ಶ್ರಾವಣಿ ಪರವಾಗಿ ಅಮ್ಮನ ಜೊತೆ ಮಾತಾಡಿದ ಸುಬ್ಬು, ಮೋಸದಿಂದ ದುಡಿದ ದುಡ್ಡಲ್ಲಿ ಕಾಂತಮ್ಮ–ಸುಂದರ ದರ್ಬಾರ್‌; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ ಪರವಾಗಿ ಅಮ್ಮನ ಜೊತೆ ಮಾತಾಡಿದ ಸುಬ್ಬು, ಮೋಸದಿಂದ ದುಡಿದ ದುಡ್ಡಲ್ಲಿ ಕಾಂತಮ್ಮ–ಸುಂದರ ದರ್ಬಾರ್‌; ಶ್ರಾವಣಿ ಸುಬ್ರಹ್ಮಣ್ಯ

ಶ್ರಾವಣಿ ಪರವಾಗಿ ಅಮ್ಮನ ಜೊತೆ ಮಾತಾಡಿದ ಸುಬ್ಬು, ಮೋಸದಿಂದ ದುಡಿದ ದುಡ್ಡಲ್ಲಿ ಕಾಂತಮ್ಮ–ಸುಂದರ ದರ್ಬಾರ್‌; ಶ್ರಾವಣಿ ಸುಬ್ರಹ್ಮಣ್ಯ

ತಾಯಿ ಬಳಿ ಶ್ರಾವಣಿ ಪರವಾಗಿ ಮಾತನಾಡಿದ ಸುಬ್ಬು. ಮಿನಿಸ್ಟರ್ ಹೆಸರಲ್ಲಿ ಫೇಕ್ ಪ್ರಾಡಕ್ಟ್ ಸೇಲ್ ಮಾಡಿ ಕೈ ತುಂಬ ಕಮಿಷನ್ ಪಡೆದ ಕಾಂತಮ್ಮ–ಸುಂದರ. ಸುಬ್ಬುವನ್ನು ಕೆಲಸದಿಂದ ತೆಗೆಯಲ್ಲ ಎಂದು ದೃಢವಾಗಿ ಹೇಳಿದ ಮಿನಿಸ್ಟರ್ ವೀರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 28ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 28ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 28ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 28ರ ಸಂಚಿಕೆಯಲ್ಲಿ ಅಮ್ಮ (ವಿಶಾಲು) ಶ್ರಾವಣಿ ಜೊತೆ ಜಗಳ ಮಾಡೋದು ಕಂಡ ಸುಬ್ಬುಗೆ ಬೇಸರವಾಗುತ್ತದೆ. ಅಮ್ಮನನ್ನು ಕರೆದು ಸಮಾಧಾನದಲ್ಲಿ ಮಾತನಾಡುವ ಸುಬ್ಬು ‘ಅಮ್ಮ, ನೀನು ಶ್ರಾವಣಿ ಮೇಡಂಗೆ ಪದೇ ಪದೇ ಬಯ್ಯೋದು ಚೆನ್ನಾಗಿ ಅನ್ಸೊಲ್ಲ. ಅವರು ಈ ಮನೆಗೆ ಬಂದಾಗಿನಿಂದ ನೀನು ಇವರಿಗೆ ಬಯ್ತಾನೆ ಇದೀಯಾ. ಕೆಲವೊಂದು ಕೆಟ್ಟ ಕಾಲ ಇರುತ್ತೆ ಅಮ್ಮ. ಈಗ ನನಗೆ ಕೆಟ್ಟ ಕಾಲ ನಡಿತಿದೆ, ಆದರೆ ಈ ಮನೆಗೆ ಬಂದ ಮೇಲೆ ಶ್ರಾವಣಿ ಮೇಡಂ ಒಂದು ದಿನಾನೂ ಖುಷಿಯಾಗಿ ಇರಲಿಲ್ಲ. ನೀನು ಅಕ್ಕ ಎಲ್ಲದ್ದಕ್ಕೂ ಅವರೇ ಕಾರಣ ಅನ್ನೋ ರೀತಿ ಬಯ್ತೀರಾ. ದಯವಿಟ್ಟು ನೀನು ಅವರಿಗೆ ಪದೇ ಪದೇ ಬ‌ಯ್ಯೋದು ನಿಲ್ಲಿಸಮ್ಮ, ನಮ್ಮ ಕೆಟ್ಟ ಟೈಮ್ ಕಳೆದ ಮೇಲೆ ಎಲ್ಲಾ ಸರಿಯಾಗುತ್ತೆ‘ ಅಂತ ಅಮ್ಮನಿಗೆ ಸಮಾಧಾನ ಮಾಡುತ್ತಾನೆ. ಮಗನ ಮಾತು ಕೇಳಿ ಮನಸ್ಸಲ್ಲೇ ಖುಷಿ ಪಡುವ ವಿಶಾಲು ಮಗನಿಗೂ ಸೊಸೆ ಮೇಲೆ ಪ್ರೀತಿಯಾಗಿದೆ ಎಂದುಕೊಳ್ಳುತ್ತಾರೆ. ಆದರೆ ಮೇಲ್ನೋಟಕ್ಕೆ ಅದನ್ನು ತೋರಿಸದೇ ‘ನಂಗೆ ಹೇಗೆ ಇರಬೇಕು ಅಂತ ನೀನು ಹೇಳಿಕೊಡೋದು ಬೇಡ. ಹೇಗೆ ಇರ್ಬೇಕು ಅಂತ ನಂಗೆ ಗೊತ್ತು‘ ಅಂತ ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.

