ʻಶ್ರೀ ರಾಘವೇಂದ್ರ ಮಹಾತ್ಮೆʼ ಧಾರಾವಾಹಿಯಲ್ಲಿ ರಾಯರ ಪಾತ್ರಧಾರಿ ರಿವೀಲ್; ಬಿಗ್‌ ಅಪ್‌ಡೇಟ್ ಕೊಟ್ಟ ಜೀ ಕನ್ನಡ
ಕನ್ನಡ ಸುದ್ದಿ  /  ಮನರಂಜನೆ  /  ʻಶ್ರೀ ರಾಘವೇಂದ್ರ ಮಹಾತ್ಮೆʼ ಧಾರಾವಾಹಿಯಲ್ಲಿ ರಾಯರ ಪಾತ್ರಧಾರಿ ರಿವೀಲ್; ಬಿಗ್‌ ಅಪ್‌ಡೇಟ್ ಕೊಟ್ಟ ಜೀ ಕನ್ನಡ

ʻಶ್ರೀ ರಾಘವೇಂದ್ರ ಮಹಾತ್ಮೆʼ ಧಾರಾವಾಹಿಯಲ್ಲಿ ರಾಯರ ಪಾತ್ರಧಾರಿ ರಿವೀಲ್; ಬಿಗ್‌ ಅಪ್‌ಡೇಟ್ ಕೊಟ್ಟ ಜೀ ಕನ್ನಡ

ಕನ್ನಡ ಕಿರುತೆರೆಯ ಬಹುನಿರೀಕ್ಷಿತ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯ ಮೊದಲ ಪ್ರೋಮೋ ಬಿಡುಗಡೆ ಆಗಿದೆ. ಮೇಕಿಂಗ್‌ ಮತ್ತು ಗ್ರಾಫಿಕ್ಸ್‌ನಲ್ಲಿ ಅದ್ಭುತವಾದ ದೃಶ್ಯವೈಭವವನ್ನೇ ಕಿರುತೆರೆಯ ಪರದೆ ಮೇಲೆ ತರುತ್ತಿದೆ ಜೀ ಕನ್ನಡ.

ʻಶ್ರೀ ರಾಘವೇಂದ್ರ ಮಹಾತ್ಮೆʼ ಧಾರಾವಾಹಿಯಲ್ಲಿ ರಾಯರ ಪಾತ್ರಧಾರಿ ರಿವೀಲ್; ಬಿಗ್‌ ಅಪ್‌ಡೇಟ್ ಕೊಟ
ʻಶ್ರೀ ರಾಘವೇಂದ್ರ ಮಹಾತ್ಮೆʼ ಧಾರಾವಾಹಿಯಲ್ಲಿ ರಾಯರ ಪಾತ್ರಧಾರಿ ರಿವೀಲ್; ಬಿಗ್‌ ಅಪ್‌ಡೇಟ್ ಕೊಟ (Zee kannada)

ಮೂರ್ನಾಲ್ಕು ತಿಂಗಳಿಂದ ʻಶ್ರೀ ರಾಘವೇಂದ್ರ ಮಹಾತ್ಮೆʼ ಸೀರಿಯಲ್‌ ಬಗ್ಗೆ ಹೇಳುತ್ತಲೇ ಬರುತ್ತಿದೆ ಜೀ ಕನ್ನಡ. ಆದರೆ, ಯಾವಾಗಿನಿಂದ ಎಂಬ ಸುಳಿವನ್ನು ಮಾತ್ರ ಈ ವರೆಗೂ ನೀಡಿರಲಿಲ್ಲ. ಇದೀಗ ಈ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋ ರಿಲೀಸ್‌ ಆಗಿದ್ದೇ ತಡ, ವೀಕ್ಷಕ ಬಳಗ ಸಂಭ್ರಮದಲ್ಲಿದೆ. ಬಹುಕೋಟಿ ವೆಚ್ಚದ ಸಿನಿಮಾದ ಟೀಸರ್‌ನಂತೆ ರಾಘವೇಂದ್ರ ಮಹಾತ್ಮೆ ಸೀರಿಯಲ್‌ನ ಪ್ರೋಮೋ ಮೂಡಿಬಂದಿದೆ. ಗ್ರಾಫಿಕ್ಸ್‌ ಮತ್ತು ಮೇಕಿಂಗ್‌ ಮೂಲಕವೇ ವೀಕ್ಷಕರ ಕಣ್ಣರಳುವಂತಿದೆ.

