Yash on twitter Post: ಟ್ವಿಟರ್ನಲ್ಲಿ ಸುದೀಪ್, ದರ್ಶನ್ ಬರ್ತ್ಡೇಗಿಲ್ಲ ಯಶ್ ವಿಶ್!; ಕಾರಣ ತಿಳಿಸಿದ ರಾಕಿಭಾಯ್...
ಬರ್ತ್ಡೇಗೆ ನಾನು ಯಾರಿಗೂ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುವುದಿಲ್ಲ. ಅದಕ್ಕೆ ಕಾರಣ ಏನೆಂದರೆ, ಒಬ್ಬರಿಗೆ ಶುಭಕೋರಿ, ಇನ್ನೊಬ್ಬರಿಗೆ ಶುಭಕೋರುವುದು ಮರೆತು ಹೋದರೆ, ಅಲ್ಲಿ ಇನ್ನೊಬ್ಬನಿಗೆ ಬೇಸರ ಆಗಬಹುದು.
ನಟ ಯಶ್ ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲ ದೇಶದಾದ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ. ಕೆಜಿಎಫ್ ಸಿನಿಮಾಗಳು ರಿಲೀಸ್ ಆಗುತ್ತಿದ್ದಂತೆ, ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಯ ಮಂದಿಯ ಕಣ್ಣಿಗೂ ಬಿದ್ದಿದ್ದಾರೆ. ಅವರ ಸಿನಿಮಾ ಅವಕಾಶ ಪಡೆದುಕೊಳ್ಳಲು ಸಿನಿಮಾ ಮೇಕರ್ಗಳು ಕಾಯುತ್ತಿದ್ದಾರೆ. ಆದರೆ ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ತೆರೆಮರೆಯಲ್ಲಿ ಕೆಲ ಸಿನಿಮಾಗಳ ಕೆಲಸ ನಡೆಯುತ್ತಿವೆಯಾದರೂ, ಇನ್ನಷ್ಟೇ ಅದು ಅಧಿಕೃತವಾಗಬೇಕಿದೆ.
ಹೀಗಿರುವಾಗಲೇ ಮುಂಬೈನಲ್ಲಿ ಇಂಡಿಯಾ ಟುಡೇ ಕಾನ್ಕ್ಲೇವ್ ಇವೆಂಟ್ನಲ್ಲಿ ನಟ ಯಶ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಯಶ್ ಅವರನ್ನು ಹಿರಿಯ ನಿರೂಪಕ ರಾಜ್ದೀಪ್ ಸರ್ದೇಸಾಯಿ ಸಂದರ್ಶನ ಮಾಡಿದ್ದರು. ಈ ವೇಳೆ ತಮ್ಮ ಜೀವನದ ಒಂದಷ್ಟು ವಿಚಾರಗಳ ಬಗ್ಗೆ ಯಶ್ ಮನಬಿಚ್ಚಿ ಮಾತನಾಡಿದ್ದರು. ಹೊಸ ಹೊಸ ವಿಚಾರಗಳನ್ನು ಹೇಳಿಕೊಂಡಿದ್ದರು. ಕೆಜಿಎಫ್ 3 ಸಿನಿಮಾ, ಮುಂಬರುವ ಸಿನಿಮಾ ಕುರಿತೂ ಮಾತನಾಡಿದ್ದರು. ಕಾಂತಾರ ಚಿತ್ರದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ನೇರವಾಗಿ ಕಾಲ್ ಮಾಡುತ್ತೇನೆ...
"ಬರ್ತ್ಡೇಗೆ ನಾನು ಯಾರಿಗೂ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುವುದಿಲ್ಲ. ಅದಕ್ಕೆ ಕಾರಣ ಏನೆಂದರೆ, ಒಬ್ಬರಿಗೆ ಶುಭಕೋರಿ, ಇನ್ನೊಬ್ಬರಿಗೆ ಶುಭಕೋರುವುದು ಮರೆತು ಹೋದರೆ, ಅಲ್ಲಿ ಇನ್ನೊಬ್ಬರಿಗೆ ಬೇಸರ ಆಗಬಹುದು. ಹಾಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಬರ್ತ್ಡೇ ವಿಶ್ ಮಾಡುವುದಿಲ್ಲ. ಅದರ ಬದಲಿಗೆ ನೇರವಾಗಿ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸುತ್ತೇನೆ. ಇದನ್ನು ಬಿಟ್ಟರೆ, ನನ್ನ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ನನ್ನ ಸಿನಿಮಾ, ವೈಯಕ್ತಿಕ ವಿಚಾರಗಳಿದ್ದರೆ ಮಾತ್ರ ಶೇರ್ ಮಾಡುತ್ತೇನೆ" ಎಂದಿದ್ದಾರೆ.
ದಕ್ಷಿಣದ ಸಿನಿಮಾಗಳನ್ನು ಗೇಲಿ ಮಾಡುತ್ತಿದ್ದದ್ದೇ ಹೆಚ್ಚು..
ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ಮುಂಬೈನಲ್ಲಿ ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಭಾಗವಹಿಸಿದ್ದರು. ಈ ವೇಳೆ ದಕ್ಷಿಣ ಮತ್ತು ಉತ್ತರದ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. 'ಕಳೆದ 10 ವರ್ಷಗಳಿಂದ ನಮ್ಮ ಡಬ್ಬಿಂಗ್ ಚಿತ್ರಗಳು ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಆದರೆ ಅವುಗಳನ್ನು ಉತ್ತರ ಭಾರತದ ಜನ ವಿಭಿನ್ನ ದೃಷ್ಟಿಕೋನದಿಂದ ನೋಡಿದ್ದಾರೆ. ಸೌತ್ ಸಿನಿಮಾಗಳೆಂದರೆ ಅವರು ಗೇಲಿ ಮಾಡುತ್ತಿದ್ದದೇ ಹೆಚ್ಚು. ಇದೀಗ ಕಾಲ ಬದಲಾಗಿದೆ. ಸೌತ್ ಸಿನಿಮಾಗಳನ್ನು ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲೆಲ್ಲ ಅತ್ಯಂತ ಕೆಟ್ಟದಾಗಿ ಡಬ್ ಮಾಡಿ ಯೂಟ್ಯೂಬ್ಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು" ಎಂದು ಯಶ್ ಹೇಳಿಕೊಂಡಿದ್ದಾರೆ.
ರಾಜಮೌಳಿಗೆ ಕ್ರೆಡಿಟ್ ಕೊಟ್ಟ ಯಶ್..
"ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಬಾಹುಬಲಿ ಮೊದಲ ಮತ್ತು ಎರಡನೇ ಭಾಗ ಮಾಡಿದ ಸಾಧನೆ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆ ಸಿನಿಮಾಗಳಿಂದಲೇ ಸೌತ್ ಸಿನಿಮಾಗಳ ಪಥ ಬೇರೆಯ ದಿಕ್ಕಿಗೆ ಹರಿಯಿತು. ಒಂದು ಪರ್ವತವನ್ನು ಒಡೆಯಲು ಬಯಸಿದರೆ, ಅದಕ್ಕಾಗಿ ನಿಮ್ಮಿಂದ ನಿರಂತರ ಶ್ರಮ ಸಂದಾಯವಾಗಬೇಕು. ಬಾಹುಬಲಿ ಸಿನಿಮಾ ಆ ಕೆಲಸ ಮಾಡಿದೆ. ಕೆಜಿಎಫ್ ಇನ್ನೊಂದು ಬೇರೆ ರೀತಿಯ ಪ್ರಯತ್ನ" ಎಂದಿದ್ದಾರೆ ಯಶ್.