ಮಿನಿಸ್ಟರ್ ಹೆಸರಲ್ಲಿ ಫೇಕ್ ಪ್ರಾಡಕ್ಟ್ ಮಾರಿದ ಕಾಂತಮ್ಮ–ಸುಂದರನಿಗೆ ಸಿಕ್ತು ಕಮಿಷನ್‌

ಮಿನಿಸ್ಟರ್‌ ವೀರೇಂದ್ರ ಹೆಸರು ಹೇಳಿಕೊಂಡು ರಿಜೆಕ್ಟೆಡ್‌ ಡಿಜಿಟಲ್ ಸ್ಲೇಟ್‌ಗಳನ್ನು ಮಾರಾಟ ಮಾಡಿ 20 ಸಾವಿರ ಗಳಿಸಿದ ಸುಂದರ–ಕಾಂತಮ್ಮ ಅದನ್ನು ಪ್ರಾಡಕ್ಟ್‌ ಓನರ್‌ಗೆ ನೀಡುತ್ತಾರೆ. ಅವನು ಮೊದಲ ದಿನವೇ ಎಲ್ಲಾ ಪ್ರಾಡಕ್ಟ್ ಸೇಲ್ ಮಾಡಿದ್ದಕ್ಕಾಗಿ ಅವರನ್ನು ಹೊಗಳಿ ಅಟ್ಟಕ್ಕೇರಿಸಿ 5000 ಕಮಿಷನ್ ಕೊಡುತ್ತಾನೆ. ಮೊದಲ ದಿನವೇ 5000 ಸಾವಿರ ದುಡಿದ ಸುಂದರ–ಕಾಂತಮ್ಮ ಖುಷಿ ಪಡುತ್ತಾರೆ. ಮಾತ್ರವಲ್ಲ ಆ ದುಡ್ಡಿನಲ್ಲಿ ಕಾಂತಮ್ಮನಿಗೊಂದು, ಧನಲಕ್ಷ್ಮೀಗೊಂದು ಸೀರೆ ತಗೆದುಕೊಂಡು ಹೋಗಿ ಮನೆಯಲ್ಲಿ ಧನಲಕ್ಷ್ಮೀ ಎದುರು ತಾವೇನೋ ಘನಂದಾರಿ ಕೆಲಸ ಮಾಡಿಕೊಂಡು ಬಂದಂತೆ ಬಿಲ್ಡಪ್‌ ಕೊಡುತ್ತಾರೆ.

