Nitish Panday Death: ಹೃದಯಾಘಾತದಿಂದ ಹಿಂದಿ ಕಿರುತೆರೆಯ ಖ್ಯಾತ ನಟ ನಿತೀಶ್ ಪಾಂಡೆ ನಿಧನ
ಹಿಂದಿ ಕಿರುತೆರೆ ಲೋಕದಲ್ಲೀಗ ಶೋಕದ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ನಟ ಆದಿತ್ಯ ಸಿಂಗ್ ರಜಪೂತ್ ನಿಧನರಾಗಿದ್ದರು. ಅದಾದ ಬಳಿಕ ನಟಿ ವೈಭವಿ ರಸ್ತೆ ಅಪಘಾತದಲ್ಲಿ ಪ್ರಾಣ ಚೆಲ್ಲಿದ್ದಾರೆ. ಈಗ ಖ್ಯಾತ ನಟ ನಿತೀಶ್ ಪಾಂಡೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Nitish Panday Death: ಹಿಂದಿ ಕಿರುತೆರೆಗೆ ಒಂದಾದ ಮೇಲೊಂದರಂತೆ ವಿಘ್ನಗಳು ಎದುರಾಗುತ್ತಿವೆ. ಆದಿತ್ಯ ಸಿಂಗ್ ರಜಪೂತ್ ಮತ್ತು 'ಸಾರಾಭಾಯಿ ವರ್ಸಸ್ ಸಾರಾಭಾಯಿ' ನಟಿ ವೈಭವಿ ಉಪಾಧ್ಯಾಯ ಸಾವಿನಿಂದ ಶಾಕ್ನಲ್ಲಿದ್ದ ಕಿರುತೆರೆ ಮಂದಿಗೆ ಇದೀಗ ಮತ್ತೊಂದು ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಹಿಂದಿಯ ಖ್ಯಾತ ಕಿರುತೆರೆ ನಟ ನಿತೇಶ್ ಪಾಂಡೆ (51) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಿಂದಿ ಕಿರುತೆರೆಯ ‘ಅನುಪಮ’ ಧಾರಾವಾಹಿಯಲ್ಲಿ ಧೀರಜ್ ಕಪೂರ್ ಪಾತ್ರವನ್ನು ನಿತೇಶ್ ನಿರ್ವಹಿಸುತ್ತಿದ್ದರು. ಈ ಸೀರಿಯಲ್ ಶೂಟಿಂಗ್ ಸಲುವಾಗಿಯೇ ಮಂಗಳವಾರ (ಮೇ 23) ತೆರಳುತ್ತಿದ್ದಾಗ ನಾಸಿಕ್ ಬಳಿಯ ಇಗತ್ಪುರಿ ಬಳಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ಅವರ ಸಾವಿನ ವಿಚಾರವನ್ನು ನಿತೀಶ್ ಅವರ ಸಂಬಂಧಿ ಸಿದ್ಧಾರ್ಥ್ ನಗರ ಖಚಿತಪಡಿಸಿದ್ದಾರೆ.
ಸಿನಿಮಾ, ಕಿರುತೆರೆಯಲ್ಲಿ ನಟನೆ
ಶಾರುಖ್ ಖಾನ್ ನಟನೆಯ 'ಓಂ ಶಾಂತಿ ಓಂ' ಚಿತ್ರದಲ್ಲಿ ನಿತೀಶ್ ನಟಿಸಿದ್ದರು. 'ದಬಾಂಗ್ 2', 'ಖೋಸ್ಲಾ ಕಾ ಘೋಸ್ಲಾ' ಸಿನಿಮಾಗಳು ಸೇರಿ ಕಿರುತೆರೆಯಲ್ಲಿಯೂ ಅವರದ್ದು ಪರಿಚಿತ ಮುಖ. ಸದ್ಯ 'ಇಂಡಿಯಾವಲಿ ಮಾ', ಮತ್ತು 'ಅನುಪಮಾ' ಧಾರಾವಾಹಿಗಳಲಿ ನಿತೀಶ್ ನಟಿಸುತ್ತಿದ್ದರು.
ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಾಯ
ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ವೈಭವಿ ಉಪಾಧ್ಯಾಯ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 'ಸಾರಾಭಾಯ್ ವರ್ಸಸ್ ಸಾರಾಭಾಯ್' ಧಾರಾವಾಹಿಯಲ್ಲಿ ಜಾಸ್ಮಿನ್ ಪಾತ್ರ ನಿಭಾಯಿಸಿದ್ದ ವೈಭವಿ, ಮಂಗಳವಾರ (ಮೇ 23) ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ ಈಗಿನ್ನೂ ಕೇವಲ 32 ವರ್ಷ.
ಹಿಮಾಚಲ ಪ್ರದೇಶದಲ್ಲಿ ಭಾವಿ ಪತಿ ಜೊತೆ ಕಾರ್ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತಿರುವಿನಲ್ಲಿ ಕಾರ್ ನಿಯಂತ್ರಣಕ್ಕೆ ಸಿಗದೆ, ಕಂದಕ್ಕೆ ಉರುಳಿದ ಪರಿಣಾಮ ವೈಭವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಜತೆಗಿದ್ದ ಭಾವಿ ಪತಿ ಆರೋಗ್ಯ ಸ್ಥಿರವಾಗಿದೆ. ಚಂಡೀಗಢದಲ್ಲಿರುವ ಅವರ ಕುಟುಂಬದವರು ವೈಭವಿ ಪಾರ್ಥಿವ ಶರೀರವನ್ನು ಮುಂಬೈಗೆ ತರುತ್ತಿದ್ದಾರೆ. ವೈಭವಿ ಅಂತ್ಯಕ್ರಿಯೆ (ಮೇ 24) ಬುಧವಾರ ಬೆಳಗ್ಗೆ 11 ಗಂಟೆಗೆ ಮುಂಬೈನಲ್ಲಿ ನಡೆಯಲಿದೆ.
ದೀಪಿಕಾ ಪಡುಕೋಣೆ ಜೊತೆಗೆ 'ಛಪಾಕ್' ಮತ್ತು 'ತಿಮಿರ್' (2023) ಚಿತ್ರಗಳಲ್ಲಿ ವೈಭವಿ ನಟಿಸಿದ್ದರು. 'ಕ್ಯಾ ಕಸೂರ್ ಹೈ ಅಮಲಾ ಕಾ' ಮತ್ತು ಡಿಜಿಟಲ್ ಸರಣಿಯಲ್ಲಿಯೂ ನಟಿಸಿದ್ದರು. ನಟಿಯ ಈ ದುರಂತ ಸಾವಿಗೆ ಅವರ ಆಪ್ತರು, ಕುಟುಂಬದವರು ಕಂಬನಿ ಮಿಡಿದಿದ್ದಾರೆ.