ನಾನು ನಿರ್ದೇಶಕರ ನಟ, ಅವರ ದೃಷ್ಟಿಕೋನ ಅರಿತು ಪಾತ್ರಕ್ಕೆ ಜೀವ ತುಂಬುವೆ; ಬಘೀರ ನಾಯಕ ಶ್ರೀಮುರಳಿ ಮನದ ಮಾತು
ಕನ್ನಡ ಸುದ್ದಿ  /  ಮನರಂಜನೆ  /  ನಾನು ನಿರ್ದೇಶಕರ ನಟ, ಅವರ ದೃಷ್ಟಿಕೋನ ಅರಿತು ಪಾತ್ರಕ್ಕೆ ಜೀವ ತುಂಬುವೆ; ಬಘೀರ ನಾಯಕ ಶ್ರೀಮುರಳಿ ಮನದ ಮಾತು

ನಾನು ನಿರ್ದೇಶಕರ ನಟ, ಅವರ ದೃಷ್ಟಿಕೋನ ಅರಿತು ಪಾತ್ರಕ್ಕೆ ಜೀವ ತುಂಬುವೆ; ಬಘೀರ ನಾಯಕ ಶ್ರೀಮುರಳಿ ಮನದ ಮಾತು

ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಬಘೀರ ನಾಳೆ (ಅಕ್ಟೋಬರ್‌ 31) ತೆರೆ ಕಾಣುತ್ತಿದೆ. ಈ ಸಿನಿಮಾ ಪ್ರಶಾಂತ್ ನೀಲ್‌ ಹಾಗೂ ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದ್ದು, ನಿರೀಕ್ಷೆ ಕೊಂಚ ಹೆಚ್ಚೇ ಇದೆ. ನಾಯಕನಾಗಿ ಶ್ರೀಮುರಳಿ ಸಿನಿಮಾ ಬಗ್ಗೆ ಏನೆಲ್ಲಾ ನಿರೀಕ್ಷೆ ಇರಿಸಿಕೊಂಡಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲಿ ಕೇಳಿ.

ಬಘೀರ ನಾಯಕ ಶ್ರೀಮುರಳಿ ಸಂದರ್ಶನ
ಬಘೀರ ನಾಯಕ ಶ್ರೀಮುರಳಿ ಸಂದರ್ಶನ

ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಬಘೀರ ನಾಳೆ (ಅಕ್ಟೋಬರ್ 31) ತೆರೆ ಮೇಲೆ ಘರ್ಜಿಸಲಿದ್ದಾನೆ. ರೋರಿಂಗ್‌ಸ್ಟಾರ್‌ ಮುರಳಿ ಅಭಿನಯದ ಈ ಸಿನಿಮಾಕ್ಕೆ ಡಾ ಸೂರಿ ನಿರ್ದೇಶನವಿದೆ. ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಪ್ರಶಾಂತ್ ನೀಲ್ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಮುರಳಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ.

ಡಾ ಸೂರಿ ಕನ್ನಡಿಗರಿಗೆ ಹೊಸಬರೇನಲ್ಲ. 2012ರಲ್ಲಿ ತೆರೆ ಕಂಡ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಲಕ್ಕಿ‘ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಇದೇ ಡಾ ಸೂರಿ. ಬಘೀರ ಸಿನಿಮಾದಲ್ಲಿ ಮುರಳಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೇಲರ್‌ ಕೂಡ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವುದು ಮಾತ್ರವಲ್ಲ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಉಗ್ರಂ ಬಳಿಕ ಶ್ರೀಮುರಳಿ ಹಾಗೂ ಪ್ರಶಾಂತ್ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಬಗ್ಗೆ ನಾಯಕ ಮುರಳಿ ಆಡಿರುವ ಮಾತುಗಳು ಇಲ್ಲಿವೆ.

