ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ: ಮದುವೆಯ ಗುಟ್ಟು ರಟ್ಟು ಮಾಡುವ ನಿರ್ಧಾರ ಮಾಡಿದ ಸುಬ್ಬು, ದಿಕ್ಕು ತೋಚದಂತಾಗಿದ್ದಾಳೆ ಶ್ರಾವಣಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ: ಮದುವೆಯ ಗುಟ್ಟು ರಟ್ಟು ಮಾಡುವ ನಿರ್ಧಾರ ಮಾಡಿದ ಸುಬ್ಬು, ದಿಕ್ಕು ತೋಚದಂತಾಗಿದ್ದಾಳೆ ಶ್ರಾವಣಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ: ಮದುವೆಯ ಗುಟ್ಟು ರಟ್ಟು ಮಾಡುವ ನಿರ್ಧಾರ ಮಾಡಿದ ಸುಬ್ಬು, ದಿಕ್ಕು ತೋಚದಂತಾಗಿದ್ದಾಳೆ ಶ್ರಾವಣಿ

ಸೊಸೆ ಮೇಲೆ ಪ್ರೀತಿ ಇದ್ದರೂ ತೋರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ವಿಶಾಲು. ವರಲಕ್ಷ್ಮೀ ಒಳ್ಳೆಯ ಗುಣಕ್ಕೆ ಮನಸೋತ ವರದ. ಮದುವೆ ಗುಟ್ಟು ಎಲ್ಲರೆದುರು ರಟ್ಟು ಮಾಡಲು ಹೊರಟ ಸುಬ್ಬು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 21ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 21ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 21ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 21ರ ಸಂಚಿಕೆಯಲ್ಲಿ ವಿಶಾಲಾಕ್ಷಿ–ಶ್ರಾವಣಿ ಅಡುಗೆ ಮನೆಯಲ್ಲಿ ನಿಂತು ಕಾಫಿ ಕುಡಿಯುತ್ತಿರುವಾಗ ಅಲ್ಲಿಗೆ ಬರುವ ಧನಲಕ್ಷ್ಮೀ ಅಮ್ಮ ಸೊಸೆಯ ಜೊತೆ ಒಳ್ಳೆ ರೀತಿಯಲ್ಲಿ ಇರುವುದು ಕಂಡು ಉರಿದು ಬೀಳುತ್ತಾಳೆ. ಆದರೆ ತಕ್ಷಣ ಪ್ಲೇಟ್ ಚೇಂಜ್‌ ಮಾಡುವ ವಿಶಾಲು ‘ಅಯ್ಯೋ ಇದು ಒಂದು ಕಾಫಿನಾ, ಬೆಳಿಗ್ಗೆ ಬೆಳಿಗ್ಗೆ ಈ ಕಾಫಿ ಕುಡಿದು ನನ್ನ ಬಾಯೆಲ್ಲಾ ಹಾಳಾಯ್ತು. ಕಾಫಿ ಮಾಡೋದು ಹೇಗೆ ಅಂತ ನನ್ನ ಮಗಳಿಂದ ಕಲಿಬೇಕು’ ಎಂದು ಧನಲಕ್ಷ್ಮೀಯನ್ನು ಹೊಗಳಿ ಅಟ್ಟಕ್ಕೇರಿಸುವುದು ಮಾತ್ರವಲ್ಲ, ಅವಳೆದುರು ಶ್ರಾವಣಿಯನ್ನು ಬೈದು, ನಂತರ ಅಡ್ಡ ಹೋಗಿ ಸಾರಿ ಕೇಳುತ್ತಾಳೆ. ಇತ್ತ ಧನಲಕ್ಷ್ಮೀಗೆ ಅಮ್ಮ ಹಾಗೂ ಶ್ರಾವಣಿ ಒಂದಾಗಿಲ್ಲ ಅನ್ನೋದು ಖುಷಿ ನೀಡುತ್ತೆ.