ಪ್ರೋಮೋದಲ್ಲಿ ಏನಿದೆ?

ವಿಷ್ಣುವಿನ ದರ್ಶನದ ಮೂಲಕ ಪ್ರೋಮೋ ತೆರೆದುಕೊಳ್ಳುತ್ತದೆ. ವಿಷ್ಣುವಿನ ಅಂಶದಿಂದ ಜನಿಸಿದ ಶಂಕುಕರ್ಣನೂ ಕಾಣಿಸುತ್ತಾನೆ. ಹರಿ ಭಕ್ತಿಯ ಹರಿಕಾರ ಭಕ್ತ ಪ್ರಹ್ಲಾದ, ಉಗ್ರ ನರಸಿಂಹನಿಂದ ಹಿರಣ್ಯ ಕಶಿಪುವಿನ ಸಂಹಾರವೂ ಪ್ರೋಮೋದಲ್ಲಿದೆ. ಬಳಿಕ ಮಧ್ವ ಪರಂಪರೆಯತ್ತ ಹೊರಳುವ ಪ್ರೋಮೋದಲ್ಲಿ ತಿರುಪತಿ ತಿಮ್ಮಪ್ಪನ ಮುಚ್ಚಿದ ಬಾಗಿಲನ್ನು ಶ್ರೀ ರಾಘವೇಂದ್ರ ಸ್ವಾಮಿಗಳೇ ತೆರೆಯುತ್ತಾರೆ. ಅಲ್ಲಿಗೆ ರಾಯರ ಮುಖದರ್ಶನವಾಗುತ್ತದೆ.

"ಅಖಂಡ ಬ್ರಹ್ಮಾಂಡ ಕ್ಷೀರಸಾಗರದಲ್ಲಿ ಪವಡಿಸಿರುವ ಶ್ರೀ ಹರಿಯೇ ಈ ಜಗದ ಜನನಕ್ಕೆ ಕಾರಣ. ವಿಷ್ಣುವಿನ ಅಂಶದಿಂದ ಜನಿಸಿದ ಶಂಕುಕರ್ಣ. ಹರಿ ಭಕ್ತಿಯ ಹರಿಕಾರ ಭಕ್ತಪ್ರಹ್ಲಾದ. ಮಧ್ವ ಪರಂಪರೆಯ ಮೇರು ಶಿಖರ ಶ್ರೀ ವ್ಯಾಸ ರಾಯರು. ತಿರುಪತಿ ಮುಚ್ಚಿದ ಬಾಗಿಲು ತೆರೆದು ಅನಂತ ಜ್ಯೋತಿಯ ಪ್ರಖರತೆಯನ್ನು ತಾವೇ ಸ್ವೀಕರಿಸಿದರು. ಮನುಕುಲದ ಕಷ್ಟ ನೀಗಿಸಲು ಕಲಿಯುಗದ ಕಾಮಧೇನುವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನನ್ಯ ರೂಪದ ಅನರ್ಘ್ಯ ಚರಿತೆ. ಶ್ರೀ ರಾಘವೇಂದ್ರ ಮಹಾತ್ಮೆ" ಎಂದು ಪ್ರೋಮೋದಲ್ಲಿ ರಾಯರನ್ನು ಬಣ್ಣಿಸಲಾಗಿದೆ.

ಮತ್ತೆ ರಾಯರ ಪಾತ್ರದಲ್ಲಿ ಪರೀಕ್ಷಿತ್‌

2010ರಲ್ಲಿ ಸುವರ್ಣ ವಾಹಿನಿಯಲ್ಲಿ ʻಶ್ರೀ ಗುರು ರಾಘವೇಂದ್ರ ವೈಭವʼ ಧಾರಾವಾಹಿ ಪ್ರಸಾರ ಕಂಡು, ಜನ ಮೆಚ್ಚುಗೆ ಪಡೆದಿತ್ತು. ಆ ಧಾರಾವಾಹಿಯಲ್ಲಿ ರಾಯರ ಪಾತ್ರದಲ್ಲಿ ನಟಿಸಿದ್ದು ಪರೀಕ್ಷಿತ್‌ ಸರ್ಪಶಯನ. ಇದೀಗ 15 ವರ್ಷಗಳ ಬಳಿಕ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ʻಶ್ರೀ ರಾಘವೇಂದ್ರ ಮಹಾತ್ಮೆʼ ಧಾರಾವಾಹಿಯಲ್ಲಿಯೂ ಪರೀಕ್ಷಿತ್‌ ಸರ್ಪಶಯನ ಅವರೇ ರಾಯರ ಪಾತ್ರದಲ್ಲಿದ್ದಾರೆ.

