ಭಾಗ್ಯಲಕ್ಷ್ಮೀ ಧಾರಾವಾಹಿ: ಅಂತೂ ಇಂತೂ ಕುರಿ ಹಳ್ಳಕ್ಕೆ ಬಿತ್ತು, ತಾಂಡವ್ ಛೂ ಬಿಟ್ಟ ಹುಡುಗಿಯೀಗ ಭಾಗ್ಯಾ ಕೈಗೆ ಸಿಕ್ಕಾಕೊಂಡ್ಲು!
ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 18ರ 792ನೇ ಸಂಚಿಕೆ: ಪೂಜಾ ಮದುವೆ ನಿಲ್ಲಿಸಲು ಛೂ ಬಿಟ್ಟ ಹುಡುಗಿಯೀಗ ಭಾಗ್ಯಾ ಬೀಸಿದ ಬಲೆಗೆ ಬಿದ್ದಿದ್ದಾಳೆ. ಅಷ್ಟಕ್ಕೂ ಆ ಹುಡುಗಿ ಯಾರು, ಆಕೆಯನ್ನು ಕಳಿಸಿದವರು ಯಾರು? ಎಂಬು ಕೌತುಕಕ್ಕೇ ಇನ್ನೇನು ಶೀಘ್ರದಲ್ಲಿಯೇ ಬ್ರೇಕ್ ಬೀಳಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 18ರ 792ನೇ ಸಂಚಿಕೆ: ಕಿಶನ್ ಎಂಥವನು ಅನ್ನೋದನ್ನು ಪೂಜಾ ತಾಯಿ ಸುನಂದಾ ಕಣ್ಣಾರೆ ಕಂಡು ಕೊಂಚ ಕುಪಿತಳಾಗಿದ್ದಾಳೆ. ನೀಚ ತಾಂಡವ್ ತನ್ನ ಕೆಟ್ಟ ಬುದ್ದಿ ಉಪಯೋಗಿಸಿ, ಸುನಂದಾ ಮುಂದೆ ಸುಳ್ಳಿನ ನಾಟಕವಾಡಿದ್ದಾನೆ. ಕಿಶನ್ ಜತೆಗೆ ಸಲುಗೆಯಿಂದ ವರ್ತಿಸುವಂತೆ ಹುಡುಗಿಯೊಬ್ಬಳನ್ನು ಬಿಟ್ಟು, ಆತನ ಜೊತೆಗೆ ಸಲುಗೆಯಿಂದ ನಡೆದುಕೊಂಡಿದ್ದು, ಸುನಂದಾ ಕಣ್ಣಿಗೆ ಬಿದ್ದಿದೆ. ಇದೆಲ್ಲವೂ ಅಳಿಯ ತಾಂಡವ್ ಕುತಂತ್ರ ಎಂಬುದು ಸುನಂದಾಗೆ ತಿಳಿದಿಲ್ಲ. ಆದರೆ, ಆತನ ಮಾತನ್ನೇ ಆಕೆ ನಂಬಿದ್ದಾಳೆ. ನೇರವಾಗಿ ಮನೆಗೆ ಬಂದು, ನಾನು ಯಾವುದೇ ಕಾರಣಕ್ಕೂ ಪೂಜಾ ಜೊತೆ ಕಿಶನ್ ಮದುವೆ ಮಾಡಿಸಲ್ಲ ಎಂದಿದ್ದಾಳೆ.
ಇತ್ತ ಕಿಶನ್ ಜೊತೆಗೆ ಪೂಜಾಳನ್ನು ಕೊಟ್ಟು ಮದುವೆ ಮಾಡಿಸಬೇಕೆಂದು ಕುಸುಮಾ ಮತ್ತು ಭಾಗ್ಯಲಕ್ಷ್ಮೀ ಹೊರಟಿದ್ದಾರೆ. ಜಿಮ್ಗೆ ಹೋಗಿ ಆತನನ್ನು ಭೇಟಿಯಾಗಿ ಬಂದಿದ್ದಾರೆ. ಕುಸುಮಾ ತಾನು ಜಿಮ್ಗೆ ಸೇರಿದ ಹಿಂದಿನ ಉದ್ದೇಶ ಏನೆಂಬುದನ್ನೂ ಹೇಳಿದ್ದಾಳೆ. ಇದರಲ್ಲಿ ಏನೂ ತಪ್ಪಿಲ್ಲ ಎಂದಿದ್ದಾನೆ ಕಿಶನ್. ಇತ್ತ ಇನ್ನೊಂದು ಕಡೆ ಕಿಶನ್ಗೆ ಫೋನ್ ಮಾಡಿದ ಸುನಂದಾ, ತಾನು ಏನೆನೆಲ್ಲ ನೋಡಿದೆ ಎಂಬುದನ್ನು ಫೋನ್ ಮಾಡಿ ಹೇಳಿದ್ದಾಳೆ. ನಿನ್ನಂಥವನಿಗೆ ನನ್ನ ಮಗಳನ್ನು ಕೊಡಲ್ಲ ಎಂದಿದ್ದಾಳೆ. ಭಾಗ್ಯಾಳ ಮುಂದೆಯೂ ಸುನಂದಾ ತಮ್ಮ ಅಸಮಾಧಾನ ಹೊರಹಾಕಿದ್ದಾಳೆ. ಇದೆಲ್ಲದರ ಹಿಂದೆ ಏನೋ ಇದೆ ಅನ್ನೋ ಅನುಮಾನ ಭಾಗ್ಯಾಗೆ ಮೂಡಿದೆ.
