ಕನ್ನಡ ಸುದ್ದಿ  /  Entertainment  /  How Bollywood Actor Anupam Kher Conspired With Shivarajkumar To Shock Kantara Fame Rishab Shetty

Anupam Kher: ಅನುಪಮ್‌ ಖೇರ್‌ ಫೋನ್‌ನಿಂದ ರಿಷಬ್‌ ಶೆಟ್ಟಿಗೆ ‘ಮುಠ್ಠಾಳ’ ಎಂದು ವಾಟ್ಸಾಪ್‌ ಮೆಸೆಜ್‌ ಮಾಡಿದ ಶಿವಣ್ಣ! ಮುಂದಾಗಿದ್ದೇ ಬೇರೆ..

‘ಘೋಸ್ಟ್‌’ ಚಿತ್ರೀಕರಣಕ್ಕೆಂದು ಬೆಂಗಳೂರಿಗೆ ಬಂದಿದ್ದ ಅನುಪಮ್‌ ಖೇರ್‌, ರಿಷಬ್‌ ಶೆಟ್ಟಿಗೆ ಫ್ರಾಂಕ್‌ ಮಾಡಿದ್ದಾರೆ. ಆ ಹಾಸ್ಯವನ್ನು ಸ್ವತಃ ಅನುಪಮ್‌ ಎಲ್ಲರೆದುರು ಹೇಳಿ ನಗಾಡಿದ್ದಾರೆ.

ಅನುಪಮ್‌ ಖೇರ್‌ ಫೋನ್‌ನಿಂದ ರಿಷಬ್‌ ಶೆಟ್ಟಿಗೆ ‘ಮುಠ್ಠಾಳ’ ಎಂದು ವಾಟ್ಸಾಪ್‌ ಮೆಸೆಜ್‌ ಮಾಡಿದ ಶಿವಣ್ಣ! ಮುಂದಾಗಿದ್ದೇ ಬೇರೆ..
ಅನುಪಮ್‌ ಖೇರ್‌ ಫೋನ್‌ನಿಂದ ರಿಷಬ್‌ ಶೆಟ್ಟಿಗೆ ‘ಮುಠ್ಠಾಳ’ ಎಂದು ವಾಟ್ಸಾಪ್‌ ಮೆಸೆಜ್‌ ಮಾಡಿದ ಶಿವಣ್ಣ! ಮುಂದಾಗಿದ್ದೇ ಬೇರೆ..

Anupam Kher: ‘ಕಾಂತಾರ’ ಸಿನಿಮಾ ಅದ್ಯಾವ ಮಟ್ಟಿಗೆ ಹಿಟ್‌ ಆಯ್ತು, ರಿಷಬ್‌ ಶೆಟ್ಟಿ ಅವರ ಹೆಸರು ಯಾರ್ಯಾರ ಬಾಯಲ್ಲಿ ನಲಿಯಿತು ಎಂದು ಗೊತ್ತಿರುವ ಸಂಗತಿ. ಸೌತ್‌ನಿಂದ ಹಿಡಿದು ಬಾಲಿವುಡ್‌ನ ಬಹುತೇಕರು ‘ಕಾಂತಾರ’ ಚಿತ್ರದ ಬಗ್ಗೆ ಮಾತನಾಡಿದರು. ಸಿನಿಮಾ ನೋಡಿ ಹೌಹಾರಿದರು. ನೇರವಾಗಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಕಾಂತಾರದ ಆ ಸಿನಿಮ್ಯಾಟಿಕ್‌ ಅನುಭವವನ್ನು ಹೇಳಿಕೊಂಡಿದ್ದರು. ಆ ಪೈಕಿ ಬಾಲಿವುಡ್‌ನ ವರ್ಸಟೈಲ್‌ ನಟ ಅನುಪಮ್‌ ಖೇರ್‌ ಸಹ ರಿಷಬ್‌ ಅವರ ನಿರ್ದೇಶನ ಮತ್ತು ನಟನೆಯನ್ನು ಮೆಚ್ಚಿಕೊಂಡಿದ್ದರು. ಭೇಟಿ ಮಾಡುವ ಬಗ್ಗೆಯೂ ಟ್ವಿಟರ್‌ನಲ್ಲಿ ಚರ್ಚೆ ನಡೆದಿತ್ತು.

