ಕಲಾವಿದ ಕಪಿಲ್ ಸಾವನ್ನು ಕಾಂತಾರ ಚಿತ್ರದ ಜತೆಗೆ ಕನೆಕ್ಟ್ ಮಾಡಬೇಡಿ; ಹೊಂಬಾಳೆ ಫಿಲ್ಮ್ಸ್ ಮನವಿ
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್ 1 ಸಿನಿಮಾದ ಜೂನಿಯರ್ ಕಲಾವಿದನೊಬ್ಬ ಇತ್ತೀಚೆಗೆ ನದಿ ನೀರಿನಲ್ಲಿ ಮುಳುಗಿರುವುದಕ್ಕೆ ಸಂಬಂಧಪಟ್ಟಂತೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ ನೀಡಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಕೂಡ ಟ್ವೀಟ್ ಮಾಡಿದ್ದು 1 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿದೆ.

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್ 1 ಸಿನಿಮಾದ ಜೂನಿಯರ್ ಕಲಾವಿದನೊಬ್ಬ ಇತ್ತೀಚೆಗೆ ನದಿ ನೀರಿನಲ್ಲಿ ಮುಳುಗಿರುವುದಕ್ಕೆ ಸಂಬಂಧಪಟ್ಟಂತೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆಯೊಂದನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ದಯವಿಟ್ಟು ಈ ಘಟನೆಯನ್ನು ಕಾಂತಾರ ಚಿತ್ರ ಅಥವಾ ಸಿಬ್ಬಂದಿಯೊಂದಿಗೆ ಯಾವುದೇ ರೀತಿಯ ಸಂಬಂಧ ಕಲ್ಪಿಸಬೇಡಿ ಎಂದು ಹೊಂಬಾಳೆ ಫಿಲ್ಮ್ಸ್ ಮನವಿ ಮಾಡಿದೆ.
ಹೊಂಬಾಳೆ ಫಿಲ್ಮ್ಸ್ ಮನವಿ
"ಎಂಎಫ್ ಕಪಿಲ್ ಅವರ ನಿಧನಕ್ಕೆ ನಮ್ಮ ಅಗಾಧವಾದ ಸಂತಾಪಗಳು. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮೆಲ್ಲರ ಸಹಾನುಭೂತಿ ಅವರೊಂದಿಗಿದೆ" ಎಂದು ಹೊಂಬಾಳೆ ಫಿಲ್ಮ್ಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
"ಈ ಹಿನ್ನೆಲೆಯಲ್ಲಿ, ಈ ಘಟನೆ ಕಾಂತಾರ ಚಿತ್ರೀಕರಣದ ಸ್ಥಳದಲ್ಲಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ. ಆ ದಿನ ಯಾವುದೇ ಚಿತ್ರೀಕರಣ ನಿಗದಿಯಾಗಿರಲಿಲ್ಲ. ಈ ಘಟನೆ ಅವರ ವೈಯಕ್ತಿಕ ಕಾರ್ಯಕ್ರಮದಲ್ಲಿ ಚಲನ ಚಿತ್ರ ಸಂಬಂಧಿತ ಚಟುವಟಿಕೆಗಳ ವ್ಯಾಪ್ತಿಯ ಹೊರಗೆ ಸಂಭವಿಸಿದೆ" ಎಂದು ಹೊಂಬಾಳೆ ಫಿಲ್ಮ್ಸ್ ಎಕ್ಸ್ನಲ್ಲಿ ಬರೆದಿದೆ.
"ದಯವಿಟ್ಟು ಈ ಘಟನೆಯನ್ನು ಕಾಂತಾರ ಚಿತ್ರ ಅಥವಾ ಅದರ ಸಿಬ್ಬಂದಿಯೊಂದಿಗೆ ಸಂಬಂಧ ಕಲ್ಪಿಸಬಾರದು ಎಂದು ನಾವು ವಿನಂತಿಸುತ್ತೇವೆ" ಎಂದು ಹೊಂಬಾಳೆ ಫಿಲ್ಮ್ಸ್ ಮನವಿ ಮಾಡಿದೆ.
ಈ ಘಟನೆಗೆ ಸಂಬಂಧಪಟ್ಟಂತೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಕೂಡ ಟ್ವೀಟ್ ಮಾಡಿದೆ. ಈ ಸಾವಿನ ಕುರಿತಂತೆ ನಿಖರವಾದ ತನಿಖೆ ನಡೆಸುವಂಎ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ. ಇದರೊಂದಿಗೆ ಮೃತಪಟ್ಟ ಕಲಾವಿದನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದೆ.
"ಇಂಡಿಯನ್ 2, ಸರ್ದಾರ್ 2, ಕಾಂತಾರ ಚಾಪ್ಟರ್ 1 ಸಿನಿಮಾಗಳಲ್ಲಿ ಆಗಿರುವ ದುರ್ಘಟನೆಗಳು ಆತಂಕಕಾರಿಯಾಗಿವೆ. ಇಂತಹ ಘಟನೆಗಳು ನಡೆದಾಗ ನಿರ್ಮಾಣ ಸಂಸ್ಥೆಗಳು ಪ್ರಕರಣ ಮುಚ್ಚಿ ಹಾಕುವ ಕಾರ್ಯ ಮಾಡುತ್ತವೆ. ಸಹಕಲಾವಿದರ ಮೇಲೆ ಪ್ರಭಾವ ಬರಿ ಜವಾಬ್ದಾರಿಯಿಂದ ವಿಮುಖರಾಗುವಂತಹ ಕಾರ್ಯಗಳನ್ನು ಮಾಡುತ್ತವೆ. ಕಾಂತಾರದ ಈ ಘಟನೆಯನ್ನು ಗಂಭೀರವಾಗಿ ತನಿಖೆ ಮಾಡಬೇಕು. ಪ್ರಕರಣದಲ್ಲಿ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಮೃತ ಕಲಾವಿದನ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು" ಎಂದು ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಆಗ್ರಹಿಸಿದೆ. ಈ ಟ್ವೀಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಟ್ಯಾಗ್ ಮಾಡಲಾಗಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಪ್ರಿಕ್ವೆಲ್ (ಕಾಂತಾರ ಚಾಪ್ಟರ್ 1) ಚಿತ್ರದ ಜೂನಿಯರ್ ಕಲಾವಿದನೊಬ್ಬ ದುರಂತ ಸಾವು ಕಂಡಿದ್ದಾರೆ. ಮೃತ ದುರ್ದೈವಿಯನ್ನು ಕಪಿಲ್ ಎಂದು ಗುರುತಿಸಲಾಗಿದೆ. ಇವರನ್ನುಕೇರಳ ಮೂಲದವರು ಎಂದು ಹೇಳಲಾಗಿದೆ. ಬಹುನಿರೀಕ್ಷಿತ ಚಿತ್ರದಲ್ಲಿ ಜೂನಿಯರ್ ಕಲಾವಿದ ಅಭಿನಯಿಸುತ್ತಿದ್ದರು ಎನ್ನಲಾಗಿದೆ. ಇಂದು (ಮೇ 6) ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು ಪುಣ್ಯಕ್ಷೇತ್ರದ ಬಳಿಯ ಸೌಪರ್ಣಿಕಾ ನದಿಯಲ್ಲಿ ಇವರು ಈಜುತ್ತಿದ್ದರು. ಆಗ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿದ್ದಾರೆ ಎಂದು ವರದಿಯಾಗಿದೆ.