ವಿಜಯಾಂಬಿಕಾ ಅಸಲಿ ಮುಖ ಬಯಲು ಮಾಡಲು ಹೊರಟ ವಂದನಾಗೆ ಬೆದರಿಕೆ, ಸುಬ್ಬು ಮುಂದೆ ಶ್ರೀವಲ್ಲಿ ರಂಪಾಟ; ಶ್ರಾವಣಿ ಸುಬ್ರಹ್ಮಣ್ಯ
ನಂದಿನಿ ಕಂಡಿದ್ದು ಕನಸೋ ನನಸೋ ಎಂಬ ಗೊಂದಲದಲ್ಲಿ ವಿಜಯಾಂಬಿಕಾ, ಕಾಂತಮ್ಮನಿಂದ ಶ್ರಾವಣಿಗೆ ಸೀರೆ ಗಿಫ್ಟ್. ವಿಜಯಾಂಬಿಕಾ ಬಗ್ಗೆ ಗಂಡನಿಗೆ ಹೇಳಲು ಹೊರಟ ವಂದನಾಗೆ ಬೆದರಿಕೆ. ಶ್ರೀವಲ್ಲಿ ರಂಪಾಟ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 29ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್ 29ರ ಸಂಚಿಕೆಯಲ್ಲಿ ಮಲಗಿದ್ದ ವಿಜಯಾಂಬಿಕಾ ಇದ್ದಕ್ಕಿದ್ದ ಹಾಗೆ ಗಾಬರಿಯಲ್ಲಿ ಎದ್ದೇಳುತ್ತಾಳೆ. ಅವಳಿಗೆ ತಾನು ಕಂಡಿದ್ದು ಕನಸೋ ನನಸೋ ಎನ್ನುವುದು ಅರ್ಥವಾಗುವುದಿಲ್ಲ. ನಂದಿನಿಯನ್ನು ತಾನೇ ಕೈಯಾರೆ ಸಾಯಿಸಿದ್ದೆ, ಆದರೆ ಅವಳು ಬದುಕಿ ಬರಲು ಹೇಗೆ ಸಾಧ್ಯ ಎಂದು ಯೋಚಿಸಿ ಗಾಬರಿಗೊಳ್ಳುತ್ತಾಳೆ. ಮಾತ್ರವಲ್ಲ ತಾನು ನಂದಿನಿಯನ್ನು ಹುಡುಕಿ ಹೊರಟಾಗ ಪದ್ಮನಾಭ ಹೇಗೆ ಅಡ್ಡ ಬಂದಿದ್ದು, ಅವನಿಗೆ ತನ್ನ ಬಗ್ಗೆ ಎಲ್ಲಾ ವಿಚಾರಗಳು ತಿಳಿದಿದ್ಯಾ ಅನ್ನೋ ಚಿಂತೆ ವಿಜಯಾಂಬಿಕಾಳನ್ನು ಕಾಡುತ್ತದೆ. ಅವಳಿಗೆ ಎಲ್ಲವೂ ಅಯೋಮಯವಾಗಿ ಕಾಡುತ್ತದೆ.