ಮಕ್ಕಳಿಗೂ ಇಷ್ಟವಾಗುವ ಸೂಪರ್‌ ಹೀರೊ ಪರಿಕಲ್ಪನೆಯ ಚಿತ್ರ

‘ಬಘೀರಾ ಪಾತ್ರವು ಸೂಪರ್ ಹೀರೊ ರೀತಿಯದ್ದು. ಇದರಲ್ಲಿ ಬಘೀರನ ಕೈಯಲ್ಲಿ ಸೂಪರ್‌ ಕೂಲ್ ಗ್ಯಾಜೆಟ್‌ಗಳು, ಆಯುಧಗಳಿರುತ್ತವೆ. ಮಕ್ಕಳು ಕೂಡ ಈ ಸಿನಿಮಾವನ್ನು ಇಷ್ಟಪಡುತ್ತಾರೆ. ಇದು ಕೆಟ್ಟದರ ಮೇಲೆ ಒಳ್ಳೆತನದ ಗೆಲುವು ಎಂಬ ಥೀಮ್ ಇಟ್ಟುಕೊಂಡಿರುವ ಸಿನಿಮಾವಾಗಿದೆ. ಆದರೆ ಒಳ್ಳೆಯತನ ಗೆಲ್ಲಬೇಕು ಅಂದ್ರೆ ಒಳ್ಳೆಯವರು ಕೆಟ್ಟವರಾಗಬೇಕಾ ಎಂಬುದಕ್ಕೆ ಈ ಚಿತ್ರದಲ್ಲಿ ಉತ್ತರವಿದೆ‘ ಎಂದು ಸಿನಿಮಾದ ಸಾರವನ್ನು ಬಿಟ್ಟುಕೊಡದೇ ಹೈಲೈಟ್ಸ್‌ ವಿವರಿಸಿದ್ದಾರೆ ರೋರಿಂಗ್ ಸ್ಟಾರ್‌. ‘ಯಾವಾಗ ಸಮಾಜವು ಕಾಡಿನಂತಾಗುವುದೋ ಆಗ ಒಬ್ಬ ನ್ಯಾಯಕ್ಕಾಗಿ ಘರ್ಜಿಸುತ್ತಾನೆ‘ ಎಂಬ ಡೈಲಾಗ್ ಕೂಡ ಹೇಳಲು ಮರೆಯುವುದಿಲ್ಲ ಶ್ರೀಮುರಳಿ.

ನಾನು ನಿರ್ದೇಶಕರ ನಟ

ಉಗ್ರಂ, ಮಫ್ತಿ, ರಥಾವರದಂತಹ ಆ್ಯಕ್ಷನ್‌ ಸಿನಿಮಾಗಳಲ್ಲಿ ಮಿಂಚಿರುವ ಶ್ರೀಮುರಳಿ ನಾನು ನಿರ್ದೇಶಕರ ನಟ ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುತ್ತಾರೆ. ‘ನಾನು ಸ್ಕ್ರಿಪ್ಟ್ ಕೇಳುತ್ತೇನೆ. ನನ್ನ ಪಾತ್ರವನ್ನು ಪರಿಶೀಲನೆ ಮಾಡುತ್ತೇನೆ. ನಂತರ ವಿವರವಾಗಿ ಪಾತ್ರವನ್ನು ಅಧ್ಯಯನ ಮಾಡುತ್ತೇನೆ. ಕೊನೆಯಲ್ಲಿ ನಿರ್ದೇಶಕರ ಜೊತೆ ವರ್ಕ್‌ಶಾಪ್ ನಡೆಸುತ್ತೇನೆ‘ ಎಂದು ಮುರಳಿ ಡೆಕ್ಕನ್ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ನನ್ನ ಪಾತ್ರದ ಬಗ್ಗೆ ನಿರ್ದೇಶಕರ ಗ್ರಹಿಕೆ ಹೇಗಿದೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತೇನೆ. ನಂತರ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ. ನಾನು ಪಾತ್ರದೊಂದಿಗೆ ಚರ್ಚಿಸುತ್ತೇನೆ. ನನ್ನೊಳಗಿನ ಕಲಾವಿದನ ಮಾತು ಕೇಳುತ್ತೇನೆ, ಕಲಿಯುತ್ತೇನೆ ಹಾಗೂ ಇನ್ನೂ ಚೆನ್ನಾಗಿ ಮಾಡುವುದು ಹೇಗೆ ಎಂದು ಪ್ರಯತ್ನ ಮಾಡುತ್ತೇನೆ‘ ಎಂದು ಮುರಳಿ ಸಂದರ್ಶನದಲ್ಲಿ ತಾವು ಪಾತ್ರಕ್ಕೆ ತಯಾರಾಗುವ ರೀತಿಯನ್ನು ಬಿಚ್ಚಿಟ್ಟಿದ್ದಾರೆ.

