Jr.NTR on Puneeth Rajkumar: ‘ಯುದ್ಧ ಇಲ್ಲದೆ ರಾಜ್ಯ ಗೆದ್ದ ಏಕೈಕ ರಾಜ ನನ್ನ ಅಪ್ಪು’; ಜೂ. ಎನ್ಟಿಆರ್
ಬರೀ ವ್ಯಕ್ತಿತ್ವದಿಂದ, ನಗುವಿನಿಂದ, ಅಹಂ ಇಲ್ಲದೆ, ಅಹಂಕಾರ ಇಲ್ಲದೆ, ಯುದ್ಧ ಇಲ್ಲದೆ, ಒಂದು ರಾಜ್ಯ ಗೆದ್ದವರೆಂದರೆ ಅದು ಪುನೀತ್ ರಾಜ್ಕುಮಾರ್ ಮಾತ್ರ.
ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮಂಗಳವಾರ ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಸುಧಾ ಮೂರ್ತಿ, ಹಿರಿಯ ನಟ ರಜನಿಕಾಂತ್, ಜೂ. ಎನ್ಟಿಆರ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಳೆಯ ಆಗಮನದ ಹಿನ್ನೆಲೆಯಲ್ಲಿ ಇಡೀ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಬಂದ ಅತಿಥಿಗಳು ತರಾತುರಿಯಲ್ಲಿಯೇ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡರು. ವಿಧಾನ ಸೌಧ ಬಳಿ ಜೋರು ಮಳೆ ಸುರಿಯುತ್ತಿದ್ದರೂ, ಸಾವಿರಾರು ಅಪ್ಪು ಅಭಿಮಾನಿಗಳು ಮಾತ್ರ ಜಾಗ ಕದಲಿಸಲಿಲ್ಲ. ಮಳೆಯಲ್ಲಿಯೇ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಯುದ್ಧವಿಲ್ಲದೇ ರಾಜ್ಯ ಗೆದ್ದವ ನನ್ನ ಅಪ್ಪು..
ಈ ವೇಳೆ ಅತಿಥಿಯಾಗಿ ಆಗಮಿಸಿದ ಜೂ. ಎನ್ಟಿಆರ್ ಅಪ್ಪು ಬಗ್ಗೆ ಮನದುಂಬಿ ಮಾತನಾಡಿದರು. "ಮೊದಲಿಗೆ ನಾನು ಇಡೀ ಕರ್ನಾಟಕ ರಾಜ್ಯಕ್ಕೆ, ಮತ್ತು ಪ್ರಪಂಚದಾದ್ಯಂತ ಇರುವ ಎಲ್ಲ ಕರ್ನಾಟಕದ ಜನತೆಗೆ ರಾಜ್ಯೋತ್ಸವದ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ. ಒಬ್ಬ ಮನುಷ್ಯನಿಗೆ ಪರಂಪರೆ ಮತ್ತು ಉಪನಾಮ ಹಿರಿಯರಿಂದ ಬರುತ್ತದೆ. ಆದರೆ, ವ್ಯಕ್ತಿತ್ವ ಎಂಬುದು ಸ್ವಂತ ಸಂಪಾದನೆ ಮಾಡಬೇಕು"
"ಬರೀ ವ್ಯಕ್ತಿತ್ವದಿಂದ, ನಗುವಿನಿಂದ, ಅಹಂ ಇಲ್ಲದೆ, ಅಹಂಕಾರ ಇಲ್ಲದೆ, ಯುದ್ಧ ಇಲ್ಲದೆ, ಒಂದು ರಾಜ್ಯ ಗೆದ್ದವರೆಂದರೆ ಅದು ಪುನೀತ್ ರಾಜ್ಕುಮಾರ್ ಮಾತ್ರ. ಒಳ್ಳೆಯ ಸ್ನೇಹಿತ, ಒಳ್ಳೆಯ ಪತಿ, ಒಳ್ಳೆಯ ತಂದೆ, ಒಳ್ಳೆಯ ನಟ, ಒಳ್ಳೆಯ ಡಾನ್ಸರ್, ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಮನುಷ್ಯ.. ಈ ಕರ್ನಾಟಕ ರತ್ನದ ಅರ್ಥವೇ ಪುನೀತ್ ರಾಜ್ಕುಮಾರ್. ಆತನ ಹೆಮ್ಮೆಯ ಗೆಳೆಯನಾಗಿ ನಾನಿಲ್ಲಿ ನಿಂತಿದ್ದೇನೆ. ಧನ್ಯವಾದಗಳು." ಎಂದು ಪುನೀತ್ ಬಗ್ಗೆ ಜೂ. ಎನ್ಟಿಆರ್ ಮಾತನಾಡಿದ್ದಾರೆ.