ಒಟಿಟಿಯಲ್ಲಿ ಪಾಕಿಸ್ತಾನದ ಕಂಟೆಂಟ್‌ಗಳು ಡಿಲೀಟ್‌; ಈ ಬಾರಿಯ ಯುದ್ಧದ ಸ್ಟೈಲೇ ಬೇರೆ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಪಾಕಿಸ್ತಾನದ ಕಂಟೆಂಟ್‌ಗಳು ಡಿಲೀಟ್‌; ಈ ಬಾರಿಯ ಯುದ್ಧದ ಸ್ಟೈಲೇ ಬೇರೆ

ಒಟಿಟಿಯಲ್ಲಿ ಪಾಕಿಸ್ತಾನದ ಕಂಟೆಂಟ್‌ಗಳು ಡಿಲೀಟ್‌; ಈ ಬಾರಿಯ ಯುದ್ಧದ ಸ್ಟೈಲೇ ಬೇರೆ

ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರ ಈ ಹಿಂದಿನ ಯುದ್ಧಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಯುದ್ಧ ಆರಂಭವಾಗುವ ಮುನ್ನವೇ ಭಾರತದಲ್ಲಿರುವ ಪಾಕಿಸ್ತಾನಿಯರನ್ನು ತೊರೆಯಲು ಸೂಚಿಸಿತ್ತು. ಇದೀಗ ಒಟಿಟಿಯಲ್ಲಿರುವ ಪಾಕಿಸ್ತಾನದ ಕಂಟೆಂಟ್‌ಗಳನ್ನೂ ತೆಗೆದುಹಾಕುವಂತೆ ಸೂಚಿಸಲಾಗಿದೆ.

ಆಪರೇಷನ್‌ ಸಿಂದೂರ ಮರಳು ಶಿಲ್ಪ ಬಿಡಿಸಿದ ಕಲಾವಿದ ಸುದರ್ಶನ್‌ ಪಟ್ನಾಯಕ್‌
ಆಪರೇಷನ್‌ ಸಿಂದೂರ ಮರಳು ಶಿಲ್ಪ ಬಿಡಿಸಿದ ಕಲಾವಿದ ಸುದರ್ಶನ್‌ ಪಟ್ನಾಯಕ್‌ (HT_PRINT)

ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರ ಈ ಹಿಂದಿನ ಯುದ್ಧಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಭಾರತದಲ್ಲಿ ಪಾಕಿಸ್ತಾನಕ್ಕೆ ಬಹಿಷ್ಕಾರದ ಬಿಸಿ ತಟ್ಟುತ್ತಿದೆ. ಈ ಹಿಂದಿನ ಯುದ್ಧಗಳಿಗಿಂತ ಭಿನ್ನವಾಗಿ ಭಾರತ ಈ ಬಾರಿ ಡ್ರೋನ್‌ಗಳ ಮೂಲಕ ಪಾಕಿಸ್ತಾನದ ಆಯಕಟ್ಟಿನ ಸ್ಥಳಗಳಿಗೆ ನುಗ್ಗಿ ದಾಳಿ ನಡೆಸಿತ್ತು. ಯುದ್ಧ ಆರಂಭವಾಗುವ ಮುನ್ನವೇ ಭಾರತದಲ್ಲಿರುವ ಪಾಕಿಸ್ತಾನಿಯರನ್ನು ತೊರೆಯಲು ಸೂಚಿಸಿತ್ತು. ಇದೀಗ ಒಟಿಟಿಯಲ್ಲಿರುವ ಪಾಕಿಸ್ತಾನದ ಕಂಟೆಂಟ್‌ಗಳನ್ನೂ ತೆಗೆದುಹಾಕುವಂತೆ ಸೂಚಿಸಲಾಗಿದೆ.

