ಮ್ಯಾರೇಜ್ ಸರ್ಟಿಫಿಕೇಟ್ ಕೊಟ್ಟು ವಿಜಯಾಂಬಿಕಾ, ಸುಬ್ಬುಗೆ ಶಾಕ್ ನೀಡಿದ ಶ್ರಾವಣಿ ಈಗ ಅಜ್ಜನ ಸಮಸ್ತ ಆಸ್ತಿಗೆ ಒಡತಿ; ಶ್ರಾವಣಿ ಸುಬ್ರಹ್ಮಣ್ಯ
ಶ್ರಾವಣಿ ಬಳಿ ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲ ಎಂದು ಮೆರೆಯುತ್ತಿದ್ದ ವಿಜಯಾಂಬಿಕಾಗೆ ಬಿಗ್ ಶಾಕ್. ಸಾಲಿಗ್ರಾಮದ ಆಸ್ತಿಗೆಲ್ಲಾ ಇನ್ನು ಮುಂದೆ ಸುಬ್ಬು–ಶ್ರಾವಣಿಯೇ ವಾರಸ್ದಾರರು. ಧನಲಕ್ಷ್ಮೀ ತಲೆ ಕೆಡಿಸಿದ ಕಾಂತಮ್ಮ–ಸುಂದರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 23ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್ 23ರ ಸಂಚಿಕೆಯಲ್ಲಿ ಎಲ್ಲರೂ ರಿಜಿಸ್ಟ್ರೇಷನ್ ಆಫೀಸ್ ಒಳಗೆ ಹೋಗುತ್ತಾರೆ. ರಿಜಿಸ್ಟ್ರೇಷನ್ ಹಂತಗಳು ಆರಂಭವಾದಾಗ ಲಾಯರ್ ಡಾಕ್ಯುಮೆಂಟ್ಗಳ ಬಗ್ಗೆ ಕೇಳುತ್ತಾರೆ. ಶ್ರಾವಣಿ ಬಳಿ ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲ ಎಂದೇ ನಂಬಿದ್ದ ವಿಜಯಾಂಬಿಕಾ ಬೇಕು ಅಂತಲೇ ‘ಶ್ರಾವಣಿ ಎಲ್ಲಾ ಡಾಕ್ಯುಮೆಂಟ್ಸ್ ತಂದಿದ್ದೀಯಾಮ್ಮ, ಮುಖ್ಯವಾಗಿ ಮ್ಯಾರೇಜ್ ಸರ್ಟಿಫಿಕೇಟ್‘ ಅಂತಾಳೆ. ಆಗ ಶ್ರಾವಣಿ ಒಂಥರಾ ಮುಖ ಮಾಡುತ್ತಾಳೆ. ಸುಬ್ಬು ಏನೋ ಹೇಳಬೇಕು ಎಂದು ತಡಕಾಡುತ್ತಾನೆ. ಲಾಯರ್ ಕೂಡ ಮ್ಯಾರೇಜ್ ಸರ್ಟಿಫಿಕೇಟ್ ಕೇಳಿದಾಗ ಸುಬ್ಬು ಅದು ಅಂತ ಏನೋ ಹೇಳಲು ಹೋಗುತ್ತಾನೆ. ಅವನನ್ನು ತಡೆಯುವ ಶ್ರಾವಣಿ ‘ಮ್ಯಾರೇಜ್ ಸರ್ಟಿಫಿಕೇಟ್ ಇದೆ‘ ಎಂದು ಹೇಳಿ ಸರ್ಟಿಫಿಕೇಟ್ ಲಾಯರ್ ಮುಂದೆ ಹಿಡಿಯುತ್ತಾಳೆ. ಮ್ಯಾರೇಜ್ ಸರ್ಟಿಫಿಕೇಟ್ ಇರೋಲ್ಲ ಅಂತ ಕನಸು ಕಂಡಿದ್ದು ವಿಜಯಾಂಬಿಕಾಗೂ, ಮದುವೆ ಸತ್ಯ ಹೇಳಿಬಿಡಬೇಕು ಎಂದು ಕಾದಿದ್ದ ಸುಬ್ಬುಗೂ ಶಾಕ್ ಆಗುತ್ತದೆ.
