ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ; ಮುದ್ದುಲಕ್ಷ್ಮಿ ಸೀರಿಯಲ್ ಖ್ಯಾತಿಯ ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ
‘ಮುದ್ದುಲಕ್ಷ್ಮಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟ ಚರಿತ್ ಬಾಳಪ್ಪ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಪರಿಚಿತ ಯುವತಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಮಾಡಿರುವ ಆರೋಪದಡಿಯಲ್ಲಿ ಚರಿತ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ದ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ಸಂಬಂಧ ಆರ್ಆರ್ ನಗರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಕನ್ನಡದ ‘ಮುದ್ದುಲಕ್ಷ್ಮಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಚರಿತ್ ನಟಿಸಿದ್ದಾರೆ. ತೆಲುಗು ಭಾಷೆಯ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪರಿಚಿತಳಾಗಿದ್ದ ಗೆಳತಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಮಾಡಿರುವ ಆರೋಪದಡಿಯಲ್ಲಿ ಚರಿತ್ ಬಂಧನವಾಗಿದೆ.
ಯುವತಿಯಿಂದ ದೂರು ದಾಖಲು
ವಿವಾಹವಾಗುತ್ತೇನೆ ಎಂದು ನಂಬಿಸಿ ಪ್ರೀತಿಸಿ ಬಲವಂತವಾಗಿ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಈ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಾನು ವಾಸ ಮಾಡುತ್ತಿದ್ದ ಮನೆಗೆ ತನ್ನ ಸಹಚರರ ಜೊತೆ ಅಕ್ರಮವಾಗಿ ಪ್ರವೇಶಿಸಿ ಚರಿತ್ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದೂ ಅವರು ದೂರಿನಲ್ಲಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ ಹಣಕ್ಕೂ ಬೇಡಿಕೆ ಇಟ್ಟಿರುವ ಆರೋಪವನ್ನೂ ಹೊರಿಸಿದ್ದಾರೆ. ಒಂದು ವೇಳೆ ಹಣ ಕೊಡದೇ ಇದ್ದಲ್ಲಿ ತನ್ನ ಜತೆ ಇರುವ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ.
ಪತ್ನಿ ಜತೆಗೆ ಡಿವೋರ್ಸ್
ಕಿರುತೆರೆ ನಟ ಚರಿತ್ ಬಾಳಪ್ಪಗೆ 2017ರಲ್ಲಿ ನಟಿ ಮಂಜು ಅವರ ಜತೆ ವಿವಾಹವಾಗಿತ್ತು. 2022ರಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ನಂತರ ಇಬ್ಬರೂ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಪರಿಹಾರ ಹಣ ನೀಡುವಂತೆೆ ನೋಟಿಸ್ ಕಳುಹಿಸಿದ್ದಕ್ಕೆ ಚರಿತ್ ತನ್ನ ಮಾಜಿ ಪತ್ನಿ ಮಂಜುಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಮಂಜು ಅವರು ಚರಿತ್ ಬಾಳಪ್ಪ ವಿರುದ್ಧ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಹಲವು ಧಾರಾವಾಹಿಗಳಲ್ಲಿ ನಟನೆ
ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ಮುಖ್ಯಪಾತ್ರಧಾರಿ ಧೃವಂತ್ ಪಾತ್ರ ನಿರ್ವಹಿಸಿದ್ದರು. ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'w/o ಕೃಷ್ಣಮೂರ್ತಿ' ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸಿದ್ದರು. ಚರಿತ್ 'ಮುದ್ದು ಮಣಿಗಳು' ಧಾರಾವಾಹಿಯಲ್ಲಿ ವೈದ್ಯರ ಪಾತ್ರ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು.
ಈ ಹಿಂದೆ ಚರಿತ್ ಬಾಳಪ್ಪ ನೆರೆಹೊರೆಯವರೊಂದಿಗೂ ಕಿರಿಕಿರಿ ಮಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ಸಂಬಂಧ ಅವರು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಳೆದ ಫೆಬ್ರವರಿ 23ರಂದು ಈ ಘಟನೆ ನಡೆದಿತ್ತು. ಚರಿತ್ ಬಾಳಪ್ಪ ಖಾಲಿ ಜಾಗದಲ್ಲಿ ಕಸ ಹಾಕಿದ್ದರು. ಇದನ್ನು ನೆರೆಮನೆಯವರು ಪ್ರಶ್ನಿಸಿದ್ದರು. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿತ್ತು. ಪರಸ್ಪರ ಕೈ ಮಿಲಾಯಿಸುವ ಹಂತವನ್ನೂ ತಲುಪಿತ್ತು. ಇದೇ ಕಾರಣಕ್ಕೆ ಚರಿತ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು.
(ವರದಿ: ಮಾರುತಿ ಎಚ್)