ಪೂಜಾ ಮನೆಗೆ ಬಂದ ಕಿಶನ್
ಹೀಗಿರುವಾಗಲೇ, ಗೊಂದಲ ನಿವಾರಣೆಗೆ ಕಿಶನ್ ನೇರವಾಗಿ ಪೂಜಾ ಮನೆಗೆ ಬಂದಿದ್ದಾನೆ. ಆದರೆ, ಕಿಶನ್ನ ನೋಡ್ತಿದ್ದಂತೆ ಸುನಂದಾ ಗರಂ ಆಗಿದ್ದಾಳೆ. ಮನೆಗೆ ಬಂದವನನ್ನು ಆಚೆ ಕಳಿಸುತ್ತಿದ್ದಾಳೆ. ಕೆಲವೊಂದು ವಿಚಾರಗಳನ್ನು ಕ್ಲಿಯರ್ ಮಾಡಬೇಕಿತ್ತು ಅದಕ್ಕಾಗಿ ಬಂದಿದ್ದೇನೆ ಎಂದು ಹೇಳಿದರೂ, ಸುನಂದಾ ಮಾತ್ರ ಆತನ ಮಾತನ್ನೇ ಕೇಳುತ್ತಿಲ್ಲ. ಇನ್ನೊಂದು ಕಡೆ ತಾಂಡವ್ ಮತ್ತು ಶ್ರೇಷ್ಠಾ ಸಂಭ್ರಮದಲ್ಲಿದ್ದಾರೆ. ಒಟ್ಟಿನಲ್ಲಿ ಈ ಮದುವೆ ನಿಂತಿತಲ್ಲ ಅನ್ನೋ ಖುಷಿಯಲ್ಲಿದ್ದಾರೆ.
ಕಿಶನ್ಗೆ ಹೊಸ ಚಾಲೆಂಜ್
ಬೈಕ್ನಲ್ಲಿ ನನ್ನ ಹಿಂದೆ ಕೂತ ಹುಡುಗಿಗೆ ನಾನು ಬೈದು ಕಳಿಸಿದೆ ಎಂದೆ ಕಿಶನ್ ಹೇಳಿದರೂ, ಸುನಂದಾ ಮಾತ್ರ ನಂಬುತ್ತಿಲ್ಲ. ನಾನು ತಪ್ಪು ಮಾಡಿಲ್ಲ ಅಂತ ನಾನು ಸಾಬೀತು ಮಾಡಿದರೆ ನನ್ನ ಮಾತನ್ನು ನಂಬುತ್ತೀರಾ? ಎಂದಿದ್ದಾನೆ. ಇದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದಾನೆ ಕಿಶನ್. ಇತ್ತ ಬೈಕ್ ಏರಿದ ಆ ಮಾಯಗಾತಿ ಹಿಂದೆ ಬಿದ್ದಿದ್ದಾನೆ ಕಿಶನ್. ಇನ್ನೊಂದು ಕಡೆ ಸುನಂದಾ ಅಮ್ಮ ಇಲ್ಲಿಯವರೆಗೂ ಕಿಶನ್ ಅವರನ್ನ ನೋಡಿಲ್ಲ, ಇವನೇ ಅವನು ಅನ್ನೋದು ಅಮ್ಮನಿಗೆ ಗೊತ್ತಿಲ್ಲ. ಇದರ ಹಿಂದೆ ಯಾರೋ ಇದ್ದಾರೆ ಅನ್ನುವ ಅನುಮಾನ ಭಾಗ್ಯಾಗೂ ಮೂಡಿದೆ.
