ಕಾಂತಮ್ಮ–ಸುಂದರನ ಬಂಡವಾಳ ಶ್ರಾವಣಿ ಮುಂದೆ ಬಯಲು; ವಂದನಾಗೆ ಹುಚ್ಚಿ ಪಟ್ಟ ಕಟ್ಟಿದ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ‌
ಕನ್ನಡ ಸುದ್ದಿ  /  ಮನರಂಜನೆ  /  ಕಾಂತಮ್ಮ–ಸುಂದರನ ಬಂಡವಾಳ ಶ್ರಾವಣಿ ಮುಂದೆ ಬಯಲು; ವಂದನಾಗೆ ಹುಚ್ಚಿ ಪಟ್ಟ ಕಟ್ಟಿದ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ‌

ಕಾಂತಮ್ಮ–ಸುಂದರನ ಬಂಡವಾಳ ಶ್ರಾವಣಿ ಮುಂದೆ ಬಯಲು; ವಂದನಾಗೆ ಹುಚ್ಚಿ ಪಟ್ಟ ಕಟ್ಟಿದ ವಿಜಯಾಂಬಿಕಾ; ಶ್ರಾವಣಿ ಸುಬ್ರಹ್ಮಣ್ಯ‌

ಶ್ರಾವಣಿ ಮುಂದೆ ಬಯಲಾಯ್ತು ಕಾಂತಮ್ಮ–ಸುಂದರ ಮಾಡಿದ ಸ್ಕ್ಯಾಮ್‌. ವಂದನಾಗೆ ಹುಚ್ಚಿ ಪಟ್ಟ ಕಟ್ಟಿದ ವಿಜಯಾಂಬಿಕಾ. ಶ್ರಾವಣಿ ಕೊಟ್ಟ ಟಕ್ಕರ್‌ಗೆ ಭಯದಲ್ಲಿ ನಡುಗುತ್ತಿರುವ ಕಾಂತಮ್ಮ–ಸುಂದರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮೇ 5ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 5ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 5ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 5ರ ಸಂಚಿಕೆಯಲ್ಲಿ ಶ್ರಾವಣಿ ನಿಯೋಜಿಸಿದ್ದ ಡಿಟೆಕ್ಟರ್ ಕಡೆಯಿಂದ ಕಾಂತಮ್ಮ–ಸುಂದರ ಮಾಡುತ್ತಿರುವ ಕೆಲಸದ ಹಿಂದಿನ ಸತ್ಯ ಬಯಲಾಗಿದೆ. ಅಪ್ಪನ ಹೆಸರಿನಲ್ಲಿ ಸ್ಕ್ಯಾಮ್ ಮಾಡುತ್ತಿರುವುದು ಕಾಂತಮ್ಮ–ಸುಂದರ ಅನ್ನೋದು ಶ್ರಾವಣಿಗೆ ತಿಳಿಯುತ್ತದೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಕೆ ನಿರ್ಧಾರ ಮಾಡುತ್ತಾಳೆ.

