ವಂದನಾಳಿಗೆ ಮಗಳನ್ನೂ ನೋಡಲು ಬಿಡದ ಪಾಪಿ ವಿಜಯಾಂಬಿಕಾ, ಮನೆ ಬಿಟ್ಟು ಹೋಗುವ ಭಾವನ ನಿರ್ಧಾರಕ್ಕೆ ಸುಬ್ಬು ಅಡ್ಡಿ; ಶ್ರಾವಣಿ ಸುಬ್ರಹ್ಮಣ್ಯ‌
ಕನ್ನಡ ಸುದ್ದಿ  /  ಮನರಂಜನೆ  /  ವಂದನಾಳಿಗೆ ಮಗಳನ್ನೂ ನೋಡಲು ಬಿಡದ ಪಾಪಿ ವಿಜಯಾಂಬಿಕಾ, ಮನೆ ಬಿಟ್ಟು ಹೋಗುವ ಭಾವನ ನಿರ್ಧಾರಕ್ಕೆ ಸುಬ್ಬು ಅಡ್ಡಿ; ಶ್ರಾವಣಿ ಸುಬ್ರಹ್ಮಣ್ಯ‌

ವಂದನಾಳಿಗೆ ಮಗಳನ್ನೂ ನೋಡಲು ಬಿಡದ ಪಾಪಿ ವಿಜಯಾಂಬಿಕಾ, ಮನೆ ಬಿಟ್ಟು ಹೋಗುವ ಭಾವನ ನಿರ್ಧಾರಕ್ಕೆ ಸುಬ್ಬು ಅಡ್ಡಿ; ಶ್ರಾವಣಿ ಸುಬ್ರಹ್ಮಣ್ಯ‌

ಮನೆ ಬಿಟ್ಟು ಹೋಗಿ, ಬೇರೆ ಮನೆ ಮಾಡುತ್ತೇವೆ ಎಂದ ಸುಂದರನ ನಿರ್ಧಾರಕ್ಕೆ ಅಡ್ಡಿಯಾಗುತ್ತಿದ್ದಾನೆ ಸುಬ್ಬು. ವಂದನಾಳ ಬಳಿ ಪಿಂಕಿ ಕೂಡ ಹೋಗಲು ಬಿಡುತ್ತಿಲ್ಲ ಪಾಪಿ ವಿಜಯಾಂಬಿಕಾ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮೇ 9ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 9ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 9ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 9ರ ಸಂಚಿಕೆಯಲ್ಲಿ ಭಾವ ಮನೆ ಬಿಟ್ಟು ಹೋಗಿ, ಸ್ವಂತ ಮನೆ ಮಾಡುತ್ತೇನೆ ಎಂದು ಹೇಳಿರುವುದರ ಬಗ್ಗೆಯೇ ಚಿಂತಿಸುತ್ತಿರುತ್ತಾನೆ ಸುಬ್ಬು. ಆಗ ಕೋಣೆಗೆ ಬರುವ ಶ್ರಾವಣಿ ಸುಬ್ಬು ಬಳಿ ‘ಯಾಕೆ ಸುಬ್ಬು, ಇಷ್ಟೊಂದು ಬೇಸರದಲ್ಲಿದ್ದೀಯಾ‘ ಎಂದು ಕೇಳುತ್ತಾಳೆ. ಆಗ ಸುಬ್ಬು ‘ಮೇಡಂ, ನೀವು ನಮ್ಮ ಭಾವನಿಗೆ ಏನಾದ್ರೂ ಹೇಳಿದ್ರಾ‘ ಎಂದು ನೇರವಾಗಿ ಕೇಳುತ್ತಾನೆ. ಅದಕ್ಕೆ ಶ್ರಾವಣಿ ‘ಸುಬ್ಬು ಈ ಮನೆಯಲ್ಲಿ ಎಲ್ಲರೂ ನನಗೆ ಏನಾದ್ರೂ ಹೇಳುತ್ತಾರೆ. ಆದರೆ ನಾನು ಮಾತ್ರ ಯಾರಿಗೂ ಏನೂ ಹೇಳುವುದಿಲ್ಲ. ಆದರೂ ನೀನು ನನ್ನ ಮೇಲೆ ಅನುಮಾನ ಪಡ್ತೀಯಾ. ಅದೂ ಅಲ್ಲದೇ ಸುಂದರ ಹಾಗೂ ಕಾಂತಮ್ಮ ಅವರು ನನಗೆ ಪದೇ ಪದೇ ಅನುಮಾನ ಮಾಡುತ್ತಾರೆ ಹೊರತು ನಾನು ಅವರಿಗೆ ತಿರುಗಿಸಿ ಒಂದೂ ಮಾತನಾಡಿಲ್ಲ‘ ಎಂದು ಹೇಳುತ್ತಾಳೆ. ಆಗ ಸುಬ್ಬು ‘ಹಾಗಲ್ಲ ಮೇಡಂ ನನಗೆ ಅವರು ಈ ಮನೆಯಿಂದ ಆಚೆ ಹೋಗೋದು ಇಷ್ಟ. ನನಗೆ ಮನೆಯಲ್ಲಿ ಎಲ್ಲರೂ ಇರಬೇಕು. ನನಗೆ ಎಷ್ಟೇ ಚಿಂತೆ, ನೋವು ಇದ್ರು ಮನೆಯವರ ಮುಖ ನೋಡಿ ಎಲ್ಲವನ್ನೂ ಮರೆಯುತ್ತೇನೆ. ವರ ಮದುವೆ ಆಗಿ ಬೇರೆ ಮನೆಗೆ ಹೋಗಿದ್ದಾಳೆ. ಈಗ ಅಕ್ಕ–ಭಾವ, ಐಶು ಕೂಡ ಮನೆ ಬಿಟ್ಟು ಹೋದ್ರೆ ನನ್ನಿಂದ ಸಹಿಸೋದು ಕಷ್ಟ‘ ಎಂದು ಬೇಸರ ತೋಡಿಕೊಳ್ಳುತ್ತಾನೆ. ಸುಬ್ಬು ಒಳ್ಳೆ ಮನಸ್ಸು ನೋಡಿ ಶ್ರಾವಣಿಗೆ ಕರುಳು ಚುರುಕ್ ಎನ್ನುತ್ತದೆ. ಆದರೂ ಅವಳು ಧನಲಕ್ಷ್ಮೀ ಬದುಕು ಸರಿ ಹೋಗಬೇಕು, ಸುಂದರನಿಗೆ ಜವಾಬ್ದಾರಿ ಬರಬೇಕು ಎಂದು ಯೋಚಿಸುತ್ತಾಳೆ.