ವರಳ ಒಳ್ಳೆತನಕ್ಕೆ ಮನಸೋತ ವರದ

ವರದ ಬೆಳಿಗ್ಗೆ ಆಫೀಸ್‌ಗೆಂದು ಹೊರಟಾಗ ಅವನಿಗೆ ವಾಲೆಟ್‌, ಕರ್ಚೀಫ್, ಮೊಬೈಲ್ ಎಲ್ಲವನ್ನೂ ರೆಡಿ ಮಾಡಿಕೊಡುತ್ತಾಳೆ ವರಲಕ್ಷ್ಮೀ. ಚೆನ್ನಾಗಿ ಓದಿಕೊಂಡಿದ್ದ ವರಲಕ್ಷ್ಮೀ ತನ್ನನ್ನು ಮದುವೆಯಾಗಿ ಈ ಮನೆಯಲ್ಲಿ ಕೆಲಸ ಮಾಡಿಕೊಂಡು ಇರೋದು ವರದನಿಗೆ ಬೇಸರ ತರಿಸುತ್ತದೆ. ಅವನು ಅದನ್ನು ವರಲಕ್ಷ್ಮೀ ಮುಂದೆ ಹೇಳುತ್ತಾನೆ. ‘ವರ ನಿನ್ನ ವಯಸ್ಸಿನವರು ಎಲ್ಲರೂ ಹೈಯರ್‌ ಸ್ಟಡಿ, ಜಾಬ್ ಅಂತ ಮಾಡಿಕೊಂಡಿದ್ದಾರೆ. ಆದರೆ ನೀನು ಮಾತ್ರ ನನ್ನನ್ನು ಮದುವೆಯಾಗಿ ಈ ಮನೆ ಕೆಲಸ ಮಾಡಿಕೊಂಡಿದ್ದೀಯಾ‘ ಎಂದು ಹೆಂಡತಿ ಮುಂದೆ ಅಳಲು ತೋಡಿಕೊಳ್ಳುತ್ತಾನೆ. ಅದಕ್ಕೆ ವರಲಕ್ಷ್ಮೀ ‘ನಂಗೆ ಯಾವ ಬೇಸರವೂ ಇಲ್ಲ, ಸದ್ಯಕ್ಕೆ ನನಗೆ ಅದೆಲ್ಲಕ್ಕಿಂತ ನೀವು ಮುಖ್ಯ, ಮನೆಕೆಲಸ ಮಾಡೋದು ನಂಗೆ ಬೇಜಾರಿಲ್ಲ. ನಾನು ಅತ್ತೆ ಮನೆಯಲ್ಲಿ ಹಾಗೂ ತವರು ಮನೆಯಲ್ಲಿ ಒಳ್ಳೆಯ ಹೆಸರು ತಗೊಂಡ್ರೆ ಅಷ್ಟೇ ಸಾಕು. ಆಗ ಮಾತ್ರ ಅಮ್ಮ–ಅಪ್ಪ ಅಷ್ಟೆಲ್ಲಾ ಕಷ್ಟಪಟ್ಟು ನನ್ನ ಸಾಕಿ ಸಲಹಿದ್ದಕ್ಕೂ, ಶ್ರಾವಣಿ ಅತ್ತಿಗೆ ಅಷ್ಟೆಲ್ಲಾ ಕಷ್ಟಪಟ್ಟು ನನ್ನ ಮದುವೆ ಮಾಡಿಸಿದ್ದಕ್ಕೂ ಸಾರ್ಥಕ ಆಗೋದು‘ ಅಂತ ಗಂಡನ ಮುಂದೆ ಹೇಳಿಕೊಳ್ಳುತ್ತಾಳೆ. ಆಗ ವರದನಿಗೆ ಹೆಂಡತಿ ಮೇಲೆ ಹೆಮ್ಮೆ ಮೂಡುತ್ತದೆ.