ಅದಾದ ಬಳಿಕ ಹಲವು ವಿಚಾರದಲ್ಲಿ ಟ್ವಿಟರ್‌ನಲ್ಲಿಯೂ ಈ ಕಲಾವಿದರು ಮುಖಾಮುಖಿಯಾಗಿದ್ದರು. ಅದಾದ ಬಳಿಕ ಕಳೆದ ನವೆಂಬರ್‌ನಲ್ಲಿ ಮುಂಬೈನಲ್ಲಿ ಟೈಮ್ಸ್‌ ನೌ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಿನಿಮಾ, ನಿರ್ದೇಶನ ಸೇರಿ ಹಲವು ವಿಚಾರಗಳು ಇಬ್ಬರ ನಡುವೆ ವಿನಿಮಯವಾಗಿದ್ದವು. ಬೆಂಗಳೂರಿಗೆ ಬಂದಾಗ ಮತ್ತೆ ಭೇಟಿಯಾಗುವ ಬಗ್ಗೆಯೂ ಅನುಪಮ್‌ ಖೇರ್‌ ರಿಷಬ್‌ಗೆ ಹೇಳಿದ್ದರು. ಇದೀಗ ‘ಘೋಸ್ಟ್‌’ ಸಿನಿಮಾದ ಶೂಟಿಂಗ್‌ ಸಲುವಾಗಿ ಅನುಪಮ್‌ ಬೆಂಗಳೂರಿನಲ್ಲಿದ್ದಾರೆ.

ರಿಷಬ್‌ ಭೇಟಿಗೆ ಕಾದಿದ್ದ ಅನುಪಮ್‌ ಖೇರ್‌ಗೆ ಶಿವಣ್ಣ ಸಹಾಯ...

ಹೀಗೆ ‘ಘೋಸ್ಟ್‌’ ಸಿನಿಮಾ ಶೂಟಿಂಗ್‌ಗೆ ಬೆಂಗಳೂರಿಗೆ ಬಂದಿಳಿದ ಅನುಪಮ್‌ ಖೇರ್‌, ರಿಷಬ್‌ ಶೆಟ್ಟಿ ಅವರನ್ನು ಭೇಟಿ ಮಾಡುವ ಉದ್ದೇಶಕ್ಕೆ, ಅವರಿಗೆ ವಾಟ್ಸಾಪ್‌ನಲ್ಲಿಯೇ ಸಂದೇಶ ಕಳುಹಿಸಿದ್ದರು. ಆ ಸಂದೇಶ ಏನೆಂದರೆ, "ನಾನು ಬೆಂಗಳೂರಿನಲ್ಲಿದ್ದೇನೆ. ಭೇಟಿ ಆಗುತ್ತೀಯಾ" ಎಂದಿದ್ದಾರೆ. ಆಗ ಅದಕ್ಕೆ ಪ್ರತಿಕ್ರಿಯಿಸಿದ ರಿಷಬ್‌ ಶೆಟ್ಟಿ, "ಅಯ್ಯೋ ಸರ್‌ ನಾನು ನನ್ನೂರು ಕುಂದಾಪುರದಲ್ಲಿದ್ದೇನೆ" ಎಂದಿದ್ದಾರೆ. ಇದ್ಯಾಕೋ ಸರಿ ಹೋಗುತ್ತಿಲ್ಲ ಎಂದು ನೇರವಾಗಿ ಶಿವಣ್ಣನ ಕೈಗೆ ಫೋನ್‌ ಕೊಟ್ಟ ಅನುಪಮ್‌ ಖೇರ್‌, "ಕನ್ನಡದಲ್ಲಿ ಏನಾದರೂ ಬರೆದು ರಿಷಬ್‌ಗೆ ವಾಟ್ಸಾಪ್‌ ಮಾಡಿ" ಎಂದಿದ್ದಾರೆ. ಆಗ ಶಿವಣ್ಣ ಮಾಡಿದ ಮೆಸೆಜ್‌ ನೋಡಿ ರಿಷಬ್‌ ನಿಜಕ್ಕೂ ಶಾಕ್‌ ಆಗಿದ್ದಾರೆ.

