ಭವ್ಯಾ ಗೌಡ ಹೊಸ ಧಾರಾವಾಹಿಯ ಪ್ರೋಮೋ ಶೂಟ್ ದೃಶ್ಯಗಳು ಲೀಕ್! ಯಾವ ಸೀರಿಯಲ್, ಯಾವ ಚಾನೆಲ್?
ಗೀತಾ ಸೀರಿಯಲ್ ಮೂಲಕ ಮನೆ ಮನಗಳನ್ನು ಗೆದ್ದ ನಟಿ ಭವ್ಯಾ ಗೌಡ, ಅಲ್ಲಿಂದ ಬಿಗ್ ಬಾಸ್ ಶೋನಲ್ಲಿ ಫಿನಾಲೆವರೆಗೂ ಹೋಗಿದ್ದರು. ಇದೀಗ ಇದೇ ನಟಿಯ ಮುಂದಿನ ಸೀರಿಯಲ್ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದ್ದು, ಹೊಸ ಧಾರಾವಾಹಿಯ ಪ್ರೋಮೋ ಶೂಟಿಂಗ್ನ ಕ್ಲಿಪ್ಗಳು ಲೀಕ್ ಆಗಿವೆ.

Bhavya Gowda's New Serial: ಕಲರ್ಸ್ ಕನ್ನಡದ ಕಿರುತೆರೆಯಲ್ಲಿ ಗೀತಾ ಸೀರಿಯಲ್ ಮೂಲಕ ನಾಡಿನ ಗಮನ ಸೆಳೆದ ನಟಿ ಭವ್ಯಾ ಗೌಡ. ಮೊದಲ ಸೀರಿಯಲ್ ಮೂಲಕವೇ ನೇಮು ಫೇಮು ಗಿಟ್ಟಿಸಿಕೊಂಡು, ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿಯೂ ಭಾಗವಹಿಸಿ 100 ದಿನ ಪೂರೈಸಿದ್ದರು ಭವ್ಯಾ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವಾರಕ್ಕೂ ಕಾಲಿರಿಸಿ ಟ್ರೋಫಿ ಗೆಲ್ಲುವ ಸ್ಪರ್ಧಿಯಲ್ಲೊಬ್ಬರಾಗಿದ್ದರು. ಇಂತಿಪ್ಪ ಭವ್ಯಾ ಗೌಡ, ಬಿಗ್ ಬಾಸ್ ಮುಗಿದ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲಿಯೂ ಅಪ್ಡೇಟ್ ಮಾಹಿತಿ ನೀಡಿರಲಿಲ್ಲ. ತುಟಿ ಬಿಚ್ಚಿರಲಿಲ್ಲ. ಇದೀಗ ಅಧಿಕೃತ ಘೋಷಣೆಗೂ ಮೊದಲೇ, ಅವರ ಮುಂದಿನ ಧಾರಾವಾಹಿ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ಹೌದು, ಜನವರಿ ತಿಂಗಳಲ್ಲಿಯೇ ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯಾಗಿದೆ. ಅಲ್ಲಿಂದೀಚೆಗೆ ಎರಡು ತಿಂಗಳು ಕಳೆದರೂ ತಮ್ಮ ಮುಂದಿನ ಸೀರಿಯಲ್ ಬಗ್ಗೆ ರಿವೀಲ್ ಮಾಡಿರಲಿಲ್ಲ. ಇದೀಗ, ಅಚ್ಚರಿಯ ರೀತಿಯಲ್ಲಿ ಅವರ ಮುಂದಿನ ಸೀರಿಯಲ್ ಬಗ್ಗೆ ಮಾಹಿತಿ ಸಿಕ್ಕಿದೆ. ಅವರ ಹೊಸ ಸೀರಿಯಲ್ನ ಪ್ರೋಮೋ ಚಿತ್ರೀಕರಣದ ವಿಡಿಯೋ ಕ್ಲಿಪ್ವೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಹಾಗೆ ಲೀಕ್ ಆಗಿದ್ದೇ ತಡ, ಭವ್ಯಾ ಗೌಡ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹಾಗಾದರೆ ಯಾವುದಾ ಸೀರಿಯಲ್?