ವಂದನಾಗೆ ತಲೆ ಕೆಟ್ಟಿದೆ ಎಂದು ತಮ್ಮಂದಿರನ್ನು ನಂಬಿಸಿದ ವಿಜಯಾಂಬಿಕಾ

ವಂದನಾ ಆರೋಗ್ಯದ ಬಗ್ಗೆ ಚಿಂತಿಸುತ್ತಾ ಮಾತನಾಡುತ್ತಿರುವ ವೀರೇಂದ್ರ–ಸುರೇಂದ್ರ ಬಳಿಗೆ ಬರುತ್ತಾಳೆ ವಿಜಯಾಂಬಿಕಾ. ವಂದನಾ ಸ್ಥಿತಿ ಈಗಲೂ ಹಾಗೆ ಇದೇ ಎಂದು ಸುರೇಂದ್ರ ಹೇಳಿದಾಗ ಬೇರೆ ಡಾಕ್ಟರ್‌ಗೆ ತೋರಿಸೋಣ ಎಂದು ವೀರೇಂದ್ರ ಕೇಳುತ್ತಾನೆ. ಆಗ ಗಾಬರಿಗೊಳ್ಳುವ ವಿಜಯಾಂಬಿಕಾ ‘ಅಯ್ಯೋ ವೀರು, ಅದೆಲ್ಲಾ ಏನು ಬೇಡ. ನಾನು ಈಗ ತೋರಿಸಿರುವುದು ನಂಬರ್ ಒನ್ ಸೈಕ್ಯಾಟಿಸ್ಟ್‌. ಅವರು ಈಗಷ್ಟೇ ಟ್ರೀಟ್‌ಮೆಂಟ್ ಶುರು ಮಾಡಿದ್ದಾರೆ. ವಂದನಾ ಬೇಗ ಸರಿ ಹೋಗುತ್ತಾಳೆ. ನೀವೇನೂ ಚಿಂತೆ ಮಾಡ್ಬೇಡಿ, ಅವಳ ಸಂ‍ಪೂರ್ಣ ಜವಾಬ್ದಾರಿ ನನ್ನದು‘ ಎಂದು ನಾಟಕ ಮಾಡುತ್ತಾಳೆ. ಸುರೇಂದ್ರನಿಗೂ ಕೂಡ ಅಕ್ಕ ಹೇಳಿದ್ದು ಸರಿ, ವಂದನಾ ಮನಃಸ್ಥಿತಿ ಸರಿಯಿಲ್ಲ ಎಂದು ಅನ್ನಿಸೋಕೆ ಶುರುವಾಗುತ್ತೆ. ತಮ್ಮಂದಿರು ವಂದನಾ ಜವಾಬ್ದಾರಿ ತನಗೆ ಕೊಟ್ಟಿದ್ದು ನೋಡಿ ಖುಷಿಯಾಗುತ್ತಾಳೆ ವಿಜಯಾಂಬಿಕಾ. ಆದರೆ ಅವಳ ಉದ್ದೇಶವೇ ಬೇರೆ ಅನ್ನೋದು ತಮ್ಮಂದಿರಿಗೆ ಅನುಮಾನವೂ ಬರುವುದಿಲ್ಲ. ಅಷ್ಟರಮಟ್ಟಿಗೆ ಅವರನ್ನು ನಂಬಿಸಿರುತ್ತಾಳೆ ವಿಜಯಾಂಬಿಕಾ.

ಸುಬ್ಬು ಮುಂದೆ ಸತ್ಯ ಹೇಳಲು ಹೊರಟಾ ವಂದನಾಳನ್ನು ತಡೆಯುವ ವಿಜಯಾ

ವಂದನಾಗೆ ಹುಷಾರಿಲ್ಲ ಎಂದು ಅವಳನ್ನು ಮಾತನಾಡಿಸಿಕೊಂಡು ಹೋಗಲು ಬರುವ ಸುಬ್ಬು ಅವಳು ನೆಲದಲ್ಲಿ ಕುಳಿತು ದುಃಖಿಸುತ್ತಿರುವುದನ್ನು ನೋಡಿ ಗಾಬರಿಯಾಗುತ್ತಾನೆ. ‘ಏನಾಯ್ತು ಮೇಡಂ, ಇಲ್ಯಾಕೆ ಕೂತಿದ್ದೀರಾ, ಮೇಲೆ ಕುತ್ಕೊಳ್ಳಿ‘ ಎಂದು ಹೇಳಿ ಸಮಾಧಾನ ಮಾಡುತ್ತಾನೆ, ಸುಬ್ಬುವನ್ನು ನೋಡಿ ಮನೆಯಲ್ಲಿ ಆಗುತ್ತಿರುವುದನ್ನೆಲ್ಲಾ ಹೇಳಲು ಬಾಯಿ ತೆರೆಯುತ್ತಾಳೆ ವಂದನಾ. ಅಷ್ಟೊತ್ತಿಗೆ ಅಲ್ಲಿಗೆ ಬರುವ ವಿಜಯಾಂಬಿಕಾ ಸುಬ್ಬುಗೆ ಬಾಯಿಗೆ ಬಂದಂತೆ ಬೈದು ಹೊರ ಕಳುಹಿಸುತ್ತಾಳೆ. ‘ನೀನು ಏನೇ ಮಾಡಿದ್ರು ನನ್ನನ್ನು ಏನು ಮಾಡ್ಕೊಳ್ಳೋಕೆ ಆಗೊಲ್ಲ. ಈ ಮನೆ ನಂದು, ಈ ಮನೆಯಲ್ಲಿ ಎಲ್ಲವೂ ನನ್ನ ಕಂಟ್ರೋಲ್‌ನಲ್ಲೇ ಇರಬೇಕು‘ ಎಂದು ದರ್ಪ ತೋರುತ್ತಾಳೆ. ಆದರೆ ವಂದನಾ ವಿಜಯಾಂಬಿಕಾಗೆ ‘ಒಂದಲ್ಲ ಒಂದು ದಿನ ನಿನ್ನ ಮುಖವಾಡ ಕಳಚುತ್ತೆ, ನೀನು ಯಾರು ಅನ್ನೋದು ಎಲ್ಲರಿಗೂ ಅರ್ಥ ಆಗುತ್ತೆ, ಈ ಜನ್ಮದಲ್ಲಿ ನೀನು ಮಾಡಿದ ಎಲ್ಲಾ ಪಾಪಗಳಿಗೆ ಶಿಕ್ಷೆ ಅನುಭವಿಸ್ತಿಯಾ‘ ಎಂದು ಹೇಳುತ್ತಾ ಅಳುತ್ತಾಳೆ. ವಂದನಾಗೆ ಈಗ ದಿಕ್ಕೇ ತೋಚದಂತಾಗುತ್ತದೆ.