ಶಿವಣ್ಣನ ಸಂದೇಶ ಹೀಗಿತ್ತು..

ಅನುಪಮ್‌ ಖೇರ್‌ ಅವರ ಫೋನ್‌ ತೆಗೆದುಕೊಂಡ ಶಿವಣ್ಣ, "ಎಂಥ ಮುಠ್ಠಾಳ ಕೆಲಸ! ನೀನು ಇಲ್ಲಿ ಇರಬೇಕಾಗಿತ್ತು, ನನ್ನನ್ನು ವೆಲ್‌ಕಮ್‌ ಮಾಡೋಕೆ!" ಎಂದು ಮೆಸೆಜ್‌ ರವಾನಿಸಿದ್ದಾರೆ. ಮೆಸೆಜ್‌ ನೋಡಿದ ರಿಷಬ್‌ ಕೆಲ ಕ್ಷಣ ಹೌಹಾರಿದ್ದಾರೆ. ಈ ಹಾಸ್ಯ ಪ್ರಸಂಗವನ್ನು ‘ಘೋಸ್ಟ್‌’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅನುಪಮ್‌ ಖೇರ್‌ ಹೇಳಿಕೊಂಡಿದ್ದಾರೆ. ನಗುವನ್ನು ಮತ್ತಷ್ಟು ಹರಡಿದ್ದಾರೆ.

ಎರಡು ಭಾಗಗಳಲ್ಲಿ ‘ಘೋಸ್ಟ್‌’!

ಎಂ.ಜಿ ಶ್ರೀನಿವಾಸ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಘೋಸ್ಟ್‌’ ಸಿನಿಮಾ ಘೋಷಣೆ ದಿನದಿಂದಲೂ ಸುದ್ದಿಯಲ್ಲಿದೆ. ಅದರಲ್ಲೂ ಶಿವಣ್ಣನ ವಿಂಟೇಜ್‌ ಲುಕ್‌ಗೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಕೊನೇ ಹಂತಕ್ಕೆ ಬಂದು ನಿಂತಿದೆ. ಹೊಸ ಅಪ್‌ಡೇಟ್‌ ಏನೆಂದರೆ ಈ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದ ಸುಳಿವು ನೀಡಿದ್ದಾರೆ ಶ್ರೀನಿ. ಸದ್ಯಕ್ಕೆ ಮೊದಲ ಭಾಗದ ಮೇಲಷ್ಟೇ ಗಮನ ಹರಿಸಿದ್ದಾರೆ. ತಾರಾಗಣದ ವಿಚಾರದಲ್ಲಿ ಅನುಪಮ್‌ ಖೇರ್‌ ಮತ್ತು ಮಲಯಾಳಂ ನಟ ಜಯರಾಮ್ ನಟಿಸಿದ್ದಾರೆ. ಇನ್ನುಳಿದಂತೆ ವಿಜಯ್‌ ಸೇತುಪತಿಯನ್ನೂ ಕರೆತರುವ ಯೋಚನೆ ಸಿನಿಮಾ ತಂಡದ್ದು. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಮಹೇನ್‌ ಸಿಂಹ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಂದೇಶ್‌ ನಾಗರಾಜ್‌ ಚಿತ್ರ ನಿರ್ಮಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