ಭಾಗ್ಯಾ ಬಲೆಗೆ ಬಿದ್ದ ಮಿಸ್ಟರಿ ಗರ್ಲ್
ಆ ಹುಡುಗಿಯನ್ನ ಪತ್ತೆ ಮಾಡಲು ಮುಂದಾದ ಕಿಶನ್ಗೆ, ಅದೇ ಹುಡುಗಿ ಆತನ ಜಾಕೆಟ್ನಲ್ಲಿ ತನ್ನ ವಿಸಿಟಿಂಗ್ ಕಾರ್ಡ್ ಇಟ್ಟಿದ್ದು ನೆನಪಾಗಿದೆ. ಆ ನಂಬರ್ಗೆ ಫೋನ್ ಮಾಡಿದ್ರೆ, ನನ್ನ ಕೆಲಸ ಅಷ್ಟೇ, ಅದನ್ನು ಮುಗಿಸಿದ್ದೇನೆ ಎಂದು ಫೋನ್ ಕಟ್ ಮಾಡಿದ್ದಾಳೆ. ಇನ್ನೊಂದು ಕಡೆ ಕಿಶನ್ಗೆ ಭಾಗ್ಯಾ ಫೋನ್ ಮಾಡಿದ್ದಾಳೆ. ಆ ಹುಡುಗಿ ವಿಚಾರದಲ್ಲಿ ನಡೆದ ಘಟನೆಯನ್ನು ಹೇಳಿದ್ದಾನೆ. ತಕ್ಷಣ ಆ ಹುಡುಗಿ ನಂಬರ್ಅನ್ನು ಭಾಗ್ಯಾಗೂ ಕಳಿಸಿದ್ದಾನೆ. ಅದೇ ನಂಬರ್ಗೆ ಫೋನ್ ಮಾಡಿದ ಭಾಗ್ಯಾ, ಆ ಹುಡುಗಿ ಜೊತೆ ಮಾಡೆಲಿಂಗ್ ಏಜೆನ್ಸಿಯಿಂದ ಕರೆ ಮಾಡ್ತಿದ್ದೇವೆ ಎಂದು ಸುಳ್ಳು ಹೇಳಿದ್ದಾಳೆ.
ನಿಮಗೆ ಮಾಡೆಲಿಂಗ್ ಅಂದರೆ ಇಂಟ್ರೆಸ್ಟಿಂಗ್ ಅಂತ ಗೊತ್ತಾಯ್ತು, ದೊಡ್ಡ ಜಾಹೀರಾತಿನಲ್ಲಿ ನೀವು ನಟಿಸ್ತೀರಾ? ಎಂದು ಭಾಗ್ಯಾ ಕೇಳಿದ್ದಾಳೆ. ಹೌದಾ.. ಯಾವ ಥರದ ಜಾಹೀರಾತು, ಏನ್ ಸ್ಕ್ರಿಪ್ಟ್ ಎಂದೆಲ್ಲ ತನ್ನ ಆಸೆ ವ್ಯಕ್ತಪಡಿಸಿದ್ದಾಳೆ ಆ ಮಾಯಗಾತಿ ಹುಡುಗಿ. ಇತ್ತ ಕುರಿ ಹಳ್ಳಕ್ಕೆ ಬಿತ್ತು ಅನ್ನೋ ಖುಷಿಯಲ್ಲಿದ್ದ ಭಾಗ್ಯಾ, ಎಲ್ಲವನ್ನು ಫೋನ್ನಲ್ಲಿ ಮಾತನಾಡುವುದು ಬೇಡ, ಅಡ್ರೆಸ್ ಕೊಡ್ತಿನಿ, ಅಲ್ಲಿಗೆ ಬನ್ನಿ ಎಲ್ಲ ಡಿಟೇಲ್ಸ್ ಕೊಡ್ತಿನಿ ಎಂದಿದ್ದಾಳೆ. ಅಲ್ಲಿಗೆ ಮೇ 18ರ ಭಾಗ್ಯಲಕ್ಷ್ಮೀ ಧಾರಾವಾಹಿ ಸಂಚಿಕೆ ಮುಕ್ತಾಯವಾಗಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್,
ಧರ್ಮರಾಜ್ - ಶಶಿಧರ್ ಕೋಟೆ,
ಭಾಗ್ಯಾ - ಸುಷ್ಮಾ ಕೆ ರಾವ್,
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್,
ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ,
ಪೂಜಾ - ಆಶಾ ಅಯ್ಯನರ್,
ಶ್ರೇಷ್ಠಾ - ಕಾವ್ಯಾ ಗೌಡ,
ತನ್ವಿ - ಅಮೃತಾ ಗೌಡ,
ಗುಂಡಣ್ಣ - ನಿಹಾರ್ ಗೌಡ,
ಸುಂದರಿ - ಸುನೇತ್ರಾ ಪಂಡಿತ್