ಶಿವರಾಜ್‌ ಕುಮಾರ್‌ಗೆ ತೆಗೆದಿಟ್ಟ ಕೊರಗಜ್ಜನ ಪ್ರಸಾದ ಇಳಾ ವಿಟ್ಲ ಪಾಲು; ಮೂರನೇ ಚಕ್ಕುಲಿ ತಿಂದಾಗಲೇ ಪವಾಡ ತೋರಿಸಿದ ಅಜ್ಜ
ಕನ್ನಡ ಸುದ್ದಿ  /  ಮನರಂಜನೆ  /  ಶಿವರಾಜ್‌ ಕುಮಾರ್‌ಗೆ ತೆಗೆದಿಟ್ಟ ಕೊರಗಜ್ಜನ ಪ್ರಸಾದ ಇಳಾ ವಿಟ್ಲ ಪಾಲು; ಮೂರನೇ ಚಕ್ಕುಲಿ ತಿಂದಾಗಲೇ ಪವಾಡ ತೋರಿಸಿದ ಅಜ್ಜ

ಶಿವರಾಜ್‌ ಕುಮಾರ್‌ಗೆ ತೆಗೆದಿಟ್ಟ ಕೊರಗಜ್ಜನ ಪ್ರಸಾದ ಇಳಾ ವಿಟ್ಲ ಪಾಲು; ಮೂರನೇ ಚಕ್ಕುಲಿ ತಿಂದಾಗಲೇ ಪವಾಡ ತೋರಿಸಿದ ಅಜ್ಜ

ನಟಿ ಇಳಾ ವಿಟ್ಲ ಇತ್ತೀಚೆಗೆ ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕುಡ್ಲದಕ್ಲು(ಅರ್ಥ: ಮಂಗಳೂರಿನವರು) ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಮಯದಲ್ಲಿ ಶಿವರಾಜ್‌ ಕುಮಾರ್‌ಗೆ ತೆಗೆದಿಟ್ಟ ಪ್ರಸಾದವನ್ನು ಆತ್ಮೀಯರೊಬ್ಬರು ತನಗೆ ನೀಡಿದ್ದ ಸಂದರ್ಭವನ್ನೂ ಹೇಳಿದ್ದಾರೆ.

ಶಿವರಾಜ್‌ ಕುಮಾರ್‌ಗೆ ತೆಗೆದಿಟ್ಟ ಕೊರಗಜ್ಜನ ಪ್ರಸಾದ ತಿಂದ ಇಳಾ ವಿಟ್ಲ
ಶಿವರಾಜ್‌ ಕುಮಾರ್‌ಗೆ ತೆಗೆದಿಟ್ಟ ಕೊರಗಜ್ಜನ ಪ್ರಸಾದ ತಿಂದ ಇಳಾ ವಿಟ್ಲ (Photo Credit: Ila Vitla instagram and swami_koragajja_kuthar instagram page)

ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿ ಇಳಾ ವಿಟ್ಲ ಇತ್ತೀಚೆಗೆ ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕುಡ್ಲದಕ್ಲು(ಅರ್ಥ: ಮಂಗಳೂರಿನವರು) ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಮಯದಲ್ಲಿ ಕೊರಗಜ್ಜನ ಮಹಿಮೆಯ ಕುರಿತೂ ನಟಿ ಮಾತನಾಡಿದ್ದಾರೆ. ವಿಟ್ಲದವರಾದರೂ ಇಳಾ ಅವರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಂತೆ. "ನಾನು ಊರಿಗೆ ಸಾಕಷ್ಟು ಬಾರಿ ಬಂದಾಗಲೂ ಇಲ್ಲಿಗೆ ಬರಲು ಆಗಲಿಲ್ಲ. ಇಂದು ಯೋಗ ಬಂತು, ಅಜ್ಜ ಕರೆದರು. ಬಂದೆ. ಮಂಗಳೂರಿನಲ್ಲಿ ಒಂದಿಷ್ಟು ಕೆಲಸಗಳಿದ್ದವು. ಈ ಬಾರಿ ಕೊರಗಜ್ಜನ ಬಳಿಗೆ ಬರಲೇಬೇಕೆಂದು ಒಂದು ವಾರದಿಂದ ಅಂದುಕೊಂಡಿದ್ದೆ. ಈಗ ಇಲ್ಲಿಗೆ ಬರುವ ಅವಕಾಶ ದೊರಕಿತು" ಎಂದು ಇಳಾ ಹೇಳಿದ್ದಾರೆ.

