ಶ್ರಾವಣಿ ಸುಬ್ರಹ್ಮಣ್ಯ: ಮುನಿಸು ದೂರಾಗಿ ಒಂದಾದ್ರೂ ಅತ್ತೆ–ಸೊಸೆ, ವಿಶಾಲು ಮುಂದೆ ಎಲ್ಲಾ ಸತ್ಯ ಹೇಳಿದ ಶ್ರಾವಣಿ
ಜ್ವರದಿಂದ ಬಳಲುತ್ತಿದ್ದ ವಿಶಾಲುಗೆ ಮಗಳ ರೀತಿ ಆರೈಕೆ ಮಾಡಿದ ಶ್ರಾವಣಿ. ಸೊಸೆಯಲ್ಲ ನೀವು ಮಗಳು ಎಂದು ಶ್ರಾವಣಿಯನ್ನು ಅಪ್ಪಿಕೊಂಡ ವಿಶಾಲಾಕ್ಷಿ. ಅತ್ತೆಯ ಮುಂದೆ ನಡೆದ ಎಲ್ಲವನ್ನೂ ಹೇಳಿದ ಶ್ರಾವಣಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 17ರ ಸಂಚಿಕೆಯ ವಿವರ.

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್ 17ರ ಸಂಚಿಕೆಯಲ್ಲಿ ಅತ್ತೆಗೆ ಹುಷಾರಿಲ್ಲ ಎಂದು ಆಕೆಯನ್ನು ಬಿಟ್ಟು ಕದಲುವುದಿಲ್ಲ ಶ್ರಾವಣಿ. ಪದೇ ಪದೇ ತಣ್ಣೀರು ಬಟ್ಟೆ ಬದಲಿಸುತ್ತಾ, ಆಕೆಯ ಆರೈಕೆ ಮಾಡುತ್ತಾಳೆ. ಎಬ್ಬಿಸಿ ಜ್ಯೂಸ್ ಕುಡಿಸಿ ಮಲಗಿಸುವ ಶ್ರಾವಣಿ ಅತ್ತೆ ನಿಮಗೆ ಜ್ವರದಿಂದ ಮೈ ಕೈ ನೋವು ಶುರುವಾಗಿರಬಹುದು, ನಾವು ನಿಮ್ಮ ಕಾಲು ಒತ್ತುತ್ತೇನೆ ಎಂದು ಕಾಲು ಒತ್ತಲು ಶುರು ಮಾಡುತ್ತಾಳೆ. ಅಲ್ಲಿಯವರೆಗೆ ಸುಮ್ಮನೆ ಇದ್ದ ವಿಶಾಲು ತಡೆಯದೇ ‘ಶ್ರಾವಣಿಯಮ್ಮ ಬೇಡಿ ಶ್ರಾವಣಿಯಮ್ಮ‘ ಎಂದು ಅಳುತ್ತಾ ಎದ್ದು ಕುಳಿತುಕೊಳ್ಳುತ್ತಾಳೆ. ಮದುವೆಯಾದ ಮೇಲೆ ಮೊದಲ ಬಾರಿಗೆ ಅತ್ತೆ ಬಾಯಿಂದ ಶ್ರಾವಣಿಯಮ್ಮ ಎಂದು ಕೇಳಿಸಿಕೊಂಡು ಶ್ರಾವಣಿಗೆ ಸ್ವರ್ಗವೇ ಸಿಕ್ಕಂತಾಗುತ್ತದೆ.
