Sirikannada: ರಿಯಾಲಿಟಿ ಶೋ ನಿರೂಪಕನಾದ ಪ್ಯಾಕು ಪ್ಯಾಕು ಹಿತೇಶ್; ಜೂನ್ 5ರಿಂದ ಸಿರಿಕನ್ನಡದಲ್ಲಿ ಭರ್ಜರಿ ಮನರಂಜನೆ
ಸಿರಿಕನ್ನಡ ವಾಹಿನಿಯಲ್ಲಿ ಇದೇ 5ರಿಂದ ಎರಡು ಮೆಗಾ ಧಾರಾವಾಹಿಗಳು ರಂಜಿಸಲು ಬರುತ್ತಿವೆ. ಜತೆಗೆ ಹಾಸ್ಯ ನಟ ಹಿತೇಶ್ ಮತ್ತು ಹೇಮಲತಾ ಸಖತ್ ಜೋಡಿ ಅನ್ನೋ ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಡಲಿದ್ದಾರೆ.
Sirikannada: ಸಿರಿಕನ್ನಡ ಮನರಂಜನಾ ವಾಹಿನಿಯಲ್ಲೀಗ ಮತ್ತೆರಡು ಹೊಸ ಧಾರಾವಾಹಿಗಳು ಪ್ರಸಾರ ಶುರುಮಾಡಲಿವೆ. ಜೂನ್ 5 ರಿಂದ ಊರ್ಮಿಳಾ, ಬ್ರಾಹ್ಮಿನ್ಸ್ ಕೆಫೆ ಎಂಬ ಎರಡು ಮೆಗಾ ಧಾರಾವಾಹಿಗಳು ಹಾಗೂ ಸಖತ್ ಜೋಡಿ ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ವಿಶೇಷ ಏನೆಂದರೆ, ಸಖತ್ ಜೋಡಿ ರಿಯಾಲಿಟಿ ಶೋ ಮೂಲಕ ಕಾಮಿಡಿ ಕಿಲಾಡಿಯ ಹಾಸ್ಯ ನಟ ಪ್ಯಾಕು ಪ್ಯಾಕು ಹಿತೇಶ್ ನಿರೂಪಕನಾಗಿ ಎಂಟ್ರಿಕೊಟ್ಟಿದ್ದಾರೆ.
ವೀಕ್ಷಕರಿಗೆ ಕಾದಿವೆ ಬಹುಮಾನ
ಇನ್ನು ಈ ಹೊಸ ಧಾರಾವಾಹಿಗಳ ಬಗ್ಗೆ ಮಾಹಿತಿ ನೀಡಿದ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ, ಈಗಾಗಲೇ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ಮೂಲಕ ಸಿರಿಕನ್ನಡ ಕನ್ನಡಿಗರ ಮನ ಗೆದ್ದಿದೆ. ಜೂನ್ 5 ರಿಂದ ಊರ್ಮಿಳಾ ಹಾಗೂ ಬ್ರಾಹ್ಮಿನ್ಸ್ ಕೆಫೆ ಎಂಬ ಎರಡು ಮೆಗಾ ಧಾರಾವಾಹಿಗಳು ಹಾಗೂ ಸಖತ್ ಜೋಡಿ ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಶೋನಲ್ಲಿ ಭಾರಿ ಮೊತ್ತದ ಉಡುಗೊರೆಗಳು ಇವೆ. ಮುಂದೆ ನಮ್ಮ ವಾಹಿನಿಯ ವೀಕ್ಷಕರಿಗೆ ಅರ್ಧಗಂಟೆಗೊಮ್ಮೆ ಪ್ರಶ್ನೆ ಕೇಳುವುದು. ಗೆದ್ದವರಿಗೆ ವಿಶೇಷ ಬಹುಮಾನ ನೀಡುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಸಂಸ್ಥಾಪಕ ನಿರ್ದೇಶಕ ಶಿವಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಮಹಾಕಾಲನಿಗೆ ತೋರುವ ಭಕ್ತಿ ಅಜ್ಮೀರ್ ದರ್ಗಾದಲ್ಲೂ ಇರಲಿದೆ; ಟ್ರೋಲ್ ಮಾಡಿದವರಿಗೆ ಸಾರಾ ಅಲಿ ಖಾನ್ ತಿರುಗೇಟು
ಪ್ಯಾಕು ಪ್ಯಾಕು ಹಿತೇಶ್ ನಿರೂಪಣೆ
ಕಿರುತೆರೆಯಲ್ಲಿ ಗುರುತಿಸಿಕೊಂಡ ಹಾಸ್ಯ ನಟ ಹಿತೇಶ್ ಇದೀಗ ನಿರೂಪಕನಾಗಿ ಎಂಟ್ರಿಕೊಡುತ್ತಿದ್ದಾರೆ. ನನ್ನನ್ನು ಹಾಸ್ಯ ನಟನಾಗಿ ಗುರುತಿಸಿದ್ದೀರಿ. ಇದೀಗ ಸಖತ್ ಜೋಡಿ ಎಂಬ ಸಖತ್ ಕಾರ್ಯಕ್ರಮವನ್ನು ನಾನು ಹಾಗೂ ಹೇಮಲತಾ ನಿರೂಪಣೆ ಮಾಡುತ್ತಿದ್ದೇವೆ. ಈಗಾಗಲೇ ಮೂರು ಎಪಿಸೋಡ್ ಚಿತ್ರೀಕರಣವಾಗಿದೆ. ಊರ್ಮಿಳಾ ಧಾರಾವಾಹಿ ತಂಡದವರು, ಈ ಬಾರಿಯ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಟಾಪರ್ಸ್, ಜಾನಪದ ಕಲಾವಿದರು ಪಾಲ್ಗೊಂಡಿದ್ದರು. ಜೂನ್ 5 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 6 ಗಂಟೆಗೆ ಸಖತ್ ಜೋಡಿ ಪ್ರಸಾರವಾಗಲಿದೆ. ಇದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ ಎಂದರು ಹಿತೇಶ್.
ಎಸ್ ನಾರಾಯಣ್ ಪುತ್ರನ ಸೀರಿಯಲ್ ಊರ್ಮಿಳಾ
ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಹಾಗೂ ರಶ್ಮಿತಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಊರ್ಮಿಳಾ ಧಾರಾವಾಹಿ ಇದೇ ಜೂನ್ 5 ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ರವಿ ಆರ್ ಗರಣಿ ಕಥೆ ಬರೆದಿರುವ ಬ್ರಾಹ್ಮಿನ್ಸ್ ಕೆಫೆ ವಿಭಿನ್ನ ಕಥಾಹಂದರ ಹೊಂದಿದೆ. ಜೂನ್ 5ರಿಂದ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಶಿವು ಎಂಬ ಹೊಸಹುಡುಗ ಈ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸುತ್ತಿದ್ದಾನೆ. ಗಾಯತ್ರಿ ಸೆಲ್ವಂ ಹಾಗೂ ಸೆಲ್ವಂ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಸಂಜೀವ್ ತಗಡೂರು ತಿಳಿಸಿದರು. ಧಾರಾವಾಹಿಯಲ್ಲಿ ಶ್ರೀನಾಥ್ ವಸಿಷ್ಠ, ಪ್ರಥಮ ಪ್ರಸಾದ್, ಶಿವು, ರಾಮಸ್ವಾಮಿ ಮುಂತಾದವರು ನಟಿಸುತ್ತಿದ್ದಾರೆ.