ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ವಿರುದ್ಧ ಅಸಹಕಾರ ಚಳವಳಿ; ಫಿಲ್ಮ್ ಚೇಂಬರ್ನಲ್ಲಿ ಕೈಗೊಂಡ ನಿರ್ಣಯಗಳಿವು
ಜನಪ್ರಿಯ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟ ಫಿಲ್ಮ್ ಚೇಂಬರ್ನಲ್ಲಿ ನಡೆದ ಸ್ಯಾಂಡಲ್ವುಡ್ನ ಪ್ರಮುಖ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಬ್ಯಾನ್ ಮಾಡುವ ಕುರಿತೂ ಚರ್ಚಿಸಲಾಗಿದೆ.

ಜನಪ್ರಿಯ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟ ಫಿಲ್ಮ್ ಚೇಂಬರ್ನಲ್ಲಿ ನಡೆದ ಸ್ಯಾಂಡಲ್ವುಡ್ನ ಪ್ರಮುಖ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಬ್ಯಾನ್ ಮಾಡುವ ಕುರಿತೂ ಚರ್ಚಿಸಲಾಗಿದೆ. ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿರುವ ಗಾಯಕ ಕ್ಷಮಾಪಣೆ ಕೇಳಬೇಕು. ಕ್ಷಮಾಪಣೆ ಕೇಳುವ ತನಕ ಕನ್ನಡ ಚಿತ್ರರಂಗದಿಂದ ದೂರವಿಡಲು ನಿರ್ಧರಿಸಲಾಗಿದೆ. ಒಟ್ಟಾರೆ ಸೋನು ನಿಗಮ್ ವಿರುದ್ದ ಅಸಹಕಾರ ಚಳವಳಿಗೆ ಕನ್ನಡ ಚಿತ್ರರಂಗ ನಿರ್ಧರಿಸಿದೆ.
ಇಂದು ಮಧ್ಯಾಹ್ನ 1 ಗಂಟೆ ಆಸುಪಾಸಿನಲ್ಲಿ ಬೆಂಗಳೂರಿನ ಫಿಲ್ಮ್ ಚೇಂಬರ್ನಲ್ಲಿ ಪ್ರಮುಖ ಗಾಯಕರನ್ನು ಒಳಗೊಂಡ ಪ್ರಮುಖರ ಸಭೆ ನಡೆದಿದೆ. ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ "ಸೋನು ನಿಗಮ್ಗೆ ಕನ್ನಡ ಚಿತ್ರರಂಗದಿಂದ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ" ಎಂಬ ಮಾಹಿತಿಯನ್ನು ಫಿಲ್ಮ್ಚೇಂಬರ್ ನೀಡಿದೆ.
"ಗಾಯಕ ಸೋನು ನಿಗಮ್ ಅವರು ಕನ್ನಡ ಮತ್ತು ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಕ್ಷಮೆ ಕೇಳುತ್ತಾರೆ ಎಂದು ಕೊಂಡಿದ್ದೇವು. ಆದರೆ, ಇಲ್ಲಿಯವರೆಗೆ ಸೋನು ನಿಗಮ್ ಕ್ಷಮೆ ಕೇಳಿಲ್ಲ. ಈ ಕ್ಷಣದಿಂದ ನಾವು ಕನ್ನಡ ಚಿತ್ರರಂಗದಿಂದ ದೂರ ಇಡುವಂತಹ ಕೆಲಸವನ್ನು ನಾವು ಮಾಡುತ್ತೇವೆ" ಎಂದು ಸುದ್ದಿಗೋಷ್ಠಿಯಲ್ಲಿ ಫಿಲ್ಮ್ಚೇಂಬ್ ಅಧ್ಯಕ್ಷ ನರಸಿಂಹಲು ಹೇಳಿದ್ದಾರೆ.
ಈ ಸಭೆಯಲ್ಲಿ ಸಂಗೀತ ಸಂಯೋಜಕರ ಸಂಘ, ಕನ್ನಡ ಸಿನಿಮಾ ನಿರ್ದೇಶಕರ ಸಂಘ, ನಿರ್ಮಾಪಕ ಸಂಘದ ಸದಸ್ಯರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಸಂಗೀತ ಸಂಯೋಜಕರ ಪ್ರತಿನಿಧಿಯಾಗಿ ಧರ್ಮವಿಶ್ ಭಾಗಿಯಾಗಿ ಮಾತನಾಡಿದ್ದಾರೆ. "ಈ ಘಟನೆಗೆ ಸಂಬಂಧಪಟ್ಟಂತೆ ಎಲ್ಲಾ ಸಂಗೀತ ನಿರ್ದೇಶಕರ ಜತೆ ನಾವು ಮಾತನಾಡಿದ್ದೇವೆ. ಸೋನು ನಿಗಮ್ ಅವರಿಗೆ ಅಸಹಕಾರ ತೋರುವುದಕ್ಕೆ ನಿರ್ಧಾರ ಮಾಡಿದ್ದೇವೆ. ನಮಗೆ ಆಡಿಯೋ ಕಂಪನಿಗಳೂ ಬೆಂಬಲ ನೀಡಬೇಕು" ಎಂದು ಧರ್ಮವಿಶ್ ಹೇಳಿದ್ದಾರೆ.