ವೆಬ್ ಸರಣಿಗಳು, ಚಲನಚಿತ್ರಗಳು ಹಾಗೂ ಪಾಡ್ ಕಾಸ್ಟ್‌ಗಳು ಸೇರಿದಂತೆ ಒಟಿಟಿಯಲ್ಲಿರುವ ಪಾಕಿಸ್ತಾನ ಮೂಲದ ಎಲ್ಲಾ ಕಂಟೆಂಟ್‌ಗಳ ಪ್ರಸಾರವನ್ನು ಸ್ಥಗಿತಗೊಳಿಸಲು ಒಟಿಟಿ ವೇದಿಕೆಗಳಿಗೆ ನಿನ್ನೆ ತಿಳಿಸಲಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ದಾಳಿ ನಡೆಸುತ್ತಿದೆ. ಈ ಸಮಯದಲ್ಲಿ ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪಾಕಿಸ್ತಾನದ ಒಟಿಟಿ ಕಂಟೆಂಟ್‌ಗಳಿಗೆ ಭಾರತದಲ್ಲಿ ನಿಷೇಧ ಹೇರಿದೆ.

ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ಒಟಿಟಿ ವೇದಿಕೆಗಳು, ಮಾಧ್ಯಮ ಪ್ರಸಾರ ವೇದಿಕೆಗಳು ಹಾಗೂ ಮಧ್ಯವರ್ತಿ ಸಂಸ್ಥೆಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಬ್‌ಸ್ಕ್ರಿಪ್ಷನ್‌ ಆಧಾರದ ಅಥವಾ ಇನ್ನಿತರ ರೀತಿಯ ಪಾಕಿಸ್ತಾನದ ಒಟಿಟಿ ಕಂಟೆಂಟ್‌ಗಳನ್ನು ಪ್ರಸಾರ ಮಾಡಬಾರದು. ವೆಬ್ ಸರಣಿಗಳು, ಚಲನಚಿತ್ರಗಳು, ಗೀತೆಗಳು, ಪಾಡ್ ಕಾಸ್ಟ್ ಗಳು ಹಾಗೂ ಇನ್ನಿತರ ಮಾಧ್ಯಮ ತುಣುಕುಗಳನ್ನು ಪ್ರಸಾರ ಮಾಡಬಾರದು ಎಂದು ಸೂಚಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಲಹೆ ಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ.

ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ, ನೀತಿ ಸಂಹಿತೆ) ನಿಯಮಗಳು, 2021 ರ ಭಾಗ-III ಅನ್ನು ಉಲ್ಲೇಖಿಸಿದೆ. ಇದು ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್‌ (ಒಟಿಟಿ ಪ್ಲಾಟ್‌ಫಾರ್ಮ್‌ಗಳು) ಪ್ರಕಾಶಕರಿಗೆ ನೀತಿ ಸಂಹಿತೆಯನ್ನು ಸೂಚಿಸುತ್ತದೆ.

ಈ ಸಂಹಿತೆಯಡಿಯಲ್ಲಿ ಪ್ರಕಾಶಕರು - ಯಾವುದೇ ವಿಷಯವನ್ನು ರವಾನಿಸಲು/ಪ್ರದರ್ಶಿಸಲು ನಿರ್ಧರಿಸುವಾಗ - ಅದು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರುತ್ತದೆಯೇ? ದೇಶದ ಭದ್ರತೆಗೆ ಬೆದರಿಕೆ ಹಾಕುತ್ತದೆಯೇ?, ಅಪಾಯಕ್ಕೆ ಸಿಲುಕಿಸುತ್ತದೆಯೇ? ವಿದೇಶಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳಿಗೆ ಹಾನಿಕಾರಕವೇ? ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆಯೇ ? ಎಂಬುದನ್ನು ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.

ಈ ಹಿಂದಿನ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಒಟಿಟಿಗಳು ಅಸ್ತಿತ್ವದಲ್ಲಿ ಇರಲಿಲ್ಲ. ಆದರೆ, ಈಗ ಒಟಿಟಿ ಮೂಲಕ ಜನರು ಸಿನಿಮಾ, ವೆಬ್‌ ಸರಣಿಗಳು, ಪಾಡ್‌ಕಾಸ್ಟ್‌ಗಳು, ಟಿವಿ ಶೋಗಳನ್ನು ನೋಡುತ್ತಾರೆ. ಕಂಟೆಂಟ್‌ ತಯಾರಕರಿಗೆ ಇದು ಪ್ರಮುಖ ಆದಾಯದ ಮೂಲವಾಗಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in