Hindi Imposition Row: ಹಿಂದಿ ಹೇರಿಕೆ ಆರೋಪಕ್ಕೆ ಅಮಿತ್ ಶಾ ತಿರುಗೇಟು; ರಾಜ್ಯಗಳ ಜತೆ ಪ್ರಾದೇಶಿಕ ಭಾಷೆಗಳಲ್ಲಿಯೇ ಪತ್ರ ವ್ಯವಹಾರ
Hindi Imposition Row: ಹಿಂದಿ ಹೇರಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿಯು ಎಲ್ಲಾ ಭಾಷೆಗಳ ಸ್ನೇಹಿತ ಎಂದಿದ್ದಾರೆ. ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕಾಗಿ ಡಿಸೆಂಬರ್ ತಿಂಗಳಿನಿಂದ ರಾಜ್ಯಗಳ ಜತೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುವುದಾಗಿ ಹೇಳಿದ್ದಾರೆ.

Hindi Imposition Row: ಹಿಂದಿ ಹೇರಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿಯು ಎಲ್ಲಾ ಭಾಷೆಗಳ ಸ್ನೇಹಿತ ಎಂದಿದ್ದಾರೆ. ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕಾಗಿ ಡಿಸೆಂಬರ್ ತಿಂಗಳಿನಿಂದ ರಾಜ್ಯಗಳ ಜತೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಕೇಂದ್ರ ಸರಕಾರವು ಆಯಾ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಸಂಸತ್ ಸದಸ್ಯರ ಜತೆ ಅವರ ರಾಜ್ಯದ ಆಡಳಿತ ಭಾಷೆಯಲ್ಲಿಯೇ ಪತ್ರವ್ಯವಹಾರ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ. ಡಿಸೆಂಬರ್ನಿಂದ ಇವರು ಕರ್ನಾಟಕದ ಜತೆ ಕನ್ನಡದಲ್ಲಿ, ತಮಿಳುನಾಡು ಜತೆ ತಮಿಳಿನಲ್ಲಿ, ಕೇರಳ ರಾಜ್ಯದ ಜತೆ ಮಲಯಾಳಂನಲ್ಲಿ, ಆಂಧ್ರ ಪ್ರದೇಶದ ಜತೆ ತೆಲುಗು ಭಾಷೆಯಲ್ಲಿ ಪತ್ರ ವ್ಯವಹಾರ ನಡೆಸಲಿದ್ದಾರೆ.
ಹಿಂದಿ ಭಾಷೆಯು ಭಾರತದ ಯಾವುದೇ ಇತರೆ ಪ್ರಾದೇಶಿಕ ಭಾಷೆಯ ಜತೆ ಸ್ಪರ್ಧೆ ನಡೆಸುತ್ತಿಲ್ಲ. ಹಿಂದಿ ಭಾಷೆಯು ಇತರೆ ಭಾಷೆಗಳ ಗೆಳೆಯ ಅಷ್ಟೇ ಎಂದು ಅವರು ಹೇಳಿದ್ದಾರೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಹೇರಿಕೆಯಾಗುವ ಕುರಿತು ಎಂಡಿಎಂಕೆ ಸದಸ್ಯ ವೈಕೊ ಮತ್ತು ಸಿಪಿಎಂ ಸದಸ್ಯ ಜಾನ್ ಬ್ರಿಟಾಸ್ ಅವರು ಕಳವಳ ವ್ಯಕ್ತಪಡಿಸಿದರು. ಈ ಕುರಿತಂತೆ ನಡೆದ ಚರ್ಚೆಯ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ "ಪ್ರಾದೇಶಿಕ ಭಾಷೆಗಳಲ್ಲಿಯೇ ಆಯಾ ರಾಜ್ಯಗಳ ಜತೆ ಪತ್ರ ವ್ಯವಹಾರ" ಮಾಡುವ ಘೋಷಣೆ ಮಾಡಿದ್ದಾರೆ.