ಯಾವಾಗಿನಿಂದ ಪ್ರಸಾರ?

ಇದೀಗ ಮೊದಲ ಪ್ರೋಮೋ ಬಿಡುಗಡೆಯಾದರೂ ವೀಕ್ಷಕರ ಕಾಯುವಿಕೆಗೆ ಉತ್ತರ ಸಿಕ್ಕಿಲ್ಲ. ಏಕೆಂದರೆ, ಈ ಧಾರಾವಾಹಿ ಪ್ರಸಾರ ಯಾವಾಗಿನಿಂದ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಕೆಲ ಮೂಲಗಳ ಮಾಹಿತಿ ಪ್ರಕಾರ, ಮೇ ಕೊನೇ ವಾರ ಅಥವಾ ಜೂನ್‌ ಮೊದಲ ವಾರದಲ್ಲಿ ʻಶ್ರೀ ರಾಘವೇಂದ್ರ ಮಹಾತ್ಮೆʼ ಸೀರಿಯಲ್‌ ಪ್ರಸಾರ ಆರಂಭಿಸುವ ಸಾಧ್ಯತೆ ಇದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಇನ್ನಷ್ಟೇ ಅಧಿಕೃತವಾಗಿ ಪ್ರಸಾರ ದಿನಾಂಕವನ್ನು ಘೋಷಣೆ ಮಾಡಬೇಕಿದೆ.

ವೀಕ್ಷಕ ವಲಯದಲ್ಲಿ ಸಂಭ್ರಮ

ʻಶ್ರೀ ರಾಘವೇಂದ್ರ ಮಹಾತ್ಮೆʼ ಪ್ರೋಮೋ ಬಿಡುಗಡೆ ಆಗಿದ್ದೇ ತಡ, ಈ ಧಾರಾವಾಹಿಗಾಗಿ ಕಾಯುತ್ತಿದ್ದವರು ಸಂಭ್ರಮಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ "ಮನುಕುಲದ ಕಷ್ಟ ಕಳೆಯಲು ವಿಷ್ಣುವಿನ ಅಂಶವಾಗಿ, ಕಲಿಯುಗದ ಕಲ್ಪವೃಕ್ಷವಾಗಿ ಅವತರಿಸಿದ ಗುರು ಸಾರ್ವಭೌಮರ ಕತೆ.. ಶೀಘ್ರದಲ್ಲಿ" ಎಂಬ ಕ್ಯಾಪ್ಷನ್‌ ಮೂಲಕ ಪ್ರೋಮೋ ಹೊರಬಂದಿದೆ. ಈ ಪ್ರೋಮೋಕ್ಕೆ ವೀಕ್ಷಕ ವಲಯ ಬಗೆಬಗೆ ಕಾಮೆಂಟ್‌ ಮೂಲಕ ಖುಷಿ ವ್ಯಕ್ತಪಡಿಸುತ್ತಿದೆ. ʻಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಕೊನೆಗೂ ಪ್ರೊಮೋ ಬಂತುʼ, ʻಅದ್ಭುತವಾದ ಕಥೆಯನ್ನು ತೆರೆ ಮೇಲೆ ತರ್ತ ಇದ್ದೀರಾ... ದಯವಿಟ್ಟು ಮೂಲ ಗ್ರಂಥಗಳನ್ನು ಆಧಾರವಾಗಿ ಇಟ್ಟುಕೊಂಡು ಪ್ರಸ್ತುತ ಪಡಿಸಿ. TRP ಗೋಸ್ಕರ ಫ್ಯಾಂಟಸಿ ಕಥೆಯನ್ನು ಮತ್ತು ಭಕ್ತರ ಭಾವನೆಯನ್ನು ಹಾಳು ಮಾಡಬೇಡಿ. ಒಳ್ಳೆದಾಗಲಿ ರಾಯರಿದ್ದಾರೆʼ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.