ಭಾಗ್ಯಾ ಬದಲಾಗೊಲ್ಲ, ಬದಲಾಗಲು ನಾನು ಬಿಡುವುದೂ ಇಲ್ಲ, ಶ್ರೇಷ್ಠಾಗೆ ಸಮಾಧಾನ ಹೇಳಿದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 16ರ ಎಪಿಸೋಡ್ನಲ್ಲಿ ಅಮ್ಮನೇ ಶ್ರೇಷ್ಠಾಳನ್ನು ಕಟ್ಟಿ ಹಾಕಿರುವುದು ಎಂಬ ವಿಷಯ ತಾಂಡವ್ಗೆ ತಿಳಿಯುತ್ತದೆ. ಭಾಗ್ಯಾಗೆ ವಿಚಾರ ಹೇಳಿದರೆ ಇಬ್ಬರನ್ನೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಸುವುದಾಗಿ ಕುಸುಮಾ ವಾರ್ನ್ ಮಾಡುತ್ತಾಳೆ.
Bhagyalakshmi Kannada Serial: ಭಾಗ್ಯಾಗೆ ಎಲ್ಲಾ ಸತ್ಯ ಹೇಳಲು ಧರ್ಮರಾಜ್ ಹಾಗೂ ಕುಸುಮಾ ನಿರ್ಧರಿಸಿದರೂ, ಕೊನೆಗೆ ಅವಳಿಗೆ ಯಾವ ನಿಜವೂ ತಿಳಿಯಬಾರದು, ಇದರಿಂದ ಅವಳಿಗೆ ಬಹಳ ನೋವಾಗುತ್ತದೆ ಎಂದು ಕುಸುಮಾ ಮನಸ್ಸು ಬದಲಿಸುತ್ತಾಳೆ. ಭಾಗ್ಯಾಗೆ ಸುಳ್ಳು ಹೇಳಿ ಶ್ರೇಷ್ಠಾಗೆ ಕುಸುಮಾ ಊಟ ತೆಗೆದುಕೊಂಡು ಹೋಗುತ್ತಾಳೆ.
ಶ್ರೇಷ್ಠಾ ಮನೆಯಲ್ಲೆ ಇರುವುದನ್ನು ನೋಡಿ ಶಾಕ್ ಆದ ತಾಂಡವ್
ನೀವು ಎಷ್ಟು ದಿನ ಅಂತ ಹೀಗೆ ನನ್ನನ್ನು ಕಟ್ಟಿ ಹಾಕುತ್ತೀರಿ, ಒಂದಲ್ಲಾ ಒಂದು ದಿನ ನಾನು ಭಾಗ್ಯಾಗೆ ನಿಜ ಹೇಳುತ್ತೇನೆ, ತಾಂಡವ್ನನ್ನು ಮದುವೆ ಆಗುತ್ತೇನೆ ಎಂದು ಶ್ರೇಷ್ಠಾ ಕುಸುಮಾ ಬಳಿ ಮತ್ತೆ ಚಾಲೆಂಜ್ ಮಾಡುತ್ತಾಳೆ. ಪೊಲೀಸ್ ಸ್ಟೇಷನ್ಗೆ ಹೋಗಿ ಶ್ರೇಷ್ಠಾ ಕಾಣೆಯಾಗಿದ್ದರ ಬಗ್ಗೆ ದೂರು ನೀಡಿ, ತಾಂಡವ್ ಮತ್ತೆ ಶ್ರೇಷ್ಠಾ ಮನೆಗೆ ಬರುತ್ತಾನೆ. ಅಲ್ಲಿ ಶ್ರೇಷ್ಠಾ ಮನೆ ಬಾಗಿಲು ತೆಗೆದಿರುವುದನ್ನು ನೋಡಿ ಆಶ್ಚರ್ಯಗೊಳ್ಳುತ್ತಾನೆ. ಒಳಗೆ ಬಂದು ನೋಡಿ ಶಾಕ್ ಆಗುತ್ತಾನೆ. ಅಮ್ಮನೇ ಇಷ್ಟು ದಿನ ಶ್ರೇಷ್ಠಾಳನ್ನು ಕಟ್ಟಿಹಾಕಿದ್ದು ಎಂದು ತಿಳಿದು ಗಾಬರಿ ಆಗುತ್ತಾನೆ. ನಿಮಗೆ ಮನುಷ್ಯತ್ವ ಇಲ್ಲವಾ? ಈ ರೀತಿ ಮಾಡಲು ಹೇಗಾದರೂ ಮನಸ್ಸು ಬಂತು ಎಂದು ಕೇಳುತ್ತಾನೆ.