ಆಸ್ತಿ ರಿಜಿಸ್ಟ್ರೇಷನ್ ದಿನ ಬಂದೇ ಬಿಟ್ಟಿದೆ

ಆ ದಿನ ಬೆಳಿಗ್ಗೆ ಶ್ರಾವಣಿಗೆ ಕಾಲ್ ಮಾಡುವ ಚಿಕ್ಕಪ್ಪ ಸುರೇಂದ್ರ ‘ಶ್ರಾವಣಿ ಇವತ್ತೇ ಆಸ್ತಿ ರಿಜಿಸ್ಟ್ರೇಷನ್ ಮಾಡಿಸೋಣ ಅಂತ ಅಣ್ಣ ಹೇಳ್ತಿದ್ದಾರೆ. ನೀನು ಸುಬ್ಬು ರಿಜಿಸ್ಟರ್ ಆಫೀಸ್ ಹತ್ರ ಬನ್ನಿ‘ ಅಂತ ಹೇಳ್ತಾರೆ. ವೀರೇಂದ್ರ ಕೂಡ ಮಗಳ ಜೊತೆ ಮಾತಾಡಿ ‘ಶ್ರಾವಣಿ ಆದಷ್ಟು ಬೇಗ ಆಸ್ತಿ ರಿಜಿಸ್ಟ್ರೇಷನ್ ಪ್ರೋಸಸ್ ಮುಗಿಸಿ ಬಿಡೋಣ, ನೀವು ಮ್ಯಾರೇಜ್ ಸರ್ಟಿಫಿಕೇಟ್ ತಗೊಂಡು ರಿಜಿಸ್ಟರ್‌ ಆಫೀಸ್ ಹತ್ರ ಬನ್ನಿ‘ ಅಂತ ಹೇಳ್ತಾರೆ. ಮ್ಯಾರೇಜ್ ಸರ್ಟಿಫಿಕೇಟ್ ಎಂದಾಕ್ಷಣ ಶ್ರಾವಣಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಇತ್ತ ವಿಶಾಲುವನ್ನು ಹುಡುಕಿಕೊಂಡು ಎಲ್‌ಐಸಿ ಏಜೆಂಟ್ ಬಂದಿರುತ್ತಾರೆ. ಮಹಿಳಾ ಸಂಘದ ವತಿಯಿಂದ ವಿಶಾಲುಗೆ ಇನ್ಯೂರೆನ್ಸ್ ಮಾಡಿಸುತ್ತಾರೆ. ವಿಶಾಲು ಅದಕ್ಕೆ ಸುಬ್ಬುವನ್ನು ನಾಮಿನಿ ಮಾಡುತ್ತಾರೆ. ವಿಶಾಲು ಹಾಗೂ ಸುಬ್ಬು ಒಂದಿಷ್ಟು ಡಾಕ್ಯುಮೆಂಟ್‌ಗಳಿಗೆ ಸಹಿ ಮಾಡುತ್ತಾರೆ.