ನೀವು ಸೊಸೆಯಲ್ಲ ಮಗಳು, ಈ ಮನೆಯ ನಂದಾದೀಪ ಎಂದ ವಿಶಾಲು
ಅತ್ತೆ ನೀವು ನಿಜಕ್ಕೂ ನನ್ನ ಶ್ರಾವಣಿಯಮ್ಮ ಎಂದು ಕರೆದ್ರಾ ಎಂದು ಕೇಳುತ್ತಾ ಜೋರಾಗಿ ಅಳುತ್ತಾಳೆ ಶ್ರಾವಣಿ. ಅದಕ್ಕೆ ವಿಶಾಲು ‘ಹೌದು ಶ್ರಾವಣಿಯಮ್ಮ, ನಾನು ನಿಮ್ಮನ್ನು ತುಂಬಾ ತಪ್ಪಾಗಿ ಅರ್ಥ ಮಾಡಿಕೊಂಡೆ. ಮಗಳ–ಮಗನ ಮದುವೆ ನಿಂತು ಹೋಯ್ತು ಎನ್ನುವ ಸಿಟ್ಟಿನಲ್ಲಿ ನನಗೆ ಏನು ಮಾಡಬೇಕು ಎಂಬುದು ತೋಚಲಿಲ್ಲ. ನಾನು ಹೀಗೆಲ್ಲಾ ಮಾಡಿರುವುದಕ್ಕೆ ಧನಲಕ್ಷ್ಮೀ ಕೂಡ ನಿಮ್ಮ ಜೊತೆ ಒರಟಾಗಿ ನಡೆದುಕೊಳ್ಳಲು ಆರಂಭಿಸಿದಳು. ನಾನು ಪಾಪಿ, ನಿಮ್ಮಂಥ ಮುತ್ತಿನಂತಹ ಸೊಸೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ನನಗೆ ಸುಬ್ರಹ್ಮಣ್ಯದಿಂದ ಬಂದಾಗಲೇ ನಿಮ್ಮ ಮಾಮ ಎಲ್ಲ ಹೇಳಿ ಅರ್ಥ ಮಾಡಿಸಿದ್ರು. ಆದರೆ ಇಷ್ಟೆಲ್ಲಾ ನೋವು ಕೊಟ್ಟ ನಿಮ್ಮನ್ನು ಯಾವ ಬಾಯಿಂದ ಮಾತಾಡಿಸ್ಲಿ ಹೇಳಿ, ಅದಕ್ಕೆ ನೋವೆಲ್ಲಾ ನನ್ನೊಳಗೆ ಇಟ್ಟುಕೊಂಡು ಕೊರಗ್ತಾ ಇದ್ದೆ. ನೀವು ನನ್ನ ಸೊಸೆ ಮಾತ್ರವಲ್ಲ, ನನ್ನ ಮಗಳು ಕೂಡ. ಇನ್ನು ಮುಂದೆ ನನಗೆ 3 ಜನ ಹೆಣ್ಣುಮಕ್ಕಳು. ಇನ್ನು ಮೇಲೆ ನಿಮಗೆ ಯಾವುದೇ ಕಷ್ಟ ಬಂದ್ರೂ ನಾನು ನಿಮ್ಮ ಜೊತೆ ಇರ್ತೀನಿ‘ ಅಂತ ಕಣ್ಣೀರು ಹಾಕುತ್ತಾಳೆ.
ಅತ್ತೆ ಮುಂದೆ ಸತ್ಯದ ಅನಾವರಣ ಮಾಡಿದ ಶ್ರಾವಣಿ
ಅತ್ತೆ ತನ್ನನ್ನು ಸೊಸೆ ಎಂದು ಒಪ್ಪಿಕೊಂಡಿದ್ದು ಮಾತ್ರವಲ್ಲ ಈ ಮನೆಯ ನಂದಾದೀಪ ಎಂದು ಕರೆದಿರುವುದು ಶ್ರಾವಣಿಗೆ ಇನ್ನಿಲ್ಲದ ಖುಷಿ ತಂದಿರುತ್ತದೆ. ನಿಮ್ಮ ಬದುಕಲ್ಲಿ ಏನಾಯ್ತು ಎಂದು ನನ್ನ ಜೊತೆ ಹಂಚಿಕೊಳ್ಳಿ ಶ್ರಾವಣಿಯಮ್ಮ ಎಂದು ವಿಶಾಲು ಕೇಳಿದಾಗ ಮನಸ್ಸು ತಡೆಯದ ಶ್ರಾವಣಿ ಸಾಲಿಗ್ರಾಮದಲ್ಲಿ ತನಗೆ ಸುಬ್ಬು ಮೇಲೆ ಪ್ರೀತಿಯಾಗಿರುವ ವಿಚಾರ ತಿಳಿದಿದ್ದು, ಆದರೆ ಸುಬ್ಬುಗೆ ಪ್ರೀತಿ ಹೇಳಿಕೊಳ್ಳಲು ಸಾಧ್ಯವಾಗದೇ ಇದಿದ್ದು, ಅಪ್ಪನ ಮಾತನ್ನು ತಪ್ಪಾಗಿ ಕೇಳಿಸಿಕೊಂಡು ಮದನ್ ಜೊತೆ ಮದುವೆಗೆ ಒಪ್ಪಿಕೊಂಡಿದ್ದು, ಮದುವೆ ಮಂಟಪದಲ್ಲಿ ಅಪರಿಚಿತ ವ್ಯಕ್ತಿ ವೆಂಕಿ ಕೈಯಲ್ಲಿ ತಾಳಿ ಕಳುಹಿಸಿದ್ದು, ತಾನೇ ತಾಳಿ ಕಟ್ಟಿಕೊಂಡು ಸುಬ್ಬು ಕೈ ಹಿಡಿದಿದ್ದು ಎಲ್ಲವನ್ನೂ ಹೇಳುತ್ತಾಳೆ.