ಶ್ರಾವಣಿಗೆ ಸೀರೆ ಗಿಫ್ಟ್ ಮಾಡುವ ಕಾಂತಮ್ಮ
ಶ್ರಾವಣಿಯನ್ನು ರೂಮ್ನಿಂದ ಕರೆದುಕೊಂಡು ಬಂದು ಅವಳೆದುರು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತು ದುರ್ಬಾರ್ ಮಾಡುವ ಕಾಂತಮ್ಮ ನೀನು ಬಡವನ ಮನೆಗೆ ಮದುವೆಯಾಗಿ ಬಂದಿರುವ ಕಡು ಬಡವಿ, ನೀನು ಮದುವೆಯಾಗಿ ಬಂದಾಗ ನಾನು ನಿಂಗೊಂದು ಸೀರೆ ಕೊಟ್ಟಿದ್ದೆ. ಆಗ ಸೀರೆಯನ್ನು ವಾಪಾಸ್ ಕೇಳಿದಾಗ ನೀವು ಮುಖ ಸಣ್ಣ ಮಾಡಿಕೊಂಡು ಅಳಲು ಶುರು ಮಾಡಿದ್ದೆ. ಈಗ ನೀನು ನಯಾ ಪೈಸೆ ಇಲ್ಲದ ಭಿಕಾರಿ ಎಂದೆಲ್ಲಾ ಅವಮಾನ ಮಾಡುತ್ತಿರುತ್ತಾಳೆ. ಅಷ್ಟೊತ್ತಿಗೆ ಸರಿಯಾಗಿ ಶ್ರಾವಣಿ ಮೊಬೈಲ್ ‘ನಿಮ್ಮ ಆಸ್ತಿ ರಿಜಿಸ್ಟ್ರೇಷನ್ ಕೆಲಸಗಳು ಮುಕ್ತಾಯವಾಗಿದೆ‘ ಎಂದು ಮೆಸೇಜ್ ಬರುತ್ತದೆ. ಕಾಂತಮ್ಮ ಶ್ರಾವಣಿಗೆ ದುಡ್ಡಿಲ್ಲ ಎಂದು ಹಂಗಿಸುವ ಹೊತ್ತಿಗೆ ನಿಮ್ಮ ಬ್ಯಾಂಕ್ ಖಾತೆ ಇನ್ನು ಮುಂದೆ ಸಕ್ರಿಯವಾಗಿ ಚಲಾವಣೆಯಾಗುತ್ತದೆ ಎಂದು ಮೆಸೇಜ್ ಬರುತ್ತದೆ. ಕಾಂತಮ್ಮ ಕೊನೆಗೆ ಶ್ರಾವಣಿಗೊಂದು ಸೀರೆ ಕೊಟ್ಟು ‘ಇದು ನಿನಗೆ ನಾನು ಕೊಡುತ್ತಿರುವ ಗಿಫ್ಟ್. 350 ರೂಪಾಯಿ ಈ ಸೀರೆ ನಿನ್ನ ಯೋಗ್ಯತೆಗೆ ಹೆಚ್ಚು‘ ಎಂದು ಅವಮಾನ ಮಾಡಿ ಸೀರೆ ಕೊಟ್ಟು ಕಳುಹಿಸುತ್ತಾಳೆ. ಕಾಂತಮ್ಮ ಸೀರೆ ಕೊಟ್ಟಿದ್ದು ಶ್ರಾವಣಿಗೆ ಅನುಮಾನ ಮೂಡಿಸುತ್ತದೆ. ಇಲ್ಲೇನೋ ಸರಿಯಿಲ್ಲ ಅನ್ನೋದು ಅವಳಿಗೆ ಅರ್ಥವಾಗುತ್ತದೆ. ಕಾಂತಮ್ಮನ ವರಸೆ ಯಾವ ಕಾರಣಕ್ಕೆ ಬದಲಾಗಿರಬಹುದು ಎಂದು ಶ್ರಾವಣಿ ಯೋಚಿಸುತ್ತಾಳೆ.
ವಿಜಯಾಂಬಿಕಾ ರೂಮ್ನಲ್ಲಿ ಗನ್ ನೋಡಿದ ವಂದನಾ
