Amruthadhaare: ಮಹೇಶಣ್ಣ ಧಾರಾವಾಹಿಗೆ ಲಾಯಲ್ ಅಭಿಮಾನಿಗಳಿದ್ದಾರೆ, ಅವರಿಗೆ ನಿರಾಸೆ ಮಾಡ್ಬೇಡಿ; ಅಮೃತಧಾರೆ ನಿರ್ದೇಶಕರಿಗೆ ಹೀಗೊಂದು ಮನವಿ
Amrithadhare Serial: ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ನಿರ್ದೇಶಕರಿಗೆ ಸೋಷಿಯಲ್ ಮಿಡಿಯಾದಲ್ಲಿ ಧಾರಾವಾಹಿ ಅಭಿಮಾನಿಗಳು ಮನವಿಯೊಂದನ್ನು ಸಲ್ಲಿಸಿದ್ದಾರೆ. ಈ ಕೂಡಲೇ ನಮ್ಮ ಮನವಿಯನ್ನು ಆಗ್ರಹಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಏನಿದು ಸಮಾಚಾರ ನೋಡಿ.

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಹಲವು ಧಾರಾವಾಹಿಗಳ ಪೈಕಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆಗೆ ವಿಶೇಷ ಸ್ಥಾನವಿದೆ. ಈ ಧಾರಾವಾಹಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಹೆಣ್ಣುಮಕ್ಕಳು ಮಾತ್ರವಲ್ಲ ಗಂಡುಮಕ್ಕಳು ಕೂಡ ಈ ಧಾರಾವಾಹಿಯನ್ನು ಇಷ್ಟಪಟ್ಟು ನೋಡುತ್ತಾರೆ. ಎಲ್ಲೂ ಎಳೆದಾಡದೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಾ ಟಿಆರ್ಪಿಯಲ್ಲೂ ಅಗ್ರಸ್ಥಾನದಲ್ಲಿರುವ ಅಮೃತಧಾರೆ ಧಾರಾವಾಹಿ ಇತ್ತೀಚೆಗೆ ಹಳಿ ತಪ್ಪುತ್ತಿದೆ.
ಅಮೃತಧಾರೆ ಧಾರಾವಾಹಿಯ ಪ್ರಮುಖ ಆಕರ್ಷಣೆ ಗೌತಮ್ ಹಾಗೂ ಭೂಮಿಕಾ ಜೋಡಿ. ಈ ಜೋಡಿಗಾಗಿಯೇ ಹಲವರು ಧಾರಾವಾಹಿ ನೋಡುತ್ತಾರೆ. ಇವರಿಬ್ಬರ ನಟನೆಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಪಾತ್ರವನ್ನು ಪರಕಾಯ ಪ್ರವೇಶ ಮಾಡುವುದರಲ್ಲಿ ಇವರನ್ನು ಬಿಟ್ಟರೆ ಬೇರಿಲ್ಲ ಎಂಬುವಂತೆ ನಟಿಸುತ್ತಾರೆ. ಇವರ ನಡುವಿನ ಸಂಭಾಷಣೆ, ಲವ್, ರೊಮಾನ್ಸ್ ಎಲ್ಲವೂ ವೀಕ್ಷಕರಿಗೆ ಇಷ್ಟವಾಗುತ್ತದೆ. ಆದರೆ ಕಳೆದ ಕೆಲವು ಸಂಚಿಕೆಗಳಿಂದ ಭೂಮಿಕಾ–ಗೌತಮ್ ತೆರೆ ಮೇಲೆ ಹೆಚ್ಚು ಕಾಣಿಸುತ್ತಿಲ್ಲ. ಇದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ.
