Karnataka Elections 2023: ಉತ್ತರ ಕರ್ನಾಟಕದ ಹಳ್ಳಿಗಳು ಎಷ್ಟೋ ವರ್ಷ ಹಿಂದಿವೆ, ನೀರು ಕೊಟ್ಟು ತೃಪ್ತಿಪಡಿಸಿದ್ದಾರಷ್ಟೇ; ಕಿಚ್ಚ ಸುದೀಪ್
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಸಾಕಷ್ಟು ಸತ್ಯಗಳನ್ನು ಕಂಡಿದ್ದೇನೆ. ಅದು ಯಾವತ್ತಿದ್ದರೂ ನನ್ನ ಜತೆಯಲ್ಲಿಯೇ ಇರಲಿದೆ ಎಂದು ಮತದಾನದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
Karnataka Assembly Elections 2023: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಇಂದು (ಮೇ 10) ಕುಟುಂಬದೊಂದಿಗೆ ಬೆಂಗಳೂರಿನ ಜೆಪಿ ನಗರದಲ್ಲಿನ ಆಕ್ಸ್ಫರ್ಡ್ ಶಾಲೆಯಲ್ಲಿ ಪತ್ನಿ ಪ್ರಿಯಾ ಸುದೀಪ್, ಮಗಳು ಸಾನ್ವಿ ಜತೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತಚಲಾವಣೆಯ ಬಳಿಕ ಕಳೆದ 15 ದಿನಗಳಿಂದ ರಾಜ್ಯ ಸುತ್ತಾಡಿದ ಬಗ್ಗೆಯೂ, ಅಲ್ಲಿ ಕಂಡ ಸ್ಥಿತಿ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ.
ಚುನಾವಣೆ ಪ್ರಚಾರ ಶುರುವಾದ ಬಳಿಕ ರಾಜ್ಯದ ಹತ್ತಾರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ (BJP) ಅಭ್ಯರ್ಥಿಗಳ ಪರ ಸುದೀಪ್ ಪ್ರಚಾರ ನಡೆಸಿದ್ದಾರೆ. ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹೀಗೆ ಎಲ್ಲವನ್ನೂ ಒಂದು ರೌಂಡ್ ಹೊಡೆದಿದ್ದಾರೆ. ಹೀಗೆ ಸುತ್ತಾಡಿ ಬಂದ ಬಳಿಕ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿನ ನೈಜ ಪರಿಸ್ಥಿತಿಯನ್ನು ಕಣ್ತುಂಬಿಕೊಂಡು ಹೀಗೆಂದಿದ್ದಾರೆ.
"ವೋಟರ್ ಐಡಿ ಇರುವವರಲ್ಲಿ ಕೇವಲ ಶೇ. 60ರಿಂದ 65 ಮಂದಿ ಮಾತ್ರ ಮತದಾನ ಮಾಡುತ್ತಿದ್ದಾರೆ. ಇನ್ನುಳಿದ ಶೇ. 30 ಮಂದಿ ಬರ್ತಿಲ್ಲ. ಇವತ್ತು ವೋಟ್ ಹಾಕೋದನ್ನು ಬಿಟ್ಟು ಆನ್ಲೈನ್ನಲ್ಲಿ ಕುಳಿತುಕೊಂಡು ಲೀಡರ್ಸ್ಗೆ ಸರ್ಕಾರಕ್ಕೆ ಬೈಯೋದು ಸರಿಯಲ್ಲ. ಹಾಗಾಗಿ ಎಲ್ಲರೂ ವೋಟ್ ಮಾಡಲೇಬೇಕು.