ಶ್ರಾವಣಿ ಬಗ್ಗೆ ಕನಿಕರ ತೋರುವ ವೀರೇಂದ್ರ

ಸಮ್ಮರ್‌ ಕ್ಯಾಂಪ್‌ಗೆ ಹೋಗಿದ್ದ ಪಿಂಕಿ ಮನೆಗೆ ಬಂದವಳೇ ಅಮ್ಮನನ್ನು ನೋಡಬೇಕು ಎಂದು ಹಟ ಹಿಡಿಯುತ್ತಾಳೆ. ಆದರೆ ಸುರೇಂದ್ರ ಅಕ್ಕನ ಮಾತಿನಂತೆ ಪಿಂಕಿಯನ್ನು ಅವಳ ಬಳಿಗೆ ಕರೆದುಕೊಂಡು ಹೋಗದೇ ಸಮಾಧಾನ ಮಾಡುತ್ತಿರುತ್ತಾನೆ. ಆದರೆ ಪಿಂಕಿ ಅಳುತ್ತಾ ಅಮ್ಮನನ್ನು ನೋಡಬೇಕು ಎಂದು ಹಟ ಹಿಡಿಯುತ್ತಿರುತ್ತಾಳೆ. ಆಗ ಅಲ್ಲಿಗೆ ಬರುವ ವೀರೇಂದ್ರನ ಬಳಿ ಪಿಂಕಿ ದೂರು ಹೇಳುತ್ತಾಳೆ. ‘ಅಪ್ಪ ಅಮ್ಮನನ್ನು ನೋಡಲು ಬಿಡುತ್ತಿಲ್ಲ ನೋಡಿ ದೊಡಪ್ಪ‘ ಎಂದು ಅಳುತ್ತಾಳೆ. ಆ ಹೊತ್ತಿಗೆ ಸರಿಯಾಗಿ ಬರುವ ವಿಜಯಾಂಬಿಕಾ ಪಿಂಕಿ ಮುಂದೆ ನಾಟಕ ಮಾಡುತ್ತಾಳೆ. ‘ಈಗ ಅಮ್ಮ ಮಲಗಿದ್ದಾಳೆ, ಅವಳಿಗೆ ಎಚ್ಚರ ಆದ ಮೇಲೆ ನಾನೇ ನಿನ್ನನ್ನು ಕರೆದುಕೊಂಡು ಹೋಗಿ ತೋರಿಸುತ್ತೇನೆ‘ ಎಂದು ಹೇಳಿ ತಮ್ಮಂದಿರ ಮುಂದೆ ಹಾಗೂ ಪಿಂಕಿ ಮುಂದೆ ನಾಟಕ ಮಾಡುತ್ತಾಳೆ.