ಉಗ್ರಂ ಹೃದಯಕ್ಕೆ ಹತ್ತಿರವಾದ ಸಿನಿಮಾ

ಆ್ಯಕ್ಷನ್ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮುರಳಿ ಉಗ್ರಂನಲ್ಲೂ ರಗಡ್ ಆಗಿಯೇ ಕಾಣಿಸಿಕೊಂಡಿದ್ದರು. ದಶಕಗಳ ಹಿಂದೆ ಬಿಡುಗಡೆಯಾದ ಉಗ್ರಂ ಕನ್ನಡದ ಸೂಪರ್‌ಹಿಟ್‌ ಸಿನಿಮಾಗಳ ಸಾಲಿಗೆ ಸೇರಿತ್ತು. ಈ ಸಿನಿಮಾ ಬಗ್ಗೆ ಮಾತನಾಡುವ ಮುರಳಿ ‘ಉಗ್ರಂ ನನಗೆ ಆಶೀರ್ವಾದ ರೂಪದಲ್ಲಿ ಸಿಕ್ಕಿದ ಸಿನಿಮಾವಾಗಿದೆ. ನನ್ನ ಪಾಲಿಗೆ ಅದೊಂದು ಗೇಮ್ ಚೇಂಜರ್ ಆಗಿತ್ತು. ಆ ಸಿನಿಮಾ ಇನ್ನೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಈ ಚಿತ್ರದ ಕಾರಣದಿಂದ ನಾನು ಈಗಲೂ ಸಾಕಷ್ಟು ಮೆಚ್ಚುಗೆ, ಪ್ರೀತಿಯನ್ನ ಗಳಿಸುತ್ತಿದ್ದೇನೆ. ನನಗೆ ಮತ್ತೆ ಮತ್ತೆ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುವ ಆಸೆ ಇದೆ. ‘ಯಾವಾಗ ಸಾಧ್ಯವೋ, ಯಾವಾಗ ಸಮಯು ಕೂಡಿ ಬರುವುದೋ ಆಗೆಲ್ಲಾ ನಾವು ಜೊತೆಯಾಗಿ ಸಿನಿಮಾ ಮಾಡುತ್ತೇವೆ ಎಂದು ಮುರುಳಿ ಪ್ರಶಾಂತ್ ನೀಲ್ ಬಗ್ಗೆ ಪ್ರೀತಿ, ಅಭಿಮಾನದಿಂದ ಹೇಳುತ್ತಾರೆ. ಈ ಕಥೆಯ ಸಂಪೂರ್ಣ ಕ್ರೆಡಿಟ್ ಪ್ರಶಾಂತ್‌ ನೀಲ್‌ಗೆ ಸಲ್ಲಬೇಕು ಎಂದು ಮುರಳಿ ಹೇಳಿದ್ದಾರೆ.

‘ಸಪ್ತಸಾಗರದಾಚೆ ಎಲ್ಲೋ‘ ಸಿನಿಮಾದಲ್ಲಿ ಸಹಜ ಅಭಿನಯ ನೀಡುವ ಮೂಲಕ ಪ್ರೇಕ್ಷಕರಿಗೆ ಇಷ್ಟವಾದ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರುಕ್ಷಿಣಿ ಬಗ್ಗೆ ಮಾತನಾಡಿರುವ ಶ್ರೀಮುರಳಿ ‘ರುಕ್ಮಿಣಿ ಅದ್ಭುತ ನಟಿ ಮತ್ತು ಅವರು ಸಾಕಷ್ಟು ಸಹಜವಾಗಿ ನಟಿಸುತ್ತಾರೆ. ಅವರ ಸಹಜ ನಟನೆ ನನಗೆ ಇಷ್ಟವಾಯ್ತು‘ ಎಂದು ರು‌ಕ್ಮಿಣಿ ನಟನೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನ ಹೇಳಿದ್ದಾರೆ ಶ್ರೀಮುರಳಿ.

ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಸುಧಾ ರಾಣಿ ಮತ್ತು ರಂಗಾಯಣ ರಘು ಮೊದಲಾದವರು ಬಘೀರ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಘೀರ ಎನ್ನುವುದು ಜಂಗಲ್‌ ಬುಕ್‌ನಲ್ಲಿ ಚಿರತೆಯ ಹೆಸರೂ ಆಗಿದೆ. ಬಿ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ‘ಕಬ್ಜಾ’ ಚಿತ್ರದ ಛಾಯಾಗ್ರಾಹಕ ಎ ಜೆ ಶೆಟ್ಟಿ ಬಘೀರಕ್ಕೆ ಸಿನಿಮಾಟೊಗ್ರಫಿ ಮಾಡಿದ್ದಾರೆ.