"ಕ್ಯಾಂಪೇನಿಂಗ್ಗೆ ಹೋದಾಗ ತುಂಬ ಸತ್ಯಗಳನ್ನು ನೋಡಿಕೊಂಡು ಬಂದಿದ್ದೇನೆ. ಆ ಸತ್ಯಗಳು ನನ್ನ ಜೊತೆ ಇರುತ್ತವೆ. ತುಂಬ ಜನರಿಗೆ, ತುಂಬ ಊರುಗಳಲ್ಲಿ ಸಿಕ್ಕಾಪಟ್ಟೆ ಕೊರತೆಗಳಿವೆ. ನಾನು ಕ್ಯಾಂಪೇನ್ ಮಾಡಿದವರೋ ಅಥವಾ ಅವರು ಎದುರಿನವರೋ ಯಾರೇ ಗೆಲ್ಲಲಿ. ಜನರಿಗೆ ಒಳ್ಳೆಯದನ್ನು ಮಾಡಲಿ. ಉತ್ತರ ಕರ್ನಾಟಕ ಮಂದಿಗೆ ನೀರಾವರಿ, ನೀರು ಕೊಟ್ಟು ಸಮಾಧಾನ ಪಡಿಸಿದ್ದಾರೆ. ಎಷ್ಟೋ ಊರುಗಳು ಎಷ್ಟೋ ವರ್ಷ ಹಿಂದೆಯೇ ಉಳಿದಿವೆ. ಅವರೆಲ್ಲರಿಗೂ ಒಂದು ಅನುಕೂಲ ಆಗಲಿ ಅನ್ನೋದೆ ನನ್ನ ಮಾತು" ಎಂದಿದ್ದಾರೆ ಸುದೀಪ್.
ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ
Rakshit Shetty: ಮತ ಚಲಾವಣೆ ಕರ್ತವ್ಯ ಮುಗಿಸಿ ಸಿನಿಮಾ ಸ್ಕ್ರಿಪ್ಟ್ ಬರೆಯೋಕೆ ಅಮೆರಿಕ ಫ್ಲೈಟ್ ಹತ್ತಲು ಸಜ್ಜಾದ ನಟ ರಕ್ಷಿತ್ ಶೆಟ್ಟಿ
ನಮ್ ಏರಿಯಾಲ್ ಒಂದ್ ದಿನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಸದ್ಯಕ್ಕೆ ಅವರ ಕೈಯಲ್ಲಿ ಎರಡು ಸಿನಿಮಾಗಳಿವೆ. ಬೆಳಗ್ಗೆಯಷ್ಟೇ ತಮ್ಮ ಹುಟ್ಟೂರಿನಲ್ಲಿ ಮತದಾನ ಮಾಡಿದ ರಕ್ಷಿತ್ ಶೆಟ್ಟಿ ಸಂಜೆ ಅಮೆರಿಕಾಗೆ ಹೊರಡಲು ಸಿದ್ಧರಾಗಿದ್ದಾರೆ.
ಇಂದು ಮತ ಚಲಾಯಿಸಲು ಕಾಯುತ್ತಿದ್ದ ರಕ್ಷಿತ್ ಶೆಟ್ಟಿ ಸಂಜೆ ಅಮೆರಿಕಾಗೆ ತೆರಳಲು ರೆಡಿಯಾಗುತ್ತಿದ್ದಾರಂತೆ. ಅದೂ ಕೂಡಾ ಸ್ಕ್ರಿಪ್ಟ್ ಬರೆಯಲು. 777 ಚಾರ್ಲಿ ಸಿನಿಮಾ ನಂತರ ವಸಂತ ಮುಲ್ಲೈ ಎಂಬ ತಮಿಳು-ಕನ್ನಡ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅವರು ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಕಾಡಿತ್ತು. ಸದ್ಯಕ್ಕೆ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟೋನಿ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಬರೆಯಲು ನಾನು ಅಮೆರಿಕ ತೆರಳುತ್ತಿದ್ದೇನೆ ಎಂದು ಸ್ವತ: ರಕ್ಷಿತ್ ಶೆಟ್ಟಿ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ. ಸುದ್ದಿಯ ಪೂರ್ಣ ಓದಿಗೆ ಇಲ್ಲಿ ಕ್ಲಿಕ್ ಮಾಡಿ