ಸ್ವಲ್ಪ ದಿನ ಸುಮ್ಮನಿರುವಂತೆ ಶ್ರೇಷ್ಠಾಗೆ ಸಮಾಧಾನ ಹೇಳಿದ ತಾಂಡವ್
ತಾಂಡವ್ನನ್ನು ನೋಡಿದ ಕೂಡಲೇ ಶ್ರೇಷ್ಠಾ, ನನಗೆ ಊಟವನ್ನೂ ಕೊಡದೆ ಇವರು ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ನಾಟಕವಾಡುತ್ತಾಳೆ. ನಿಮ್ಮ ನಾಟಕ ಚೆನ್ನಾಗಿದೆ. ನೀವಿಬ್ಬರೂ ಮಾಡಿರುವ ಕೆಲಸದ ಮುಂದೆ ನಾನು ಮಾಡಿದ್ದು ದೊಡ್ಡ ವಿಚಾರವೇನಲ್ಲ. ನನ್ನ ಸೊಸೆಗೆ ಸಮಸ್ಯೆಯಾಗುವುದನ್ನು ನಿಲ್ಲಿಸಲು ನಾನು ಯಾವ ಮಟ್ಟಕ್ಕಾದರೂ ಇಳಿಯುತ್ತೇನೆ. ಒಂದು ವೇಳೆ ಭಾಗ್ಯಾಗೆ ಏನಾದರೂ ಸಮಸ್ಯೆ ಆದಲ್ಲಿ ನಾನು ನಿಮ್ಮಿಬ್ಬರನ್ನೂ ಖಂಡಿತ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಸುತ್ತೇನೆ ಎಂದು ವಾರ್ನ್ ಮಾಡುತ್ತಾಳೆ. ಅಮ್ಮನಿಗೂ ತನಗೂ ಒಪ್ಪಂದ ಆಗಿರುವುದನ್ನು ಹೇಳುತ್ತಾನೆ. ಭಾಗ್ಯಾ ಎಂದಿಗೂ ಬದಲಾಗುವುದಿಲ್ಲ, ಅವಳು ಬದಲಾಗಲು ನಾನು ಬಿಡುವುದೂ ಇಲ್ಲ, ಈಗಾಗಲೇ ನಾವು ಅರ್ಧ ತಿಂಗಳು ಕಳೆದಿದ್ದೇವೆ. ಇನ್ನು 1 ತಿಂಗಳು ಸುಮ್ಮನೆ ಇರು, ಈ ಚಾಲೆಂಜ್ನಲ್ಲಿ ಗೆಲ್ಲೋದು ನಾವೇ, ಆಗ ನೀನು ಎಲ್ಲರಿಗೂ ಬುದ್ಧಿ ಕಲಿಸುವಂತೆ ಎಂದು ತಾಂಡವ್, ಶ್ರೇಷ್ಠಾಳನ್ನು ಸಮಾಧಾನ ಮಾಡುತ್ತಾನೆ.
ಭಾಗ್ಯಾ ಮನೆಗೆ ವಿಚಾರಣೆಗೆ ಬಂದ ಪೊಲೀಸರು
ಮತ್ತೊಂದೆಡೆ ತಾಂಡವ್ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟ್ ಕೊಟ್ಟು ಬರುತ್ತಿದ್ದಂತೆ ಇನ್ಸ್ಪೆಕ್ಟರ್, ತಮ್ಮ ತಂಡದೊಂದಿಗೆ ಭಾಗ್ಯಾ ಮನೆಗೆ ಬರುತ್ತಾರೆ. ಅವರನ್ನು ನೋಡಿ ಭಾಗ್ಯಾ ಗಾಬರಿ ಆಗುತ್ತಾಳೆ. ತಾಂಡವ್ ಸೂರ್ಯವಂಶಿ ಎಲ್ಲಿ? ಅವರು ಒಂದು ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದು ಇನ್ಸ್ಪೆಕ್ಟರ್ ಹೇಳಿದಾಗ ಭಾಗ್ಯಾ ಯಾರ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದು ಕೇಳುತ್ತಾಳೆ. ಎಲ್ಲಾ ವಿಚಾರಿಸುತ್ತಿದ್ದೀಯಲ್ಲ, ನೀನು ಯಾರು ಎಂದು ಇನ್ಸ್ಪೆಕ್ಟರ್ ಕೇಳಿದಾಗ, ನಾನು ತಾಂಡವ್ ಹೆಂಡತಿ ಎಂದು ಭಾಗ್ಯಾ ಹೇಳುತ್ತಾಳೆ. ಶ್ರೇಷ್ಠಾ ಬಗ್ಗೆ ತಾಂಡವ್ ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದಾಗ ಭಾಗ್ಯಾ ಒಂದು ಕ್ಷಣ ಗಾಬರಿ ಆಗುತ್ತಾಳೆ. ಅಷ್ಟರಲ್ಲಿ ಮನೆಗೆ ಕುಸುಮಾ, ತಾಂಡವ್ ಬರುತ್ತಾರೆ. ನೀವು ಕೊಟ್ಟ ಕಂಪ್ಲೇಂಟ್ ವಿಚಾರಣೆಗೆ ನಾವು ಬಂದಿದ್ದೇವೆ. ನಿಮಗೆ ಯಾರ ಮೇಲಾದರೂ ಅನುಮಾನ ಇದ್ದರೆ ಹೇಳಿ ಎಂದು ಇನ್ಸ್ಪೆಕ್ಟರ್ ಕೇಳುತ್ತಾರೆ. ಆ ಮಾತು ಕೇಳುತ್ತಿದ್ದಂತೆ ಕುಸುಮಾ, ಸುಂದ್ರಿ, ಪೂಜಾ ಗಾಬರಿ ಆಗುತ್ತಾರೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