ಮದುವೆ ಗುಟ್ಟು ರಟ್ಟು ಮಾಡಲು ಸಿದ್ಧನಾದ ಸುಬ್ಬು

ಯಜಮಾನರು ರಿಜಿಸ್ಟ್ರೇಷನ್ ಆಫೀಸ್ ಬಳಿ ಬನ್ನಿ ಎಂದಾಗ ಒಕೆ ಯಜಮಾನರೇ ಎನ್ನುವ ಸುಬ್ಬು ಬಳಿ ಆತಂಕ ತೋಡಿಕೊಳ್ಳುತ್ತಾಳೆ ಶ್ರಾವಣಿ. ‘ಈಗೇನು ಮಾಡೋದು ಸುಬ್ಬು, ಪ್ಲೀಸ್ ಇದೊಂದು ಸಲ ನನ್ನ ಮಾತು ಕೇಳು, ಮ್ಯಾರೇಜ್ ಸರ್ಟಿಫಿಕೇಟ್‌ಗೆ ಒಂದು ಸಹಿ ಹಾಕು‘ ಅಂತ ಬೇಡಿಕೊಳ್ತಾಳೆ. ಆದರೆ ಸುಬ್ಬು ದೃಢನಿರ್ಧಾರ ಮಾಡಿದವನಂತೆ ‘ನಾನು ಯಾವುದೇ ಕಾರಣಕ್ಕೂ ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸಹಿ ಹಾಕೊಲ್ಲ ಮೇಡಂ. ಇದೇ ಒಳ್ಳೆ ಚಾನ್ಸ್, ಇರುವ ಸತ್ಯವನ್ನೆಲ್ಲಾ ಯಜಮಾನರ ಎದುರು ಹೇಳಿ ಬಿಡೋಣ. ನನ್ನ ಜೀವನದ ಗುರಿ ಇರುವುದೇ ಯಜಮಾನರ ಜೊತೆ ಸಾಯೋ ತನಕ ಚೆನ್ನಾಗಿರಬೇಕು ಅನ್ನೋದು. ಈ ಸತ್ಯ ಹೇಳೋದ್ರಿಂದ ಎಲ್ಲವೂ ಬದಲಾಗುತ್ತೆ‘ ಎಂದು ಹೇಳುತ್ತಾನೆ. ಆಗ ಶ್ರಾವಣಿ ‘ಅಲ್ಲ ಸುಬ್ಬು, ಇದ್ರಿಂದ ನನ್ನ ಜೀವನ ಏನಾಗಬಹುದು ಯೋಚನೆ ಮಾಡು‘ ಅಂತಾಳೆ, ಆದರೂ ಸುಬ್ಬು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲ ಸತ್ಯವನ್ನು ಹೇಳಿ ಬಿಡಬೇಕು ಎಂದು ನಿರ್ಧಾರ ಮಾಡಿರುತ್ತಾನೆ.

ಇತ್ತ ವಿಜಯಾಂಬಿಕಾ ಶ್ರಾವಣಿ–ಸುಬ್ಬು ಮ್ಯಾರೇಜ್ ಸರ್ಟಿಫಿಕೇಟ್ ಇರೋದಿಲ್ಲ, ಆಸ್ತಿಯೆಲ್ಲಾ ಶ್ರಾವಣಿ ಹೆಸರಿಗೆ ರಿಜಿಸ್ಟ್ರೇಷನ್ ಆಗೋದಿಲ್ಲ. ಸುಬ್ಬು ಶ್ರಾವಣಿಯನ್ನು ಬಿಟ್ಟು ಹೋಗಿ, ಶ್ರಾವಣಿಗೆ ಮದನ್ ಜೊತೆ ಮದುವೆ ಆಗುತ್ತೆ, ನಂತರ ಸಾಲಿಗ್ರಾಮದ ಆಸ್ತಿ ಎಲ್ಲಾ ನಮ್ಮ ಕೈಗ ಬರುತ್ತೆ, ಯಾವುದೇ ಕಾರಣಕ್ಕೂ ಸುಬ್ಬು–ಶ್ರಾವಣಿ ದಕ್ಕಲು ನಾನು ಬಿಡೊಲ್ಲ ಅಂತ ಮನಸಲ್ಲೇ ಚಾಲೆಂಜ್ ಮಾಡುತ್ತಾ ರಿಜಿಸ್ಟ್ರೇಷನ್ ಆಫೀಸ್‌ನಲ್ಲಿ ನಿಂತಿರುತ್ತಾಳೆ.

ಸುಬ್ಬು ಹೇಳಿದಂತೆ ನಡೆದುಕೊಳ್ಳುತ್ತಾನಾ, ಎಲ್ಲ ಸತ್ಯವನ್ನು ಯಜಮಾನರ ಮುಂದೆ ಹೇಳುತ್ತಾನಾ, ಹೇಳಿದರೆ ಶ್ರಾವಣಿ ಗತಿ ಏನಾಗಬಹುದು, ವಿಜಯಾಂಬಿಕಾ ಅಂದುಕೊಂಡಂತೆ ಆಸ್ತಿ ಶ್ರಾವಣಿ ಹೆಸರಿಗೆ ರಿಜಿಸ್ಟರ್ ಆಗದೇ ವಿಜಯಾಂಬಿಕಾ ಹಾಗೂ ಮದನ್ ಕೈ ಸೇರುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ವೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.