ಕಲರ್ಸ್ ಕನ್ನಡದಿಂದ ಜೀ ಕನ್ನಡಕ್ಕೆ ಪಯಣ
ಕಲರ್ಸ್ ಕನ್ನಡದ ಗೀತಾ ಸೀರಿಯಲ್ ಮೂಲಕ ನಾಯಕಿಯಾಗಿ ಗುರುತಿಸಿಕೊಂಡು ಮುನ್ನೆಲೆಗೆ ಬಂದ ಭವ್ಯಾ ಗೌಡ, ಇದೀಗ ಹೊಸ ಸೀರಿಯಲ್ ಮೂಲಕ ಜೀ ಕನ್ನಡದ ಬಾಗಿಲು ತಟ್ಟಿದ್ದಾರೆ. ಅಂದರೆ ಜೀ ಕನ್ನಡದಲ್ಲಿ ಇನ್ನೇನು ಮೊದಲ ಪ್ರೋಮೋ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿರುವ ಕರ್ಣ ಸೀರಿಯಲ್ನಲ್ಲಿ ನಾಯಕಿಯಾಗಿ ಭವ್ಯಾ ನಟಿಸಲಿದ್ದಾರೆ. ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಈ ಸೀರಿಯಲ್ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇದೇ ಜೋಡಿಯ ಪ್ರೋಮೋ ಶೂಟ್ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅವರೂ ಅಲ್ಲ ಇವರೂ ಇಲ್ಲ..
ಕರ್ಣ ಸೀರಿಯಲ್ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಂತೆ, ಈ ಸೀರಿಯಲ್ನಲ್ಲಿ ನಾಯಕಿ ಯಾರು ಎಂಬ ಚರ್ಚೆಯೂ ಶುರುವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಆ ಪೈಕಿ ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಪೈ, ಕನ್ನಡತಿ ಖ್ಯಾತಿಯ ರಂಜನಿ ರಾಘವನ್, ಗೀತಾ ಸೀರಿಯಲ್ನ ಭವ್ಯಾ ಹೆಸರು ಚರ್ಚೆಯಲ್ಲಿದ್ದವು. ಇದೀಗ ಈ ಮೂವರ ಪೈಕಿ ಭವ್ಯಾ ಗೌಡ ಅಂತಿಮವಾಗಿ, ಶೂಟಿಂಗ್ನಲ್ಲಿಯೂ ಭಾಗವಹಿಸಿದ್ದಾರೆ.
ಯಾವಾಗಿನಿಂದ ಪ್ರಸಾರ?
ಅಂದಹಾಗೆ ಕರ್ಣ ಧಾರಾವಾಹಿಯನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಈ ಸೀರಿಯಲ್ ಮೂಲಕ ಹಿರಿಯ ನಿರ್ದೇಶಕ, ನಟ ಟಿ ಎಸ್ ನಾಗಾಭರಣ ಮತ್ತೆ ಕಿರುತೆರೆಗೆ ಮರಳಿದ್ದಾರೆ. ನಟಿ ಆಶಾ ರಾಣಿ, ಶ್ಯಾಮ್ ಸಿಮ್ರನ್, ವರಲಕ್ಷ್ಮೀ ಶ್ರೀನಿವಾಸ್ ಸೇರಿ ಇನ್ನೂ ಹಲವರು ಈ ಸೀರಿಯಲ್ನಲ್ಲಿದ್ದಾರೆ. ಸದ್ಯ ಪ್ರೋಮೋ ಮೂಲಕವೇ ಸದ್ದು ಮಾಡುತ್ತಿರುವ ʻಕರ್ಣʼ ಸೀರಿಯಲ್ ಪ್ರಸಾರ ಯಾವಾಗ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಈ ಮಾಸಾಂತ್ಯಕ್ಕೆ ಪ್ರಸಾರ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಜೀ ಕನ್ನಡದಿಂದ ಅಧಿಕೃತ ಘೋಷಣೆ ಹೊರಬೀಳಬೇಕಿದೆ.