ಈ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಮಹೇಶ್ ರಾವ್ ಅವರಿಗೆ ಅಭಿಮಾನಿಗಳು ಮನವಿಯೊಂದನ್ನು ಸಲ್ಲಿಸಿದ್ದಾರೆ. ‘ಮಹೇಶಣ್ಣ, ಅಮೃತಧಾರೆ ಧಾರಾವಾಹಿಗೆ ಲಾಯರ್ ಅಭಿಮಾನಿಗಳಿದ್ದಾರೆ ಅವರಿಗೆ ಬೇಸರ ಮಾಡ್ಬೇಡಿ‘ ಎಂದು ಬರೆದಿರುವ ಪೋಸ್ಟರ್ ಹಂಚಿಕೊಳ್ಳುವ ಮೂಲಕ ‘ಅಮೃತದಾರೆ ಫ್ಯಾನ್ಸ್ ಸೀರಿಯಲ್ ನೋಡೋದು ಭೂಮಿಕ ಹಾಗೂ ಗೌತಮ್ ಅವರಿಗೋಸ್ಕರ , ಟೈಮ್ಪಾಸ್ ನಿಲ್ಲಿಸಿ ಗೌತಮ್ ಹಾಗೂ ಭೂಮಿಕಾ ಅವರನ್ನು ತೋರಿಸಿ‘ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಭೂಮಿ ಹಾಗೂ ಗೌತಮ್ ತೆರೆ ಮೇಲೆ ಹೆಚ್ಚು ಕಾಣಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆ ‘ಇವತ್ತು ಅಥವಾ ನಾಳೆನೋ ನಮ್ಮ ಫೀಲಿಂಗ್ಸ್ ನಿಮಗೆ ಅರ್ಥ ಆಗುತ್ತೆ ಅಂತ ವೈಟ್ ಮಾಡ್ತಾ ಇದೀವಿ ಡೈರೆಕ್ಟ್ರೇ‘ ಎಂದು ಕೂಡ ಈ ಪೋಸ್ಟರ್ ಮೇಲೆ ಬರೆಯಲಾಗಿದೆ.
ಈ ಪೋಸ್ಟ್ಗೆ ಹಲವು ಅಮೃತಧಾರೆ ಧಾರಾವಾಹಿ ಅಭಿಮಾನಿಗಳ ಕಾಮೆಂಟ್ ಮಾಡಿದ್ದಾರೆ. ‘ಯೆಸ್, ನಿಜ ನಾವು ಧಾರಾವಾಹಿ ನೋಡೋದೇ ಭೂಮಿಕಾ, ಗೌತಮ್ಗಾಗಿ‘ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದರೆ, ನಿಮಗಾದ್ರೂ ಅರ್ಥ ಆಯ್ತಲ್ಲ ನಮ್ ಕಷ್ಟ‘ ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಫೈನಲಿ ನಮ್ಮ ಫೀಲಿಂಗ್ಸ್ ಬೇರೆಯವರಿಗೂ ಅರ್ಥ ಆಯ್ತು‘ ಎಂದು ಅಮೃತಧಾರೆ ಆಫೀಶಿಯಲ್ ಎಂಬ ಇನ್ಸ್ಟಾಗ್ರಾಂ ನಿರ್ವಹಿಸುವವರು ಕಾಮೆಂಟ್ ಮಾಡಿದ್ದಾರೆ. ‘ನಾವು ಗೌತಮ್ ಭೂಮಿಕಾ ಅಭಿಮಾನಿ. ಈವಾಗ ಅಮೃತಧಾರೆ ಧಾರಾವಾಹಿಗೆ ಅರ್ಥನೇ ಇಲ್ಲದ ತರ ಮಾಡ್ತಿದ್ದಾರೆ ಡೈರೆಕ್ಟರ್‘ ಎಂದು ಅಭಿಮಾನಿಯೊಬ್ಬರು ಬೇಸರ ಹೊರ ಹಾಕಿದ್ದಾರೆ.
ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರಕ್ಕೆ ಪ್ರಾಮುಖ್ಯ ಕೊಡಲಾಗುತ್ತಿದೆ. ಜೊತೆಗೆ ಭಾಗ್ಯಮ್ಮಂಗೆ ಹಳೆ ನೆನಪುಗಳು ಕೂಡ ಮರಳಿ ಬಂದಿದೆ. ಶಕ್ಕು ಹಾಗೂ ಗ್ಯಾಂಗ್ ಕುತಂತ್ರಗಳು ಎಂದಿನಂತೆ ಮುಂದುವರಿದಿವೆ. ಆದರೆ ಗೌತಮ್ ಹಾಗೂ ಭೂಮಿಕಾ ಪಾತ್ರವನ್ನು ನಿರ್ದೇಶಕರು ಮೂಲೆ ಗುಂಪು ಮಾಡಿದಂತೆ ಮೇಲ್ನೋಟಕ್ಕೆ ಅನ್ನಿಸುತ್ತಿರುವುದಂತೂ ನಿಜ.
ಧಾರಾವಾಹಿ ಹೆಸರು: ಅಮೃತಧಾರೆ.
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).