ಗಂಗಾಧರಯ್ಯನ ಸಮಸ್ತ ಆಸ್ತಿಗೆ ಈಗ ಶ್ರಾವಣಿ–ಸುಬ್ಬುವೇ ವಾರಸ್ದಾರರು
ಶ್ರೀವಲ್ಲಿ ಮಾತು ಕಟ್ಟಿಕೊಂಡು ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲದೇ ಶ್ರಾವಣಿಗೆ ಹೆಸರಿಗೆ ಆಸ್ತಿ ಹೋಗುವುದಿಲ್ಲ. ಸುಬ್ಬು–ಶ್ರಾವಣಿ ದೂರಾಗಿ ತನ್ನ ಮಗನ ಜೊತೆ ಶ್ರಾವಣಿ ಮದುವೆ ಆಗುತ್ತೆ, ಆಮೇಲೆ ಆಸ್ತಿಯೆಲ್ಲಾ ನನ್ನ ಕೈಗೆ ಬರುತ್ತದೆ ಎಂದೆಲ್ಲಾ ಕನಸು ಕಂಡಿದ್ದ ವಿಜಯಾಂಬಿಕಾಗೆ ನೆಲವೇ ಕುಸಿದು ಬೀಳುತ್ತಿರುವ ಅನುಭವವಾಗುತ್ತದೆ. ಶ್ರೀವಲ್ಲಿ ಮಾತು ಕೇಳಿ ತಾನು ಕೆಟ್ಟೆ ಅನ್ನೋದು ಅವಳಿಗೆ ಅರ್ಥವಾಗುತ್ತದೆ. ಎಲ್ಲವೂ ಕಾನೂನುಬದ್ಧವಾಗಿ ನಡೆದು ಆಸ್ತಿ ಶ್ರಾವಣಿ ಹೆಸರಿಗೆ ರಿಜಿಸ್ಟರ್ ಆಗುತ್ತದೆ. ಮಾತ್ರವಲ್ಲ ಇದಕ್ಕೆ ಸಾಕ್ಷಿಯಾಗಿ ವಿಜಯಾಂಬಿಕಾ ಸಹಿ ಕೂಡ ಹಾಕಬೇಕಾಗುತ್ತದೆ. ಈಗ ಗಂಗಾಧರಯ್ಯನವರ ಸಮಸ್ತ ಆಸ್ತಿಗೂ ಶ್ರಾವಣಿ ಹಾಗೂ ಸುಬ್ಬುವೇ ಉತ್ತರಾಧಿಕಾರಿಗಳು. ಲಲಿತಾದೇವಿ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಸುರೇಂದ್ರನಿಗೆ ಸಿಹಿ ತರಲು ಕೂಡ ಹೇಳುತ್ತಾರೆ.
ಧನಲಕ್ಷ್ಮೀ ತಲೆ ಕೆಡಿಸುವ ಕಾಂತಮ್ಮ–ಸುಂದರ, ಶ್ರೀವಲ್ಲಿ ಮೇಲೆ ರೇಗುವ ವಿಜಯಾ
ವಿಶಾಲಾಕ್ಷಿ ಸೊಸೆಯ ಕಡೆ ವಾಲುವುದನ್ನು ಸಹಿಸದ ಸುಂದರ ಹಾಗೂ ಕಾಂತಮ್ಮ ನಿಧಾನಕ್ಕೆ ಧನಲಕ್ಷ್ಮೀಗೆ ಈ ವಿಚಾರ ಹೇಳಲು ಪ್ರಯತ್ನಪಡುತ್ತಾರೆ. ನಿನ್ನ ಅಮ್ಮ ಸೊಸೆ ಕಡೆ ವಾಲುತ್ತಿದ್ದಾರೆ, ಹೀಗೆ ಆದರೆ ನಾವೆಲ್ಲಾ ಮನೆ ಬಿಟ್ಟು ಹೋಗಬೇಕಾಗುತ್ತದೆ ಎಂದು ತಲೆ ಕೆಡಿಸಲು ನೋಡುತ್ತಾರೆ. ಆದರೆ ಧನಲಕ್ಷ್ಮೀ ಇದನ್ನೆಲ್ಲಾ ಒಪ್ಪುವುದಿಲ್ಲ. ನಮ್ಮ ಅಮ್ಮ ಶ್ರಾವಣಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವಾದ ಮಾಡುತ್ತಾಳೆ. ಆದರೆ ಕೆಲವು ಉದಾಹರಣೆ ಸಹಿತ ಹೇಳಿ ಧನಲಕ್ಷ್ಮೀ ಮನಸ್ಸು ಕೆಡಿಸುತ್ತಾರೆ ತಾಯಿ–ಮಗ.