ವಿಜಯಾಂಬಿಕಾ ಕೊಲೆ ಮಾಡುತ್ತೇನೆ ಎಂದಿದ್ದನ್ನೆಲ್ಲಾ ಕೇಳಿಸಿಕೊಂಡಿದ್ದ ವಂದನಾ ಅದರ ಬಗ್ಗೆಯೇ ಯೋಚಿಸುತ್ತಾಳೆ. ಅವಳ ರೂಮ್ನಲ್ಲಿ ತಡಕಾಡಿದರೆ ಏನಾದರೂ ಸುಳಿವು ಸಿಗಬಹುದು ಎಂದು ರೂಮ್ಗೆ ಹೋಗಿ ಹುಡುಕಾಡುತ್ತಾಳೆ. ಆರಂಭದಲ್ಲಿ ಏನೂ ಸಿಗದಿದ್ದ ಅವಳಿಗೆ ಕಾಟ್ನ ಡ್ರಾಯರ್ನಲ್ಲಿ ರಿವಲ್ವಾರ್ ಇರುವುದು ಕಾಣುತ್ತದೆ. ಅದನ್ನು ನೋಡಿ ಗಾಬರಿಯಾಗಿ ಗಂಡನಿಗೆ ಹೇಳಬೇಕು ಎಂದುಕೊಂಡು ಓಡಿ ಬರುತ್ತಿರುವಾಗ ವಿಜಯಾಂಬಿಕಾ ಎದುರಾಗುತ್ತಾಳೆ. ಅವಳು ವಂದನಾಳನ್ನು ತಡೆಯಲು ನೋಡಿದರೂ ಕೇಳದೇ ಓಡಿ ಹೋಗುತ್ತಾಳೆ. ಓಡಿ ಹೋಗಿ ತನ್ನ ಗಂಡನ ಬಳಿ ‘ವಿಜಯಾ ಅಕ್ಕ ನೀವು ಅಂದುಕೊಂಡಂತೆ ಅಲ್ಲ, ಅವರ ಬಳಿ ಏನಿದೆ ಅನ್ನೋದನ್ನ ನಾನು ನಿಮಗೆ ತೋರಿಸ್ತೀನಿ‘ ಎಂದು ಗಂಡನನ್ನು ಎಳೆದುಕೊಂಡು ವಿಜಯಾಂಬಿಕಾ ರೂಮ್ಗೆ ಹೋಗ್ತಾಳೆ. ಆದರೆ ಅವಳು ರೂಮ್ಗೆ ಬರುವಷ್ಟರಲ್ಲಿ ರಿವಾಲ್ವರ್ ತೆಗೆದಿರಿಸಿ, ಮಕ್ಕಳಾಡುವ ವಾಟರ್ ಗನ್ ತಂದು ಇಟ್ಟಿರುತ್ತಾಳೆ ಕೇಡಿ ವಿಜಯಾಂಬಿಕಾ. ಆದರೆ ಗನ್ ಇತ್ತು ಎಂದು ಹೇಳಲು ಹೊರಟ ವಂದನಾ ಮಾತಿಗೆ ಅಡ್ಡ ಬರುವ ವಿಜಯಾಂಬಿಕಾ ಪಿಂಕಿ ಸುದ್ದಿ ಹೇಳಿ, ಪಿಂಕಿ ಸ್ಕೂಲ್ಗೆ ಹೋಗಿದಾಳೆ ಅಲ್ವಾ, ಸ್ಕೂಲ್ ವ್ಯಾನ್ ಅಲ್ಲಿ ಬರ್ತಾಳಾ ಅಥವಾ ನಮ್ಮ ಕಾರಿನಲ್ಲಿ ಬರ್ತಾಳಾ, ಇತ್ತೀಚೆಗೆ ಆಕ್ಸಿಡೆಂಟ್ಗಳು ಹೆಚ್ಚಾಗುತ್ತಿವೆ ಎಂದು ಹೇಳಿ ಮಗಳಿಗೆ ಅಪಾಯ ಮಾಡುತ್ತೇನೆ ಎಂದು ವಂದನಾಗೆ ಸೂಚ್ಯವಾಗಿ ಹೆದರಿಸುತ್ತಾಳೆ. ಇದರಿಂದ ಗಾಬರಿಗೊಳ್ಳುವ ವಂದನಾ ಇರುವ ಸತ್ಯವನ್ನು ಹೇಳಲಾಗದೇ ಸುಮ್ಮನಾಗುತ್ತಾಳೆ. ಆದರೆ ವಿಜಯಾಂಬಿಕಾ ಈ ವಂದನಾಳನ್ನು ಹೀಗೆ ಬಿಟ್ಟರೆ ಪರಿಸ್ಥಿತಿ ಕೆಡಬಹುದು ಎಂದು ಯೋಚಿಸಿ, ಪ್ಲಾನ್ ಮಾಡುತ್ತಾಳೆ.
