ್ದೇನು?
"ಬಿಜೆಪಿಗೆ ಸುದೀಪ್ರವರು ನೀಡಿದ ಬೆಂಬಲದಿಂದ ಪ್ರಕಾಶ್ ರಾಜ್ರವರು ‘ಆಶ್ಚರ್ಯ ಮತ್ತು ಆಘಾತಕ್ಕೊಳಗಾಗಿದ್ದಾರೆ’ ಇದು ಕುತೂಹಲಕಾರಿ ವಿಷಯವಾಗಿದೆ.
ಇಬ್ಬರು ಪ್ರತಿಭಾವಂತ ನಟರು - ಒಬ್ಬರು ಬಿಜೆಪಿ ಪರ & ಮತ್ತೊಬ್ಬರು ಬಿಜೆಪಿ ವಿರೋಧಿ - ಜೂಜಿನ ಜಾಹೀರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ.
ನಾನು ಇಬ್ಬರ ನಿಲುವುಗಳು/ಸಿದ್ಧಾಂತಗಳು ಒಪ್ಪದಿದ್ದರೂ, ಅಂತಹ ಪ್ರಶ್ನಾರ್ಹ ಸಂಪಾದನೆಯನ್ನು ಮೊದಲು ಯಾರು ಸದ್ಬಳಕೆಗೆ ಹಿಂದುರುಗಿಸುತ್ತಾರೋ ಆ ವ್ಯಕ್ತಿ ಮೇಲುಗೈಯಾಗುತ್ತಾರೆ" ಎಂದಿದ್ದಾರೆ.
ಸುದೀಪ್ ರಾಜಕೀಯ ಬೆಂಬಲದ ಬಗ್ಗೆಯೂ ಮಾತು..
"ಸಿನಿಮಾ ತಾರೆಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುತ್ತಾರೆ — ಏಕೆ? ಏಕೆಂದರೆ ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ 'ಮಾರಾಟ' ಆಗಿದ್ದಾರೆ.
ನೆನಪಿಡಿ: ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕು" ಎಂದು ಚೇತನ್ ಅಹಿಂಸಾ ಫೇಸ್ಬುಕ್ನಲ್ಲಿ ಈ ಬರಹವನ್ನು ಪೋಸ್ಟ್ ಮಾಡಿದ್ದಾರೆ.
ಸುದೀಪ್ ನಡೆ ಖಂಡಿಸಿ ಪ್ರಕಾಶ್ ರಾಜ್ ಹೇಳಿದ್ದೇನು?
"ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ.. ಇನ್ನು ಮುಂದೆ ನಿಮ್ಮನ್ನೂ.. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ.." ಎಂದು ಪ್ರಕಾಶ್ ರೈ ಟ್ವಿಟ್ ಮಾಡಿದ್ದಾರೆ.