ಶ್ರೀನಿಧಿ ಶೆಟ್ಟಿ ರಾಮಾಯಣದ ಸೀತೆ ಆಗಬೇಕಿತ್ತು, ಸಾಯಿ ಪಲ್ಲವಿ ಪಾಲಾಯ್ತು; ಕೆಜಿಎಫ್‌ ನಟಿಯ ಪ್ರತಿಕ್ರಿಯೆ ಹೀಗಿತ್ತು
ಕನ್ನಡ ಸುದ್ದಿ  /  ಮನರಂಜನೆ  /  ಶ್ರೀನಿಧಿ ಶೆಟ್ಟಿ ರಾಮಾಯಣದ ಸೀತೆ ಆಗಬೇಕಿತ್ತು, ಸಾಯಿ ಪಲ್ಲವಿ ಪಾಲಾಯ್ತು; ಕೆಜಿಎಫ್‌ ನಟಿಯ ಪ್ರತಿಕ್ರಿಯೆ ಹೀಗಿತ್ತು

ಶ್ರೀನಿಧಿ ಶೆಟ್ಟಿ ರಾಮಾಯಣದ ಸೀತೆ ಆಗಬೇಕಿತ್ತು, ಸಾಯಿ ಪಲ್ಲವಿ ಪಾಲಾಯ್ತು; ಕೆಜಿಎಫ್‌ ನಟಿಯ ಪ್ರತಿಕ್ರಿಯೆ ಹೀಗಿತ್ತು

ಕೆಜಿಎಫ್‌ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಶ್ರೀನಿಧಿ ಶೆಟ್ಟಿ ಅವರು ನಿತೀಶ್‌ ತಿವಾರಿಯವರ ರಾಮಾಯಣದ ಸಿನಿಮಾದಲ್ಲಿ ನಟಿಸಲು‌‌‌ ಸ್ಕ್ರೀನ್‌ ಟೆಸ್ಟ್‌ ಪಾಲ್ಗೊಂಡಿದ್ದರು. ಆದರೆ, ಅಂತಿಮವಾಗಿ ಸೀತೆ ಪಾತ್ರ ಸಾಯಿ ಪಲ್ಲವಿ ಪಾಲಾಯ್ತು.

ಶ್ರೀನಿಧಿ ಶೆಟ್ಟಿ ರಾಮಾಯಣದ ಸೀತೆ ಆಗಬೇಕಿತ್ತು, ಸಾಯಿ ಪಲ್ಲವಿ ಪಾಲಾಯ್ತು; ಕೆಜಿಎಫ್‌ ನಟಿಯ ಪ್ರತಿಕ್ರಿಯೆ
ಶ್ರೀನಿಧಿ ಶೆಟ್ಟಿ ರಾಮಾಯಣದ ಸೀತೆ ಆಗಬೇಕಿತ್ತು, ಸಾಯಿ ಪಲ್ಲವಿ ಪಾಲಾಯ್ತು; ಕೆಜಿಎಫ್‌ ನಟಿಯ ಪ್ರತಿಕ್ರಿಯೆ

ಬಹುಭಾಷಾ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ ಅವರು ರಣಬೀರ್‌ ಕಪೂರ್‌ ನಟನೆಯ ನಿತೇಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಜಿಎಫ್‌ ನಟಿ ಶ್ರೀನಿಧಿ ಶೆಟ್ಟಿ ಈ ಕುರಿತು ಮಾತನಾಡಿದ್ದಾರೆ. ಸಿದ್ಧಾರ್ಥ ಕಣ್ಣನ್‌ ಜತೆಗಿನ ಸಂದರ್ಶನದಲ್ಲಿ "ನಾನು ರಾಮಾಯಣ ಸಿನಿಮಾದ ಸೀತೆಯ ಪಾತ್ರಕ್ಕಾಗಿ ಅಡಿಷನ್‌ಗೆ ಹೋಗಿದ್ದೆ. ಸ್ಕ್ರೀನ್‌ ಟೆಸ್ಟ್‌ ಮಾಡಿದ್ದೆ. ಆದರೆ, ಅವಕಾಶ ಸಾಯಿ ಪಲ್ಲವಿ ಅವರಿಗೆ ದೊರಕಿತ್ತು" ಎಂದು ಹೇಳಿದ್ದಾರೆ. ಕೆಜಿಎಫ್‌ ನಟಿ ಶ್ರೀನಿಧಿ ಶೆಟ್ಟಿ ಅವರು ತೆಲುಗಿನ ಹಿಟ್‌ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾನಿ ಜತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ರಾಮಾಯಣದ ಅಡಿಷನ್‌ನಲ್ಲಿ ಪಾಲ್ಗೊಂಡಿದ್ರು

ರಾಮಾಯಣದ ಸೀತೆ ಪಾತ್ರಕ್ಕೆ ನಿಮ್ಮನ್ನು ಆಯ್ಕೆ ಮಾಡುವ ಸಾಧ್ಯತೆ ಇತ್ತು ಎಂಬ ಪ್ರಶ್ನೆಗೆ ಶ್ರೀನಿಧಿ ಶೆಟ್ಟಿ ಉತ್ತರಿಸಿದ್ದಾರೆ. "ಈಗ ರಾಮಾಯಣ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ. ನಾನು ಸೀತೆ ಪಾತ್ರಕ್ಕೆ ಪ್ರಯತ್ನಿಸಿದ್ದೇನಾ? ಅದನ್ನು ಹೇಳಬಹುದು ಎಂದುಕೊಂಡಿದ್ದೇನೆ. ಹೌದು, ನಾನು ಅಡಿಷನ್‌ನಲ್ಲಿ ಪಾಲ್ಗೊಂಡಿದ್ದೆ ಮೂರು ಸೀನ್‌ಗಳಿಗೆ ನಾನು ಸಾಕಷ್ಟು ಸಿದ್ಧತೆ ನಡೆಸಿದ್ದೆ. ಅವರಿಗೂ ಅದು ಇಷ್ಟವಾಗಿತ್ತು. ಒಳ್ಳೆಯ ಪ್ರತಿಕ್ರಿಯೆ ನೀಡಿದ್ದರು" ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.