ಸುಬ್ಬು ಮುಂದೆ ಶ್ರೀವಲ್ಲಿ ರಂಪಾಟ
ಕೆಲಸಕ್ಕೆಂದು ಹೊರಟ ಸುಬ್ಬು ಮುಂದೆ ಬಂದು ನಿಲ್ಲುವ ಶ್ರೀವಲ್ಲಿ ‘ಸುಬ್ಬು ನೀನು ಅದು ಹೇಗೆ ಮ್ಯಾರೇಜ್ ಸರ್ಟಿಫಿಕೇಟ್ಗೆ ಸೈನ್ ಮಾಡಿದೆ. ಆ ಶ್ರಾವಣಿ ನಿಂಗೆ ಹೆದರಿಸಿ ಬೆದರಿಸಿ ಸೈನ್ ಮಾಡಿಸಿಕೊಂಡಿದ್ದು ಅಲ್ವಾ? ನನಗೆ ಗೊತ್ತು ನೀನು ಅವಳಿಗೆ ಹೆದರಬೇಡ ನಾನು ನಿನ್ನ ಜೊತೆ ಇರ್ತೀನಿ. ನೀನು ಸೈನ್ ಮಾಡಲ್ಲ ಅಂತ ಹೇಳಿದ್ದು ನಾನೇ ನನ್ನ ಕಿವಿಯಾರೆ ಕೇಳಿಸಿಕೊಂಡಿದ್ದೆ. ಆದರೂ ಮ್ಯಾರೇಜ್ ಸರ್ಟಿಫಿಕೇಟ್ ಹೇಗೆ ಬಂತು. ನೀನು ಆ ಶ್ರಾವಣಿಗೆ ಹೆದರಬೇಕಿಲ್ಲ. ಏನೇ ಆದರೂ ಪ್ರಪಂಚವೇ ಎದುರು ನಿಂತರೂ ನಾನು ನಿನ್ನ ಪರವಾಗಿ ಇರ್ತೀನಿ‘ ಅಂತೆಲ್ಲಾ ಮಾತನಾಡುತ್ತಾಳೆ. ಆದರೆ ಸುಬ್ಬು ಮಾತ್ರ ಏನೂ ಉತ್ತರ ಕೊಡುವುದಿಲ್ಲ. ನಾನು ಶ್ರಾವಣಿ ಮೇಡಂ ಮಾತನಾಡಿದ್ದೆಲ್ಲಾ ಶ್ರೀವಲ್ಲಿಗೆ ಹೇಗೆ ಗೊತ್ತಾಯ್ತು ಎಂದು ಸುಬ್ಬು ತಲೆ ಕೆಡಿಸಿಕೊಳ್ಳುತ್ತಾನೆ.
ಇನ್ನೊಂದೆಡೆ ಭಾವ ಕೆಲಸಕ್ಕೆ ಹೋಗುತ್ತಿರುವುದು, ಕೆಲಸಕ್ಕೆ ಹೋದ ಮೊದಲ ದಿನವೇ ಹೆಂಡತಿಗೆ ಸೀರೆ ತಂದಿರುವುದು ಇದೆಲ್ಲಾ ಸುಬ್ಬುಗೆ ಅನುಮಾನ ಮೂಡಿಸುತ್ತದೆ. ಆದರೆ ಅಕ್ಕನಿಗೆ ಹೇಳಲು ಹೊರಟರೆ ಅವಳು ಶ್ರಾವಣಿ ನಿನ್ನ ತಲೆ ಕೆಡಿಸಿದ್ದಾಳೆ ಎಂದು ಉಲ್ಟಾ ಮಾತನಾಡಲು ಶುರು ಮಾಡುತ್ತಾಳೆ.
ಸುಬ್ಬುಗೆ ಕಾಂತಮ್ಮ ಅತ್ತೆ– ಭಾವ ಮಾಡುತ್ತಿರುವುದು ಮೋಸದ ಕೆಲಸ ಅನ್ನೋದು ಗೊತ್ತಾಗುತ್ತಾ, ಶ್ರಾವಣಿ ಮೇಲೆ ಆರೋಪ ಮಾಡುತ್ತಿರುವ ಶ್ರೀವಲ್ಲಿಗೆ ತಕ್ಕ ಶಾಸ್ತಿ ಮಾಡ್ತಾಳಾ ಮಿನಿಸ್ಟರ್ ಮಗಳು, ವಂದನಾ ಸತ್ಯ ಹೇಳಬಹುದು ಎಂದು ಅವಳಿಗೆ ತೊಂದರೆ ಕೊಡ್ತಾಳಾ ವಿಜಯಾಂಬಿಕಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ –ಆಸಿಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