Jaggesh on Teenage: ಆವಾಗ ಆರ್ಕೆಸ್ಟ್ರಾದಲ್ಲಿ ಹಾಡಿದರೆ 20 ರೂ. ಕೊಡ್ತಿದ್ರು, ಅದು ಗುಂಡು, ಸಿನಿಮಾಕ್ಕೆ ಸಾಕಾಗ್ತಿತ್ತು ಎಂದ ಜಗ್ಗೇಶ್
ಪದವಿ ಪೂರ್ವ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಅಂದಿನ ಆ ವಯಸ್ಸಿಗೆ ಜಾರಿದ ಜಗ್ಗೇಶ್, ತಮ್ಮ ಬಾಲ್ಯ ಹೇಗಿತ್ತು ಎಂಬುದನ್ನು ಮಾತನಾಡಿದ್ದರು. ಅದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿಯೂ ವಿವರವಾಗಿ ಬರೆದುಕೊಂಡಿದ್ದಾರೆ.
Jaggesh on his Teenage: ನವರಸ ನಾಯಕ ಜಗ್ಗೇಶ್ ಸ್ಯಾಂಡಲ್ವುಡ್ನ ಹಿರಿಯ ನಟ. ಅನುಭವಸ್ಥ. ಚಿತ್ರರಂಗದಲ್ಲಿ ತಾವು ಅನುಭವಿಸಿದ ಸಾವಿರಾರು ಘಟನಾವಳಿಗಳನ್ನು, ಸಂದರ್ಭಗಳನ್ನು ಕಣ್ಣಿಗೆ ಕಟ್ಟಿದ್ದಂತೆ ವರ್ಣಿಸುತ್ತಾರೆ. ವೇದಿಕೆ ಮೇಲೆ ಕೂತರೆ ಸಾಕು, ಅವರ ಬಾಯಿಂದ ಸ್ಫೂರ್ತಿದಾಯಕ ಮಾತುಗಳ ಲಹರಿಯೇ ಹರಿದು ಬರುತ್ತದೆ. ಕೇವಲ ಮಾತಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿಯೂ ಅಷ್ಟೇ ತೂಕದ ಅಕ್ಷರಗಳೂ ಅವರ ಕೈಯಿಂದ ಉದುರುತ್ತವೆ. ಇದೀಗ ಅಂಥ ಒಂದು ಘಟನೆಯನ್ನು ಜಗ್ಗೇಶ್ ನೆನಪು ಮಾಡಿಕೊಂಡಿದ್ದಾರೆ.
ಪದವಿ ಪೂರ್ವ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಆ ವಯಸ್ಸಿಗೆ ಜಾರಿದ ಜಗ್ಗೇಶ್, ತಮ್ಮ ಬಾಲ್ಯ ಹೇಗಿತ್ತು ಎಂಬುದನ್ನು ಮಾತನಾಡಿದ್ದರು. ಅದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿಯೂ ವಿವರವಾಗಿ ಬರೆದುಕೊಂಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ.
ಜಗ್ಗೇಶ ಬರೆದ ಪತ್ರದಲ್ಲೇನಿದೆ?
ನಿನ್ನೆ ಯೋಗರಾಜಭಟ್ಟರ ಶಿಷ್ಯ ಹಾಗು ನನ್ನ ಆತ್ಮೀಯ ಪದವಿಪೂರ್ವ ಚಿತ್ರ ನಿರ್ದೇಶಕ ಹರಿಪ್ರಸಾದ್ರವರ ಪ್ರೆಸ್ಮೀಟ್ ಇತ್ತು. ಆ ಚಿತ್ರ ಸಂಪೂರ್ಣ 17-18 ವಯಸ್ಸಿನ ಎಳೆಮನಸುಗಳ ಕಥೆ. ಅದಕ್ಕೆ ಶುಭಹಾರೈಸಲು ಹೋಗಿದ್ದೆ. ಆಗ ಈ ಚಿತ್ರದ ಕಥೆಯಂತೆ ನನ್ನ ಬಾಲ್ಯದ ಬದುಕಿನ ಅನೇಕ ಪ್ರಸಂಗ ಹೇಳುತ್ತಿದ್ದೆ. ಅದನ್ನು ಕೇಳಿ ಚಿತ್ರತಂಡ ಹಾಗು ಮಾಧ್ಯಮಮಿತ್ರರು ಗಹಗಹಿಸಿ ನಕ್ಕು ಆನಂದಿಸುತ್ತಿದ್ದರು. ಕಾರಣ ನನ್ನ ಬದುಕಿನ ಕಂಟೆಂಟ್.