ಮನೆ ಬಿಟ್ಟು ಹೋಗಬೇಡಿ ಎಂದು ಭಾವನಿಗೆ ಹೇಳಿದ ಸುಬ್ಬು

ಶ್ರಾವಣಿ ಕೊಟ್ಟ ವಾರ್ನಿಂಗ್‌ನಂತೆ ಮನೆ ಬಿಟ್ಟು ಹೋಗಿ ದುಡಿಯಬೇಕು ಎಂದು ನಿರ್ಧಾರ ಮಾಡಿದ ಸುಂದರ ಮತ್ತೊಮ್ಮೆ ಸುಬ್ಬು ಹಾಗೂ ಮನೆಯವರೆಲ್ಲರನ್ನೂ ಕರೆದು ತಾನು ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಬೇಕು ಎಂದುಕೊಂಡಿದ್ದೇನೆ ಎನ್ನುವುದನ್ನು ಹೇಳುತ್ತಾನೆ. ನಾನು ಬೇರೆ ಮನೆ ಮಾಡಿ ನನ್ನ ಹೆಂಡತಿ, ಮಗಳು ಹಾಗೂ ತಾಯಿಯನ್ನು ನೋಡಿಕೊಳ್ಳುತ್ತೇನೆ. ನನಗೆ ಏನಾದರೂ ಸಾಧನೆ ಮಾಡಬೇಕು, ನನಗೂ ಜವಾಬ್ದಾರಿ ಇದೆ ಎಂದು ತೋರಿಸಬೇಕು ಅದಕ್ಕೆ ನಾನು ದುಡಿಯಲು ಹೋಗಬೇಕು ಎನ್ನುತ್ತಾನೆ. ಅದಕ್ಕೆ ಸುಬ್ಬು ‘ಭಾವ ನೀವು ಅದೇನೇ ಮಾಡುವುದಿದ್ದರೂ ಈ ಮನೆಯಲ್ಲೇ ಇದ್ದು ಮಾಡಿ. ಮನೆ ಬಿಟ್ಟು ಮಾತ್ರ ಹೋಗಬೇಡಿ‘ ಎಂದು ಬೇಡಿಕೊಳ್ಳುತ್ತಾನೆ. ಆಗ ಐಶು ಕೂಡ ಸುಬ್ಬು ಬಳಿ ಬಂದು ‘ಮಾಮ ನನಗೆ ಈ ಮನೆ ಬಿಟ್ಟು ಹೋಗೋಕೆ ಇಷ್ಟವಿಲ್ಲ. ನನಗೆ ನಿನ್ನನ್ನು ಶ್ರಾವಣಿ ಅತ್ತೆಯನ್ನು ಅಜ್ಜಿ–ತಾತನನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ದಯವಿಟ್ಟು ನನ್ನನ್ನು ಈ ಮನೆಯಿಂದ ಆಚೆ ಕಳುಹಿಸಬೇಡ‘ ಎಂದು ಅಳುತ್ತಾ ಹೇಳುತ್ತಾಳೆ. ಅವಳ ಅಳು ನೋಡಿ ಶ್ರಾವಣಿಗೂ ಅಳು ಬರುತ್ತದೆ. ಅವಳು ಹಾಲ್‌ನಿಂದ ಹೊರಟು ಬಿಡುತ್ತಾಳೆ.