"ಯಶ್‌ ಕೂಡ ಈ ಸಿನಿಮಾದ ಭಾಗವಾಗುತ್ತಾರೆ ಎಂದು ಕೇಳಿ ಖುಷಿಯಾಯಿತು. ರಾವಣನಾಗಿ ಯಶ್‌ ನಟಿಸುತ್ತಾರೆ ಎಂದು ಗೊತ್ತಾಯಿತು. ನಾನು ಸೀತಾ ಪಾತ್ರದಲ್ಲಿ. ನಾವಿಬ್ಬರು ವಿರುದ್ಧ ಪಾತ್ರಗಳಲ್ಲಿ ನಟಿಸಬೇಕಿತ್ತು. ನಮ್ಮನ್ನು ಆ ರೀತಿ ಕಲ್ಪಿಸಿಕೊಳ್ಳಲು ಜನರಿಗೆ ಕಷ್ಟವಾಗಬಹುದು. ಇದು ನನ್ನ ಆಲೋಚನೆಯಷ್ಟೇ" ಎಂದು ಅವರು ಹೇಳಿದ್ದಾರೆ.

ಸೀತೆ ಪಾತ್ರ ಸಾಯಿ ಪಲ್ಲವಿಗೆ ದೊರಕಿರುವ ಕುರಿತಾದ ಪ್ರಶ್ನೆಗೂ ಶ್ರೀನಿಧಿ ಶೆಟ್ಟಿ ಉತ್ತರಿಸಿದ್ದಾರೆ. "ನನ್ನ ಪ್ರಕಾರ ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆ. ಆಕೆಯನ್ನು ಈ ಸಿನಿಮಾದಲ್ಲಿ ಸೀತೆಯಾಗಿ ನೋಡಲು ನಾನು ಇಷ್ಟಪಡುವೆ. ಕೆಲವೊಂದು ಸರಿಯಾಗಿ ಕೆಲಸ ಮಾಡುತ್ತದೆ. ಕೆಲವೊಂದು ಸರಿಯಾಗಿ ಕೆಲಸ ಮಾಡದು. ಈ ರೀತಿಯಾದರೆ ಬೇಸರವಿಲ್ಲ. ಏಕೆಂದರೆ, ಹೊಸ ಬಾಗಿಲು ಯಾವತ್ತಿಗೂ ತೆರೆದಿರುತ್ತದೆ" ಎಂದು ಅವರು ಹೇಳಿದ್ದಾರೆ.

ಶ್ರೀನಿಧಿ ಶೆಟ್ಟಿಯ ಬಗ್ಗೆ

2016ರಲ್ಲಿ ಇವರು ಮಿಸ್‌ ಸೂಪರ್‌ನ್ಯಾಷನಲ್‌ ಕಿರೀಟ ಗೆದ್ದಿದ್ದರು. ಯಶ್‌ ಅವರ ಕೆಜಿಎಫ್‌: ಚಾಪ್ಟರ್‌ 1 ಸಿನಿಮಾದ ಮೂಲಕ ನಟನೆ ಆರಂಭಿಸಿದ್ದರು. ಇದು ಈಕೆಯ ಮೊದಲ ಸಿನಿಮಾವಾಗಿತ್ತು. ನಂತರ ಕೆಜಿಎಫ್‌ ಚಾಪ್ಟರ್‌ 2ನಲ್ಲಿ ನಟಿಸಿದರು. ತಮಿಳು ಸಿನಿಮಾ ಕೋಬ್ರಾದಲ್ಲಿ ವಿಕ್ರಮ್‌ ಎದುರು ನಟಿಸಿದ್ದರು. ಈಗ ನಾನಿಗೆ ನಾಯಕಿಯಾಗಿ ಹಿಟ್‌: ದಿ ಥರ್ಡ್‌ ಕೇಸ್‌ನಲ್ಲಿ ನಟಿಸುತ್ತಿದ್ದಾರೆ. ಇದು ಶೈಲೇಶ್ ಕೊಲಾನು ನಿರ್ದೇಶನದ ಸಿನಿಮಾ. ಈ ಸಿನಿಮಾ ಮೇ 1ರಂದು ಬಿಡುಗಡೆಯಾಗಲಿದೆ.

ರಾಮಾಯಣ ಸಿನಿಮಾದ ಬಗ್ಗೆ

ನಿತೇಶ್ ತಿವಾರಿ ಅವರ ರಾಮಾಯಣ ಮುಂಬರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಇದರಲ್ಲಿ ರವಿ ದುಬೆ ಮತ್ತು ಸನ್ನಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಒಂದು 2026ರಲ್ಲಿ ಮತ್ತು ಇನ್ನೊಂದು 2027ರಲ್ಲಿ ಬಿಡುಗಡೆಯಾಗಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in