ಸಿನಿಮಾ ವಿಮರ್ಶೆ: ವಿಜಯ್ ಸೇತುಪತಿ, ರುಕ್ಮಿಣಿ ವಸಂತ್ ನಟಿಸಿದ ಏಸ್ ಹೇಗಿದೆ? ನಕ್ಕು ನಗಿಸುವ ತರ್ಕಹೀನ ಚಿತ್ರ
ಏಸ್ ಸಿನಿಮಾ ವಿಮರ್ಶೆ: ವಿಜಯ್ ಸೇತುಪತಿ ಮತ್ತು ಯೋಗಿ ಬಾಬು ನಟಿಸಿರುವ ಈ ತರ್ಕಹೀನ ಕಾಮಿಡಿ ಸಿನಿಮಾದಲ್ಲಿ ಮನರಂಜನೆ ಸಾಕಷ್ಟಿದೆ. ಕಥೆಯ ಬಗ್ಗೆ ಹೆಚ್ಚು ಯೋಚಿಸದೆ ನಗುನಗುತ್ತಾ ಈ ಸಿನಿಮಾ ನೋಡಬಹುದು.

ವಿಜಯ್ ಸೇತುಪತಿ ಒಂದು ಚಿತ್ರವನ್ನು ಆಯ್ಕೆ ಮಾಡಿಕೊಂಡರೆ ಅದು ಖಂಡಿತಾವಾಗಿಯೂ ವಿಭಿನ್ನವಾಗಿರುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಏಸ್ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ನೀವು ಹೋದರೆ ಅಚ್ಚರಿ ಪಡುವಿರಿ. 2018ರಲ್ಲಿ ಒರು ನಲ್ಲ ನಾಲ್ ಪಾತು ಸೊಲ್ರೆನ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಿರ್ದೇಶಕ ಅರುಮುಗಕುಮಾರ್ ಅವರ ಇತ್ತೀಚಿನ ಚಿತ್ರದ ಹೆಸರು ಏಸ್. ಈ ಚಿತ್ರವು ವಿಜಯ ಸೇತುಪತಿಯ ಮಹಾರಾಜ ಮತ್ತು ಮೆರ್ರಿ ಕ್ರಿಸ್ಮಸ್ಗಿಂತ ಭಿನ್ನವಾಗಿದೆ.
ಚಿತ್ರದ ಕಥೆಯೇನು?
ಅರಿವು (ಯೋಗಿ ಬಾಬು) ಎಂಬ ಚಿಂದಿ ಆಯುವವನು ಮಲೇಷ್ಯಾದಲ್ಲಿ ಇರುತ್ತಾನೆ. ಆತ ಜನರ ಮುಂದೆ ಶ್ರೀಮಂತ ಉದ್ಯಮಿಯಂತೆ ವೇಷ ಧರಿಸುತ್ತಾನೆ. ವಿಶೇಷವಾಗಿ ಈತ ತಾನು ಪ್ರೀತಿಸುವ ಕಲ್ಪನಾ (ದಿವ್ಯ ಪಿಳ್ಳೈ)ಳ ಮುಂದೆಯಂತೂ ಶ್ರೀಮಂತನ ಅವತಾರದಲ್ಲಿಯೇ ಇರುತ್ತಾನೆ. ಭಾರತದಿಂದ ಬರುವ ವ್ಯಕ್ತಿಯೊಬ್ಬನನ್ನು ರಿಸೀವ್ ಮಾಡಲು ಇವನು ವಿಮಾನ ನಿಲ್ದಾಣಕ್ಕೆ ಹೋಗುತ್ತಾನೆ. ಈತ ತಪ್ಪಾಗಿ ಬೋಲ್ಡ್ ಕಣ್ಣನ್ (ವಿಜಯ್ ಸೇತುಪತಿ) ಆ ವ್ಯಕ್ತಿ ಎಂದು ನಂಬುತ್ತಾನೆ. ಆತನನ್ನೇ ಮನೆಗೆ ಕರೆದುಕೊಂಡು ಬರುತ್ತಾನೆ. ಕಣ್ಣನ್ಗೆ ಕಲ್ಪನಾ ರೆಸ್ಟೋರೆಂಟ್ನಲ್ಲಿ ಕೆಲಸ ಸಿಗುತ್ತದೆ. ಈ ಸಮಯದಲ್ಲಿ ಕಣ್ಣನ್ಗೆ ರುಕ್ಕು (ರುಕ್ಮಿಣಿ ವಸಂತ್)ವಿನ ಭೇಟಿಯಾಗುತ್ತದೆ. ಮೊದಲ ನೋಟದಲ್ಲಿಯೇ ಪ್ರೀತಿಯಾಗುತ್ತದೆ. ಅವಳ ಪ್ರೀತಿ ಪಡೆಯಲು ಯತ್ನಿಸುತ್ತಾನೆ.