ಕೊರಗಜ್ಜನ ಕಾರ್ಣಿಕದ ಕುರಿತು ನಂಬಿಕೆ

"ನಾನು ಹುಟ್ಟಿದ್ದು ಅಡ್ಯಾರಿನಲ್ಲಿ. ದೊಡ್ಡಪ್ಪನ ಮನೆಯಲ್ಲಿ ಭೂತಕೋಲ ಇರುತ್ತಿತ್ತು. ಹೀಗಾಗಿ ದೈವಗಳ ಬಗ್ಗೆ ನನಗೆ ಬಾಲ್ಯದಿಂದಲೇ ಗೊತ್ತು. ಕೊರಗಜ್ಜನ ಬಗ್ಗೆ ನನಗೆ ಸಾಕಷ್ಟು ಅನುಭವವಾಗಿತ್ತು. ಅಜ್ಜನ ಕಾರ್ಣಿಕದ ಬಗ್ಗೆ ನನಗೆ ಸಾಕಷ್ಟು ನಂಬಿಕೆ ಇದೆ" ಎಂದರು.

ನಿಮಗೂ ಕೊರಗಜ್ಜನ ಕಾರಣಿಕದ ಅನುಭವವಾಗಿರುವುದೇ ಎಂಬ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ. "ನಾನು ಕೊರಗಜ್ಜನಿಗೆ ಹರಕೆ ಹೇಳುತ್ತಿರಲಿಲ್ಲ. ಸ್ವಾಮಿ ಕೊರಗಜ್ಜನ ಕಥೆ ಕೇಳಿದ್ದೆ. ಅದನ್ನು ಕೇಳುವಾಗ ನನಗೆ ಅನಿಸಿತ್ತು, ಎಷ್ಟೊಂದು ಕಷ್ಟಪಟ್ಟಿದ್ರು ಅಂತ. ಅವರು ಕೊನೆಗೆ ಮಾಯವಾಗಿ ಹೋಗಿದ್ದು, ಅವರ ಪವಾಡದ ಕಥೆಗಳೆಲ್ಲ ಕೇಳಿದ್ದೆ. ನನಗೆ ಅವರ ಕಥೆ ಹೇಳಿದಾಗ ಪಾಪ ಎಷ್ಟು ಕಷ್ಟ ಪಟ್ಟಿದ್ರು ಅನಿಸ್ತು. ಹೀಗಾಗಿ ಅವರ ಜತೆ ಯಾವುದೇ ಹರಕೆ ಕೇಳುತ್ತಿರಲಿಲ್ಲ" ಎಂದರು.

ಕೊರಗಜ್ಜನ ಪವಾಡಗಳು

"ವಸಂತ ರುಕ್ಮಿಣಿ ಶೂಟಿಂಗ್‌ ನಡೆಯುತ್ತಿತ್ತು. ಆಗ ನನ್ನ ಹೊಸ ಮೊಬೈಲ್‌ ಕಳ್ಳತನವಾಯಿತು. ಅದನ್ನು ತೆಗೆದುಕೊಂಡು ಒಂದು ವಾರವಾಗಿತ್ತು. ಅದರ ಇಎಂಐ ಕಟ್ಟಲು ಆರಂಭಿಸಿರಲಿಲ್ಲ. ಆಗ ನನ್ನ ಗೆಳತಿ ಹೇಳಿದ್ಲು ಕೊರಗಜ್ಜನಿಗೆ ಹರಕೆ ಹೇಳು ಸಿಗುತ್ತೆ ಅಂತ. ಅದಕ್ಕೆ ನಾನು "ಅಯ್ಯೋ ಮೊಬೈಲ್‌ ಯಾರೋ ಕದ್ರೆ ಕೊರಗಜ್ಜ ಹೇಗೆ ಕೊಡ್ತಾನೆ" ಅಂದೆ. ನಿಮಗೆ ಪವಾಡದ ಮೂಲಕ ಖಂಡಿತಾ ದೊರಕುತ್ತದೆ ಎಂದು ಆಕೆ ಹೇಳಿದ್ರು. ನಾನು ಹರಕೆ ಹೊತ್ತೆ. ಆಮೇಲೆ ಹಳೇಬೀಡು ಸ್ಟೇಷನ್‌ನಲ್ಲಿ ಕಂಪ್ಲೇಂಟ್‌ ನೀಡಿ ನಾನು ಬಂದೆ. ಒಂದು ಇಎಂಐ ಕಟ್ಟಿದ್ದಷ್ಟೇ ನನಗೆ ಹಳೇಬೀಡು ಸ್ಟೇಷನ್‌ನಿಂದ ಕಾಲ್‌ ಬಂತು, ಫೋನ್‌ ಸಿಗ್ತು ಅಂತ. ನನಗೆ ನಂಬಲು ಸಾಧ್ಯವೇ ಆಗಲಿಲ್ಲ" ಎಂದು ಇಳಾ ವಿಟ್ಲಾ ಕೊರಗಜ್ಜನ ಪವಾಡವನ್ನು ನೆನಪಿಸಿಕೊಂಡಿದ್ದಾರೆ.