ಮನೆಗೆ ಬಂದವನೇ ನನ್ನ ಬದುಕಿನಲ್ಲಿ ನಡೆದ ಘಟನಾವಳಿ, 42ವರ್ಷದ ನನ್ನ ಬದುಕಿನ ಪಯಣ, ಅಪ್ಪ ಅಮ್ಮ ಬಂಧು ಮಿತ್ರರನ್ನು ನೆನೆದು ಭಾವುಕನಾಗಿಬಿಟ್ಟೆ. ಕಾರಣ ಬಹುತೇಕರು ನನ್ನ ಬಿಟ್ಟು ಹೋಗಿದ್ದಾರೆ. ನಾನು ಮಾಗಿದ 60ವರ್ಷಕ್ಕೆ ಕಾಲಿಟ್ಟು ತಾತನಾಗಿರುವೆ.
ನನ್ನ ಇಂದಿನ ಮನಸ್ಥಿತಿ ಒಂದೆ, ಯುವ ಜೀವಗಳು ಅವರವರ ಇಷ್ಟದ ಕ್ಷೇತ್ರದಲ್ಲಿ ಬೆಳೆಯಲಿ. ದೇವರು ನನಗೆ ಕೊಟ್ಟ ಅದೃಷ್ಟ ಎಲ್ಲರಿಗೂ ಸಿಕ್ಕು ಬೆಳೆದು ಸಾಧಕರಾಗಲಿ ಎಂಬ ಹಾರೈಕೆ ಮಾಡುವ ಬಯಕೆ. ಹೃದಯದಿಂದ ನನ್ನ ಬೇಡಿಕೆ ದೇವರಲ್ಲಿ ಸರ್ವೆಜನಃಸುಖಿನೋಭವಂತು ಎಂದು.
ಕಾಕತಾಳಿಯ ಎಂಬಂತೆ ನನ್ನ ಬಾಲ್ಯದ ಗೆಳೆಯ ಚಂದ್ರು ಆರಾಧ್ಯ, ಇಂದು ನಮ್ಮ ತೀಟೆಯ ಗುಣದ ಆಗರವಾಗಿದ್ದ ಕಾಲದ ಫೋಟೋ ಕಳಿಸಿದ. ಈತ ಈಗ ಅಮೇರಿಕದಲ್ಲಿ ವಾಸವಿದ್ದಾನೆ. ನನಗಿಂತ 1ವರ್ಷ ಕಿರಿಯ. ಆ ದಿನಗಳು ನಾನು ಆರ್ಕೇಸ್ಟ್ರಾದಲ್ಲಿ ಹಾಡುತ್ತಿದ್ದೆ ಹಾಗು ಮಿಮಿಕ್ರಿ ಮಾಡುತ್ತಿದ್ದೆ. ಒಂದು ಕಾರ್ಯಕ್ರಮಕ್ಕೆ 20ರೂ ಕೊಡುತ್ತಿದ್ದರು. ಆ ಹಣ ಸಂಪೂರ್ಣ ಸಿನಿಮಾ ಮತ್ತು ಗುಂಡಿಗೆ ಸಮಾಪ್ತಿ ಆಗುತ್ತಿತ್ತು. ಯಾವ ಕಾರಣಕ್ಕೂ ಸಿಗದ ಅಂದಿನ ನನ್ನ ಫೋಟೋ ಇಂದು ನೋಡಿ ಅತೀವ ಸಂತೋಷ ನೀಡಿತು. ಮತ್ತೊಂದು ಫೋಟೊ ನಾನು ಹಾಗೂ ಮಧ್ಯದಲ್ಲಿ ಆರಾಧ್ಯ ಮೂರನೆಯವನೆ ದಿವಂಗತ ರವಿ. ಮುಂದೆ ನನಗೆ ಕೆ.ವಿ. ರಾಜು ನಿರ್ದೇಶನದಲ್ಲಿ "ನಿಜ" ಚಿತ್ರ ನಿರ್ಮಾಣ ಮಾಡಿದ್ದ. ಕೇವಲ 50ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಆತ್ಮೀಯ.
ಈ ಫೋಟೊ ನಿನ್ನೆ ಮಾಧ್ಯಮದಲ್ಲಿ ಆಡಿದ ಮಾತಿಗೆ ತಳುಕು ಹಾಕಿ ಗಮನಿಸಿ ನಾ ಹೇಳಿದ 1980ರ ಈಶ, ಈಶ್ವರ, ಜಗ್ಗೇಶ ಹೇಗಿದ್ದ ಹೇಗಾದ ಅರಿವಾಗುತ್ತಾನೆ. ಶ್ರಮಕ್ಕೆ ಪ್ರತಿಭೆಗೆ ಶ್ರದ್ಧೆಗೆ ಖಂಡಿತ ಪ್ರತಿಯೊಬ್ಬ ಮನುಜನಿಗೂ ಅವನದೆ ದಿನವುಂಟು ಬದುಕಲ್ಲಿ. ಆಶಾಭಾವನೆ ಇರಲಿ ಗೆದ್ದೆ ಗೆಲ್ಲುತ್ತೇವೆ ಒಂದುದಿನ ಎಂದು. ಶುಭಹಾರೈಕೆ ಪದವಿಪೂರ್ವ ಚಿತ್ರಕ್ಕೆ" ಎಂದು ಬರೆದುಕೊಂಡಿದ್ದಾರೆ.