ರುಕ್ಕು ತನ್ನ ಪೊಲೀಸ್ ಮಲತಂದೆ ರಾಜದುರೈ (ಬಬ್ಲೂ ಪೃಥ್ವಿರಾಜ್) ಜೊತೆ ವಾಸಿಸುತ್ತಾಳೆ. ಆತನ ದುಷ್ಟಹಿಡಿತದಿಂದ ಪಾರಾಗುವ ಪ್ರಯತ್ನವನ್ನು ಮಾಡುತ್ತಾಳೆ. ಈಕೆಯ ಕಷ್ಟ ಕಣ್ಣನ್ಗೂ ತಿಳಿಯುತ್ತದೆ. ಕಣ್ಣನ್ಗೆ ಒಂದು ಐಡಿಯಾ ಹೊಳೆಯುತ್ತದೆ. ಒಂದು ದರೋಡೆ ಯೋಜನೆ ರೂಪಿಸುತ್ತಾನೆ. ತನ್ನ ಜತೆ ಅರಿವನ್ನು ಸೇರಿಸಿಕೊಳ್ಳುತ್ತಾನೆ. ಇವರಿಗೆ ದುಷ್ಕರ್ಮಿ ಧರ್ಮ (ಬಿಎಸ್ ಅವಿನಾಶ್) ಜತೆಯೂ ಹೋರಾಡಬೇಕಾಗುತ್ತದೆ. ಇವರ ಪ್ಲ್ಯಾನ್ ಯಶಸ್ವಿಯಾಗುತ್ತ? ಕಣ್ಣನ್ಗೆ ರುಕ್ಕು ದೊರಕುತ್ತಾಳ?
ಚೆನ್ನಾಗಿದೆಯೇ ಸಿನಿಮಾ?
ನಿರ್ದೇಶಕ ಅರುಮುಗಕುಮಾರ್ ಅವರು ನಿರ್ದೇಶಕರಾಗಿ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಣಯ ಇರುವ ದರೋಡೆ ಥ್ರಿಲ್ಲರ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾಮಿಡಿ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಯೋಗಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಮೊದಲಾರ್ಧ ಸ್ವಲ್ಪ ನಿಧಾನವಾಗಿದೆ. ವಿವಿಧ ಪಾತ್ರಗಳು ಮತ್ತು ಅವರ ಸಮಸ್ಯೆಗಳನ್ನು ಪರಿಚಯಿಸಲು ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಇಂಟರ್ವಲ್ ಬಳಿಕ ಸಿನಿಮಾದಲ್ಲಿ ಚೇಸಿಂಗ್ ಮತ್ತು ಸಾಹಸದ ದೃಶ್ಯಗಳು ಹೆಚ್ಚಾಗಿವೆ. ಈ ಸಿನಿಮಾದಲ್ಲಿ ಕಾಮಿಡಿ ಸಾಕಷ್ಟಿದೆ. ಮನರಂಜನೆ ಬಯಸುವವರಿಗೆ ಫನ್ ನೀಡುತ್ತದೆ.