ಶ್ರಾವಣಿ ಕೊಟ್ಟ ಶಾಕ್‌ಗೆ ಹೆದರಿ ನಡುಗುವ ಕಾಂತಮ್ಮ–ಸುಂದರ

ಕಾಂತಮ್ಮ–ಸುಂದರ ಡಿಜಿಟಲ್ ಸ್ಲೇಟ್ ಸ್ಕ್ಯಾಮ್ ಮಾಡಿರುವ ವಿಚಾರ ತಿಳಿದುಕೊಂಡ ಶ್ರಾವಣಿ ಅವರು ಸ್ಲೇಟ್ ಮಾರಾಟ ಮಾಡುತ್ತಿರುವ ಫೋಟೊಗಳನ್ನು ಪ್ರಿಂಟ್ ಹಾಕಿಸಿ ಒಂದು ಲೆಟರ್ ಬರೆದು ಶ್ಯಾಮಸುಂದರನ ಹೆಸರಿಗೆ ಕೊರಿಯರ್ ಮಾಡಿಸುತ್ತಾಳೆ. ಕೊರಿಯರ್‌ನಲ್ಲಿ ಬಂದ ತಮ್ಮ ಫೋಟೊಗಳು ಹಾಗೂ ಪತ್ರ ನೋಡಿ ಬೆಚ್ಚಿ ಬೀಳುತ್ತಾರೆ ಕಾಂತಮ್ಮ–ಸುಂದರ. ಕೊರಿಯರ್‌ನಲ್ಲಿ ಬಂದಿರುವ ಪತ್ರದಲ್ಲಿ ‘ನೀವು ನಾಳೆ ಇಂತಿಲ್ಲಿಗೆ ಬರಬೇಕು, ಬಂದಿಲ್ಲ ಅಂದ್ರೆ ನಿಮ್ಮ ಬಗ್ಗೆ ಎಲ್ಲಾ ವಿಷಯವನ್ನು ಮಿಡಿಯಾ ಹಾಗೂ ಮಿನಿಸ್ಟರ್ ಮುಂದೆ ಹೇಳುತ್ತೇನೆ‘ ಎಂದು ಬರೆದಿರುತ್ತದೆ. ಆದರೆ ಅದನ್ನು ಶ್ರಾವಣಿಯೇ ಮಾಡಿಸಿದ್ದು ಎಂದು ತಿಳಿಯದ ಕಾಂತಮ್ಮ–ಸುಂದರ ಹೆದರಿ ನಡಗುತ್ತಾರೆ. ರಾತ್ರಿ ಊಟವನ್ನೂ ಮಾಡದೇ ತಮಗೆ ಏನು ಶಿಕ್ಷೆಯಾಗಬಹುದು ಎಂದು ಯೋಚಿಸುತ್ತಾ ಕುಳಿತಿರುತ್ತಾರೆ. ಅದರ ನಡುವೆ ಸುಬ್ಬು ಕೂಡ ಬಂದು ಈ ಸ್ಕ್ಯಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ, ಅವರು ಜೀವನಪೂರ್ತಿ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡುತ್ತೇನೆ ಎಂದು ಹೇಳುತ್ತಾನೆ.

ಕಾಂತಮ್ಮ–ಸುಂದರನನ್ನು ಅಜ್ಞಾತಸ್ಥಳಕ್ಕೆ ಕರೆಸುವ ಶ್ರಾವಣಿ ಪ್ಲಾನ್ ಏನಿರಬಹುದು, ವಂದನಾ ಪರಿಸ್ಥಿತಿ ಮುಂದೇನಾಗಬಹುದು, ವಿಜಯಾಂಬಿಕಾ ಮುಖವಾಡ ಬಯಲು ಮಾಡಲು ವಂದನಾಗೆ ಸಿಗುತ್ತಾ ಅವಕಾಶ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.