ಕಾಂತಾರ ಚಾಪ್ಟರ್-1 ಶೂಟಿಂಗ್ ವೇಳೆ ಜೂನಿಯರ್ ಕಲಾವಿದ ದುರಂತ ಸಾವು; ಪಂಜುರ್ಲಿ ದೈವ ನುಡಿದ ಮಾತು ನಿಜವಾಯ್ತಾ?
ಕಾಂತಾರ ಚಾಪ್ಟರ್ -1 ಶೂಟಿಂಗ್ ಸಮಯದಲ್ಲಿ ಜೂನಿಯರ್ ಕಲಾವಿದನೊಬ್ಬ ಸಾವಿಗೀಡಾಗಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾಗೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದ್ದು, ದೈವ ನುಡಿದಿದ್ದು ನಿಜವಾಗುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಪ್ರಿಕ್ವೆಲ್ (ಕಾಂತಾರ ಚಾಪ್ಟರ್ 1) ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಕಲಾವಿದನೊಬ್ಬ ದುರಂತ ಸಾವು ಕಂಡಿದ್ದಾರೆ. ಮೃತ ದುರ್ದೈವಿಯನ್ನು ಕಪಿಲ್ ಎಂದು ಗುರುತಿಸಲಾಗಿದೆ. ಇವರನ್ನುಕೇರಳ ಮೂಲದವರು ಎಂದು ಹೇಳಲಾಗಿದೆ. ಬಹುನಿರೀಕ್ಷಿತ ಚಿತ್ರದಲ್ಲಿ ಜೂನಿಯರ್ ಕಲಾವಿದ ಅಭಿನಯಿಸುತ್ತಿದ್ದರು ಎನ್ನಲಾಗಿದೆ. ಇಂದು (ಮೇ 6) ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು ಪುಣ್ಯಕ್ಷೇತ್ರದ ಬಳಿಯ ಸೌಪರ್ಣಿಕಾ ನದಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನದಿಯಲ್ಲಿ ಸಂಜೆ ಈಜುವ ದೃಶ್ಯ ಶೂಟ್ ಮಾಡುವಾಗ ಕಲಾವಿದ ಕಪಿಲ್ ಅವರು ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿದ್ದಾರೆ ಎಂದು ವರದಿಯಾಗಿದೆ.
ಚಿತ್ರೀಕರಣದ ಸಮಯದಲ್ಲಿ ಈಜುವ ದೃಶ್ಯಗಳನ್ನು ಸೆರೆ ಹಿಡಿಯುವಾಗ ಕಪಿಲ್ ಹಾಗೂ ಅವರ ತಂಡದವರು ನೀರಿನ ಆಳ ತಿಳಿಯದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಸಂಜೆ 4ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಕಪಿಲ್ ಜೊತೆಗೆ ಹೋಗಿದ್ದ ಕಲಾವಿದರು ಸುರಕ್ಷಿತವಾಗಿ ನದಿಯ ದಡ ಸೇರಿದ ಬೆನ್ನಲ್ಲೇ ಸಮೀಪದ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿಯೂ ಆಗಿಮಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ರಾತ್ರಿ 7ರ ಸುಮಾರಿಗೆ ಕಪಿಲ್ ಮೃತದೇಹವನ್ನು ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ಪ್ರಸ್ತುತ ಕಪಿಲ್ ಮೃತದೇಹವನ್ನು ಬೈಂದೂರಿನ ಸರ್ಕಾರಿ ತಾಲೂಕು ಆಸ್ಪತ್ರೆಯ ಮಾರ್ಚುರಿಯಲ್ಲಿ ಇರಿಸಲಾಗಿದೆ. ಮೇ 7ರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಅವರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ರಿಷಭ್ ಶೆಟ್ಟಿ ಚಿತ್ರಕ್ಕೆ ಸಂಕಷ್ಟಗಳ ಮೇಲೆ ಸಂಕಷ್ಟ
- ಇತ್ತೀಚೆಗೆ ದೈವ ಪಂಜುರ್ಲಿ ನಿನ್ನ ಮುಖ ನೋಡುತ್ತಿದ್ದರೆ ಏನೋ ಕಂಟಕ ಇದೆ ಎಂದು ತಿಳಿಯುತ್ತಿದೆ. ಆದರೆ ಧೃತಿಗೆಡಬೇಡ. ನಿನ್ನ ಸಂಸಾರ (ಚಿತ್ರ ತಂಡ) ಹಾಳು ಮಾಡಲು ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ನಿನ್ನ ಜೊತೆಗಿದ್ದವರೇ ಕೇಡು ಬಯಸುತ್ತಿದ್ದಾರೆ ಎಂದು ಭವಿಷ್ಯ ನುಡಿದಿತ್ತು. ದೈವ ನುಡಿದ ಸರಿಯಾಗಿ ಒಂದು ತಿಂಗಳ ನಂತರ ಈ ದುರಂತ ಸಂಭವಿಸಿರುವುದು ಅಚ್ಚರಿ ಮೂಡಿಸಿದೆ.
