Yash: ಈ ಒಂದು ಕಾರಣಕ್ಕೆ ನಾನು ಈ ಬಾರಿ ಪ್ರಚಾರ ಮಾಡಿಲ್ಲ; ಸಿನಿಮಾ ಬಗ್ಗೆ ಕೇಳಿದ್ರೆ ವಯಸ್ಸಾಯ್ತು ಎಂದ ಯಶ್!
ಹೊಸಕೆರೆಹಳ್ಳಿಯಲ್ಲಿ ನಟ ಯಶ್ ಮತದಾನ ಮಾಡಿದ್ದಾರೆ. ಈ ವೇಳೆ ಮುಂದಿನ ಸಿನಿಮಾ ಬಗ್ಗೆ ಕೇಳಿದ್ರೆ, ವಯಸ್ಸೇ 37 ಆಯ್ತು ಎಂದು ನಗೆಚಟಾಕಿ ಹಾರಿಸಿದ್ದಾರೆ.
Yash: ಸ್ಯಾಂಡಲ್ವುಡ್ ನಟ ಯಶ್ (Yash) ಅವರ ಮುಂದಿನ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇಲ್ಲಿಯವರೆಗೂ ಒಂದೇ ಒಂದು ಸಣ್ಣ ಸುಳಿವನ್ನೂ ನೀಡದ ಅವರು, ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. ಮಡದಿ ಮಕ್ಕಳ ಜತೆಗೇ ಹೆಚ್ಚ ಸಮಯ ಕಳೆಯುತ್ತಿರುವ ಅವರು, ಸೋಷಿಯಲ್ ಮೀಡಿಯಾದಲ್ಲಿಯೂ ಆಗಾಗ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕಾಗಿ ಯಶ್ ಆಗಮಿಸಿದ್ದರು. ತುಂಬ ದಿನಗಳ ಬಳಿಕ ಮಾಧ್ಯಮದ ಮುಂದೆ ಎದುರಾದರೂ, ಕೌತುಕದ ಪ್ರಶ್ನೆಗೆ ಉತ್ತರ ಮಾತ್ರ ಸಿಗಲಿಲ್ಲ!
ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಬುಧವಾರ ನಟ ಯಶ್ ಮತಚಲಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಯಶ್, ಪ್ರಚಾರ ಕಣಕ್ಕೆ ಏಕೆ ಇಳಿದಿಲ್ಲ ಎಂಬುದನ್ನೂ ಹೇಳಿದ್ದಾರೆ. "ಈ ಸಲ ನನಗೆ ಅಷ್ಟೇನೂ ಇಂಟ್ರೆಸ್ಟ್ ಇರಲಿಲ್ಲ. ಆ ಕಾರಣಕ್ಕೆ ಪ್ರಚಾರ ಮಾಡಿಲ್ಲ" ಎಂದಿದ್ದಾರೆ. ಮುಂದುವರಿದು ಮತದಾನ ಮತ್ತು ಜಾಗೃತಿ ಬಗ್ಗೆ ಹೀಗೆ ಹೇಳಿದ್ದಾರೆ ಯಶ್.
"ಕಳೆದ ಬಾರಿ ಚುನಾವಣಾ ಪ್ರಚಾರಕ್ಕೆ ಹೋದಾಗ ಕೆಲವು ಉದ್ದೇಶಗಳಿದ್ದವು. ಯಶೋಮಾರ್ಗ ಇತ್ತು. ಆದರೆ ಈ ಬಾರಿ ಇದು ನನ್ನ ವೈಯಕ್ತಿಕ ಆಯ್ಕೆ. ಚುನಾವಣಾ ಪ್ರಚಾರ ಮಾಡಬೇಕು ಅನ್ನಿಸಲಿಲ್ಲ. ಈ ಸಲ ನನಗೆ ಅಷ್ಟೇನೂ ಇಂಟ್ರೆಸ್ಟ್ ಇರಲಿಲ್ಲ.18 ವರ್ಷ ತುಂಬಿದ ಯುವ ಮತದಾರರಿಗೆ ಮತದಾನ ಎಂಬುದು ನಮ್ಮ ಹಕ್ಕು, ಜವಾಬ್ದಾರಿ ಏನೆಂಬುದನ್ನು ತಿಳಿಸಬೇಕು. ಅದರ ಬಗ್ಗೆ ಅರಿವು ಮೂಡಿಸುವುದಕ್ಕೆ ಒಂದು ಸರಿಯಾದ ಶಿಕ್ಷಣ ಬೇಕಿದೆ' ಎಂದರು.