ಇತ್ತ ಶ್ರೀವಲ್ಲಿ ಮಾತಿನಂತೆ ಸುಬ್ಬು ಯಾವುದೇ ಕಾರಣಕ್ಕೂ ಮ್ಯಾರೇಜ್ ಸರ್ಟಿಫಿಕೇಟ್ಗೆ ಸಹಿ ಹಾಕುವುದಿಲ್ಲ ಎಂದು ನಂಬಿದ್ದ ವಿಜಯಾಂಬಿಕಾ ಪ್ಲಾನ್ ಎಲ್ಲಾ ತಲೆ ಕೆಳಗಾಗಿರುತ್ತದೆ. ಅತ್ತ ಶ್ರೀವಲ್ಲಿ ರಿಜಿಸ್ಟ್ರರ್ ಆಫೀಸ್ನಲ್ಲಿ ತಾನು ಅಂದುಕೊಂಡಂತೆ ಸುಬ್ಬು–ಶ್ರಾವಣಿ ಮದುವೆ ವಿಚಾರ ಎಲ್ಲರೆದುರು ಬಯಲಾಗಿರುತ್ತದೆ, ಇನ್ನು ಮುಂದೆ ಸುಬ್ಬು ತನಗೆ ಮಾತ್ರ ಎಂದು ಸಂಭ್ರಮಿಸುತ್ತಿರುತ್ತಾಳೆ. ಆದರೆ ವಿಜಯಾಂಬಿಕಾ ಶ್ರೀವಲ್ಲಿಗೆ ಕಾಲ್ ಮಾಡಿ ಬಾಯಿಗೆ ಬಂದಂತೆ ಬಯ್ಯುತ್ತಾಳೆ. ಶ್ರಾವಣಿ ಮ್ಯಾರೇಜ್ ಸರ್ಟಿಫಿಕೇಟ್ ತಂದಿರುವ ವಿಚಾರ ಶ್ರೀವಲ್ಲಿಗೂ ಶಾಕ್ ನೀಡುತ್ತದೆ. ವಿಜಯಾಂಬಿಕಾ ತಾನು ಆಸ್ತಿಗಾಗಿ ಇದನ್ನೆಲ್ಲಾ ಮಾಡುತ್ತಿರುವುದು ಎಂಬುದು ಶ್ರೀವಲ್ಲಿಗೆ ಗೊತ್ತಾಗದಂತೆ ನಿಧಾನಕ್ಕೆ ಸಂಭಾಳಿಸಿ, ನಾನು ಇದನ್ನೆಲ್ಲಾ ಮಾಡುತ್ತಿರುವುದು ನಿನ್ನ ಒಳ್ಳೆಯದಕ್ಕೆ, ನಿನಗೆ ಸುಬ್ಬು ಸಿಗಲಿ ಎಂಬ ಕಾರಣಕ್ಕೆ ಎಂದು ಹೇಳಿ ಅವಳನ್ನು ನಂಬಿಸಲು ಪ್ರಯತ್ನ ಮಾಡುತ್ತಾಳೆ.
ತನ್ನ ಪ್ಲಾನ್ ಎಲ್ಲಾ ತಲೆ ಕೆಳಗಾಗಿ ಆಸ್ತಿ ಕೈ ತಪ್ಪಿ ಹೋಗಿದ್ದಕ್ಕೆ ಮುಂದೇನು ಮಾಡಬಹುದು ವಿಜಯಾಂಬಿಕಾ, ಸುಬ್ಬುವನ್ನು ಪಡೆಯುವ ಹಠದಲ್ಲಿರುವ ಶ್ರೀವಲ್ಲಿ ಗತಿಯೇನು, ಶ್ರಾವಣಿ ತನ್ನ ಹೆಸರಿಗೆ ಆಸ್ತಿ ರಿಜಿಸ್ಟರ್ ಆಗಿರುವುದು ಮನೆಯವರ ಮುಂದೆ ಹೇಳ್ತಾಳಾ, ಮ್ಯಾರೇಜ್ ಸರ್ಟಿಫಿಕೇಟ್ ವಿಚಾರದಲ್ಲಿ ಸುಬ್ಬು ನಿಲುವೇನು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ –ಆಸಿಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