- ಶೂಟಿಂಗ್ ಆರಂಭಿಸುವುದಕ್ಕೂ ಮುನ್ನ ರಿಷಬ್ಗೆ ಶೆಟ್ಟಿ ಪಂಜುರ್ಲಿ ದೈವದ ಬಳಿಕ ಅಪ್ಪಣೆ ಕೇಳಿದ್ದರು. ಆಗ ತಮ್ಮ ಆರಾಧ್ಯ ದೈವ ರಿಷಬ್ಗೆ ಎಚ್ಚರಿಕೆ ನೀಡಿತ್ತು. ಶೂಟಿಂಗ್ ಸುಲಲಿತವಾಗಿ ಸಾಗುವುದಿಲ್ಲ. ಹಲವು ಸಂಕಷ್ಟಗಳು ಎದುರಾಗುತ್ತವೆ ಎಂದು ಕಾಂತಾರಾ ಚಾಪ್ಟರ್-1 ಶೂಟಿಂಗ್ ಆರಂಭಕ್ಕೂ ಮುನ್ನವೇ ಸೂಚಿಸಿತ್ತು.
- ಕಾಂತಾರಾ ಚಾಪ್ಟರ್-1 ಚಿತ್ರ ತಂಡದ ಕಲಾವಿದರಿದ್ದ ಬಸ್ ಈ ಹಿಂದೆ ಬಸ್ ಪಲ್ಟಿ ಆಗಿತ್ತು. ಜೂನಿಯರ್ ಕಲಾವಿದರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.
- ಕೊಲ್ಲೂರಿನಲ್ಲಿ ಹಾಕಲಾಗಿದ್ದ ಚಿತ್ರದ ಸೆಟ್ ಗಾಳಿಗೆ ಹಾರಿ ಹೋಗಿತ್ತು. ಇದರಿಂದ ಬಂಡವಾಳ ಹೂಡುತ್ತಿರುವ ಹೊಂಬಾಳೆ ಫಿಲ್ಮ್ಸ್ಗೆ ಲಕ್ಷಾಂತರ ನಷ್ಟವಾಗಿತ್ತು.
- ಇದೇ ವರ್ಷ ಜನವರಿ 3ರಂದು ಸಕಲೇಶಪುರದ ಹೆರೂರು ಗ್ರಾಮದಲ್ಲಿ ಕಾಂತಾರಾ ಶೂಟಿಂಗ್ ನಡೆಸುವ ಅವಧಿಯಲ್ಲಿ ಪಟಾಕಿ-ಸ್ಫೋಟಕಗಳನ್ನು ಸಿಡಿಸಿದ್ದರು ಎನ್ನುವ ಆರೋಪಕ್ಕೆ ಗುರಿಯಾಗಿತ್ತು. ಇದರಿಂದ ಕಾಡಿನಂಚಿನಲ್ಲಿರುವ ಹೇರೂರು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು.
- ಈ ದೂರಿನನ್ವಯ ಅರಣ್ಯಾಧಿಕಾರಿಗಳು ಚಿತ್ರ ತಂಡಕ್ಕೆ ಎಚ್ಚರಿಕೆ ನೀಡಿದ್ದರು. ವನ್ಯಜೀವಿಗಳು ಅಥವಾ ಅರಣ್ಯ ಸಂಪತ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಚಿತ್ರೀಕರಣ ನಿಲ್ಲಿಸುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದರು.
ಇದನ್ನೂ ಓದಿ: ಇದು 115 ಮಂದಿ ನಿರ್ಮಿಸಿದ ತೆಲುಗು ರೊಮ್ಯಾಂಟಿಕ್ ಥ್ರಿಲ್ಲರ್; 2 ಒಟಿಟಿಯಲ್ಲಿ ಸ್ಟ್ರೀಮಿಂಗ್, 7.6 ಐಎಂಡಿಬಿ ರೇಟಿಂಗ್!