"ಹಿಂದಿ ಭಾಷೆಯು ಯಾವುದೇ ಭಾರತೀಯ ಭಾಷೆಗಳ ಜತೆ ಸ್ಪರ್ಧೆ ನಡೆಸುತ್ತಿಲ್ಲ. ಭಾರತದ ಎಲ್ಲಾ ಭಾಷೆಗಳ ಜತೆ ಹಿಂದಿ ಸ್ನೇಹಿತ. ಎಲ್ಲಾ ಭಾರತೀಯ ಭಾಷೆಗಳು ಹಿಂದಿಯಿಂದಾಗಿ ಸದೃಢವಾಗಿವೆ. ಅದೇ ರೀತಿ, ಎಲ್ಲಾ ಭಾರತೀಯ ಭಾಷೆಗಳಿಂದಾಗಿ ಹಿಂದಿ ಸದೃಢಗೊಂಡಿದೆ" ಎಂದು ಅವರು ಹೇಳಿದ್ದಾರೆ. "ಡಿಸೆಂಬರ್ ಬಳಿಕ ಆಯಾ ರಾಜ್ಯಗಳ ವ್ಯಕ್ತಿಗಳು, ಮುಖ್ಯಮಂತ್ರಿಗಳು ಅಥವಾ ಮಂತ್ರಿಗಳು, ಪಾರ್ಲಿಮೆಂಟ್ ಸದಸ್ಯರ ಜತೆ ಅವರ ರಾಜ್ಯದ ಭಾಷೆಯಲ್ಲಿಯೇ ನನ್ನ ಪತ್ರ ವ್ಯವಹಾರ ಇರಲಿದೆ" ಎಂದು ಅವರು ಹೇಳಿದ್ದಾರೆ.
"ಕೆಲವರು ತಮ್ಮ ಭ್ರಷ್ಟಾಚಾರವನ್ನು ಅಡಗಿಸಿಡಲು ಭಾಷೆಯ ಹೆಸರಿನ ಅಂಗಡಿ ಇಟ್ಟಿದ್ದಾರೆ. ಭಾರತದ ಪ್ರತಿಯೊಂದು ಭಾಷೆಯು ಅದರ ಸಂಸ್ಕೃತಿಯಿಂದಾಗಿ ಸುಂದರವಾಗಿದೆ. ನಾವು ದಕ್ಷಿಣ ಭಾರತದ ಭಾಷೆಗಳ ವಿರುದ್ಧ ಇದ್ದೇವೆ ಎಂದು ಅವರು ಹೇಳುತ್ತಾರೆ. ನಾವು ಯಾವುದೇ ರಾಜ್ಯದ ಭಾಷೆಯ ವಿರುದ್ಧ ಹೇಗೆ ಹೋಗಲು ಸಾಧ್ಯ? ನಾನು ಗುಜರಾತ್ನಿಂದ ಬಂದಿದ್ದೇನೆ. ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನಿಂದ ಬಂದಿದ್ದಾರೆ" ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅದರ ಅಡಿಯಲ್ಲಿ ಪ್ರಸ್ತಾಪಿಸಲಾದ ತ್ರಿಭಾಷಾ ಸೂತ್ರದ ಅನುಷ್ಠಾನದ ಬಗ್ಗೆ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ಕೇಂದ್ರದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಈ ಕುರಿತು ಕಳೆದ ಹಲವು ದಿನಗಳಿಂದ ಚರ್ಚೆ, ವಾದ, ವಿವಾದಗಳು ನಡೆಯುತ್ತಿವೆ.
ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ನೀಡಲು ಕೇಂದ್ರವು ನಿಬಂಧನೆಗಳನ್ನು ಮಾಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ತಮಿಳುನಾಡು ಸರ್ಕಾರಕ್ಕೆ ತಮಿಳಿನಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ನೀಡುವ ಧೈರ್ಯವಿಲ್ಲ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ""ನೀವು (ತಮಿಳುನಾಡು ಸರ್ಕಾರ) ವಾಣಿಜ್ಯ ಹಿತಾಸಕ್ತಿ ಹೊಂದಿದ್ದೀರಿ. ನೀವು ಅದನ್ನು ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ ಸರ್ಕಾರ ಬಂದಾಗನಾವು ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಒದಗಿಸುತ್ತೇವೆ" ಎಂದು ಶಾ ಭರವಸೆ ನೀಡಿದ್ದಾರೆ.

ವಿಭಾಗ