ಗ್ರಾಹಕರಿಗೆ ಹಳಸಿದ ಚಟ್ನಿ ಕೊಟ್ಟ ಆರೋಪ, ಮೊದಲ ದಿನವೇ ಹೋಟೆಲ್ ಬಿಟ್ಟುಬಂದ ಕುಸುಮಾ, ಭಾಗ್ಯಾ ಕೆಲಸಕ್ಕೂ ಕುತ್ತು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 23ರ ಸಂಚಿಕೆಯಲ್ಲಿ ಗ್ರಾಹಕರಿಗೆ ಹಳಸಿದ ಚಟ್ನಿ ಕೊಟ್ಟ ಆರೋಪ ಹೊತ್ತು ಕುಸುಮಾ ಮೊದಲ ದಿನವೇ ಹೋಟೆಲ್ ಬಿಟ್ಟುಬಂದಿದ್ದಾಳೆ. ಮತ್ತೊಂದೆಡೆ ಭಾಗ್ಯಾ ಕೆಲಸಕ್ಕೂ ಕುತ್ತು ಬಂದಿದೆ.

Bhagyalakshmi Serial: ಅತ್ತೆ ಸೊಸೆ ಇಬ್ಬರೂ ಒಂದೇ ದಿನ ಹೋಟೆಲ್ನಲ್ಲಿ ಕೆಲಸ ಆರಂಭಿಸಿದ್ದಾರೆ. ಒತ್ತು ಶ್ಯಾವಿಗೆ, ಮಾವಿನ ಸೀಕರಣೆ ಮಾಡಿ ಕುಸುಮಾ ಹೋಟೆಲ್ ಮಾಲೀಕರ ಬಳಿ ಹೊಗಳಿಸಿಕೊಂಡರೆ, ಇತ್ತ ಭಾಗ್ಯಾ ಫೈವ್ ಸ್ಟಾರ್ ಹೋಟೆಲ್ನಲ್ಲಿ ಆರ್ಡರ್ ತೆಗೆದುಕೊಳ್ಳಲು ಗೊತ್ತಿಲ್ಲದೆ, ಅಡುಗೆ ಕೆಲಸವೂ ಸಿಗದೆ ಪರದಾಡುತ್ತಿದ್ದಾಳೆ.
ಶ್ರೇಷ್ಠಾ ನೋಡಿ ತಲೆಮರೆಸಿಕೊಂಡ ಭಾಗ್ಯಾ
ಭಾಗ್ಯಾಳದ್ದು ಎಂದು, ಭಗಾಯ ಎಂಬ ಬೇರೆ ಯುವತಿಯ ಸಿವಿ ನೋಡಿದ ಹೋಟೆಲ್ ಸೂಪರ್ವೈಸರ್ ಆಕೆಯನ್ನು ಕರೆದು ನೀವು ವೆಡ್ಡಿಂಗ್ ಡೆಕೊರೇಶನ್ನಲ್ಲಿ ಪರಿಣಿತರು ಎಂದು ಸಿವಿ ನೋಡಿ ಗೊತ್ತಾಯಿತು. ಇಂದು ಇಬ್ಬರು ಕ್ಲೈಂಟ್ ಅವರ ಮದುವೆ ಬಗ್ಗೆ ಮಾತನಾಡಲು ಬರುತ್ತಾರೆ. ನೀವೇ ಅವರನ್ನು ಹ್ಯಾಂಡಲ್ ಮಾಡಬೇಕು ಎನ್ನುತ್ತಾರೆ. ಆದರೆ ಈಗಷ್ಟೇ 10ನೇ ತರಗತಿ ಪಾಸ್ ಆಗಿರುವ ಭಾಗ್ಯಾಗೆ ಹೋಟೆಲ್ ಮ್ಯಾನೇಜ್ಮೆಂಟ್ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ, ಆಕೆ ಭಗಾಯ ಅಲ್ಲ ಎಂದು ಯಾರಿಗೂ ಗೊತ್ತಿಲ್ಲ.
ಸೂಪರ್ವೈಸರ್ ನನಗೆ ಹೇಳಿದ ಕೆಲಸ ಏನು ಎಂದು ಗೊತ್ತಿಲ್ಲದಿದ್ದರೂ ಭಾಗ್ಯಾ ಕ್ಲೈಂಟ್ ಭೇಟಿ ಮಾಡಲು ಹೋಟೆಲ್ ರಿಸೆಪ್ಷನ್ ಬಳಿ ಹೋಗುತ್ತಾಳೆ. ಈಗಲೂ ನೀವು ಏನಾದರೂ ಎಡವಟ್ಟು ಮಾಡಿದರೆ ನಿಮ್ಮನ್ನು ಕೆಲಸದಿಂದ ತೆಗೆಯುತ್ತೇನೆ ಎಂದು ಸೂಪರ್ವೈಸರ್ ಭಾಗ್ಯಾಗೆ ಎಚ್ಚರಿಕೆ ನೀಡಿ ಕಳಿಸುತ್ತಾನೆ.
ರಿಸಪ್ಷನ್ ಬಳಿ ಬಂದವಳೇ ತಾನು ಮಾತನಾಡಬೇಕಾಗಿರುವುದು ಯಾರೊಂದಿಗೆ ಎಂದು ಸುತ್ತ ಮುತ್ತ ನೋಡುತ್ತಾಳೆ. ತನಗೆ ಬೆನ್ನು ತಿರುಗಿಸಿ ಫೋನಿನಲ್ಲಿ ಮಾತನಾಡುತ್ತಿದ್ದ ಶ್ರೇಷ್ಠಾಳನ್ನು ಕಂಡು ಭಾಗ್ಯಾ ಹೆದರುತ್ತಾಳೆ. ಇವಳೇನಾದರೂ ನನ್ನನ್ನು ನೋಡಿದರೆ ನಾನು ಇಲ್ಲಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿಯುತ್ತದೆ ಎಂದು ಹೆದರಿ ಶ್ರೇಷ್ಠಾಗೆ ಮುಖ ತೋರಿಸದಂತೆ ಮುಖ ಮುಚ್ಚಿಕೊಂಡು ಅಲ್ಲಿಂದ ಮರೆಯಾಗುತ್ತಾಳೆ.