ಸುಬ್ಬುವನ್ನು ಕೆಲಸದಿಂದ ತೆಗಿ ಎಂದು ಅಣ್ಣನಿಗೆ ಸಲಹೆ ಕೊಟ್ಟ ಸುರೇಂದ್ರ

ಅತ್ತೆಗೆ ಕಾಲ್ ಮಾಡಿ ಮನೆಗೆ ಸುರಕ್ಷಿತವಾಗಿ ತಲುಪಿದ್ರಾ, ಎಲ್ಲರೂ ಚೆನ್ನಾಗಿದ್ದಾರಾ ಎಂದು ಉಭಯಕುಶಲೋಪರಿ ವಿಚಾರಿಸುವ ವೀರೇಂದ್ರನ ಬಳಿ ಸುರೇಂದ್ರ ‘ಅಣ್ಣಾ ಹೇಗೋ ದೊಡ್ಡಮ್ಮೋರು ಊರಿಗೆ ಹೋದ್ರು, ಇನ್ನಾದ್ರೂ ಆ ಸುಬ್ಬುನಾ ಕೆಲಸದಿಂದ ತೆಗಿಬೋದಲ್ಲ. ಅವರ ಮಾತಿಗೆ ಕಟ್ಟುಬಿದ್ದು ನೀನು ಅವನನ್ನು ಕೆಲಸಕ್ಕೆ ಸೇರಿಸಿಕೊಂಡೆ. ಆದರೆ ಈಗ ಅವರು ಇಲ್ಲಿಲ್ಲ. ನೀನು ಆ ಸುಬ್ಬುವನ್ನು ಕೆಲಸದಿಂದ ವಜಾ ಮಾಡು‘ ಎಂದು ಸಲಹೆ ಕೊಡುತ್ತಾನೆ. ‘ನನಗಂತೂ ಅವನು ಇಲ್ಲಿರೋದು ಸ್ವಲ್ಪವೂ ಸರಿ ಕಾಣ್ತಿಲ್ಲ‘ ಎಂದು ಅಣ್ಣನ ಬಳಿ ಹೇಳುತ್ತಾನೆ. ಅದಕ್ಕೆ ವೀರೇಂದ್ರ ‘ನನಗೂ ಅಷ್ಟೇ ಸುರೇಂದ್ರ, ಅತ್ತೆಯ ಮಾತನ್ನು ತೆಗೆದು ಹಾಕೋದು ಸರಿ ಕಾಣೊಲ್ಲ. ಅತ್ತೆಗೆ ನಾನು ಮಾತು ಕೊಟ್ಟಿದ್ದೇನೆ. ಹಾಗಾಗಿ ನಾನು ಸುಬ್ಬುವನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡಲು ಸಾಧ್ಯವಿಲ್ಲ‘ ಎಂದು ಖಡಾಖಂಡಿತವಾಗಿ ಹೇಳಿ ಹೊರಟು ಹೋಗುತ್ತಾನೆ. ಇತ್ತ ವಂದನಾ ಗಂಡನನ್ನು ಸಮಾಧಾನ ಮಾಡಿ ‘ರೀ ಅವರು ನಮ್ಮ ಮನೆಯ ಮಕ್ಕಳು. ಅವರು ತಪ್ಪು ಮಾಡಿದಾಗ ನಾವು ಕ್ಷಮಿಸಬೇಕು ಎಂದು ಹೇಳಿದಾಗ ಮತ್ತಷ್ಟು ಕೋಪಗೊಳ್ಳುವ ಸುರೇಂದ್ರ ‘ವಂದನಾ ನೀನು ಮತ್ತು ಅಣ್ಣ ಅವರನ್ನು ಕ್ಷಮಿಸಬಹುದು. ನಾನು ಮಾತ್ರ ಅವರನ್ನು ಯಾವಾಗಲೂ ಕ್ಷಮಿಸೊಲ್ಲ. ಅವರು ಮಾಡಿದ್ದು ಮೋಸ, ನಂಬಿಕೆ ದ್ರೋಹ‘ ಎಂದು ಕೋಪದಲ್ಲಿ ಹೇಳಿಹೋಗುತ್ತಾನೆ.