ಪಿಂಕಿ–ವಂದನಾ ಭೇಟಿ ತಡೆದ ವಿಜಯಾಂಬಿಕಾ

ಪಿಂಕಿ ವಂದನಾ ಭೇಟಿಯಾದರೆ ತನ್ನ ಬಂಡವಾಳ ಬಯಲಾಗುತ್ತದೆ ಎಂದು ಅರಿತ ಯಾವುದೇ ಕಾರಣಕ್ಕೂ ಪಿಂಕಿ ಹಾಗೂ ವಂದನಾ ಭೇಟಿ ಮಾಡಬಾರದು ಎಂದು ನಿರ್ಧಾರ ಮಾಡುತ್ತಾಳೆ. ಆದರೆ ಮಗಳಿಗೆ ಊಟ ಮಾಡಿಸುವ ಸುರೇಂದ್ರನಿಗೆ ಅವಳ ಹಟ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಶ್ರಾವಣಿಗೆ ಕಾಲ್ ಮಾಡ್ತೀನಿ ಅಂತ ಫೋನ್ ತೆಗೆಯುವ ಅವಳ ಕೈಯಿಂದ ಫೋನ್ ಕಿತ್ತು ಬದಿಗಿಡುತ್ತಾನೆ ಸುರೇಂದ್ರ. ಆಗ ಪಿಂಕಿ ಅಮ್ಮ ಇರುವ ಕೋಣೆಯ ಕಡೆಗೆ ಓಡಿ ಹೋಗುತ್ತಾಳೆ. ಅಳುತ್ತಾ ಅಮ್ಮ ಅಮ್ಮ ಎಂದು ಕೂಗುತ್ತಾ ತಾಯಿ ಇರುವ ಕೋಣೆ ಕಡೆಗೆ ಹೋಗುವ ಅವಳನ್ನು ತಡೆದು ನಿಲ್ಲಿಸಲು ಸುರೇಂದ್ರ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಅವಳು ತಾಯಿಯ ಕೋಣೆಯ ಬಳಿ ಹೋಗಿ ಇನ್ನೇನು ಬಾಗಿಲು ತೆಗೆಯಬೇಕು ಅನ್ನುವಷ್ಟರಲ್ಲಿ ವಿಜಯಾಂಬಿಕಾ ಅಡ್ಡ ಬರುತ್ತಾಳೆ. ಕೋಣೆಯ ಒಳಗಿನಿಂದ ವಂದನಾ ಪಿಂಕಿ, ಪಿಂಕಿ ಎಂದು ಕರೆಯುತ್ತಿರುತ್ತಾಳೆ. ಇತ್ತ ಪಿಂಕಿ ಹೊರಗಿನಿಂದ ಅಮ್ಮ ಅಮ್ಮ ಎಂದು ಕರೆಯುತ್ತಾ ಅಳುತ್ತಿರುತ್ತಾಳೆ. ಆದರೆ ವಿಜಯಾಂಬಿಕಾ ರಾಕ್ಷಸಿಯಂತೆ ಬಾಗಿಲಿಗೆ ಅಡ್ಡ ನಿಂತು ಅಮ್ಮ–ಮಗಳು ಮುಖ ನೋಡದಂತೆ ತಡೆಯುತ್ತಾಳೆ. ಪಿಂಕಿ ವಂದನಾಳನ್ನು ಭೇಟಿಯಾದರೆ ಅವಳು ಎಲ್ಲವನ್ನೂ ಪಿಂಕಿ ಬಳಿ ಹೇಳುತ್ತಾಳೆ, ಪಿಂಕಿ ತನ್ನ ನಾಟಕ ನಂಬುವುದಿಲ್ಲ ಎನ್ನುವುದು ವಿಜಯಾಂಬಿಕಾಗೆ ಗೊತ್ತಿರುತ್ತದೆ.

ವಂದನಾಳ ಕಥೆ ಮುಂದೇನಾಗಬಹುದು, ವಿಜಯಾಂಬಿಕಾ ಬಂಧನದಿಂದ ವಂದನಾಳನ್ನು ರಕ್ಷಣೆ ಮಾಡುವವರು ಯಾರು, ಪಿಂಕಿ ಶ್ರಾವಣಿಗೆ ಈ ವಿಚಾರ ತಿಳಿಸ್ತಾಳಾ, ಸುಂದರ ಮನೆ ಬಿಟ್ಟು ಹೋಗದಂತೆ ತಡೆಯಲು ಸುಬ್ಬು ಯಶಸ್ವಿಯಾಗ್ತಾನಾ, ಸುಬ್ಬು ಮುಂದಿನ ನಿರ್ಧಾರ ಏನಿರಬಹುದು. ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.