ತನ್ನದಲ್ಲದ ತಪ್ಪಿಗೆ ಹೋಟೆಲ್ ಕೆಲಸ ಬಿಟ್ಟ ಕುಸುಮಾ
ಇತ್ತ ಕುಸುಮಾ, ಹೋಟೆಲ್ನಲ್ಲಿ ಚುರುಕಿನಿಂದ ಕೆಲಸ ಮಾಡುತ್ತಾಳೆ. ಆದರೆ ಆಕೆ ಬಂದಿದ್ದನ್ನು ಸಹಿಸದ ಮತ್ತೊಬ್ಬ ಚೆಫ್, ಕುಸುಮಾಳನ್ನು ಹೇಗಾದರೂ ಮಾಡಿ ಕೆಲಸದಿಂದ ಓಡಿಸಬೇಕು ಎಂದು ಪ್ಲ್ಯಾನ್ ಮಾಡುತ್ತಾನೆ. ತಿಂಡಿ ತಿನ್ನಲು ಬಂದ ವ್ಯಕ್ತಿಯೊಬ್ಬರು ಚಟ್ನಿ ಕೇಳಿದಾಗ ಆ ಚೆಫ್ ಯಾರಿಗೂ ತಿಳಿಯದಂತೆ ಕೆಟ್ಟುಹೋದ ಚಟ್ನಿ ಕೊಡುತ್ತಾನೆ. ಅದನ್ನು ತಿಂದಾತ, ಯಾರು ಈ ಚಟ್ನಿ ಮಾಡಿದ್ದು? ಗ್ರಾಹಕರಿಗೆ ಕೊಡುವ ಮುನ್ನ ರುಚಿ ನೋಡಿ ಕೊಡಬೇಕು ಎಂದು ಗೊತ್ತಾಗುದಿಲ್ಲವೇ ಎಂದು ರೇಗುತ್ತಾನೆ. ಅವನ ಮಾತನ್ನು ಕೇಳಿಸಿಕೊಳ್ಳುವ ಕುಸುಮಾ, ನಾನೇ ಚಟ್ನಿ ಮಾಡಿದ್ದು, ನಿನ್ನ ನಾಲಿಗೆ ಕೆಟ್ಟಿರಬೇಕು, ಇಲ್ಲಿ ಎಲ್ಲರೂ ಚಟ್ನಿ ಚೆನ್ನಾಗಿದೆ ಎಂದು ತಿನ್ನುತ್ತಿದ್ದಾರೆ, ನೀನು ಮಾತ್ರ ಹೀಗೆ ಹೇಳುತ್ತಿದ್ದೀಯ ಎಂದು ರೇಗುತ್ತಾಳೆ.
ಹೋಟೆಲ್ಗೆ ಬಂದ ಗ್ರಾಹಕನ ಬಳಿ ಕುಸುಮಾ ಏರು ದನಿಯಲ್ಲಿ ಮಾತನಾಡುವುದನ್ನು ನೋಡಿದ ಹೋಟೆಲ್ ಮಾಲೀಕ ಹಾಗೆಲ್ಲಾ ಮಾತನಾಡಬಾರದು ಎಂದು ಎಚ್ಚರಿಕೆ ನೀಡುತ್ತಾರೆ. ಈ ಹೆಂಗಸು ಗ್ರಾಹಕರಿಗೆ ಹಲಸಿದ ಚಟ್ನಿ ಕೊಟ್ಟಿದ್ದಾಳೆ ಎಂದು ಚೆಪ್ ಆರೋಪ ಮಾಡುತ್ತಾನೆ. ಈ ಕುಸುಮಾ ಇದುವರೆಗೂ ಯಾರಿಗೂ ಹಳಸಿದ ಆಹಾರ ಕೊಟ್ಟಿಲ್ಲ, ನಿಮಗೆ ನನ್ನ ಮೇಲೆ ನಂಬಿಕೆ ಇಲ್ಲವಾದಲ್ಲಿ ನಾನು ಕೆಲಸ ಬಿಡುತ್ತೇನೆ. ನಂಬಿಕೆ ಇರದ ಕಡೆ ಯಾರೂ ಇರಬಾರದು ಎಂದು ಹೇಳಿ ನೋವಿನಿಂದಲೇ ಅಲ್ಲಿಂದ ಹೊರಡುತ್ತಾಳೆ.
ಮೊದಲ ದಿನವೇ ಕುಸುಮಾ ತನ್ನದಲ್ಲದ ತಪ್ಪಿಗೆ ಹೋಟೆಲ್ನಲ್ಲಿ ಕೆಲಸ ಬಿಟ್ಟು ಹೊರ ಬಂದಿದ್ದಾಳೆ. ಇತ್ತ ಭಾಗ್ಯಾ ತನಗೆ ಕೊಟ್ಟ ಕೆಲಸ ನಿಭಾಯಿಸಲಾಗದೆ ತಾನೂ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಳೆ. ಮುಂದೇನಾಗುವುದು ಕಾದು ನೋಡಬೇಕು.
ಪಾತ್ರ ವರ್ಗ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
