ಫಾರಂ ಹೌಸ್ನಲ್ಲಿ ವಿದೇಶಿ ಬಾತು ಕೋಳಿ ಸಾಕಿದ್ದ ಪ್ರಕರಣ: ನ್ಯಾಯಾಲಯದಿಂದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್
ಫಾರಂ ಹೌಸ್ನಲ್ಲಿ ವಿದೇಶಿ ಬಾತು ಕೋಳಿ ಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿಗೆ ತಿ ನರಸೀಪುರ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ತಿ ನರಸೀಪುರ : ಕನ್ನಡ ನಟ ದರ್ಶನ್ ಅವರು ತಮ್ಮ ಫಾರಂ ಹೌಸ್ನಲ್ಲಿ ವಿದೇಶಿ ಬಾತು ಕೋಳಿ ಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ತಿ ನರಸೀಪುರ ನ್ಯಾಯಾಲಯ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ ಮಾಡಿದೆ. ಮುಂದಿನ ಜುಲೈ 4ರಂದು ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಸಮಸ್ಸ್ ಜಾರಿ ಮಾಡಿದೆ. ಬಾರ್ ಹೆಡೆಡ್ ಗೂಸ್ ಎಂಬ 4 ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ದರ್ಶನ್ ಅವರು ತಮ್ಮ ಫಾರಂ ಹೌಸ್ನಲ್ಲಿ ಸಾಕಿದ್ದ ಪ್ರಕರಣ ಇದಾಗಿದೆ.
ಮೈಸೂರು ಜಿಲ್ಲೆ ತಿ ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ನಟ ದರ್ಶನ್ ಅವರಿಗೆ ಸೇರಿದ ಫಾರಂ ಹೌಸ್ ಮೇಲೆ ದಾಳಿ ಮಾಡಿದ್ದ ಅರಣ್ಯಾಧಿಕಾರಿಗಳು, ದಾಳಿಯ ವೇಳೆ ವಿದೇಶಿ ಪ್ರಭೇದದ ಬಾತು ಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಬಾರ್ ಹೆಡೆಡ್ ಗೂಸ್ ಹೆಚ್ಚಾಗಿ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು, ವಲಸೆ ಬಂದು ವಾಪಸ್ ಹೋಗುತ್ತವೆ. ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಆ ವೇಳೆ ಬಾತುಕೊಳಿಗಳನ್ನು ಸ್ನೇಹಿತರು ನೀಡಿದ್ದರು ಎಂದು ನಟ ದರ್ಶನ್ ಸ್ಪಷ್ಟನೆ ನೀಡಿದ್ದರು. ಆದರೆ ಬಾತುಕೋಳಿ ದರ್ಶನ್ ವಶದಲ್ಲಿದ್ದ ಕಾರಣ, ಅವರ ವಿರುದ್ಧ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಯ ಪ್ರಕರಣ ದಾಖಲಾಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ನೀಡಿದೆ.