“ಇನ್ನೊಮ್ಮೆ ನನಗೆ ವಿಪರೀತ ಕಾಲು ನೋವು. ನನ್ನ ದೇಹದಲ್ಲಿ ನೆಗೆಟಿವ್‌ ಎನರ್ಜಿ ಏನೋ ಇತ್ತು. ಆಗ ನನಗೆ ನನ್ನ ಫ್ರೆಂಡ್‌ ಸಿನಿಮಾ ಪತ್ರಕರ್ತ ಶಶಿಕರ ಪಾತೂರು ಪ್ರಸಾದ ತಂದುಕೊಟ್ಟರು. ಶಿವರಾಜ್‌ ಕುಮಾರ್‌ ಅವರ ಆರೋಗ್ಯಕ್ಕಾಗಿ ಅವರು ಕೊರಗಜ್ಜನಿಗೆ ಹರಕೆ ಹೊತ್ತಿದ್ದರು. ಶಿವಣ್ಣನ ಆರೋಗ್ಯ ಸುಧಾರಿಸಿದ ಬಳಿಕ ಕೊರಗಜ್ಜನ ಬಳಿಗೆ ಬಂದು ಪ್ರಸಾದ ಪಡೆದಿದ್ದರು. ಆ ಪ್ರಸಾದವನ್ನು ಶಿವರಾಜ್‌ ಕುಮಾರ್‌ಗೆ ಅವರು ನೀಡಬೇಕಿತ್ತು. ಆದರೆ, ನೀಡಲು ಸಾಧ್ಯವಾಗಿರಲಿಲ್ಲ.”

ಚಿಕಿತ್ಸೆಗೆ ತೆರಳುವ ಮೊದಲು ಶಿವಣ್ಣನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದ ಸಿನಿಮಾ ಪತ್ರಕರ್ತ ಶಶಿಕರ ಪಾತೂರು
ಚಿಕಿತ್ಸೆಗೆ ತೆರಳುವ ಮೊದಲು ಶಿವಣ್ಣನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದ ಸಿನಿಮಾ ಪತ್ರಕರ್ತ ಶಶಿಕರ ಪಾತೂರು

"ಯಾರಿಗೆ ಕೊಡೋಣ ಎಂದು ಯೋಚನೆ ಮಾಡುವಾಗ ಅವರಿಗೆ ಅವರದೇ ಏರಿಯಾದಲ್ಲಿರುವ ನನ್ನ ನೆನಪಾಗಿದೆ. ನನಗೆ ಕಾಲ್‌ ಮಾಡಿದ್ರು. ನನಗೆ ಖುಷಿ ಆಯಿತು. ಪ್ರಸಾದ ನನ್ನ ಬಳಿಗೆ ಬಂತಾ ಎಂದು. ಎರಡು ತಿಂಗಳಿನಿಂದ ನನಗೆ ಕಾಲು ನೋವು ವಿಪರೀತ ಇತ್ತು. ವರ್ಕೌಟ್‌ ಮಾಡಲು ಆಗುತ್ತಿರಲಿಲ್ಲ. ಕಾಲು ಹಿಡಿದಂತೆ ನೋವಾಗುತ್ತಿತ್ತು. ಅವರು ಪ್ರಸಾದ ನೀಡಿದ್ದರು. ಚಕ್ಕುಲಿ ತಿನ್ನುತ್ತಿದ್ದೆ. ಮೂರನೇ ಚಕ್ಕುಲಿ ತಿಂದೆ ಅಷ್ಟೇ.... ಕಾಲಲ್ಲಿ ಏನೋ ಬದಲಾವಣೆ... ನೋವು ಗುಣವಾಗಿತ್ತು. ಕಣ್ಣೀರು ಬಂತು. ಪ್ರಸಾದ ಕೊಟ್ಟವರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡೆ" ಎಂದು ಕೊರಗಜ್ಜನ ಪವಾಡ ನೆನಪಿಸಿಕೊಂಡು ಭಾವುಕರಾದರು.

ಮೇ 9ರಂದು ಪಿದಾಯಿ ಸಿನಿಮಾ ಬಿಡುಗಡೆ

ನಟಿ ಇಳಾ ವಿಟ್ಲ ನಟಿಸಿರುವ ಪಿದಾಯಿ ಸಿನಿಮಾ ಮೇ 9ರಂದು ಬಿಡುಗಡೆಯಾಗಲಿದೆ. ಕನಸು ಬ್ಯಾನರ್‌ನಲ್ಲಿ ಕೆ. ಸುರೇಶ್‌ ನಿರ್ಮಿಸಿರುವ, ರಮೇಶ್‌ ಶೆಟ್ಟಿಗಾರ್‌ ನಿರ್ದೇಶನದ ಈ ಸಿನಿಮಾ ಈಗಾಗಲೇ ಬೆಂಗಳೂರು ಸಿನಿಮೋತ್ಸವ, ಕೊಲ್ಕತ್ತಾ, ಸಿಮ್ಲಾ, ಕ್ಯಾಲಿಫೋರ್ನಿಯಾ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ಕೃಪೆ: ಕುಡ್ಲದಕ್ಲು ಯೂಟ್ಯೂಬ್‌ ಚಾನೆಲ್‌

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in