Kannada Serial TRP: ‘ಸೀತಾ ರಾಮ’ ಸೀರಿಯಲ್ಗೆ ಕುದುರಿತು ಲಕ್, ‘ಶ್ರಾವಣಿ ಸುಬ್ರಮಣ್ಯ’ನ ಕೈ ಹಿಡಿದ ವೀಕ್ಷಕ, ಹಾಗಾದ್ರೆ ನಂ1 ಪಟ್ಟ ಯಾರಿಗೆ?
ಈ ವಾರದ ಟಾಪ್ ಐದು ಕನ್ನಡ ಸೀರಿಯಲ್ಗಳಾವವು? ಯಾವ ಧಾರಾವಾಹಿಗೆ ಅತಿ ಹೆಚ್ಚು ಟಿಆರ್ಪಿ ಸಿಕ್ಕಿದೆ? ಇಲ್ಲಿದೆ ವಿವರ.

Kannada Serial TRP: ವಾರವಿಡೀ ಪ್ರಸಾರ ಕಾಣುವ ಸೀರಿಯಲ್ಗಳ ಪೈಕಿ ಮೊದಲ ಸ್ಥಾನದಲ್ಲಿರುವ ಧಾರಾವಾಹಿ ಯಾವುದು? ಇದಕ್ಕೆ ಉತ್ತರ ನೀಡಲು ಟಿಆರ್ಪಿ ಪಟ್ಟಿ ಹೊರಬಿದ್ದಿದೆ. ಕಳೆದ ವಾರ ಸಮಬಲ ಸಾಧಿಸಿದ್ದ ಲಕ್ಷ್ಮೀ ನಿವಾಸ ಮತ್ತು ಪುಟ್ಟಕ್ಕನ ಮಕ್ಕಳು ಸೀರಿಯಲ್ಗಳ ಪೈಕಿ ಲಕ್ಷ್ಮೀ ನಿವಾಸ ಈ ವಾರ ಮುಂದಡಿ ಇರಿಸಿದೆ. ಇತ್ತ ಹೊಸ ಸೀರಿಯಲ್ ಸಹ ಟಾಪ್ ಐದರಲ್ಲಿ ಸ್ಥಾನ ಪಡೆದಿದೆ.
ಲಕ್ಷ್ಮೀ ನಿವಾಸ
ಜೀ ಕನ್ನಡದಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದ ಹೊಸ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸವೂ ಒಂದು. ಮಧ್ಯಮ ವರ್ಗದ ಕುಟುಂಬದ ಏಳು ಬೀಳು, ಕನಸುಗಳ ಹಿಂದೆ ಸಾಗುವ ಈ ಕಥೆಯೀಗ, ಹಲವು ಕವಲುಗಳಾಗಿ ನೋಡುಗರ ಎದೆಗಿಳಿದಿದೆ. ಜಯಂತ್ ಜಾಹ್ನವಿಯ ಬದುಕು ಬಂದೆಡೆಯಾದರೆ, ಭಾವನಾ, ಸಿದ್ದೇಗೌಡ ಜೋಡಿಯ ಕೆಮಿಸ್ಟ್ರಿಯೂ ನೋಡುಗರ ಮೆಚ್ಚುಗೆ ಪಡೆದಿದೆ. ಕಳೆದ ವಾರ ಮೊದಲ ಸ್ಥಾನವನ್ನು ಸಮವಾಗಿ ಹಂಚಿಕೊಂಡಿದ್ದ ಲಕ್ಷ್ಮೀ ನಿವಾಸ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿಗಳ ಪೈಕಿ ಈ ವಾರ ಲಕ್ಷ್ಮೀ ನಿವಾಸ ಮೊದಲ ಸ್ಥಾನಕ್ಕೆ ಜಿಗಿದಿದೆ.
ಪುಟ್ಟಕ್ಕನ ಮಕ್ಕಳು
ಉಮಾಶ್ರೀ, ಮಂಜು ಭಾಷಿಣಿ, ಸಂಜನಾ ಬುರ್ಲಿ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ಕಳೆದ ಎರಡು ವರ್ಷಗಳಿಂದ ಮೊದಲ ಸ್ಥಾಲದಲ್ಲಿಯೇ ಮುಂದುವರಿದಿತ್ತು. ಇತ್ತೀಚಿನ ಕೆಲ ತಿಂಗಳಿಂದ ಈ ಧಾರಾವಾಹಿಯ ಮೊದಲ ಸ್ಥಾನಕ್ಕೆ ಕುತ್ತು ಬಂದಿದೆ. ಮೊದಲ ಸ್ಥಾನದಲ್ಲಿ ಮುಂದುವರಿದಿದ್ದ ಪುಟ್ಟಕ್ಕ, ಈಗ ಎರಡನೇ ಸ್ಥಾನದಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅದರಂತೆ ಈ ವಾರ ಎರಡನೇ ಸ್ಥಾನದಲ್ಲಿದೆ.