ಒಟ್ಟಾರೆ ಸೋನು ನಿಗಮ್ ವಿರುದ್ಧ ತಾತ್ಕಾಲಿಕ ಬ್ಯಾನ್ ಮಾಡಲು ಫಿಲ್ಮ್ಚೇಂಬರ್ ಉದ್ದೇಶಿಸಿದೆ. ನಿಷೇಧದ ಅವಧಿ ಎಷ್ಟು ಎಂದು ಮುಂದಿನ ವಾರ ಇನ್ನೊಮ್ಮೆ ಸಭೆ ಸೇರಿ ನಿರ್ಧರಿಸಲಾಗುವುದು ಎಂದು ಉಮೇಶ್ ಬಣಕಾರ್ ತಿಳಿಸಿದ್ದಾರೆ.
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಇತ್ತೀಚೆಗೆ ಸೋನು ನಿಗಮ್ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಸಂದರ್ಭದಲ್ಲಿ ತನ್ನ ಪ್ಲೇಲಿಸ್ಟ್ನಲ್ಲಿದ್ದ ಒಂದೊಂದು ಹಾಡುಗಳನ್ನು ಬರುತ್ತಿದ್ದರು. ಆ ಸಂದರ್ಭದಲ್ಲಿ ಪ್ರೇಕ್ಷಕರ ನಡುವೆಯಿಂದ "ಕನ್ನಡ... ಕನ್ನಡ... " ಕೂಗು ಕೇಳಿಸಿತ್ತು. ಕನ್ನಡ ಹಾಡುಗಳ ಈ ಕೋರಿಕೆಯ ಕೂಗಿಗೆ ಸೋನು ನಿಗಮ್ ಕೋಪಗೊಂಡಿದ್ದರು. "ಕನ್ನಡ... ಕನ್ನಡ... ಪಹಲ್ಗಾಮ್ ದಾಳಿ ಆಗಿರುವುದು ಇದೇ ಕಾರಣಕ್ಕೆ" ಎಂದು ಹೇಳಿಕೆ ನೀಡಿದ್ದರು. ಈ ಮೂಲಕ ಕನ್ನಡ ಹಾಡಿನ ಕೋರಿಕೆಯನ್ನು ಪೆಹಲ್ಗಾಮ್ ಉಗ್ರ ದಾಳಿಗೆ ಹೋಲಿಸಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಮಾತು ವಿವಾದದ ಸ್ವರೂಪ ಪಡೆಯಬಹುದೆಂದು ಆ ಕಾರ್ಯಕ್ರಮದಲ್ಲಿಯೇ ಸೋನು ನಿಗಮ್ ನನಗೆ ಕನ್ನಡ ಇಷ್ಟವೆಂದು ಹೇಳಿದ್ದರು. "ನನ್ನ ಜೀವನದಲ್ಲಿ ಅತ್ಯುತ್ತಮ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ಕರ್ನಾಟಕದಲ್ಲಿ ಎಲ್ಲಿಯಾದರೂ ಶೋ ನಡೆಸಲು ಇದ್ದರೆ ತುಂಬಾ ಗೌರವದಿಂದ ಬರುವೆ. ಏಕೆಂದರೆ, ನೀವೆಲ್ಲ ನಮ್ಮನ್ನು ನಿಮ್ಮ ಕುಟುಂಬದವರನ್ನಾಗಿ ಮಾಡಿದ್ದೀರಿ. ಅಮೆರಿಕದಲ್ಲಿ ನೂರು ಜನರ ನಡುವೆ ಒಬ್ಬರು ಕನ್ನಡ ಹಾಡು ಕೇಳಿದರೂ ಹಾಡುವೆ" ಎಂದೆಲ್ಲ ಹೇಳಿದ್ದರು. ಇತ್ತೀಚೆಗೆ ವಿಡಿಯೋವೊಂದರಲ್ಲಿ ಆ ಕಾರ್ಯಕ್ರಮದಲ್ಲಿ ನಾಲ್ಕು ಜನರು ಗೂಂಡಾಗಳು ಕನ್ನಡ ಕನ್ನಡ ಎಂದು ಬೆದರಿಸಿದ್ದರಿಂದ ಆ ರೀತಿಯ ಪ್ರತಿಕ್ರಿಯೆ ನೀಡಬೇಕಾಯಿತು ಎಂದು ಹೇಳಿದ್ದರು.