ಮ್ಯಾರೇಜ್ ಸರ್ಟಿಫಿಕೇಟ್ಗೆ ಸುಬ್ಬು ಕೈಯಿಂದ ಸಹಿ ಹಾಕಿಸಿ ಕೊಡ್ತೀನಿ ಎಂದ ವಿಶಾಲು
ಹಿಂದಿನ ರಾತ್ರಿ ಮಗನಿಗೂ–ಸೊಸೆಗೂ ನಡೆದ ಜಗಳದ ಬಗ್ಗೆ ಶ್ರಾವಣಿ ಬಳಿ ಕೇಳುತ್ತಾಳೆ ವಿಶಾಲು. ಸುಬ್ಬು–ನಿಮ್ಮ ಮಧ್ಯೆ ಏನಾಗಿದೆ, ಯಾಕೆ ಅವನು ನಿಮ್ಮ ಜೊತೆ ಮಗಳ ಮಾಡುತ್ತಿದ್ದ ಎಂದು ಕೇಳಿದಾಗ ಇನ್ನು ಮುಚ್ಚಿಟ್ಟು ಅರ್ಥವಿಲ್ಲ ಎಂದುಕೊಳ್ಳುವ ಶ್ರಾವಣಿ ‘ಅತ್ತೆ ಸಾಲಿಗ್ರಾಮದ ಅಷ್ಟೂ ಆಸ್ತಿಯನ್ನು ತಾತ ನನ್ನ ಹೆಸರಿಗೆ ವಿಲ್ ಮಾಡಿಸಿದ್ದಾರೆ. ಅದನ್ನು ನನ್ನ ಹೆಸರಿಗೆ ರಿಜಿಸ್ಟರ್ ಮಾಡಿಸಬೇಕು, ಅದಕ್ಕೆ ಮ್ಯಾರೇಜ್ ಸರ್ಟಿಫಿಕೇಟ್ ಬೇಕು. ಆದರೆ ಇವರು ಅದಕ್ಕೆ ಸಹಿ ಹಾಕಲು ಒಪ್ಪುತ್ತಿಲ್ಲ. ಸಹಿ ಹಾಕಿದ್ರೆ ನಾವು ಕಾನೂನು ಪ್ರಕಾರ ಗಂಡ–ಹೆಂಡತಿ ಆಗ್ತೀವಿ ಅಂತ ನಾನು ಎಷ್ಟು ಹೇಳಿದ್ರೂ ಕೇಳ್ತಿಲ್ಲ ಅಂತಾಳೆ. ಆಗ ವಿಶಾಲು ನಿಮ್ಮ ಆಸ್ತಿ ಅದೆಲ್ಲಾ ನಂಗೆ ಗೊತ್ತಾಗಲ್ಲ ಶ್ರಾವಣಿಯಲ್ಲ, ಆದರೆ ದೊಡ್ಡ ಯಜಮಾನ್ರು ಹಾಗೂ ಲಲಿತಾದೇವಿ ಅಮ್ಮನ ಆಸೆ ಪೂರೈಸೋದು ನಮ್ಮ ಕರ್ತವ್ಯ, ನಾನು ಸುಬ್ಬು ಬಳಿ ಸೈನ್ ಮಾಡಿಸಿಕೊಡ್ತೀನಿ. ಇದಕ್ಕೆ ನೀವು ಚಿಂತೆ ಮಾಡ್ಬೇಡಿ ಅಂತ ಹೇಳ್ತಾಳೆ.
ಕೊನೆಗೆ ಅತ್ತೆ–ಸೊಸೆ ಮುನಿಸೆಲ್ಲಾ ದೂರಾಗಿ ಒಂದಾಗುತ್ತಾರೆ ವಿಶಾಲು–ಶ್ರಾವಣಿ. ಆದರೆ ವಿಶಾಲು ಹೇಳಿದಂತೆ ಸುಬ್ಬು ಮ್ಯಾರೇಜ್ ಸರ್ಟಿಫಿಕೇಟ್ಗೆ ಸೈನ್ ಮಾಡ್ತಾನಾ, ಅಜ್ಜನ ಆಸ್ತಿ ಶ್ರಾವಣಿ ಹೆಸರಿಗೆ ರಿಜಿಸ್ಟರ್ ಆಗುತ್ತಾ, ಈ ನಡುವೆ ವಿಜಯಾಂಬಿಕಾ ಏನು ಪ್ಲಾನ್ ಮಾಡಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿ ಬಗ್ಗೆಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ –ಆಸಿಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