ಸೀತಾ ರಾಮ
ಸೀತಾ ರಾಮ ಸೀರಿಯಲ್ನಲ್ಲಿ ಅಶೋಕ ಮತ್ತು ಪ್ರಿಯಾ ಜೋಡಿಯ ಅದ್ಧೂರಿ ವಿವಾಹ ಸಮಾರಂಭ ನಡೆಯುತ್ತಿದೆ. ರಾಮ ಸೀತಾ ಸಹ ಈ ಮದುವೆಯ ಸಂಭ್ರಮದಲ್ಲಿದ್ದಾರೆ. ಈ ನಡುವೆ ಭಾರ್ಗವಿಯ ಕೆಟ್ಟ ಬುದ್ಧಿ, ಚಾಂದಿನಿಯ ಕುತಂತ್ರ ಮುಂದುವರಿದಿದೆಯಾದರೂ, ಅದ್ಯಾವುದೂ ಕೆಲಸಕ್ಕೆ ಬರುತ್ತಿಲ್ಲ. ಇನ್ನೇನು ತಾತನ ಮುಂದೆ, ತನ್ನ ಮದುವೆ ವಿಚಾರವನ್ನು ಹೇಳಲು ಗಟ್ಟಿ ಧೈರ್ಯ ಮಾಡುತ್ತಿದ್ದಾನೆ ರಾಮ. ಹೀಗೆ ಒಂದಷ್ಟು ಕುತೂಹಲ ಸೃಷ್ಟಿಸಿದ ಈ ಸೀರಿಯಲ್ ಮೂರನೇ ಸ್ಥಾನದಲ್ಲಿದೆ.
ಶ್ರಾವಣಿ ಸುಬ್ರಮಣ್ಯ
ಇನ್ನು ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಸಹ ವೀಕ್ಷಕರ ಮನಗೆದ್ದಿದೆ. ಇತ್ತೀಚೆಗಷ್ಟೇ ಶುರುವಾಗಿರುವ ಈ ಸೀರಿಯಲ್ನಲ್ಲಿ ಮಧ್ಯಮ ವರ್ಗ ಮತ್ತು ಆಗರ್ಭ ಶ್ರೀಮಂತ ರಾಜಕಾರಣಿಯ ನಡುವಿನ ಕಥೆಯೇ ಹೈಲೈಟ್. ಸುಬ್ಬುವಿನ ಮೇಲೆ ವೀರೇಂದ್ರನಿಗೆ ಅಪಾರ ನಂಬಿಕೆ. ಆ ನಂಬಿಕೆ ಒಡೆಯುವ ಮಸಲತ್ತು ಮಾಡಿದ ಮದನ್ಗೆ ಮಾತಿನಲ್ಲಿಯೇ ಏಟು ನೀಡಿದ್ದಾನೆ ವೀರೇಂದ್ರ. ಈ ಧಾರಾವಾಹಿ ಈ ವಾರ ನಾಲ್ಕನೇ ಸ್ಥಾನದಲ್ಲಿದೆ.
ಅಮೃತಧಾರೆ
ಅಮೃತಧಾರೆ ಸೀರಿಯಲ್ನಲ್ಲಿ ಜ್ಯೋತಿಷಿಯ ಭವಿಷ್ಯ ನಂಬಿ ಹರಕೆ ತೀರಿಸುತ್ತಿದ್ದಾನೆ. ಇದು ಅತ್ತೆಯೇ ಮಾಡಿಸಿದ ಕುತಂತ್ರ ಎಂಬುದು ಮಲ್ಲಿ ಮೂಲಕ ಭೂಮಿಕಾಗೆ ಗೊತ್ತಾಗಿದೆ. ತನ್ನ ಮನೆಯ ಜ್ಯೋತಿಷಿ ಬಳಿಯೂ ಇದು ನಿಜವೋ ಸುಳ್ಳೋ ಎಂದು ಪರೀಕ್ಷಿಸಿದ್ದಾಳೆ. ಈ ವೇಳೆ ಗೌತಮ್ ಮತ್ತು ಭೂಮಿಕಾ ಜೋಡಿಯ ಜಾತಕ ತುಂಬ ಚೆನ್ನಾಗಿದೆ ಎಂಬುದು ಗೊತ್ತಾಗಿದೆ. ಹೀಗೆ ಕೊಂಚ ಕುತೂಹಲ ಮೂಡಿಸಿದ್ದ ಈ ಸೀರಿಯಲ್ ಈ ವಾರ ಐದನೇ ಸ್ಥಾನದಲ್ಲಿದೆ.

ವಿಭಾಗ