"ಎಲೆಕ್ಷನ್ ಟೈಮ್ನಲ್ಲಿ ಯಾರಿಗೆ ವೋಟ್ ಮಾಡಿದ್ರೇನು, ಹಾಗೇ ಹೀಗೆ ಅಂತ ತುಂಬ ಜನರು ಮಾತಾಡ್ತಾರೆ. ಆದರೆ ಮತದಾನ ಮಾಡೋದು ಎಷ್ಟು ಮಹತ್ವದ್ದು, ಅದರ ಮೌಲ್ಯ ಎನು ಎಂಬುದನ್ನು ಅರಿಯಬೇಕು. ಅದನ್ನು ಅರ್ಥ ಮಾಡಿಕೊಂಡು ಯಂಗ್ಸ್ಟರ್ಸ್ ವೋಟ್ ಹಾಕಲು ಮುಂದೆ ಬಂದ್ರೆ ಒಳ್ಳೆಯದು. ಯಾವುದೇ ರಾಜಕೀಯ ಪಕ್ಷವಾಗಲಿ, ರಾಜಕಾರಣಿಯಾಗಲಿ ಬೇಸಿಕ್ ಕೆಲಸಗಳನ್ನು ಶಿಸ್ತಿನಿಂದ ಮಾಡಿದರೆ, ಸಾಕು ಜನರೇ ಅದನ್ನು ಮುಂದುವರಿಸಿಕೊಂಡು ಹೋಗ್ತಾರೆ ಅನ್ನೋದನ್ನು ನಾನು ನಂಬಿದ್ದೇನೆ. ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಕೆಲಸಗಳು ನಡೀಬೇಕು. ಇದನ್ನೆಲ್ಲ ನಾವೇ ಗೊಂದಲ ಮಾಡಿಕೊಂಡಿದ್ದೇವಾ ಎಂದೆನಿಸುತ್ತದೆ. ಪಬ್ಲಿಕ್ ಕೆಲಸಗಳನ್ನು ಸರಳವಾಗಿ ಮುಗಿಸುವ ಪ್ರಯತ್ನ ಸರ್ಕಾರದಿಂದ ಆಗಬೇಕು" ಎಂಬುದು ಯಶ್ ಮಾತು.
ವಯಸ್ಸು 37 ಆಯ್ತು!
ಇನ್ನು ಮುಂದಿನ ಸಿನಿಮಾ #Yash19 ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಯಶ್, "ಅಯ್ಯೋ ನಂಗೆ ಆಗ್ಲೇ 37 ಆಯ್ತು.." ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಇದು ಸಿನಿಮಾ ಬಗ್ಗೆ ಮಾತನಾಡುವುದಕ್ಕೂ ಸೂಕ್ತ ಸಮಯವಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ.
ವೋಟ್ ಮಾಡಿದ ಬಳಿಕ ಸುದೀಪ್ ಹೀಗಂದ್ರು
“ವೋಟರ್ ಐಡಿ ಇರುವವರಲ್ಲಿ ಕೇವಲ ಶೇ. 60ರಿಂದ 65 ಮಂದಿ ಮಾತ್ರ ಮತದಾನ ಮಾಡುತ್ತಿದ್ದಾರೆ. ಇನ್ನುಳಿದ ಶೇ. 30 ಮಂದಿ ಬರ್ತಿಲ್ಲ. ಇವತ್ತು ವೋಟ್ ಹಾಕೋದನ್ನು ಬಿಟ್ಟು ಆನ್ಲೈನ್ನಲ್ಲಿ ಕುಳಿತುಕೊಂಡು ಲೀಡರ್ಸ್ಗೆ ಸರ್ಕಾರಕ್ಕೆ ಬೈಯೋದು ಸರಿಯಲ್ಲ. ಹಾಗಾಗಿ ಎಲ್ಲರೂ ವೋಟ್ ಮಾಡಲೇಬೇಕು”
"ಕ್ಯಾಂಪೇನಿಂಗ್ಗೆ ಹೋದಾಗ ತುಂಬ ಸತ್ಯಗಳನ್ನು ನೋಡಿಕೊಂಡು ಬಂದಿದ್ದೇನೆ. ಆ ಸತ್ಯಗಳು ನನ್ನ ಜೊತೆ ಇರುತ್ತವೆ. ತುಂಬ ಜನರಿಗೆ, ತುಂಬ ಊರುಗಳಲ್ಲಿ ಸಿಕ್ಕಾಪಟ್ಟೆ ಕೊರತೆಗಳಿವೆ. ನಾನು ಕ್ಯಾಂಪೇನ್ ಮಾಡಿದವರೋ ಅಥವಾ ಅವರು ಎದುರಿನವರೋ ಯಾರೇ ಗೆಲ್ಲಲಿ. ಜನರಿಗೆ ಒಳ್ಳೆಯದನ್ನು ಮಾಡಲಿ. ಉತ್ತರ ಕರ್ನಾಟಕ ಮಂದಿಗೆ ನೀರಾವರಿ, ನೀರು ಕೊಟ್ಟು ಸಮಾಧಾನ ಪಡಿಸಿದ್ದಾರೆ. ಎಷ್ಟೋ ಊರುಗಳು ಎಷ್ಟೋ ವರ್ಷ ಹಿಂದೆಯೇ ಉಳಿದಿವೆ. ಅವರೆಲ್ಲರಿಗೂ ಒಂದು ಅನುಕೂಲ ಆಗಲಿ ಅನ್ನೋದೆ ನನ್ನ ಮಾತು" ಎಂದಿದ್ದಾರೆ ಸುದೀಪ್.