ಶ್ರಾವಣಿ ಬಳಿ ಕ್ಷಮೆ ಕೇಳುವ ಸುಬ್ಬು

ರಾತ್ರಿ ಶ್ರಾವಣಿಗೆ ಕೋಣೆಗೆ ಬರುವವರೆಗೂ ಕಾಯುವ ಸುಬ್ಬು ಅವಳು ಬಂದ ಕೂಡಲೇ ‘ಮೇಡಂ, ನೀವು ಈ ಮನೆಗೆ ಬಂದ ಮೇಲೆ ಎಷ್ಟೆಲ್ಲಾ ನೋವು ಅನುಭವಿಸಿದ್ದೀರಾ, ಪ್ರತಿದಿನ ಎಲ್ಲರೂ ನಿಮಗೆ ನೋವು ಕೊಡುತ್ತಾರೆ. ಒಂದು ದಿನವೂ ನಿಮಗೆ ಖುಷಿ ಇಲ್ಲ. ಆದರೂ ನಗು ನಗುತ್ತಾ ಇರ್ತಿರಾ, ಇದೆಲ್ಲಾ ಹೇಗೆ ಸಾಧ್ಯ ಮೇಡಂ, ಇನ್ನು ಎಷ್ಟು ದಿನ ಹೀಗೆ ಇರ್ತೀರಾ ಮೇಡಂ, ಮನೆಯವರ ಎದುರು ಎಲ್ಲಾ ಸತ್ಯವನ್ನು ಹೇಳಿ ಬಿಡೋಣ. ಮದುವೆ ಗುಟ್ಟನ್ನು ರಟ್ಟು ಮಾಡೋಣ‘ ಅಂತ ಮತ್ತೆ ಹೇಳಲು ನೋಡುತ್ತಾನೆ. ಆಗ ಕೋಪ ಮಾಡಿಕೊಳ್ಳುವ ಶ್ರಾವಣಿ ‘ಸುಬ್ಬು ಈ ವಿಚಾರ ಬಿಡು ಈಗ‘ ವಾರ್ನಿಂಗ್ ಕೊಟ್ಟಂತೆ ಮಾತನಾಡುತ್ತಾಳೆ. ಆದರೆ ಸುಬ್ಬು ಮಾತ್ರ ‘ನಮ್ಮ ಅಮ್ಮ ನಿಮಗೆ ಹೀಗೆಲ್ಲಾ ಬಯ್ಯೋದಕ್ಕೆ ಕ್ಷಮೆ ಇರಲಿ ಮೇಡಂ. ನೀವು ಯಾವುದನ್ನೂ ಮನಸ್ಸಿಗೆ ತಗೋಬೇಡಿ ಮೇಡಂ‘ ಅಂತ ಶ್ರಾವಣಿ ಬಳಿ ಕ್ಷಮೆ ಕೇಳಿ, ಸಮಾಧಾನ ಮಾಡುತ್ತಾನೆ. ಅವರ ಮಾತನ್ನು ಕದ್ದು ಕೇಳಿಸಿಕೊಳ್ಳುವ ಕಾಂತಮ್ಮ ಸುಬ್ಬು ಶ್ರಾವಣಿ ವಿಚಾರದಲ್ಲಿ ಸಾಫ್ಟ್ ಆದ್ರೆ ಶ್ರೀವಲ್ಲಿ ಈ ಮನೆಗೆ ಸೊಸೆಯಾಗಿ ಬರೋದು ಕಷ್ಟ ಅಂತ ಯೋಚಿಸುತ್ತಾಳೆ. ಸುಬ್ಬು–ಶ್ರಾವಣಿ ಮಾತನಾಡುವಾಗ ಮಧ್ಯೆ ಹೋಗಿ ‘ನಾನು ಸ್ವಲ್ಪ ಶ್ರಾವಣಿ ಮೇಡಂ ಜೊತೆ ಮಾತನಾಡಬೇಕು‘ ಎಂದು ಹೇಳಿ ಕರೆದುಕೊಂಡು ಹೋಗುತ್ತಾಳೆ.

ಶ್ರಾವಣಿಯನ್ನು ಬದಿಗೆ ಕರೆಯುವ ಕಾಂತಮ್ಮ ಹೇಳೋದಾದ್ರು ಏನು, ಮಿನಿಸ್ಟರ್ ಹೆಸರಲ್ಲಿ ಕಾಂತಮ್ಮ–ಸುಂದರ ಮಾಡುತ್ತಿರುವ ಮೋಸ ಸುಬ್ಬುಗೆ ಗೊತ್ತಾಗುತ್ತಾ, ವಿಶಾಲು–ಶ್ರಾವಣಿ ಧನಲಕ್ಷ್ಮೀ ಮುಂದೆ ಮಾಡುವ ನಾಟಕ ಎಲ್ಲಿಗೆ ಹೋಗಿ ಮುಟ್ಟಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.