ಈ ಸಿನಿಮಾದಲ್ಲಿ ತರ್ಕ ಹುಡುಕಲು ಹೋಗಬಾರದು. ವಿಜಯ್ ಸೇತುಪತಿ ಮತ್ತು ಯೋಗಿ ಬಾಬು ಇರುವ ಕಾರಣ ಇದು ನಗೆಯ ಹಾಯಿ ದೋಣಿಯಲ್ಲಿ ಸಾಗಿದೆ. ಪಾತ್ರದಾರಿಗಳ ಪರ್ಫಾಮೆನ್ಸ್ ವಿಷಯಕ್ಕೆ ಬಂದರೆ ವಿಜಯ್ ಸೇತುಪತಿ ಅವರು ಕಣ್ಣನ್ ಪಾತ್ರವನ್ನು ಸಲೀಸಾಗಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ತುಂಬಾ ಚಿಕ್ಕವರಾಗಿ ಕಾಣಿಸುತ್ತಾರೆ. ಹಾಸ್ಯನಟ ಯೋಗಿ ಬಾಬು ನಟನೆಯೂ ಅಮೋಘವಾಗಿದೆ. ಕನ್ನಡ ನಟಿ ರುಕ್ಮಿಣಿ ವಸಂತ್ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ಅತ್ಯುತ್ತಮವಾಗಿ ನಟಿಸಿದ್ದಾರೆ. ಆದರೆ, ರುಕ್ಕುವಿನ ಪಾತ್ರವು ರುಕ್ಮಿಣಿ ವಸಂತ್ ಅವರ ಬಹುಮುಖತೆಯನ್ನು ಪ್ರದರ್ಶಿಸಲು ಅಷ್ಟೇನೂ ಅವಕಾಶ ನೀಡಿಲ್ಲ. ಆದರೆ, ದಿವ್ಯಾ ಪೈಲೈ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಈ ಸಿನಿಮಾವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಬಬ್ಲೂ ಪೃಥ್ವಿರಾಜ್ ಬಹಳ ಸಮಯದ ನಂತರ ಸರಿಯಾದ ಖಳನಾಯಕ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕನ್ನಡದ 'ಖಳನಾಯಕ' ಬಿ.ಎಸ್. ಅವಿನಾಶ್ ತಮ್ಮ ಪಾತ್ರದ ತೂಕ ಹೆಚ್ಚಿಸಿದ್ದಾರೆ.
ಹಿನ್ನೆಲೆ ಸಂಗೀತವನ್ನು ನೀಡಿರುವ ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್, ಬೀಟ್ಗಳನ್ನು ಸಂಪೂರ್ಣವಾಗಿ ಹೆಚ್ಚಿಸಿದ್ದಾರೆ., ವಿಶೇಷವಾಗಿ ದರೋಡೆ ಮತ್ತು ಫೈಟಿಂಗ್ ಸಮಯದಲ್ಲಿ ಸದ್ದು ಹೆಚ್ಚಿಸಿದ್ದಾರೆ. ಕೆಲವೊಮ್ಮೆ ಹಾಡುಗಳಿಗಿಂತ ಬಿಜಿಎಂ ಹೆಚ್ಚು ಇಷ್ಟವಾಗುತ್ತದೆ. ಸಂಕಲನಕಾರರಾದ ಫೆನ್ನಿ ಆಲಿವರ್ ಇನ್ನಷ್ಟು ಕತ್ತರಿ ಪ್ರಯೋಗ ಮಾಡಬೇಕಿತ್ತು. ಕೆಲವೊಂದು ದೃಶ್ಯಗಳು ಅನಗತ್ಯವಾಗಿ ಉದ್ದವಾಗಿವೆ. ಒಟ್ಟಾರೆ ಏಸ್ ಸಿನಿಮಾವು ತರ್ಕಹೀನವಾಗಿದ್ದರೂ ಸಾಕಷ್ಟು ನಗು ತರಿಸುತ್ತದೆ.
ಚಿತ್ರ ವಿಮರ್ಶೆ: ಲತಾ ಶ್ರೀನಿವಾಸನ್ (ಹಿಂದೂಸ್ತಾನ್ ಟೈಮ್ಸ್)
ವಿಮರ್ಶಕರ ರೇಟಿಂಗ್: 2.5/5